ನಿರುದ್ಯೋಗ ಸಮಸ್ಯೆಯಿಂದ ಹಿಡಿದು ಕೇಂದ್ರ ಸರಕಾರದ ವಿರುದ್ಧ ಜನಜಾಗೃತಿಗಾಗಿ ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದೆ.
ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ನೀಡಿದ ಮುಂಬರುವ ಲೋಕಸಭಾ ಚುನಾವಣೆ ತಂತ್ರಗಾರಿಕೆ ಹಿನ್ನೆಲೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಮೂರು ದಿನಗಳ ಚಿಂತನ ಸಮಾವೇಶದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಆಂತರಿಕ ಕಲಹ ಹಾಗೂ ಚುನಾವಣೆಗಳಲ್ಲಿ ಅನುಭವಿಸುತ್ತಿರುವ ಸೋಲುಗಳ ಹಿನ್ನೆಲೆಯಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಇದೀಗ ದೇಶದುದ್ದಕ್ಕೂ ಪಾದಯಾತ್ರೆಗಳನ್ನು ನಡೆಸಲು ತೀರ್ಮಾನಿಸಿದೆ.
ದೇಶಾದ್ಯಂತ ಹಲವಾರು ಹಂತಗಳಲ್ಲಿ ನಡೆಯಲಿರುವ ಪಾದಯಾತ್ರೆ ವೇಳೆ ಸ್ಥಳೀಯ ಮುಖಂಡರೊಂದಿಗೆ ಕಾಂಗ್ರೆಸ್ ಚರ್ಚೆ ನಡೆಸಲಿದ್ದು, ಈ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಮುನ್ನಡೆಸುವ ಸಾಧ್ಯತೆ ಇದೆ.