2014ರ ಲೋಕಸಭಾ ಚುನಾವಣೆಯಿಂದ ಈಚೆಗೆ ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ಒಟ್ಟು 39 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಆ ಪೈಕಿ ಗೆದ್ದಿರುವುದು ಐದು ಚುನಾವಣೆಗಳಲ್ಲಿ ಮಾತ್ರ. ಪ್ರತಿ ಚುನಾವಣೆ ಸೋತಾಗಲು ಆ ಪಕ್ಷದ ನಾಯಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾತನಾಡುತ್ತಾರೆ. ಆದರೆ ಆತ್ಮಾವಲೋಕನ ಆಗಿಲ್ಲ. ಅದೂ ಹೋಗಲಿ ಮತ್ತೆ ಮತ್ತೆ ಸೋಲುತ್ತಿದ್ದರೂ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೂ ಪೂರ್ಣವಿರಾಮ ಹಾಕಿಲ್ಲ. ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಸ್ವತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಕಡುಕಷ್ಟ ಎದುರಿಸುತ್ತಿದೆ. ಆದರೂ ನಾಯಕರು ಬುದ್ದಿ ಕಲಿತಿಲ್ಲ. ಕಷ್ಟಕಾಲದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಬೇಕೆಂಬುದು ತಮಗೆ ಗೊತ್ತೇ ಇಲ್ಲ ಎನಿಸುವ ರೀತಿ ಕಾದಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ‘ಮುಂದಿನ ಮುಖ್ಯಮಂತ್ರಿ ಯಾರು?’ ಎಂಬ ವಿವಾದದಿಂದ ಹಿಡಿದು ಮುಂದಿನ ವರ್ಷ ಚುನಾವಣೆ ನಡೆಯುವ ಪಂಜಾಬ್, ಗುಜರಾತ್ ವರೆಗೆ ಒಂದಲ್ಲ, ಒಂದು ಸಮಸ್ಯೆ ಎದುರಿಸುತ್ತಿದೆ.
Also read: ಪಂಜಾಬ್ ರಾಜಕೀಯ ಅಂಗಣದಲ್ಲಿ ಸಿಕ್ಸರ್ ಬಾರಿಸುವರೇ ಸಿಧು?
ಕರ್ನಾಟಕದಲ್ಲಿ ಅನಗತ್ಯವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ‘ಮುಂದಿನ ಮುಖ್ಯಮಂತ್ರಿ’ಗಾದಿಗಾಗಿ ಯುದ್ಧ ಆರಂಭಿಸಿದ್ದಾರೆ. ಇವರಿಬ್ಬರ ಜಗಳದ ಲಾಭ ಪಡೆಯಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಪರೋಕ್ಷವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ‘ದಲಿತ ಮುಖ್ಯಮಂತ್ರಿ’ ವಿಚಾರ ಪ್ರಸ್ತಾಪವಾಗುತ್ತಿದೆ. ಇಂಥದೇ ಕಚ್ಚಾಟ ಕೆಲ ದಿನಗಳ ಹಿಂದೆ ಕೇರಳದಲ್ಲಿ ಕಂಡುಬಂದಿತ್ತು. ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕೇರಳದ ಅಂದಿನ ಪ್ರತಿಪಕ್ಷದ ನಾಯಕ ರಮೇಶ್ ಚನ್ನಿತಾಳ ನಡುವೆ ಹೊತ್ತಿ ಉರಿಯುತ್ತಿತ್ತು. ಚುನಾವಣೆ ಸೋತ ಬಳಿಕ ಇಬ್ಬರೂ ಸುಮ್ಮನಾಗಿದ್ದಾರೆ.

Also read: ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗೆ ಕರ್ಚೀಫ್ ಹಾಕುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು!
ಮುಂದೆ ಸಾಲು ಸಾಲು ವಿಧಾನಾಭಾ ಚುನಾವಣೆಗಳು ಬರುತ್ತಿವೆ. ಆ ಪೈಕಿ ಉತ್ತರ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ಬಹಳ ಮುಖ್ಯವಾದವು. ಏಕೆಂದರೆ, ಉತ್ತರ ಪ್ರದೇಶ ದೇಶದಲ್ಲೇ ದೊಡ್ಡ ರಾಜ್ಯವಾಗಿದ್ದು ರಾಷ್ಟ್ರ ರಾಜಕಾರಣದ ಮೇಲೆ ವಿಶೇಷವಾದ ಪ್ರಭಾವ ಬೀರುವುದರಿಂದ ಅಲ್ಲಿ ಸಾಧ್ಯವಾದಷ್ಟು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಬೇಕಾದುದು ಕಾಂಗ್ರೆಸ್ ಪಕ್ಷಕ್ಕೆ ಈಗ ಆದ್ಯತೆಯಾಗಬೇಕು. ಅದಕ್ಕೆ ಪೂರಕವಾಗಿ ಕಾರ್ಯತಂತ್ರ ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಈಗಾಗಲೇ ಅಲ್ಲಿ ಸಕ್ರಿಯವಾಗಿ ಕೆಲಸ ಶುರು ಮಾಡಬೇಕಿತ್ತು. ನಾಯಕರ ನಡುವಿನ ಕಂದಕ ಕಡಿಮೆ ಮಾಡಲು ಯತ್ನಿಸಬೇಕಿತ್ತು. ಪ್ರವಾಸಗಳನ್ನು ಮಾಡಬೇಕಿತ್ತು. ಅಭ್ಯರ್ಥಿಗಳ ಹುಡುಕಾಟ ನಡೆಸಬೇಕಿತ್ತು. ಇವ್ಯಾವೂ ಆಗಿಲ್ಲ, ಆಗುತ್ತಿಲ್ಲ. ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಹಾಗಾಗಿ ಆ ಪಕ್ಷ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಘೋಷಿಸಿದೆ. ಕಾಂಗ್ರೆಸ್ ನಾಯಕರು ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿದ್ದಾರೆ.
Also read: ಕಾಂಗ್ರೆಸ್ ಇಲ್ಲದೆ ಬಿಜೆಪಿಗೆ ಪರ್ಯಾಯ ಕಟ್ಟಲಾಗದು ಎಂಬ ತೇಜಸ್ವಿ ಮಾತಿನ ಮರ್ಮವೇನು?
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಗುಜರಾತ್ ಮೂಲದವರು. ಅಲ್ಲಿ ಬಿಜೆಪಿಯನ್ನು ಸೋಲಿಸಿ ಅವರ ಉತ್ಸಾಹ ಕುಗ್ಗಿಸುವ ದೃಷ್ಟಿಯಿಂದ ಕಾಂಗ್ರೆಸ್ ಗುಜರಾತಿನಲ್ಲಿ ಗೆಲ್ಲಬೇಕು. ಇದೇ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ, ಪ್ರತಿಪಕ್ಷದ ನಾಯಕ ಪರೇಶ್ ದಾನಿ, ಮಾಜಿ ಅಧ್ಯಕ್ಷರಾದ ಅರ್ಜುನ್ ಮೋಢವಾಡಿಯಾ ಹಾಗೂ ಭರತ್ ಸಿಂಗ್ ಸೋಲಂಕಿ ಇತ್ತೀಚೆಗೆ ‘ತಾವೆಲ್ಲಾ ಒಂದು’ ಎಂಬ ಸಂದೇಶ ನೀಡಲು ಗಾಂಧಿನಗರದಲ್ಲಿ ಸಭೆ ನಡೆಸಿದ್ದರು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಫಲಿಸಿಲ್ಲ. ಹಾರ್ದಿಕ್ ಪಟೇಲ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಎರಡನೇ ಹಂತದ ಹಲವು ನಾಯಕರು ವಿಚಲಿತರಾಗುವಂತೆ ಮಾಡಿದೆ.
Also read: ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?
ಇರುವ ಸರ್ಕಾರ ಉಳಿಸಿಕೊಳ್ಳುವ ದೃಷ್ಟಿಯಿಂದ ಪಂಜಾಬ್ ಕಾಂಗ್ರೆಸ್ ಪಾಲಿಗೆ ಬಹಳ ಮುಖ್ಯವಾದುದು. ಸದ್ಯ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ರೈತರು ಬಿಜೆಪಿ ಮತ್ತು ಅವರ ಜೊತೆಗಿದ್ದ ಅಖಾಲಿದಳದ ವಿರುದ್ಧ ಇದ್ದಾರೆ. ಆಮ್ ಆದ್ಮಿ ಪಕ್ಷ ಈಗ ಅಖಾಡಕ್ಕಿಳಿದಿದೆ. ಆದುದರಿಂದ ವಾತಾವರಣ ಕಾಂಗ್ರೆಸ್ ಪರವಾಗಿದೆ. ಆದರೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಧು ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ಕಳೆದ ಬಾರಿ ಕೂದಲೆಳೆಯ ಅಂತರದಿಂದ ಅಧಿಕಾರ ಹಿಡಿಯುವುದನ್ನು ತಪ್ಪಿಸಿಕೊಂಡಿದ್ದ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ‘ಈ ಬಾರಿ ಕಾಂಗ್ರೆಸಿಗೆ ಅವಕಾಶ ಇದೆ’ ಎಂಬ ಸುಳಿವುಗಳು ಗೋಚರಿಸುತ್ತಿಲ್ಲ. ಚಿಕ್ಕ ರಾಜ್ಯವಾದರೂ ಸದಾ ದೊಡ್ಡ ಸಮಸ್ಯೆ ಹೊಂದಿರುವ ಗೋವಾದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಎದ್ದಿದೆ. ಇದೇ ಹಿನ್ನಲೆಯಲ್ಲಿ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಈಗ ದೆಹಲಿಗೆ ಧಾವಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
Also read: ದಲಿತ ಸಿಎಂ ಚರ್ಚೆಗೆ ಪ್ರತಿಯಾಗಿ ಅಹಿಂದ ದಾಳ ಉರುಳಿಸಿದರೆ ಸಿದ್ದರಾಮಯ್ಯ?
ಇದಲ್ಲದೆ ಉತ್ತರಖಂಡ ಮತ್ತು ಹಿಮಾಚಲ ಪ್ರದೇಶದಲ್ಲೂ ವಿಧಾನಸಭಾ ಚುನಾವಣೆ ನಡೆಯಲಿವೆ. ಇವು ರಾಜಕೀಯವಾಗಿ ಮಹತ್ವದ ಅಲ್ಲದೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯೆಯ ದೃಷ್ಟಿಯಿಂದ ನಿರ್ಣಾಯಕವಾದವು. ಸಣ್ಣ ಸಣ್ಣ ಗೆಲುವು ಕೂಡ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಸ್ಪೂರ್ತಿ ನೀಡಬಲ್ಲದು. ಆದರೆ ಉತ್ತರಖಂಡ ಮತ್ತು ಹಿಮಾಚಲ ಪ್ರದೇಶದಲ್ಲೂ ಅಂತಹ ವಾತಾವರಣ ಕಂಡುಬರುತ್ತಿಲ್ಲ.
Also read: ಅನಗತ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿರುವ ಡಿ.ಕೆ. ಶಿವಕುಮಾರ್!
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಶೀತಲಸಮರ ಮುಂದುವರೆದಿದೆ. ಯಾವಾಗ ಬೇಕಾದರೂ ಸಚಿನ್ ಪೈಲಟ್ ಬಣ ಸಿಡಿದೇಳಬಹುದು. ಜ್ಯೋತಿರಾಧಿತ್ಯ ಸಿಂಧ್ಯ ರೀತಿ ಸಚಿನ್ ಪೈಲಟ್ ಪಕ್ಷವನ್ನೇ ತೊರೆಯಬಹುದು. ಆಗ ಕಾಂಗ್ರೆಸ್ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ. ಅಷ್ಟೇಯಲ್ಲ, 2024ರ ಲೋಕಸಭಾ ಚುನಾವಣೆಗೆ ಅಣಿಯಾಗುವ ದೃಷ್ಟಿಯಲ್ಲಿ ಇದು ಅತ್ಯಂತ ದೊಡ್ಡ ನಷ್ಟವಾಗಲಿದೆ. ಹೀಗೆ ಕಾಂಗ್ರೆಸ್ ದೇಶಾದ್ಯಂತ ಸಮಸ್ಯೆ ಎದುರಿಸುತ್ತಿದ್ದರೂ ಹೊಸ ಸಮಸ್ಯೆಗಳನ್ನು ಬರಮಾಡಿಕೊಳ್ಳುತ್ತಿದೆಯೇ ವಿನಃ ಬಗೆಹರಿಸಿಕೊಳ್ಳುವ ಮನಸ್ಸು ಮಾಡುತ್ತಿಲ್ಲ.