ಬೆದರಿಕೆ ಹಾಕಿರುವ ಪೊಲೀಸ್ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಸೀದಿ ಮುಂದೆ ಹಿಂದೂಪರ ಕಾರ್ಯಕರ್ತರ ಹೈಡ್ರಾಮಾ
ಮಂಡ್ಯ: ವಿವಾದಿತ ಜಾಮೀ ಯಾ ಮಸೀದಿ ಪ್ರಕರಣದಿಂದ ಕೋಮು ಸಂಘರ್ಷ ತಾರಕ್ಕಕ್ಕೇರಿದೆ. ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಜಾಮೀಯಾ ಮಸೀದಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಜಾಮೀಯ ಮಸೀದಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ .
ನವೆಂಬರ್ 4ರಂದು ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ನಡೆಸಿದ್ದರು. ಆ ಯಾತ್ರೆ ವೇಳೆ ಮಾಲಾಧಾರಿ ಯುವಕನೊಬ್ಬ ಗಂಜಾಮ್ ನಲ್ಲಿ ಮುಸ್ಲಿಂ ಮನೆಯೊಂದರ ಮೇಲಿದ್ದ ಹಸಿರು ಭಾವುಟ ಕಿತ್ತು ಹನುಮ ಧ್ವಜವನ್ನು ಹಾರಿಸಿದ್ದ. ಈ ಘಟನೆ ಸಂಬಂಧ ಮನೆಯ ಮಾಲೀಕರು ಮಾಲಾಧಾರಿ ಯುವಕನಿಂದ ಮನೆಗೆ ಹಾನಿ ಮಾಡಿ ನಮ್ಮ ಮೇಲೆ ದೌರ್ಜನ್ಯ ಎಸಗಿರೋದಾಗಿ ಪೊಲೀಸರಿಗೆ ದೂರು ನೀಡಿದ್ದರು. ಯುವಕನನ್ನು ಪೊಲೀಸರು ಬಂಧಿಸಿ ಪಟ್ಟಣದ ಠಾಣೆಗೆ ಕರೆತಂದಿದ್ದರು.
ಈ ವೇಳೆ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಆರೋಪಿ ಯುವಕನಿಗೆ ನೀನು ಮುಸ್ಲಿಮರ ತಂಟೆಗೆ ಹೋಗಬೇಡ ಎಂದು ಬೆದರಿಕೆ ಹಾಕಿ ಆತನನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದಾರೆಂದು ಹಿಂದು ಸಂಘಟನೆಗಳು ಆರೋಪಿಸಿವೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರು ಶನಿವಾರ ರಾತ್ರಿ ಏಕಾಏಕಿ ಪಟ್ಟಣದ ಜಾಮೀಯ ಮಸೀದಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಕಡೆಗೆ ಮಸೀದಿ ಮುಂದಿನ ರಸ್ತೆಯಲ್ಲೇ ಹನುಮನ ಫೋಟೋ ಇಟ್ಟು ಅಹೋ ರಾತ್ರಿ ಧರಣಿ ಕುಳಿತು ಭಜನೆ ಮಾಡಿದ್ದಾರೆ. ಬೆದರಿಕೆ ಹಾಕಿರುವ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಇಲ್ಲಿಂದ ನಾವು ತೆರಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ.