ಮುಸ್ಲಿಂ ಮಹಿಳೆಯರು ಧಾರ್ಮಿಕ ಗುಂಪುಗಳು ಮತ್ತು ಸಂಪ್ರದಾಯವಾದಿಗಳ ಅಣತಿಯಂತೆ ಇರಲು ಬಯಸುವುದಿಲ್ಲ.
ಮೂಲ : ಹಸೀನಾ ಖಾನ್
ನ್ಯೂಸ್ ಕ್ಲಿಕ್ 30 ಜುಲೈ 2023
ಅನುವಾದ : ನಾ ದಿವಾಕರ
ಇತ್ತೀಚೆಗೆ ಆಶ್ಚರ್ಯಕರವಾಗಿ ಏಕರೂಪ ನಾಗರಿಕ ಸಂಹಿತೆಯು (ಏನಾಸಂ) ಸಾರ್ವಜನಿಕ ಚರ್ಚೆ-ಸಂವಾದಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಏನಾಸಂ ದಶಕಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಸೂಚಿಯಲ್ಲಿ ಪ್ರಧಾನ ಅಂಶವಾಗಿದ್ದು ಮತ್ತೊಂದೆಡೆ ದಶಕಗಳಿಂದ ಮುಸ್ಲಿಂ ಸಮುದಾಯಗಳ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿರುವ ನಮ್ಮೆಲ್ಲರ ಗುಂಪುಗಳನ್ನು ನಿರಂತರ ಸಂದಿಗ್ಧತೆಗೆ ಸಿಲುಕಿಸಿದೆ. ಏನಾಸಂ ಎಂದರೇನು ಎಂದು ನಮಗೆ ಸ್ಪಷ್ಟ ಅರಿವು ಇಲ್ಲದಿರುವ ಸಂದರ್ಭದಲ್ಲಿ ನಾವು ಸಂಹಿತೆಯನ್ನು ಬೆಂಬಲಿಸುತ್ತೇವೆಯೋ ಇಲ್ಲವೋ ಎಂಬ ಪ್ರಶ್ನೆಗೆ ʼ ಬೇಕು ಅಥವಾ ಬೇಡ ʼ ಎಂದು ಉತ್ತರಿಸಲು ಆಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂದಿಗ್ಧ ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಲೇ ಕುಟುಂಬಗಳು ಮತ್ತು ಅನ್ಯೋನ್ಯತೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ನಮ್ಮ ನಿಲುವನ್ನು ಪ್ರಸ್ತಾಪಿಸುವುದು ಸೂಕ್ತ ಎನಿಸುತ್ತದೆ.
ಕುಟುಂಬಕ್ಕೆ ಸಂಬಂಧಿಸಿದ ಲಿಂಗ ನ್ಯಾಯ ಕಾನೂನುಗಳಿಗಾಗಿ ನಾವು ದೀರ್ಘಕಾಲದಿಂದ ಹೋರಾಡಿದ್ದೇವೆ ಮತ್ತು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ಕುಟುಂಬಗಳು ನಾನಾ ರೀತಿಯದ್ದಾಗಿವೆ ಮತ್ತು ಅವೆಲ್ಲವನ್ನೂ ಕಾನೂನಿನ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕುಟುಂಬದ ಪಿತೃಪ್ರಧಾನ, ಪಿತೃವಂಶಕ್ರಮದ ಪರಿಕಲ್ಪನೆಯನ್ನು ಆಧರಿಸಿದ ಒಂದು ಕಾನೂನು ಎಲ್ಲರಿಗೂ ಅನ್ವಯಿಸುವುದಿಲ್ಲ. ಬದುಕಿನ ವಾಸ್ತವತೆಯ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗುತ್ತದೆ. ಆದ್ದರಿಂದ ಏಕರೂಪತೆಯು ನ್ಯಾಯದ ಮಾನದಂಡವಾಗುವುದಿಲ್ಲ. ನಮ್ಮ ವರ್ತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವ ಮತ್ತು ಸಾಂವಿಧಾನಿಕ ಚೌಕಟ್ಟಿನೊಳಗೆ ಎಲ್ಲಾ ನಾಗರಿಕರ ಹಕ್ಕುಗಳು ಮತ್ತು ನ್ಯಾಯವನ್ನು ಒದಗಿಸುವ ಕಾನೂನುಗಳ ಜಾರಿಗಾಗಿ ಆಗ್ರಹಿಸುವುದು ನಮ್ಮ ಇಂದಿನ ನಿಲುವು ಆಗಬೇಕಿದೆ.
ಈಗ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಸಂದಿಗ್ಧತೆಯನ್ನು ಗಮನಿಸೋಣ. ಏನಾಸಂ ಬೇಕು ಎಂದರೆ ಈ ದೇಶದ ಜಾತ್ಯತೀತ ರಚನೆಯನ್ನು ನಿರಂತರವಾಗಿ ನಾಶಪಡಿಸುತ್ತಿರುವ ಮತ್ತು ಲಿಂಗತ್ಚ ನ್ಯಾಯ ಮತ್ತು ಎಲ್ಲಾ ಕುಟುಂಬ ಕಾನೂನುಗಳನ್ನು ಸುಧಾರಿಸುವಲ್ಲಿ ಕೆಟ್ಟ ದಾಖಲೆಯನ್ನು ಹೊಂದಿರುವ ಆಡಳಿತ ಪಕ್ಷವನ್ನು ನಂಬುವುದು ಎಂದರ್ಥ. ಆದರೆ ಏನಾಸಂ ಬೇಡ ಎಂದರೆ ಎಲ್ಲಾ ರೀತಿಯ ಧಾರ್ಮಿಕ ಸಮುದಾಯಗಳ ಮುಖ್ಯಸ್ಥರ ಅಭಿಪ್ರಾಯಗಳಿಗೆ, ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಅನ್ವಯಿಸುವಂತೆ, ಸಮ್ಮತಿಸುವುದು ಎಂದರ್ಥ. ಅಂದರೆ ವೈಯುಕ್ತಿಕ ಕಾನೂನುಗಳಲ್ಲಿ ಯಾವುದೇ ಸುಧಾರಣೆಯನ್ನು ತರಲು ಎಂದಿಗೂ ಬಯಸದ ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಒಪ್ಪಿದಂತೆಯೇ ಆಗುತ್ತದೆ.
ಇವೆರಡೂ ಸಹ ನಮ್ಮ ಮುಂದಿನ ಆಯ್ಕೆಗಳಾಗಿ ಕಾಣುವುದಿಲ್ಲ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಕಾರಣಗಳನ್ನು ಹೀಗೆ ವಿಶ್ಲೇಷಿಸಬಹುದು.
ಆಡಳಿತ ಪಕ್ಷ ಮತ್ತು ಅದು ಪ್ರಭುತ್ವದ ನಿಯಂತ್ರಣ
ವಿಶೇಷವಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಬಿಜೆಪಿ ಮತ್ತು ಅದರ ಸರ್ಕಾರಗಳ ಕಾರ್ಯವೈಖರಿಯನ್ನು, ಕಾರ್ಯಶೈಲಿಯನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ಧ್ವಂಸ ಮಾಡಲಾದ ಬಾಬರಿ ಮಸೀದಿಯಿಂದ ಇಟ್ಟಿಗೆಗಳನ್ನು ಸಂಗ್ರಹಿಸಿ ಅದರ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ದಶಕಗಳಿಂದ ಹಣವನ್ನು ಸಂಗ್ರಹಿಸಿದ ಸರ್ಕಾರದಿಂದ ಮುಸ್ಲಿಂ ಮಹಿಳೆಯರು ನ್ಯಾಯವನ್ನು ನಿರೀಕ್ಷಿಸಬಹುದೇ ? ದ್ವೇಷ ಭಾಷಣವನ್ನು ಪ್ರೋತ್ಸಾಹಿಸಿದ ಮತ್ತು ಸರ್ಕಾರೇತರ ಕಾರ್ಯಪಡೆಗಳು ನಮ್ಮ ಮನೆಗಳನ್ನು, ಸಮುದಾಯಗಳನ್ನು ಹಾಗೂ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ ಕಣ್ಣುಮುಚ್ಚಿ ಕುಳಿತಿರುವ ಸರ್ಕಾರವನ್ನು ನಾವು ನಂಬಬಹುದೇ ? ನಮ್ಮ ಹೆಸರಿನಲ್ಲಿ ಮಾಡಿದ ಎಲ್ಲಾ ರೀತಿಯ ಧ್ರುವೀಕರಣದ ನಂತರವೂ ಮುಸ್ಲಿಂ ಮಹಿಳೆಯರು ಏನು ಗಳಿಸಿದ್ದಾರೆ ? ಅವರ ಬಳಿ ಹಣಕಾಸು ಸೌಲಭ್ಯವಿಲ್ಲ , ಶಿಕ್ಷಣ ಇಲ್ಲ ಮತ್ತು ಸಾಮಾಜಿಕ ಭದ್ರತೆಯೂ ಇಲ್ಲ. ನಾವು ಪ್ರಧಾನಿಯಿಂದ ನಮ್ಮ ಹೆಸರಿನಲ್ಲಿ ಭಾಷಣಗಳನ್ನು ಮಾತ್ರ ಕೇಳಿ ಕೃತಾರ್ಥರಾಗಿದ್ದೇವೆ !
ಬಿಜೆಪಿ ಒಂಬತ್ತು ವರ್ಷಗಳಿಂದ ಮುಸ್ಲಿಂ ಮಹಿಳೆಯರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ನಾವು ಯಾವ ಹಕ್ಕುಗಳನ್ನು ಗೆದ್ದಿದ್ದೇವೆ ? ನಮಗೆ ಬಜೆಟ್ಗಳಲ್ಲಿ ಎಷ್ಟು ಹಣಕಾಸು ಹಂಚಿಕೆ ಮಾಡಲಾಗಿದೆ, ನಮ್ಮ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವ ನೀತಿಗಳನ್ನು ರೂಪಿಸಲಾಗಿದೆ ಮತ್ತು ಮುಸ್ಲಿಂ ಮಹಿಳೆಯರಿಗಾಗಿ ಯಾವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ? ನಾನು ಇದನ್ನು ಏಕೆ ಕೇಳುತ್ತೇನೆ ಎಂದರೆ ಮುಸ್ಲಿಂ ಮಹಿಳೆಯರು ಹಲವಾರು ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ಭಾರತದ ಜನಸಂಖ್ಯೆಯಲ್ಲಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ನಮ್ಮ ಪರವಾಗಿ ಯಾವುದೇ ಕ್ರಿಯಾಶೀಲ ಆಡಳಿತ ಕ್ರಮವನ್ನು ಕಾಣಲಾಗುತ್ತಿಲ್ಲ.
ಬದಲಾಗಿ ನಾವು ನೋಡುತ್ತಿರುವುದು ಮುಸ್ಲಿಂ ಮಹಿಳೆಯರಾಗಿ ನಮ್ಮ ಮೇಲೆ ನಡೆಯುತ್ತಿರುವ ನಿರ್ದಿಷ್ಟ ದಾಳಿಗಳನ್ನು. ವಾಸ್ತವವಾಗಿ ಸರ್ಕಾರವು ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ ಯೋಜನೆಯನ್ನು ರದ್ದುಗೊಳಿಸಿತು ಮತ್ತು ಶಾಲಾ ಸಮವಸ್ತ್ರದ ಸುತ್ತಲೂ ಅನಗತ್ಯ ಹಾನಿಯನ್ನು ಸೃಷ್ಟಿಸಿತು, ಇದು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣದ ಪ್ರವೇಶವನ್ನು ಹೆಚ್ಚು ಕಷ್ಟಕರವಾಗಿಸಿದೆ. ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ಸಾಂವಿಧಾನಿಕ ಚೌಕಟ್ಟಿನೊಳಗೆ ಪೌರತ್ವ ಹಕ್ಕುಗಳನ್ನು ಆಗ್ರಹಿಸಿದ ಆಂದೋಲನ, ಶಾಹೀನ್ ಬಾಗ್ ಚಳುವಳಿಯ ಮೇಲೆ ಸರ್ಕಾರವು ದೇಶಾದ್ಯಂತ ದಾಳಿ ಮಾಡಿತು. ಅಂದರೆ ಏನಾಸಂ ಮುಸ್ಲಿಂ ಮಹಿಳೆಯರ ಹೆಸರಿನಲ್ಲಿ ನೀವು ನೀಡಬಹುದಾದ ಪ್ರಚಾರ ಮಾತ್ರವೇ ?
ಲಿಂಗತ್ವ ನ್ಯಾಯದ ಚರಿತ್ರೆ
ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ಲಿಂಗತ್ವ ನ್ಯಾಯದ ಬಗ್ಗೆ ಸರ್ಕಾರದ ಹಿಂದಿನ ನಡವಳಿಕೆ ಏನನ್ನು ಸೂಚಿಸುತ್ತದೆ ?
ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಿದ ಮುಸ್ಲಿಂ ಯುವತಿಯರನ್ನು ಸುಲ್ಲಿ-ಬುಲ್ಲಿ Appಗಳ ಮೂಲಕ ಹರಾಜು ಹಾಕಲಾಯಿತು. ಹತ್ರಾಸ್ ಅತ್ಯಾಚಾರ ಸಂತ್ರಸ್ತೆಗೆ ಸರಿಯಾದ ಅಂತ್ಯಕ್ರಿಯೆಯನ್ನು ಸಹ ನಿರಾಕರಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಿಳಾ ಕುಸ್ತಿಪಟುಗಳು ತಮಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟು ಹೋರಾಡಿದಾಗ ಅವರ ವಿರುದ್ಧ ಅಪಪ್ರಚಾರ ಮಾಡಲಾಯಿತು. ಕುಕಿ ಮಹಿಳೆಯರು ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಲೇ ಇದ್ದಾರೆ, ತನ್ಮೂಲಕ ಜನರ ಜೀವ ಮತ್ತು ಆಸ್ತಿಗಳನ್ನು ಉಳಿಸಲು ಸುಮಾರು ಮೂರು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿಕ್ರಿಯೆಯು ನಿಷ್ಕ್ರಿಯವಾಗಿರುವುದೇ ಅಲ್ಲದೆ ಕಾನೂನು ಉಲ್ಲಂಘಿಸುವವರ ಮತ್ತು ಕಿರುಕುಳ ನೀಡುವವರ ಪರವಾಗಿ ನಿಂತಿದೆ.
ಸುಳ್ಳು ನಿರೂಪಣೆಗಳನ್ನು ಹರಡುವ ಮೂಲಕ ಅಂತರ್-ಧರ್ಮೀಯ ವಿವಾಹಗಳ ಮೇಲೆ ದಾಳಿ ನಡೆಸುತ್ತಿರುವ ಸರ್ಕಾರಗಳಿಂದ, ಕುಟುಂಬಗಳನ್ನು ರಚಿಸುವ ಹಕ್ಕನ್ನು ಕೇಳುವ ಕ್ವೀರ್ಗಳನ್ನು, ಟ್ರಾನ್ಸ್ಜೆಂಡರ್ ಸಮುದಾಯಗಳನ್ನು ವಿರೋಧಿಸುವ ಸರ್ಕಾರದಿಂದ ನಾವು ಯಾವ ರೀತಿಯ ಲಿಂಗತ್ವ ನ್ಯಾಯವನ್ನು ನಿರೀಕ್ಷಿಸಬಹುದು? ನಮ್ಮಂತಹ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್ನಲ್ಲಿ ಹೋರಾಟವನ್ನು ಗೆದ್ದ ನಂತರ ತ್ವರಿತ ತ್ರಿವಳಿ ತಲಾಖ್ನ ಅನ್ಯಾಯದಿಂದ ಮಹಿಳೆಯರನ್ನು ಮುಕ್ತಗೊಳಿಸಿದ್ದೇವೆ ಎಂದು ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿದೆ. ಏಕಪಕ್ಷೀಯ ವಿಚ್ಛೇದನಗಳನ್ನು ಈಗಾಗಲೇ ಕಾನೂನುಬಾಹಿರವೆಂದು ಪರಿಗಣಿಸಿದ ನಂತರ ಮಹಿಳೆಯರ ಗಂಡಂದಿರನ್ನು ಜೈಲಿಗೆ ಕಳುಹಿಸುವ ತ್ವರಿತ ತ್ರಿವಳಿ ತಲಾಖ್ ಅನ್ನು ಅಪರಾಧೀಕರಿಸುವ ಮೂಲಕ ನೀವು ನಮ್ಮನ್ನು ಬೆಂಬಲಿಸಿದ್ದೀರಿ. ಇಂತಹ ಕ್ರಮವು ತಪ್ಪು ವಿಚ್ಛೇದನಗಳ ವಿರುದ್ಧ ಹೋರಾಡುವ ಮಹಿಳೆಯರಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಕಂಡುಹಿಡಿಯಲು ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ.
ಲಿಂಗತ್ವ ನ್ಯಾಯದ ಬಗ್ಗೆ ನಿಮ್ಮ ತಿಳುವಳಿಕೆಯು ಹೆಚ್ಚಿನ ಮುಸ್ಲಿಂ ಪುರುಷರನ್ನು ಬಂಧಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ ಎಂದು ತೋರುತ್ತದೆ. ಪಶ್ಚಿಮ ಏಷ್ಯಾದ ತೈಲದ ಹಿಂದೆ ಇದ್ದಾಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ಇರಾಕ್ ಮೇಲೆ ದಾಳಿ ನಡೆಸಿದ ಜಾರ್ಜ್ ಬುಷ್ ಅವರಂತೆ ಬಿಜೆಪಿ ಮುಸ್ಲಿಂ ಮಹಿಳೆಯರ ವಹಿಸುತ್ತದೆ ಎಂದು ಹೇಳುತ್ತಲೇ ನಮ್ಮನ್ನು ಒಂದು ಸಮುದಾಯವಾಗಿ ಬಲಿಪಶು ಮಾಡಲು ಹೊರಟಿದೆ ಎಂದು ಕಾಣುತ್ತದೆ.
ಯಾವುದೇ ರೀತಿಯಲ್ಲಿ ನಾವು ಈ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ ಅಥವಾ ಅದು ಯಾರ ಒಳಿತಿಗಾಗಿ ಏನಾಸಂ ಬಯಸುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಇದು ಹಿಂದೂ ಮಹಿಳೆಯರ ವಿಚ್ಛೇದನ ಮತ್ತು ಆಸ್ತಿಯ ಹಕ್ಕಿನ ವಿರುದ್ಧ ಹೋರಾಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಂಪ್ರದಾಯವಾದಿ ರಾಜಕೀಯದಿಂದ ಪ್ರೇರಿತವಾಗಿದೆ. ವಾಸ್ತವವಾಗಿ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಈ ವ್ಯವಸ್ಥೆಯು ಏನನ್ನು ಜಾರಿಗೊಳಿಸಲೆತ್ನಿಸುತ್ತದೆ ಎಂಬುದರ ಬಗ್ಗೆ ನ್ಯಾಯವನ್ನು ಬಯಸುವ ಎಲ್ಲಾ ಜನರು ಚಿಂತಿಸಬೇಕಿದೆ. ಕಳೆದ ಒಂಬತ್ತು ವರ್ಷಗಳಿಂದ, ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಾಗರಿಕರ ಬಗ್ಗೆ ಭಾರತದ ಪ್ರಭುತ್ವವು ತನ್ನ ಕೆಟ್ಟ ದಾಖಲೆಯನ್ನು ಪ್ರದರ್ಶಿಸಿದೆ. ನಾಗರಿಕರ ಬಗ್ಗೆ ಬಹುಸಂಖ್ಯಾತರ ಸಾಂವಿಧಾನಿಕವಲ್ಲದ ವಿಧಾನವನ್ನು ನಂಬುವ ಸರ್ಕಾರ ಮಾತ್ರ ಈ ವಾತಾವರಣದಲ್ಲಿ ಏನಾಸಂ ಜಾರಿಗೆ ತರುವ ಬಗ್ಗೆ ಮಾತನಾಡಲು ಸಾಧ್ಯ. ಅಂತಹ ಸಂಹಿತೆ ಎಂದಾದರೂ ಜಾರಿಯಾದರೆ ಅದು ಅನೇಕ ಸಮುದಾಯಗಳ ಸಂರಕ್ಷಿತ ಆಚರಣೆಗಳಿಗೆ ವಿರುದ್ಧವಾಗಿರುತ್ತದೆ ಹಾಗೂ ನಮ್ಮ ದೇಶದ ವೈವಿಧ್ಯಮಯ ಮತ್ತು ಬಹುಸಾಂಸ್ಕೃತಿಕ ಜೀವನ ವಾಸ್ತವಗಳನ್ನು ನಾಶಪಡಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಈ ಮನಸ್ಥಿತಿಯ ಸರ್ಕಾರವು ರೂಪಿಸಿದ ಏನಾಸಂಗೆ ನಾವು ಬೇಕು ಎಂದು ಹೇಳಲು ಯಾವುದೇ ಕಾರಣಗಳಿಲ್ಲ.
ಮುಂದುವರೆಯುತ್ತದೆ,,,,,,,