ಉದ್ಯೋಗಸೃಷ್ಟಿಯ ಭರವಸೆಯೇ ಇಲ್ಲದ ಆರ್ಥಿಕತೆಯ ನಡುವೆ ಕಲ್ಯಾಣ ರಾಜ್ಯದ ಅಗತ್ಯತೆ
ಕೃಪೆ : ಸಮಾಜಮುಖಿ ಆಗಸ್ಟ್ 2023
2023ರ ಕರ್ನಾಟಕ ದ ಚುನಾವಣಾ ಫಲಿತಾಂಶಗಳು ಎರಡು ಕಾರಣಗಳಿಂದ ಗಮನಸೆಳೆದಿವೆ. ಮೊದಲನೆಯದು ತನ್ನ ದುರಾಡಳಿತ ಮತ್ತು ಮತದ್ವೇಷ ರಾಜಕಾರಣಕ್ಕೆ ಬೆಲೆ ತೆತ್ತು ಬಿಜೆಪಿ ಸರ್ಕಾರ ಸೋಲುವುದು ಖಚಿತವಾಗಿದ್ದರೂ, ಹಿಂದುತ್ವ ರಾಜಕಾರಣದ ಮೂಲ ಸೆಲೆಗಳು ಇನ್ನೂ ಭದ್ರವಾಗಿದ್ದುದರಿಂದ ಈ ಪರಿಯ ಹೀನಾಯ ಸೋಲು ಅನಿರೀಕ್ಷಿತವೆಂದೇ ಹೇಳಬಹುದು. ಎರಡನೆಯ ಕಾರಣ ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ಗೊಂದಲಗಳ ನಡುವೆಯೂ ಸಾಧಿಸಿದ ಅಭೂತಪೂರ್ವ ಗೆಲುವು. ಈ ಕಾರಣಗಳನ್ನು ಬದಿಗಿಟ್ಟು ನೋಡಿದಾಗ ಬಹುಪಾಲು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪಕ್ಷದ ಐದು ಗ್ಯಾರಂಟಿಗಳೇ ಕಾರಣ ಎನ್ನುವಂತೆ ಬಿಂಬಿಸಲಾಗುತ್ತಿದೆ. ಒಂದು ಹಂತದವರೆಗೆ ಇದನ್ನು ಒಪ್ಪಬಹುದಾದರೂ, ಸೂಕ್ಷ್ಮವಾಗಿ ನೋಡಿದಾಗ ಗ್ಯಾರಂಟಿಗಳು ಕೇವಲ ಅನುಷಂಗಿಕ ಪ್ರಭಾವ ಬೀರಿರುವುದನ್ನು ಗಮನಿಸಲು ಸಾಧ್ಯ.
![](https://pratidhvani.com/wp-content/uploads/2023/08/image-1-1024x576.jpg)
ಏಕೆಂದರೆ ರಾಜ್ಯಾದ್ಯಂತ ಕಾಡುತ್ತಿದ್ದ ನಿರುದ್ಯೋಗ, ಬೆಲೆ ಏರಿಕೆ, ಮತೀಯವಾದ, ಮತಾಂಧರ ಹಾವಳಿ, ಕೋಮುವಾದ ಮತ್ತು ಮತೀಯ ದ್ವೇಷದ ದಾಳಿಗಳನ್ನು ತಡೆಗಟ್ಟುವಲ್ಲಿ ಸರ್ಕಾರದ ವೈಫಲ್ಯಗಳು ಮತದಾರರಲ್ಲಿ ಜುಗುಪ್ಸೆ ಮೂಡಿಸಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಕೋವಿದ್ ನಂತರದ ದಿನಗಳಲ್ಲಿ ರಾಜ್ಯದ ಆರ್ಥಿಕತೆಯ ಚೇತರಿಕೆಯ ನಡುವೆಯೂ ಜನಸಾಮಾನ್ಯರ ನಿತ್ಯ ಜೀವನೋಪಾಯದ ಮಾರ್ಗಗಳು ಕಠಿಣವಾಗಿಯೇ ಸಾಗಿದ್ದುದನ್ನು ಅಂಕಿಅಂಶಗಳೇ ನಿರೂಪಿಸುತ್ತಿದ್ದವು. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮತ್ತು ಶ್ರೀಸಾಮಾನ್ಯರ ಆದಾಯದಲ್ಲಿನ ಕೊರತೆ ಬಡ ಜನತೆಯನ್ನು ದಾರಿದ್ರ್ಯತೆಯ ಕೂಪಕ್ಕೆ ತಳ್ಳಿದ್ದುದನ್ನು ರಾಜ್ಯದೆಲ್ಲೆಡೆ ಕಾಣಬಹುದಿತ್ತು. ಈ ಶ್ರೀಸಾಮಾನ್ಯನ ಬವಣೆಗಳ ನಡುವೆಯೇ ಚುನಾವಣೆಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಪಕ್ಷವೂ ಎದುರಿಸಿತ್ತು. ಏಕೆಂದರೆ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವ ರಾಷ್ಟ್ರ ರಾಜಕಾರಣದಲ್ಲಿ ಪಕ್ಷಕ್ಕೆ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವುದೂ ಅತ್ಯವಶ್ಯವಾಗಿತ್ತು. ಭಾರತ್ ಜೋಡೋ ಈ ಪ್ರಯತ್ನಗಳಲ್ಲಿ ಒಂದಾಗಿದ್ದು, ಪ್ರಸಕ್ತ ಚುನಾವಣಾ ಫಲಿತಾಂಶಗಳಲ್ಲಿ ಅದರ ಪರಿಣಾಮಗಳನ್ನೂ ಕಾಣಬಹುದು.
ಗ್ಯಾರಂಟಿಗಳ ಜಾಗತಿಕ ಆಯಾಮ
“ ಕರ್ನಾಟಕ ಮಾಡೆಲ್” ಎಂದು ಕರೆಯಲಾಗುತ್ತಿರುವ ಗ್ಯಾರಂಟಿ ಯೋಜನೆಗಳು ಮೂಲತಃ ಒಂದು ಜಾಗತಿಕ ಮಾಡೆಲ್ ಆಗಿರುವುದನ್ನು 2008ರ ವಿಶ್ವ ಆರ್ಥಿಕ ಹಿಂಜರಿತದ ನಂತರದ ದಿನಗಳ ರಾಷ್ಟ್ರ ರಾಜಕಾರಣಗಳಲ್ಲಿ ಕಾಣಬಹುದು. ಕೀನೀಷಿಯನ್ ಆರ್ಥಿಕತೆ ಎನ್ನಲಾಗುವ ಕಲ್ಯಾಣ ರಾಜ್ಯದ ಪರಿಕಲ್ಪನೆಯು ಸದಾ ಕಾಲವೂ ಬಿಕ್ಕಟ್ಟಿನಲ್ಲಿರುವ ಬಂಡವಾಳಶಾಹಿ ಆರ್ಥಿಕತೆಗಳಿಗೆ ಸುರಕ್ಷಾ ಕವಚವಾಗಿ ಪರಿಣಮಿಸಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬಂಡವಾಳದ ಹರಿವು ಮತ್ತು ಕ್ರೋಡೀಕರಣ ಹೆಚ್ಚಾದಂತೆಲ್ಲಾ ವ್ಯಕ್ತಿಗತ ಔದ್ಯಮಿಕ ಸಂಪತ್ತಿನ ಕ್ರೋಡೀಕರಣವೂ ತೀವ್ರವಾಗುತ್ತಲೇ ಹೋಗುತ್ತದೆ. ಈ ಪ್ರಕ್ರಿಯೆಯಲ್ಲೇ ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಶ್ರೀಮಂತರ-ಅತಿಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿರುವಂತೆಲ್ಲಾ ಬಡತನದ ಕೂಪಕ್ಕೆ ತಳ್ಳಲ್ಪಡುವ ಜನಸಾಮಾನ್ಯರ ಸಂಖ್ಯೆಯೂ ತೀವ್ರವಾಗುತ್ತಲೇ ಹೋಗುತ್ತದೆ. ಆದರೆ ಭಾರತವನ್ನೂ ಸೇರಿದಂತೆ ಯಾವುದೇ ರಾಷ್ಟ್ರದ ಆರ್ಥಿಕತೆಯೂ ಬೇಡಿಕೆ ಕೇಂದ್ರಿತ (Demand side Economics) ಅರ್ಥನೀತಿ ಅನುಸರಿಸಿಲ್ಲ. ಬದಲಾಗಿ ಬಂಡವಾಳದ ಚಲನೆ, ಹೂಡಿಕೆ ಮತ್ತು ಕ್ರೋಡೀಕರಣಕ್ಕೆ ಪೂರಕವಾದ ಸರಬರಾಜು ಕೇಂದ್ರಿತ (Supply Side Economics) ಆರ್ಥಿಕತೆಯನ್ನೇ ಅನುಸರಿಸಲಾಗುತ್ತಿದೆ.
ಅರ್ಥವ್ಯವಸ್ಥೆಯಲ್ಲಿ ತಳಮಟ್ಟದ ಉತ್ಪಾದಕ ಶಕ್ತಿಗಳಿಗೆ, ಅಂದರೆ ತಳಸ್ತರದ ಬಹುಸಂಖ್ಯಾತ ದುಡಿಯುವ ವರ್ಗಗಳಿಗೆ ಅವರ ಜೀವನೋಪಾಯ ಮಾರ್ಗದಲ್ಲಿ ಅತ್ಯವಶ್ಯವಾದ ವಸ್ತುಗಳನ್ನು ಕೊಳ್ಳುವ ಶಕ್ತಿಯೂ ಇಲ್ಲವಾದಾಗ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತದೆ. ಜನರ ಜೇಬಿನಲ್ಲಿ ಹಣ ಇಲ್ಲದೆ ಇರುವುದರಿಂದ ಅವರ ಖರೀದಿ ಸಾಮರ್ಥ್ಯವೂ ಕುಸಿಯುತ್ತಲೇ ಹೋಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ನಗದು ಹಣದ ಹರಿವು ಕಡಿಮೆಯಾಗುತ್ತದೆ. ಕೋವಿದ್ ಸಾಂಕ್ರಾಮಿಕದ ಸಮಯದಲ್ಲಿ ಈ ಬಿಕ್ಕಟ್ಟು ಉಲ್ಬಣಿಸಿದರೂ ಇದು 2008ರ ನಂತರದ ವಿದ್ಯಮಾನವೇ ಆಗಿದೆ. ಆದರೆ ಕೋವಿದ್ ನಂತರದಲ್ಲೂ ಸರ್ಕಾರಗಳು ಇದೇ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರಗಳಿಗೆ ನಗದು ಹಣದ ಚಲಾವಣೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಬೇಕಾದರೆ, ನೋಟು ಮುದ್ರಣ ಹೆಚ್ಚಿಸಲಾಗುವುದಿಲ್ಲ. ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ. ಹಾಗಾಗಿ ಕೆಲವು ಸೌಲಭ್ಯಗಳನ್ನು ಉಚಿತವಾಗಿ ನೀಡುವ ಮೂಲಕ, ಸೇವೆಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಅಥವಾ ಪಡಿತರ ಮುಂತಾದ ಜೀವನಾವಶ್ಯ ಪದಾರ್ಥಗಳನ್ನು ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ/ಉಚಿತವಾಗಿ ನೀಡುವ ಜನಕಲ್ಯಾಣ ನೀತಿಗಳನ್ನು ಅನುಸರಿಸುತ್ತವೆ.
![](https://pratidhvani.com/wp-content/uploads/2023/08/images-9.jpeg)
ಇದು ಸಾಮಾಜಿಕ ಪ್ರಜಾಪ್ರಭುತ್ವ (Social Democracy) ನೀತಿಯ ಒಂದು ಆಯಾಮ. ಮೂಲ ಸಮಾಜವಾದಿ ತತ್ವಗಳನ್ನು ಅಳವಡಿಸಲಾಗದ ಕಮ್ಯುನಿಸ್ಟ್ ಪಕ್ಷಗಳ ಆಳ್ವಿಕೆಯಲ್ಲೂ ಇದೇ ನೀತಿಗಳನ್ನು ಅನುಸರಿಸುವುದನ್ನು ಕಾಣಬಹುದು. ಏಕೆಂದರೆ ಬೃಹದಾರ್ಥಿಕ ನೆಲೆಯಲ್ಲಿ ಬಂಡವಾಳಶಾಹಿ ನೀತಿಗಳೇ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತವೆ. ನವ ಉದಾರವಾದದ ಡಿಜಿಟಲ್ ಆರ್ಥಿಕತೆಯಲ್ಲಿ ಈ ಉದ್ಯೋಗ ಸೃಷ್ಟಿ ನಗಣ್ಯವಾಗಿರುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜೀವನೋಪಾಯದ ಸವಾಲುಗಳು ತೀವ್ರವಾಗುತ್ತವೆ. ವಲಸೆ ಕಾರ್ಮಿಕರು ಮತ್ತು ಅಂಘಟಿತ ವಲಯದ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ. ಸೇವಾ ವಲಯವನ್ನು ಪೋಷಿಸುವ ಸಲುವಾಗಿ ಸರಬರಾಜು ಕೇಂದ್ರಿತ ಆರ್ಥಿಕ ನೀತಿಗಳನ್ನು ಅನುಸರಿಸುವುದರಿಂದ ಶಾಶ್ವತ ಉದ್ಯೋಗ ಎನ್ನುವುದು ಮರೀಚಿಕೆಯಾಗುತ್ತದೆ. ಇದರಿಂದ ಹೆಚ್ಚು ಹೆಚ್ಚು ಜನರು ಮಾರುಕಟ್ಟೆಯ ಶಕ್ತಿಗಳನ್ನೇ ಅವಲಂಬಿಸುತ್ತಾರೆ. ಈ ಖರೀದಿ ಸಾಮರ್ಥ್ಯ ಇಲ್ಲದ ಜನಸಂಖ್ಯೆ ಅಂದರೆ ಅನಕ್ಷರಸ್ಥರು, ಅರೆ ಅಕ್ಷರಸ್ಥರು ಹಾಗೂ ದುರ್ಬಲ ವರ್ಗಗಳು ಹೆಚ್ಚು ಹೆಚ್ಚು ಅಂಚಿಗೆ ತಳ್ಳಲ್ಪಟ್ಟು ಶ್ರಮಿಕ ವರ್ಗೀಕರಣಕ್ಕೊಳಗಾಗುತ್ತಾರೆ. (Proletarisation)̤
ಮುಂದುವರೆಯುತ್ತದೆ,,,,