ಬೆಂಗಳೂರಿನ ವಾಯು ಮಾಲಿನ್ಯವು ಡಬ್ಲ್ಯುಎಚ್ಒ ಮಾರ್ಗಸೂಚಿಗಿಂತ ಈಗಾಗಲೇ ಮೂರು ಪಟ್ಟು ಹೆಚ್ಚಿದ್ದು, ಕೇಂದ್ರ ಸರ್ಕಾರವು ಕಲ್ಲಿದ್ದಲು ಸ್ಥಾವರಗಳನ್ನು 28 ಪ್ರತಿಶತದಷ್ಟು ವಿಸ್ತರಿಸಲು ಯೋಜಿಸಿದರೆ, ಮುಂದಿನ 10 ವರ್ಷಗಳಲ್ಲಿ ಇದು ದ್ವಿಗುಣಗೊಳ್ಳಲಿದೆ ಎಂದು ‘ಸಿ40 ಸಿಟೀಸ್’ ವರದಿಯು ಎಚ್ಚರಿಸಿದೆ.
C40ಯು ವಿಶ್ವದ ಪ್ರಮುಖ ನಗರಗಳ 100 ಮೇಯರ್ಗಳ ನೆಟ್ವರ್ಕ್ ಆಗಿದ್ದು ಭಾರತದ ಕಲ್ಲಿದ್ದಲು ಯೋಜನೆಗಳ ಮಾಲಿನ್ಯದಿಂದ ವಾರ್ಷಿಕ ಅಕಾಲಿಕ ಮರಣದ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ಹೇಳಿದೆ.
ಏಕೆಂದರೆ ಕಲ್ಲಿದ್ದಲು ಸ್ಥಾವರಗಳಿಂದ ಉಂಟಾಗುವ ಮಾಲಿನ್ಯವು 500 ಕಿಮೀ ವರೆಗೆ ಚಲಿಸುತ್ತದೆ ಮತ್ತು ಭಾರತದ ಕಲ್ಲಿದ್ದಲಿನಿಂದ ಉತ್ಪಾದನೆಯಾಗುವ ವಿದ್ಯುತ್ ಸ್ಥಾವರಗಳಲ್ಲಿ 14 ಪ್ರತಿಶತದಷ್ಟು ಬೆಂಗಳೂರಿನಿಂದ 500 ಕಿಮೀ ಒಳಗೆ ಇವೆ ಎಂದು ವರದಿ ತಿಳಿಸಿದೆ.

ಹವಾಮಾನ ಬದಲಾವಣೆಯ ಕುರಿತು ವಿಶ್ವಸಂಸ್ಥೆಯ ಸಮಿತಿಯು 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮಾನದಂಡವಾಗಿ ನಿಗದಿಪಡಿಸಿದೆ. C40 ನಡೆಸಿದ ಅಧ್ಯಯನದಲ್ಲಿ ವಿವಿಧ ದೇಶಗಳು ಈ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿ ಮತ್ತು ವಿಶ್ವಸಂಸ್ಥೆಯು ನಿಗದಿಪಡಿಸಿದ ಮಾನದಂಡದ ನಡುವಿನ ಅಂತರವನ್ನೂ ಪರಿಶೀಲಿಸಲಾಗಿದೆ. “1.5 °C ಮಾನದಂಡದ ಪ್ರಕಾರ C40 ನಗರಗಳು ಮತ್ತು ಸುತ್ತಮುತ್ತಲಿನ ಕಲ್ಲಿದ್ದಲು ಸಾಮರ್ಥ್ಯವು 2020 ಮತ್ತು 2030 ರ ನಡುವೆ 61 ಪ್ರತಿಶತದಷ್ಟು ಕಡಿಮೆಯಾಗಬೇಕು. ಆದರೆ, C40 ನಗರಗಳ 500 ಕಿಮೀ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಲ್ಲಿದ್ದಲು ಯೋಜನೆಗಳನ್ನು ಪರಶೀಲಿಸುವಾಗ 2020 ಮತ್ತು 2030 ರ ನಡುವೆ ಕಲ್ಲಿದ್ದಲು ಸಾಮರ್ಥ್ಯವನ್ನು 4 ಪ್ರತಿಶತದಷ್ಟು ಹೆಚ್ಚುತ್ತದೆ ಎಂದು ತೋರುತ್ತದೆ” ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
C40 ನಲ್ಲಿ knowledge and research ಸಮಿತಿಯ ಮುಖ್ಯಸ್ಥರಾದ ಡಾ.ರಾಚೆಲ್ ಹಕ್ಸ್ಲೆ ಅವರು “ಪ್ರಸ್ತುತ ರಾಷ್ಟ್ರೀಯ ಯೋಜನೆಗಳು 2030 ರ ವೇಳೆಗೆ ಭಾರತದ ಕಲ್ಲಿದ್ದಲು ಸ್ಥಾವರಗಳನ್ನು ಶೇಕಡಾ 28 ರಷ್ಟು ವಿಸ್ತರಿಸುತ್ತವೆ, ಇದು ಬೆಂಗಳೂರು ನಿವಾಸಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಧಕ್ಕೆ ತರುತ್ತದೆ” ಎಂದಿದ್ದಾರೆ.
“ಪ್ರಸ್ತುತ ವಿಸ್ತರಣೆಯು ಮುಂದಿನ ದಶಕದಲ್ಲಿ 3,650 ಅಕಾಲಿಕ ಮರಣಗಳು, 3,410 ಅವಧಿ ಪೂರ್ವ ಜನನಗಳು ಮತ್ತು 4,080 ಅಸ್ತಮಾಗಳಿಗೆ ಕಾರಣವಾಗಬಹುದು” ಎಂದು ಅಧ್ಯಯನವು ಹೇಳಿದೆ. ಕಾರ್ಮಿಕ ಉತ್ಪಾದಕತೆ ಕಡಿಮೆಯಾಗುವುದರ ಮೂಲಕ ಮತ್ತು ಉದ್ಯೋಗಿಗಳ ಅನುಪಸ್ಥಿತಿಯಲ್ಲಿನ ಹೆಚ್ಚಳದಿಂದ ನಗರ ಆರ್ಥಿಕತೆಯ ಮೇಲೂ ಈ ಮಾಲಿನ್ಯವು ಪರಿಣಾಮ ಬೀರಲಿದೆ ಎಂದೂ ವರದಿ ಎಚ್ಚರಿಸಿದೆ.

ಅಧ್ಯಯನವು 27 ದೇಶಗಳ 61 ನಗರಗಳನ್ನು ತನ್ನ ಅಧ್ಯಯನಕ್ಕಾಗಿ ಪರಿಶೀಲಿಸಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ವಿಯೆಟ್ನಾಂ, ಟರ್ಕಿ ಮತ್ತು ಇಂಡೋನೇಷಿಯಾ ಕಲ್ಲಿದ್ದಲು ಸ್ಥಾವರಗಳಿಂದ ಕಲುಷಿತಗೊಂಡ ದೇಶಗಳಲ್ಲಿ ಮೊದಲ ಸಾಲಿನಲ್ಲಿ ಇವೆ .ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ದೆಹಲಿಯಂತಹ ಇತರ ಭಾರತೀಯ ನಗರಗಳ ಪರಿಸ್ಥಿತಿಗಳು ಬೆಂಗಳೂರಿಗಿಂತಲೂ ಕೆಟ್ಟದ್ದಾಗಿದ್ದು ನಗರದೊಳಗೇ 500 ಕಿಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಸೇರಿದಂತೆ ಹಲವು ಅಂಶಗಳಿಂದ ನಿರಂತರವಾಗಿ ವಾಯುಮಾಲಿನ್ಯಕ್ಕೆ ಒಳಗಾಗುತ್ತಾ ಬಂದಿದೆ ಎಂದೂ ಈ ಅಧ್ಯಯನವು ಹೇಳಿದೆ.
ಅಪಾರ ಜನ ಸಂಪನ್ಮೂಲ ಇರುವ ಭಾರತವು ಸೌರ ಮತ್ತು ಪವನ ಶಕ್ತಿಗೆ ಉತ್ತೇಜನ ನೀಡುವ ಮೂಲಕ ಇಂಧನ ಕ್ಷೇತ್ರದಲ್ಲಿ 1.25 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಅಧ್ಯಯನವು ಸೂಚಿಸಿದೆ.
Source: Deccan Herald, The print
