ನಿನ್ನೆ ನಾನಾ ಕಾರಣಗಳಿಂದ ಸದನ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಈ ಎಲ್ಲಾ ಸದ್ದು-ಗದ್ದಲದ ನಡುವೆ ಪ್ರತಿಧ್ವನಿ ಮತ್ತು The news minute ನ ಬಯಲಿಗೆಳೆದಿದ್ದ ಚಿಲುಮೆ ಹಗರಣ ಕೂಡ ಸದ್ದು ಮಾಡಿದ್ದು, ಇಬ್ಬರು ನಾಯಕರ ನಡುವಿನ ವಾಕ್ಸಮರಕ್ಕೆ ಕೂಡ ಕಾರಣವಾಗಿದೆ.
ಹೌದು.. 2013ರ ಅನ್ನಭಾಗ್ಯ ಯೋಜನೆಯ ಬಗ್ಗೆ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಮಾತನಾಡಲು ಆರಂಭಿಸಿ ಕೆಲವೊಂದು ಲೋಪಯುತ ಮಾಹಿತಿಗಳನ್ನ ನೀಡಿದ್ದರು, ಇದಕ್ಕೆ ಮಧ್ಯ ಪ್ರವೇಶಿಸಿದ ಸಚಿವ ಭೈರತಿ ಸುರೇಶ್, ತಪ್ಪು ಮಾಹಿತಿಗಳನ್ನು ನೀಡಬೇಡಿ ಎಂದು ಶಾಸಕ ಅಶ್ವತ್ಥ್ ನಾರಾಯಣ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದಾದ ಬಳಿಕ ಇಬ್ಬರ ನಡುವೆ ವಾಗ್ಯುದ್ಧ ಮುಂದುವರೆದಿತ್ತು. ಇದೇ ವೇಳೆ ಮತದಾರರ ಮಾಹಿತಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಯ ಹೆಸರು ಪ್ರಸ್ತಾಪವಾಯಿತು.

ಹೌದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅನ್ನಭಾಗ್ಯ ಯೋಜನೆಯ ವಿಚಾರ ಮಾತನಾಡೋದಕ್ಕೆ ಪ್ರಾರಂಭ ಮಾಡಿದ್ದರು ಈ ವೇಳೆ ಮಧ್ಯ ಮಾತನಾಡಿದ ಅಶ್ವತ್ಥನಾರಾಯಣ ಅವರು 2013ರಲ್ಲಿ ಕಾಂಗ್ರೆಸ್ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು ಎಂದು ಸುಳ್ಳು ಮಾಹಿತಿಯನ್ನ ಸದನದ ಮುಂದಿಟ್ಟು ಮಾತು ಮುಂದುವರಿಸಲು ಮುಂದಾದ್ರು ಈ ವೇಳೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2013ರಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿಲ್ಲ. ಐದು ಕೆ.ಜಿ. ಹೇಳಿದ್ದು, ನಂತರ 7 ಕೆ.ಜಿ. ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಬಳಿಕ ಬೈರತಿ ಸುರೇಶ್, ಮಧ್ಯೆ ಪ್ರವೇಶಿಸಿ ಅಶ್ವತ್ಥ್ ನಾರಾಯಣ ವಿರುದ್ಧ ಚಿಲುಮೆ ಸಂಸ್ಥೆಯ ಹೆಸರು ಪ್ರಸ್ತಾಪಿಸಿ ‘ಚಿಲುಮೆ-ಒಲುಮೆ ನಿಮ್ಮದೇ ಡಾಕ್ಟರೇ’ ಎಂದು ಹೇಳಿಕೆಯನ್ನ ನೀಡಿದ್ದರು, ಇದು ಅಶ್ವತ್ಥನಾರಾಯಣ ಅವರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಭೈರತಿ ಸುರೇಶ್ ಹೇಳಿಕೆಗೆ ಕೆರಳಿ ಕೆಂಡವಾದ ಅಶ್ವತ್ಥ್ ನಾರಾಯಣ್ ʼಚಿಲುಮೆ ಸಂಸ್ಥೆ ಬಗ್ಗೆ ಏನು ಗೊತ್ತಿದೆ ನಿಮಗೆ? ನಾನು ನಿಮ್ಮ ರೀತಿ ರಾಜಕೀಯ ಮಾಡುವುದಿಲ್ಲ. ನನಗೆ ರಾಜಕೀಯ ಮೌಲ್ಯ ಇದೆ. ಸ್ವಾರ್ಥಿಯಾಗಿ ರಾಜಕೀಯ ಮಾಡುತ್ತಿಲ್ಲʼ ಎಂದು ಹೇಳಿಕೆ ನೀಡಿದ್ರು. ಇದಕ್ಕೆ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿ ನಮಗೆ ಎಲ್ಲಾ ತಿಳಿದಿದೆ ನಾನು ವೈಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ. ಚಿಲುಮೆ ಹಗರಣದ ಬಗ್ಗೆ ತಿಳಿಸಿದೆ ಅಂತ ಮಾಹಿತಿ ನೀಡಿದ ಸುಮ್ಮನ್ನಾದರು.
ಬಳಿಕ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣೆಭೈರೇಗೌಡ ಅನ್ನಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಗದ್ದಲ ಇನ್ನಷ್ಟು ಹೆಚ್ಚಾಗುವ ಸೂಚನೆ ಸಿಕ್ಕಿತ್ತು, ಹೀಗಾಗಿ ಮಧ್ಯೆ ಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಮತ್ತೆ ತಮ್ಮ ಭಾಷಣ ಮುಂದುವರೆಸಿದರು.
ಚಿಲುಮೆ ಹಗರಣ ಬಯಲಾಗಿದ್ದು ಹೇಗೆ.?
ಇಡೀ ಚುನಾವಣಾ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಬಹುದಾದ ಪ್ರಮುಖ ಗೌಪ್ಯತಾ ಉಲ್ಲಂಘನೆ ನಡೆದಿತ್ತು. ಖಾಸಗಿ ಎನ್ಜಿಒವೊಂದು ತಮ್ಮ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಬೆಂಗಳೂರಿನ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿತ್ತು. ಈ ಕುರಿತು ಪ್ರತಿಧ್ವನಿ ಮತ್ತು The news minute ನ ಆರು ಪತ್ರಕರ್ತರು ಸುಮಾರು ಮೂರು ತಿಂಗಳ ಕಾಲ ನಡೆಸಿದ ಜಂಟಿ ತನಿಖೆಯಿಂದ ಈ ಡೇಟಾ ಕಳ್ಳತನಕ್ಕೆ, ಬಿಬಿಎಂಪಿ ನೀಡಿದ ಆದೇಶ ಹೇಗೆ ಸಹಾಯ ಮಾಡಿದೆ ಎಂಬುದು ಬಯಲಾಗಿತ್ತು. ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ ಆದೇಶವನ್ನು ಎನ್ಜಿಒ ದುರುಪಯೋಗಪಡಿಸಿಕೊಂಡಿದ್ದು, ಮತದಾರರಿಗೆ ಅನುಮಾನ ಬರಬಾರದೆಂದು ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ಮೂಗಿನ ನೇರದಲ್ಲಿ ಹಲವು ತಿಂಗಳಿಂದ ಈ ಅಕ್ರಮ ಸರ್ವೆ ನಡೆದಿತ್ತು. ಆದರೂ ಕೂಡ ಈ ಬಗ್ಗೆ ಯಾರಿಗೂ ಒಂದು ಚೂರು ಮಾಹಿತಿ ತಿಳಿದಿರಲಿಲ್ಲ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನವಾದ SVEEP (Systematic Voters Education and Electoral Participation) ಅನ್ನು ನಡೆಸಲು, ʼಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆʼಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಈ ಆದೇಶವನ್ನು ದುರುಪಯೋಗಪಡಿಸಿಕೊಂಡಿತ್ತು, ತನ್ನ ನೂರಾರು ಏಜೆಂಟರಿಗೆ ನಕಲಿ ಐಡಿ-ಕಾರ್ಡ್ಗಳನ್ನು ನೀಡಿ. ಆ ಐಡಿ ಕಾರ್ಡುಗಳಲ್ಲಿ ತಮ್ಮನ್ನು ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಎಂದು ಗುರುತಿಸಲಾಗಿದೆ. ಬಿಎಲ್ಒ ಒಬ್ಬ ತಳಮಟ್ಟದ ಅಧಿಕಾರಿಯಾಗಿದ್ದು, ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಬಿಎಲ್ಒಗಳು ತಮ್ಮನ್ನು ನಿಯೋಜಿಸಲಾದ ಮತಗಟ್ಟೆಯ ನಿವಾಸಿಗಳಾಗಿರಬೇಕು. ಆದರೆ, ಚಿಲುಮೆ ತನ್ನ ಏಜೆಂಟರುಗಳಿಗೆ ಬಿಎಲ್ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಫೀಲ್ಡಿಗೆ ಮಾಹಿತಿ ಸಂಗ್ರಹಿಸಲು ಬಿಟ್ಟಿದೆ.

ಈ ಏಜೆಂಟ್ ಗಳು ಮತದಾರರಿಂದ ಅವರ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ಹಾಗೂ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ID ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಸಂಗ್ರಹಿಸಿದ್ದಾರೆ. ಅಲ್ಲದೆ, ಮತದಾರರು ತಮ್ಮ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನೂ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯ ಭಾಗವಾಗಿ ನಾಗರಿಕರಿಂದ ಕದ್ದಿರುವ ಈ ಡೇಟಾವು ಅಗಾಧವಾದ ವಾಣಿಜ್ಯ ಮೌಲ್ಯವನ್ನು ಹೊಂದಿದ್ದು, ಇದನ್ನು ಖರೀದಿಸಲು ಖಾಸಗಿ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಯಾವುದೇ ವಿಧಾನದಿಂದ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿರುವ ರಾಜಕಾರಣಿಗಳಿಗೆ ಈ ಡೇಟಾವು ಅಮೂಲ್ಯವಾಗಿದೆ. ಈ ಕಾರಣಕ್ಕಾಗಿಯೇ ಈ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಅನುಮತಿಸಲಾಗಿದೆ.
ಈ ಹಗರಣ ಅಂದಿನ ಬಿಜೆಪಿ ಸರ್ಕಾರಕ್ಕೆ ಹಲವು ಸಂಕಷ್ಟಗಳನ್ನ ಕೂಡ ತಂದೊಡ್ಡಿದ್ದು ಸುಳ್ಳಲ್ಲ. ಅದರಲ್ಲೂ ಈ ಹಗರಣದ ಹಿಂದೆ ಕೆಲ ಬಿಜೆಪಿ ನಾಯಕರ ಸಹಭಾಗಿತ್ವದ ಸಂಸ್ಥೆಗಳು ಕೂಡ ಭಾಗಿಯಾಗಿದ್ದು, ಈ ಸಂಪೂರ್ಣ ಹಗರ ಬಿಜೆಪಿ ಸರ್ಕಾರದ ಕೊರಳಿಗೆ ಸುತ್ತಿಕೊಂಡಿದ್ದು ಮಾತ್ರ ಸುಳ್ಳಲ್ಲ..






