ರಾಯ್ಪುರ: ಛತ್ತೀಸ್ಗಢದಲ್ಲಿ ಮಂಗಳವಾರ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, 9 ನಕ್ಸಲರ ಎನ್ಕೌಂಟರ್ ಮಾಡಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿ ಭಾಗದಲ್ಲಿರುವ ಅರಣ್ಯದಲ್ಲಿ ಪಶ್ಚಿಮ ಬಸ್ತಾರ್ ವಿಭಾಗಕ್ಕೆ ಸೇರಿದ ನಕ್ಸಲರು ಅಡಗಿದ್ದಾರೆಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10.30ರ ವೇಳೆಗೆ ಜಿಲ್ಲಾ ಮೀಸಲು ಪಡೆ District Reserve Guard (DRG) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ Central Reserve Police Force (CRPF) ಸಿಬ್ಬಂದಿ ಸೇರಿ ನಕ್ಸಲ್ ವಿರೋಧಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಹಲವು ಗಂಟೆಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಕೆಲ ನಕ್ಸಲರನ್ನು ಎನ್ಕೌಂಟರ್ ಮಾಡಲಾಗಿದೆ. ನಕ್ಸಲ್ ಸಮವಸ್ತ್ರಗಳಲ್ಲೇ ಇದ್ದ 9 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಭದ್ರತಾ ಸಿಬ್ಬಂದಿ ವಶ ಪಡಿಸಿಕೊಂಡಿದ್ದಾರೆ.

ಶೋಧ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರ್ಷದಲ್ಲೇ 154 ನಕ್ಸಲರ ವಧೆ :- ಮೋದಿ (Narendra modi) 3.0 ಸರ್ಕಾರದ 2 ವಷದಲ್ಲೇ ದೇಶದಲ್ಲಿ ನಕ್ಸಲರ ಅಟ್ಟಹಾಸವನ್ನು ಮಟ್ಟ ಹಾಕಲಾಗುವುದು 2026ರ ಮಾರ್ಚ್ ವೇಳೆಗೆ ಭಾರತ ನಕ್ಸಲ್ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರದ ಹಿಂದಷ್ಟೇ ಭರವಸೆ ನೀಡಿದ್ದರು. ಅದರಂತೆ ನಕ್ಸಲ್ ಪೀಡಿತ ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣಗಳು ಬಿರುಸುಗೊಂಡಿವೆ. ಮಂಗಳವಾರ ಎನ್ಕೌಂಟರ್ ಮಾಡಲಾದ 9 ನಕ್ಸಲರೂ ಸೇರಿ ಪ್ರಸಕ್ತ ವರ್ಷದಲ್ಲಿ 154 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.






