ಚಾಮರಾಜನಗರ : ಜೂನ್.4: ಒಡಿಶಾ ರೈಲು ದುರಂತ ಪ್ರಕರಣದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬುವವರು ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಅದೃಷ್ಟವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇವರಿಬ್ಬರು ಘಟನಾ ಸ್ಥಳದಿಂದ ತವರಿಗೆ ವಾಪಸ್ ಆಗಲು ಪ್ರಯಾಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನರಿತ ಗುಂಡ್ಲುಪೇಟೆ ಶಾಸಕರಾದ ಹೆಚ್.ಎಂ.ಗಣೇಶ್ ಪ್ರಸಾದ್ ರವರು ಸಚಿವ ಸಂತೋಷ್ ಲಾಡ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರನ್ನು ವಾಪಸ್ಸು ಕರೆಸುವಂತೆ ಮನವಿ ಮಾಡಿ, ಅವರ ಖಾತೆಗಳಿಗೆ ತಲಾ 20,000 ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ಜಮೆ ಮಾಡಿ ಪರ್ಯಾಯ ಮಾರ್ಗದಲ್ಲಿ ತವರಿಗೆ ಹಿಂತಿರುಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಬೊಮ್ಮಲಾಪುರದ ಮಹೇಶ್ ಹಾಗೂ ಪವನ್ ಸೇನೆಯ ಪರೀಕ್ಷೆ ಬರೆಯಲು ಒಡಿಶಾಗೆ ತೆರಳಿದ್ದರು. ಸದ್ಯ ಇಬ್ಬರು ಯುವಕರು ಕೂಡ ಒಡಿಶಾದಿಂದ ತವರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.