ಕೇಂದ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಈ ಬಾರಿಯ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. 81 ಸಚಿವರನ್ನು ನೇಮಿಸಲು ಅವಕಾಶವಿದ್ದು, ಸದ್ಯಕ್ಕೆ ಕೇವಲ 53 ಸಚಿವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಇನ್ನೂ 28 ಜನ ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಈ ಬಾರಿ ಸಚಿವ ಸ್ಥಾನ ಪಡೆಯಲಿರುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತವೆನ್ನಲಾಗುತ್ತಿದೆ. ಅಸ್ಸಾಂನಲ್ಲಿ ಹಿಮಂತ್ ಬಿಸ್ವಾ ಅವರಿಗೆ ಸಿಎಂ ಆಗಲು ಅನುವು ಮಾಡಿಕೊಟ್ಟ ಸರ್ಬಾನಂದ ಸೋನೋವಾಲ್ ಅವರು ಕೂಡಾ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ.

ಬಿಹಾರದಿಂದ ಲೋಕಸಭೆಗೆ ಪ್ರತಿನಿಧಿಸುವವರ ಪೈಕಿ ಎನ್ ಡಿ ಎ ಮಿತ್ರಪಕ್ಷವಾಗಿರುವ ಜೆಡಿಯುಗೆ ಸಚಿವ ಸ್ಥಾನ ಲಭಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2019ರಲ್ಲಿ ಕೇಂದ್ರ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ ಸಚಿವ ಸ್ಥಾನವನ್ನು ನಿರಾಕರಿಸಿದ್ದರು. ಈಗ ಮತ್ತೆ ಅವರಿಗೆ ಮಣೆ ಹಾಕಲಾಗುವುದೋ ಇಲ್ಲವೋ ಎಂಬುದು ಕಾದು ನೋಡಬೇಕಷ್ಟೇ. ಈ ಬಾರಿ ಕೇಂದ್ರದಲ್ಲಿ ಎರಡು ಸಚಿವ ಸ್ಥಾನ ಪಡೆಯಬೇಕೆಂದು ನಿತೀಶ್ ಆಶಿಸಿದ್ದಾರೆ. ಜೆಡಿಯು ಸಂಸದರಾದ ಲಲ್ಲನ್ ಸಿಂಗ್, ರಾಮ್ ನಾಥ್ ಠಾಕುರ್ ಹಾಗೂ ಸಂತೋಷ್ ಖುಷ್ವಾಹ ರೇಸ್ ನಲ್ಲಿದ್ದಾರೆ.

ಎಲ್ ಜೆ ಪಿಯ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಖಾಲಿಯಾಗಿರುವ ಸಚಿವ ಸ್ಥಾನಕ್ಕೆ, ಅವರ ಪುತ್ರ ಚಿರಾಗ್ ಪಾಸ್ವಾನ್ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ, ಕಳೆದೆರಡು ವಾರದಲ್ಲಿ ಎಲ್ ಜೆ ಪಿ ನಾಯಕರು ಚಿರಾಗ್ ವಿರುದ್ದವೇ ಬಂಡೆದ್ದರಿಂದ, ಈಗ ಈ ಸ್ಥಾನ ಚಿರಾಗ್ ಕುಟುಂಬದ ಮತ್ತೋರ್ವ ಸಂಸದ ಪಶುಪತಿ ಪರಾಸ್ ಅವರಿಗೆ ಲಭಿಸುವ ಸಾಧ್ಯತೆಯಿದೆ.
ಬಿಹಾರದ ಹಿಂದಿನ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರಿಗೆ ಸಚಿವ ಸ್ಥಾನ ಬಹತೇಕ ಖಚಿತವಾಗಿದೆ.

ಸತತ ಒಂದು ತಿಂಗಳ ಪರಾಮರ್ಶೆಯ ನಂತರ ಈಗಿರುವ ಸಚಿವರ ಅಂಕಪಟ್ಟಿಯನ್ನು ಕೂಡಾ ತಯಾರಿಸಲಾಗಿದೆ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಕ್ಕೆ ಈ ಬಾರಿ ಬಂಪರ್ ಆಫರ್ ಲಭಿಸುವ ಸಾಧ್ಯತೆಯಿದೆ. ವರುಣ್ ಗಾಂಧಿ, ರಾಮ್ ಶಂಕರ್ ಕಠೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಷಿ ಮತ್ತು ಜಫರ್ ಇಸ್ಲಾಂ ಅವರು ಆಕಾಂಕ್ಷಿಗಳಾಗಿದ್ದಾರೆ.
ಉತ್ತರಾಖಂಡದಿಂದ ಅಜಯ್ ಭಟ್ ಅಥವಾ ಅನಿಲ್ ಬಲೂನಿ ಹಾಗೂ ಕರ್ನಾಟಕದಿಂದ ಅಚ್ಚರಿಯ ಆಯ್ಕೆಯಾಗಿ ಯುವ ಸಂಸದ ಪ್ರತಾಪ ಸಿಂಹ ಅವರು ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಇತ್ತೀಚಿಗೆ ಚುನಾವಣೆ ಸೋತಿರುವ ಪಶ್ಚಿಮ ಬಂಗಾಳದಿಂದ ನಾಯಕರನ್ನು ಕೂಡಾ ಸಚಿವ ಸ್ಥಾನಕ್ಕೆ ಸೇರಿಸುವ ಆಲೋಚನೆ ಬಿಜೆಪಿ ಹೈಕಮಾಂಡ್ ಹೊಂದಿದ್ದು, ಇದರಿಂದ ಬಂಗಾಳದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಬಂಗಾಳದ ನಾಯಕರಿಗೆ ಸಚಿವ ಸ್ಥಾನ ನೀಡಿದರೆ, ಜಗನ್ನಾಥ್ ಸರ್ಕಾರ್, ಶಾಂತನು ಠಾಖೂರ್ ಮತ್ತು ನಿತೀತ್ ಪ್ರಮಾಣಿಕ್ ಅವರ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಇನ್ನುಳಿದಂತೆ, ಹರ್ಯಾಣದ ಬ್ರಿಜೇಂದ್ರ ಸಿಂಗ್, ರಾಜಸ್ಥಾನದ ರಾಹುಲ್ ಕಸ್ವಾನ್, ಓಡಿಶಾದ ಅಶ್ವನಿ ವೈಷ್ಣವ್, ಮಹಾರಾಷ್ಟ್ರದಿಂದ ಪೂನಂ ಮಹಾಜನ್ ಅಥವಾ ಪ್ರೀತಂ ಮುಂಡೆ ಮತ್ತು ದೆಹಲಿಯಿಂದ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉದ್ದೇಶದಿಂದ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿಯವರು, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಜತೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಈಗಾಗಲೇ ಹೆಚ್ಚುವರಿಯಾಗಿ ಇಲಾಖೆಗಳನ್ನು ಪಡೆದಿರುವ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷ್ ವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾಣಿ ಹಾಗೂ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಹೆಚ್ಚುವರಿ ಖಾತೆಯನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಯಿದೆ.