ಇನ್ನುಮುಂದೆ ಪ್ರಾಥಮಿಕ ಶಾಲೆಯ (ಒಂದರಿಂದ ಎಂಟನೇ ತರಗತಿವರೆಗಿನ) ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ರಾಷ್ಟ್ರೀಯ ವಿದ್ಯಾರ್ಥಿವೇತನ ವೆಬ್ ಪೋರ್ಟಲ್ನಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, “ಶಿಕ್ಷಣ ಹಕ್ಕು ಕಾಯ್ದೆಯಡಿ ಒಂದರಿಂದ ಎಂಟನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಹಾಗಾಗಿ, 2023 ರಿಂದ 9 ಮತ್ತು 10 ನೆಯ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಯೋಜನೆ ಹಾಗೂ ʼಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯʼದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯ ಫಲಾನುಭವಿಗಳಾಗಲಿದ್ದಾರೆ” ಎಂದು ತಿಳಿಸಿದೆ.
ಹಾಗಾಗಿ, 2022-23 ರಿಂದ, ಇನ್ಸ್ಟಿಟ್ಯೂಟ್ ನೋಡಲ್ ಅಧಿಕಾರಿ (INO)/ಜಿಲ್ಲಾ ನೋಡಲ್ ಅಧಿಕಾರಿ (DNO)/ರಾಜ್ಯ ನೋಡಲ್ ಅಧಿಕಾರಿ (SNO) ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಯೋಜನೆಯಡಿಯಲ್ಲಿ 9 ಮತ್ತು 10 ತರಗತಿಗಳಿಗೆ ಮಾತ್ರ ಅರ್ಜಿಗಳನ್ನು ಪರಿಶೀಲಿಸಬಹುದು ಎಂದು ಸುತ್ತೋಲೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಧರಂಪಾಲ್ ಸಿಂಗ್ ಅವರು, ಕೇಂದ್ರದ ನಿರ್ಧಾರವನ್ನು ಸಮರ್ಥಿಸಿದ್ದು, ಎಲ್ಲಾ ರಾಜ್ಯಗಳಿಗೂ ಈ ನಿರ್ಧಾರ ಅನ್ವಯವಾಗುತ್ತದೆ. ಈ ನಿರ್ಧಾರವು ಕೇವಲ ಮದ್ರಸಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ ಎಂದು ಹೇಳಿದ್ದಾರೆ.
“ಶಿಕ್ಷಣ ಹಕ್ಕು ಕಾಯ್ದೆಯಡಿ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳು, ಲೇಖನ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ಖರೀದಿಸುವಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಬೆಂಬಲ ನೀಡುವುದು ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ, (1 ರಿಂದ 8 ರವರೆಗಿನ) ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ, ಆದ್ದರಿಂದ 1 ರಿಂದ 8 ನೇ ತರಗತಿಯವರೆಗೆ ವಿದ್ಯಾರ್ಥಿವೇತನವನ್ನು ನೀಡುವ ಯಾವುದೇ ಪ್ರಸ್ತುತತೆ ಇಲ್ಲ.” ಎಂದು ಧರಂಪಾಲ್ ಸಿಂಗ್ ಹೇಳಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದೆ ಮತ್ತು ಅದರ ಸೂಚನೆಯನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.
ಪ್ರೀ ಮೆಟ್ರಿಕ್ ಸ್ಕಾಲರ್ಶಿಪ್ ತಡೆ – ಎಸ್.ಐ.ಓ ಖಂಡನೆ
“ಕೇಂದ್ರ ಸರ್ಕಾರ ಪ್ರೀ ಮೆಟ್ರಿಕ್ ಸ್ಕಾಲರ್ಶಿಪ್ ನ ಭಾಗವಾಗಿ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದ ಸ್ಕಾಲರ್ಶಿಪ್ ಅನ್ನು ಈ ಬಾರಿ ತಡೆ ಹಿಡಿಯಲಾಗುವುದು ಎಂದು ಮತ್ತು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಬುಡಕಟ್ಟು ವ್ಯವಹಾರಗಳ ಮತ್ತು ಅಲ್ಪಸಂಖ್ಯಾತರ ಸಚಿವಾಲಯಕ್ಕೆ ಈ ವರ್ಷ ಸ್ವೀಕೃತವಾದ ಅರ್ಜಿಗಳಲ್ಲಿ ಕೇವಲ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು ಸ್ಕಾಲರ್ಶಿಪ್ ಗೆ ಪರಿಗಣಿಸಲಾಗುವುದು ಎಂಬ ಸೂಚನೆಯು ಆಘಾತಕಾರಿಯಾಗಿದೆ.” ಎಂದು ಎಸ್ಐಒ ಖಂಡಿಸಿದೆ.
“ಸಂವಿಧಾನದ ಶಿಕ್ಷಣ ಹಕ್ಕನ್ನು ಸರ್ವ ರೀತಿಯಿಂದಲೂ ಅನುಷ್ಠಾನಕ್ಕೆ ತರಲು ಸಹಕಾರಿಯಾಗಿದ್ದ ಸ್ಕಾಲರ್ಶಿಪ್ ನಂತಹ ಉತ್ತೇಜನವನ್ನು ಸರ್ಕಾರ ಇನ್ನೂ ಮುಂದೆ ನಿಲ್ಲಿಸಿದರೆ, ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಕೇಂದ್ರದ ಇಂತಹ ನಡೆಯು ಶಿಕ್ಷಣದ ಹಕ್ಕನ್ನು ಸಂಕುಚಿತಗೊಳಿಸುವ ಮತ್ತು ಅದನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. “
“ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ಇಲಾಖೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಲಿದ್ದಾರೆ ಮತ್ತು ಬಡ ಕುಟುಂಬದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಲಿದ್ದಾರೆ, ಇದು ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ, ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮಕ್ಕಳನ್ನು ಸ್ಕಾಲರ್ಶಿಪ್ ನೀಡುತ್ತಿದ್ದರಿಂದ ಶಾಲೆಗಳಿಗೆ ಕಳಿಸುತ್ತಿದ್ದರು, ಮಕ್ಕಳನ್ನು ಶಾಲೆಗೆ ಕರೆತರಲು ಅನುಕೂಲವಾಗಿದ್ದ ಸ್ಕಾಲರ್ಶಿಪ್ ಎನ್ನುವ ಸೌಲಭ್ಯವನ್ನು ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕಿನಡಿ ನೋಡಬೇಕೇ ಹೊರತು ಈ ಸೌಲಭ್ಯವು ಹೆಚ್ಚುವರಿ ಸವಲತ್ತು ಎನ್ನುವ ರೀತಿಯಲ್ಲಿ ನೋಡುವುದು ಸರಿಯಲ್ಲ, ಈ ಸುತ್ತೋಲೆಯು ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ ಎನ್ನುವ ಆತಂಕವಿದೆ.”
“1 ರಿಂದ 8 ನೇ ತರಗತಿಯ ಮಕ್ಕಳಿಗೆ ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕಿನ (RTE) ಭಾಗವಾಗಿ ಅವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸರ್ಕಾರ ನೀಡುತ್ತಿದ್ದು, ಆದ್ದರಿಂದ ಈ ಮಕ್ಕಳಿಗೆ ನೀಡಲಾಗುತ್ತಿರುವ ಶಿಷ್ಯವೇತನವನ್ನು ಇನ್ನೂ ಮುಂದೆ ಮುಂದುವರೆಸುವುದಿಲ್ಲ ಎಂಬ ಕೇಂದ್ರದ ನಡೆಯು ಶಿಕ್ಷಣದ ವಿರೋಧಿಯಾಗಿದೆ, 6 ರಿಂದ 14 ವರ್ಷದ ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಶಿಷ್ಯವೇತನವು ಮಕ್ಕಳ ಶಾಲಾ ದಾಖಲಾತಿ ಮತ್ತು ಸಕ್ರಿಯ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವುದಾಗಿದೆ, ಆದ್ದರಿಂದ ಕೇಂದ್ರದ ಈ ಸೂಚನೆಯನ್ನು ಎಸ್.ಐ.ಓ ಕರ್ನಾಟಕವು ಖಂಡಿಸುತ್ತದೆ ಮತ್ತು ಇದನ್ನು ಹಿಂಪಡೆಯಬೇಕು” ಎಂದು ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಆಗ್ರಹಿಸಿದ್ದಾರೆ.