ಕರ್ನಾಟಕ ಸರ್ಕಾರದ ಹಲವು ಹಗರಣಗಳು, 40% ಕಮಿಷನ್ ವಿವಾದಗಳು ಇನ್ನೂ ಹಸಿಯಾಗಿಯೇ ಇರುವಾಗ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯರು ಬಾಣಂತಿ ಡಿಸ್ಚಾರ್ಜ್ಗೆ ಲಂಚದ ಬೇಡಿಕೆಯಿಟ್ಟ ಪ್ರಕರಣ ಮತ್ತೆ ಲಂಚಾವತಾರದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ವೈದ್ಯೆಯರು ಯಾವುದೇ ಹಿಂಜರಿಕೆ ಇಲ್ಲದೆ, ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ ಇಡುವುದು, ಮತ್ತು ಅದನ್ನು ಸಮರ್ಥಿಸಿಕೊಳ್ಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತೆ ಎಂದು ತೆರಳುವ ಬಡವರಿಗೆ ಧನದಾಹಿ ವೈದ್ಯರಿಂದ ಕಿರುಕುಳ ನಡೆಯುತ್ತಿರುವುದಕ್ಕೆ ಈ ಘಟನೆ ತಾಜಾ ಉದಾಹರಣೆ. ಇದು ನಡೆದಿರುವುದು ರಾಮನಗರದ ಬಿಡದಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ. ಆಸ್ಪತ್ರೆ ವೈದ್ಯರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ರೋಗಿಯ ಕುಟುಂಬಸ್ಥರಿಂದ ಹಣ ಡಿಮ್ಯಾಂಡ್ ಮಾಡುವ ದೃಶ್ಯವನ್ನು ರೋಗಿಯ ಕುಟುಂಬಸ್ಥರೇ ಚಿತ್ರೀಕರಿಸಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಬಿಡದಿಯ ನಿಂಗೇಗೌಡನ ದೊಡ್ಡಿಯ ಮಂಜಪ್ಪ ಅವರು ಅವರ ಪತ್ನಿಯನ್ನು ಬಿಡದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯರಿಗೆ ಎರಡು ಸಾವಿರ ಹಣ ನೀಡಲು ಹೋಗಿದ್ದಾರೆ. ಆದರೆ ಆ ವೈದ್ಯರು ಕೊಟ್ಟಷ್ಟು ಹಣವನ್ನು ಒಪ್ಪಿಕೊಳ್ಳದೇ ಸತಾಯಿಸಿದ್ದರು. ಮೇಲಿನ ವೈದ್ಯರಿಗೆ ಎರಡು ಸಾವಿರ ರೂ. ನನಗೆ ಎರಡು ಸಾವಿರ ರೂ. ಮತ್ತೊಬ್ಬ ವೈದ್ಯರಿಗೆ ಎರಡು ಸಾವಿರ ರೂ. ಹಂಚಬೇಕು ಹಾಗಾಗಿ ಒಟ್ಟು ಆರು ಸಾವಿರ ನೀಡಬೇಕೆಂದು ಎಂದು ಡಾ ಶಶಿಕಲಾ ಹೇಳಿರೋದು ಮೊಬೈಲ್ನಲ್ಲಿ ಸೆರೆಯಾಗಿದೆ. ಮತ್ತೊಬ್ಬ ವೈದ್ಯೆ ಡಾ. ಐಶ್ವರ್ಯ ಕೂಡಾ ಲಂಚದ ಬೇಡಿಕೆಯನ್ನು ಸಮರ್ಥಿಸಿದ್ದು, ನಿಮ್ಮಿಂದ ಕಡಿಮೆ ಪಡೆದುಕೊಂಡರೆ ನಾಳೆ ಎಲ್ಲರೂ ಇದೇ ರೀತಿ ಮಾಡುತ್ತಾರೆ ಅನ್ನುವುದೂ ಕೇಳಿ ಬರುತ್ತದೆ. ದುಡ್ಡಿಲ್ಲದ ಬಾಣಂತಿಯ ಗಂಡ ತನಗೆ ಸಂಭಳವಾಗಿಲ್ಲವೆಂದು ಪರಿಪರಿಯಾಗಿ ವಿನಂತಿಸಿಕೊಂಡರೂ ಕರಗದು ವೈದ್ಯೆಯರು, ಲಂಚಕ್ಕೆ ಧಾರ್ಷ್ಯದಿಂದ ಬೇಡಿಕೆ ಇಡುವುದು ಬೆಚ್ಚಿ ಬೀಳಿಸುವಂತಿದೆ.
ಸದ್ಯ, ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದ್ದು, ತನಿಖೆಯ ವರದಿ ಬರುವವರೆಗೂ ಆರೋಪಿಯನ್ನು ಅಮಾನತಿನಲ್ಲಿಡಲಾಗುವುದು. ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರನ್ನು ದೇವರ ಸ್ವರೂಪ ಎಂದು ಕಾಣುವ ನಮ್ಮ ಸಮಾಜದಲ್ಲಿ ಇಂತಹ ಕೆಲ ವೈದ್ಯರ ನಡೆಯಿಂದ, ಇಡೀ ವೈದ್ಯ ವೃತ್ತಿಗೆ, ಸರ್ಕಾರಿ ಆಸ್ಪತ್ರೆಗಳಿಗೆ ಕಳಂಕ ತರುವ ಪರಿಸ್ಥಿತಿ ಎದುರಾಗಿರುವುದು ದುರಾದೃಷ್ಟಕರ. ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳು ಎಷ್ಟೇ ಇದ್ದರೂ ಅವು ಇಂದಿಗೂ ನಮ್ಮ ಸಮಾಜದ ಅನೇಕ ಬಡ, ಕೆಳ-ಮಧ್ಯಮ ವರ್ಗ ಜನರ ಪಾಲಿಗೆ ಸಂಜೀವಿನಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ಅರಸಿ ಬರುವವರಿಗೆ ಆಸರೆಯಾಗಬೇಕು. ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ.ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನ ಸಹಿಸುವುದಿಲ್ಲ.ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು” ಎಂದು ತಿಳಿಸಿದ್ದಾರೆ.