ಭರತ ಖಂಡ ಎಂದು ನಾವು ಭಾವನಾತ್ಮಕವಾಗಿ ಗುರುತಿಸುವ ಭೂ ಪ್ರದೇಶ ಚಾರಿತ್ರಿಕವಾಗಿ ಸಮನ್ವಯತೆಯ ಕರ್ಮಭೂಮಿಯಾಗಿಯೇ ತನ್ನ ಅಸ್ತಿತ್ವ ಮತ್ತು ಅನನ್ಯತೆಯನ್ನು ಉಳಿಸಿಕೊಂಡುಬಂದಿದೆ. ವಸಾಹತು ದಾಸ್ಯದ ಸಂಕೋಲೆಗಳನ್ನು ಕಳಚಿ ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವ ಹೊತ್ತಿನಲ್ಲಿ ನಡೆದ ಆತ್ಮಘಾತುಕ ಘಟನೆಗಳನ್ನು ಚಾರಿತ್ರಿಕ ವಾಸ್ತವತೆಯ ನೆಲೆಯಲ್ಲಿ ಸಮಚಿತ್ತದೊಂದಿಗೆ ಸ್ವೀಕರಿಸಿ, ದೇಶದ ವಿಭಜನೆಯನ್ನು ಐತಿಹಾಸಿಕ ಅನಿವಾರ್ಯತೆ ಎಂದು ಭಾವಿಸಿದರೂ, ಸಾಂಸ್ಕೃತಿಕವಾಗಿ ಈಗಿನ ಮೂರು ದೇಶಗಳನ್ನೂ ಬಂಧಿಸುವ ಒಂದು ಸೂಕ್ಷ್ಮ ಎಳೆ ಇಂದಿಗೂ ಜೀವಂತವಾಗಿಯೇ ಇರುವುದನ್ನು ಅಲ್ಲಗಳೆಯಲಾಗದು. ಭೌಗೋಳಿಕವಾಗಿ ಬೇರ್ಪಟ್ಟಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ರಾಜಕೀಯ ನೆಲೆಯಲ್ಲಿ ಸಾರ್ವಭೌಮ ರಾಷ್ಟ್ರಗಳಾಗಿ, ಸಾಮಾಜಿಕವಾಗಿ ತಮ್ಮದೇ ಆದ ಮತಧರ್ಮಗಳ ನೆಲೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೂ, ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಿದಾಗ ಮೂರೂ ದೇಶಗಳ ನಡುವೆ ಜನಸಂಸ್ಕೃತಿಯ ಒಂದು ಸಮಾನ ಎಳೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.
ವಿಶ್ವದಾದ್ಯಂತ, ಭಾರತವನ್ನೂ ಸೇರಿದಂತೆ, ಬಲಪಂಥೀಯ ರಾಜಕಾರಣ ಮತ್ತು ಸಾಂಸ್ಕೃತಿಕ ನೆಲೆಗಳು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನತೆಯನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಬಂಧಿಸುವಂತಹ ಸಾಂಸ್ಕೃತಿಕ ನೆಲೆಗಳನ್ನು ವಿಕೃತಗೊಳಿಸುತ್ತಿರುವ ಒಂದು ಪರಂಪರೆಯನ್ನೂ ಕಾಣುತ್ತಿದ್ದೇವೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ಪೋಷಿಸಲು, ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಕಾಪಾಡಲು, ದುಡಿಯುವ ವರ್ಗಗಳನ್ನು ಮತ್ತು ಬಂಡವಾಳದ ಭದ್ರಕೋಟೆಯನ್ನು ನಿರ್ಮಿಸಲು ಬೇಕಾದ ಮಾನವ ಸಂಪನ್ಮೂಲಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಬಲಪಂಥೀಯ ರಾಜಕಾರಣಕ್ಕೆ ಅನಿವಾರ್ಯವೂ ಆಗಿದೆ. ಹಾಗಾಗಿಯೇ ಈ ಶೋಷಿತ, ದಮನಿತ ಮತ್ತು ಅವಕಾಶವಂಚಿತ ಜನಸಮುದಾಯಗಳ ಸಾಂಸ್ಕೃತಿಕ ನೆಲೆಗಳನ್ನು ಭಂಜಿಸಿ, ಚಾರಿತ್ರಿಕ ನೆಲೆಗಳನ್ನು ಭಗ್ನಗೊಳಿಸಿ, ಕಲ್ಪಿತ ಸಂಸ್ಕೃತಿಯೊಂದನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಭಾರತದಲ್ಲಿ ಈ ಪ್ರಯತ್ನ ತನ್ನ ಉಚ್ಛ್ರಾಯ ಹಂತದಲ್ಲಿರುವುದನ್ನು ಗಮನಿಸಬಹುದು.
ಈ ಸಂದಿಗ್ಧತೆಯ ನಡುವೆಯೇ ನಾವು ಮನುಕುಲ ನಡೆದುಬಂದ ಹಾದಿಯನ್ನು ಮತ್ತು ಹೆಜ್ಜೆ ಗುರುತುಗಳನ್ನು ಗಮನಿಸಲು ಹಿಂದಿರುಗಿ ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಸ್ಕೃತಿ ಎಂಬ ಪದವನ್ನು ಕೆಲವೇ ಮತಧರ್ಮಗಳ ಆಚರಣೆಗಳ ಚೌಕಟ್ಟಿನಲ್ಲಿ ಬಂಧಿಸಿಟ್ಟು, ಸಂಕುಚಿತಗೊಳಿಸುವುದೇ ಅಲ್ಲದೆ ಮಾನವ ಸಮಾಜದ ಅಭ್ಯುದಯದಲ್ಲಿ ಕಂಡುಬರುವ ಎಲ್ಲ ಸಾಂಸ್ಕೃತಿಕ ನೆಲೆಗಳನ್ನೂ ಕುಬ್ಜಗೊಳಿಸುವ ಒಂದು ಪ್ರಯತ್ನ ಕಳೆದ ನಾಲ್ಕೈದು ದಶಕಗಳಿಂದಲೇ ನಡೆಯುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಕಟ್ಟುಪಾಡುಗಳಿಂದ ಇಂದಿಗೂ ವಿಮುಕ್ತ ಪಡೆಯದ ಒಂದು ಸಮಾಜದಲ್ಲಿ ಭಾರತೀಯರು ಇಂದಿಗೂ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಜಾತಿ ದೌರ್ಜನ್ಯದ ವ್ಯಾಧಿಯನ್ನು ಗುಣಪಡಿಸಬೇಕಾದ ಚಿಕಿತ್ಸಕ ಮಾರ್ಗಗಳನ್ನು ಅರಸುತ್ತಿದ್ದಾರೆ. ಈ ಚಿಕಿತ್ಸಕ ಗುಣ ನಮ್ಮ ಸಮಾಜದ ಗರ್ಭದಲ್ಲೇ ಇದ್ದರೂ ಗುರುತಿಸಲಾಗದಷ್ಟು ದೂರ ಸಾಗಿರುವ ಆಧುನಿಕ ನಾಗರಿಕತೆ, ಸಂಸ್ಕೃತಿಯನ್ನು ಮತಧರ್ಮಾಚರಣೆಗಳಲ್ಲಿ ಬಂಧಿಸಿ ಕುಬ್ಜಗೊಳಿಸುವ ಮೂಲಕ ಜಾತಿ ವ್ಯವಸ್ಥೆಯ ಸ್ತಿತಿಸ್ಥಾಪಕತ್ವವನ್ನು ಕಾಪಾಡಿಕೊಂಡುಬಂದಿದೆ. ಇದನ್ನು ಭೇದಿಸುವ ಚಿಕಿತ್ಸಕ ಗುಣ ಇಂದಿಗೂ ಈ ದೇಶದ ಬಹುತ್ವ ಸಂಸ್ಕೃತಿಯಲ್ಲಿದೆ ಎಂಬ ಸುಡುವಾಸ್ತವವನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನವನ್ನು ಶ್ರೀಯುತ ಚಂದ್ರಕಾಂತ ವಡ್ಡು ತಮ್ಮ ಎರಡು ಸಂಪುಟಗಳ “ ಸೌಹಾರ್ದ ಕರ್ನಾಟಕ ” ಕೃತಿಗಳ ಮೂಲಕ ಮಾಡಿದ್ದಾರೆ. (ಸೌಹಾರ್ದ ಕರ್ನಾಟಕ ಸಂಪುಟ 1 ಮತ್ತು 2- ಅಂಕುರ ಪ್ರಕಾಶನ- ಪ್ರಧಾನ ಸಂಪಾದಕ ಚಂದ್ರಕಾಂತ ವಡ್ಡು).
ಈ ಎರಡು ಸಂಪುಟಗಳು ಮೂಲತಃ ಅನುಭವ ಕಥನಗಳ ಸಂಗ್ರಹವಾಗಿದ್ದು ನಾಡಿನ ಹೆಸರಾಂತ ಅಕ್ಷರ ಕೃಷಿಕರ ಜೀವನಾನುಭವ ಮತ್ತು ಅನುಭಾವಗಳನ್ನು ಓದುಗರ ಮುಂದೆ ತೆರೆದಿಡುತ್ತಾ ಹೋಗುತ್ತದೆ. ವಿಶ್ವದ ಹಲವು ಸಂಸ್ಕೃತಿಗಳಿಗೆ ಮುಕ್ತ ಭೂಮಿಕೆಯಾಗಿ ಶತಮಾನಗಳಿಂದಲೂ ತನ್ನದೇ ಆದ ಸಾಮಾಜಿಕ ಜೀವನ ಶೈಲಿಯನ್ನು ಗುರುತಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಇಂದಿಗೂ ಕಾಣಬಹುದಾದ ಸಮನ್ವಯದ ಬದುಕಿನ ವಿವಿಧ ಆಯಾಮಗಳನ್ನು ಈ ಕೃತಿಗಳಲ್ಲಿನ ಲೇಖನಗಳು ಚಾರಿತ್ರಿಕ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ಚೌಕಟ್ಟಿನಲ್ಲಿ ದಾಖಲಿಸುತ್ತವೆ. ವ್ಯಕ್ತಿ ಸಮಾಜಮುಖಿಯಾದಾಗ ತನ್ನ ಜೀವನ ಮತ್ತು ಜೀವನೋಪಾಯದ ಮಾರ್ಗಗಳಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶವನ್ನೂ ಸಮಷ್ಟಿಯ ನೆಲೆಯಲ್ಲಿ ಕಂಡುಕೊಳ್ಳುತ್ತಾ ಹೋಗುವುದು ಸಹಜ. ಹೀಗೆ ಸಮಷ್ಟಿ ಸಮನ್ವಯದ ಚಿಂತನಾವಾಹಿನಿಗಳನ್ನು ರೂಢಿಸಿಕೊಂಡಾಗಲೇ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಸುತ್ತಲಿನ ಸಮಾಜದ ವೈವಿಧ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ಈ ರೀತಿಯಲ್ಲಿ ಭಾರತದ ಬಹುತ್ವ ಸಂಸ್ಕೃತಿಯನ್ನು ಸೂಫಿ ಸಂತರಾದಿಯಾಗಿ ಈ ದೇಶದ ಜನಪದದ ನೆಲೆಗಳು ಇಂದಿನವರೆಗೂ ವಿಸ್ತರಿಸುತ್ತಲೇ ಬಂದಿವೆ. ತಳಮಟ್ಟದ ಸಮಾಜದಲ್ಲಿ ಇಂದಿಗೂ ಕಂಡುಬರುವ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ಮೂಲ ನೆಲೆಗಳನ್ನು ಗುರುತಿಸಲು ಸಾಧ್ಯ. ಅದು ಮುಸಲ್ಮಾನರ ಹಬ್ಬ ಎಂದೇ ಹೇಳಲಾಗುವ ಮೊಹರಂ ಇರಬಹುದು, ಗ್ರಾಮೀಣ ಜನತೆ ಆಚರಿಸುವ ಸಂಕ್ರಾಂತಿಯ ಸೊಬಗು ಇರಬಹುದು ಅಥವಾ ಇತರ ಯಾವುದೇ ಧಾರ್ಮಿಕ ವಿಧಿವಿಧಾನಗಳ ಆಚರಣೆಯ ನೆಲೆಯಲ್ಲಿ ಭಾರತ ಇಂದಿಗೂ ಸಮನ್ವಯದ ಹಾದಿಯಲ್ಲೇ ಸಾಗುತ್ತಾ ಬಂದಿದೆ. ಇಂತಹ ಅನೇಕ ಜೀವನಾನುಭವಗಳನ್ನು ಈ ಎರಡೂ ಸಂಪುಟಗಳ ಮೂಲಕ ಸಂಪಾದಕರು ಕಟ್ಟಿಕೊಟ್ಟಿದ್ದಾರೆ. ನಾಡಿನ ಖ್ಯಾತ ಲೇಖಕ, ಲೇಖಕಿಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವರ್ತಮಾನದ ಭಾರತಕ್ಕೆ ಮತ್ತು ಭವಿಷ್ಯದ ಯುವಪೀಳಿಗೆಗೆ ಒಂದು ಸಮನ್ವಯದ ಸಂದೇಶವನ್ನು ಸಾರಿದ್ದಾರೆ.
ಮಾರುಕಟ್ಟೆ ಆಮಿಷಗಳಿಗೆ ಒಳಗಾಗಿ, ಅಧಿಕಾರ ರಾಜಕಾರಣದ ಹಪಹಪಿಗೆ ಬಲಿಯಾಗಿ, ಸಂಸ್ಕೃತಿ ಎಂಬ ಒಂದು ವಿಶಾಲಾರ್ಥದ ವಿದ್ಯಮಾನವನ್ನು ಕುಬ್ಜಗೊಳಿಸಲಾಗುತ್ತಿರುವ ಈ ವಿಷಮ ಸಂದರ್ಭದಲ್ಲಿ “ ಸೌಹಾರ್ದ ಕರ್ನಾಟಕ ” ಒಂದು ಆಶಾದೀವಿಗೆಯಂತೆ ಕಂಡರೆ ಅಚ್ಚರಿ ಪಡಬೇಕಿಲ್ಲ. ಮನುಜ ಸಂಬಂಧಗಳನ್ನು ಬೆಸೆಯಲು ಅತ್ಯವಶ್ಯವಾದ ಪ್ರೀತಿ, ಪ್ರೇಮ, ಪರಸ್ಪರ ವಿಶ್ವಾಸ ಮತ್ತು ಕೊಡುಕೊಳ್ಳುವಿಕೆಯ ಸೇತುವೆಗಳನ್ನು ನಾವೇ ವಿಂಗಡಿಸಿಕೊಂಡಿರುವ “ ಹಿಂದೂ-ಮುಸ್ಲಿಂ-ಕ್ರೈಸ್ತ ” ಎಂಬ ಅಸ್ಮಿತೆಗಳ ಗರಗಸವನ್ನು ಬಳಸಿ ಕೆಡವಿಹಾಕುತ್ತಿರುವ ಈ ಸಂದರ್ಭದಲ್ಲಿ ಸಾಂಸ್ಕೃತಿಕ ನೆಲೆಗಳು ಹೇಗೆ ಜನಸಾಮಾನ್ಯರ ಬದುಕಿನ ವಿಭಿನ್ನ ಸ್ತರಗಳಲ್ಲಿ ಈ ಚೌಕಟ್ಟುಗಳನ್ನು ದಾಟಿ ಒಂದಾಗಿಸುತ್ತವೆ ಮತ್ತು ತಮ್ಮ ನಿತ್ಯ ಬದುಕಿನಲ್ಲಿ ಈ ಕಲ್ಪಿತ ಗೋಡೆಗಳನ್ನು, ನಿರ್ಮಿತ ಬೇಲಿಗಳನ್ನು, ಪೋಷಿತ ಕೋಟೆಗಳನ್ನು ಭಗಗ್ನಗೊಳಿಸುತ್ತವೆ ಎನ್ನುವುದನ್ನು ಈ ಕೃತಿಯಲ್ಲಿನ ಲೇಖಕರು ಮನಮುಟ್ಟುವಂತೆ ಚಿತ್ರಿಸಿ ಕೊಟ್ಟಿದ್ದಾರೆ.
80ಕ್ಕೂ ಹೆಚ್ಚು ಸೃಜನಶೀಲ ಅಕ್ಷರ ಕೃಷಿಕರ ಈ ಅನುಭವದ ನೆಲೆಗಳಲ್ಲಿ ವರ್ತಮಾನದ ವಿಘಟಿತ ಸಮಾಜವೂ ಭಾವೈಕ್ಯತೆಯ ತಂತುಗಳನ್ನು ಗುರುತಿಸಬಹುದಾಗಿದೆ. ಹಲಾಲ್, ಜಟ್ಕಾ, ಹಿಜಾಬ್ಗಳ ನಡುವೆ ಶತಮಾನಗಳಿಂದ ಬೇರೂರಿರುವ ನಮ್ಮ ಜನಸಂಸ್ಕೃತಿಯ ನೆಲೆಗಳನ್ನು ವಿಕೃತಗೊಳಿಸಲಾಗುತ್ತಿರುವ ಈ ಸಂದರ್ಭದಲ್ಲಿ ಬಿಜಾಪುರದ ಸೂಫಿ ಸಂಸ್ಕೃತಿಯ ನೆಲೆಗಳು ಮತ್ತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಬೆಸೆದುಕೊಂಡಿರುವ ಮನುಜ ಸಂಬಂಧಗಳು ನಮ್ಮ ಸಮಾಜದ ಕಣ್ತೆರೆಸಬೇಕಿದೆ. ಈ ನಿಟ್ಟಿನಲ್ಲಿ “ ಸೌಹಾರ್ದ ಕರ್ನಾಟಕ ” ಒಂದು ವಿಶಾಲ ಹಂದರವನ್ನೇ ಹರವಿಬಿಟ್ಟಿದೆ. ಬೆವರಿನ ದುಡಿಮೆಯೊಂದಿಗೆ ತಮ್ಮ ಬದುಕು ಕಟ್ಟಿಕೊಳ್ಳುವ ಶ್ರಮಜೀವಿ ವರ್ಗಗಳಲ್ಲಿ ಸ್ವಾಭಾವಿಕವಾಗಿಯೇ ಇರುವಂತಹ ಜಾತ್ಯತೀತತೆ ಮತ್ತು ಸೌಹಾರ್ದತೆಯನ್ನು ಮರುಶೋಧಿಸಬೇಕಾದ ಅವಶ್ಯಕತೆಯನ್ನು ಈ ಎರಡು ಸಂಪುಟಗಳು ಸಮರ್ಪಕವಾಗಿ ಪೂರೈಸುತ್ತವೆ.
ದಿನಬೆಳಗಾದರೆ ಪರಸ್ಪರ ಮುಖಾಮುಖಿಯಾಗುತ್ತಾ ತಮ್ಮದೇ ಆದ ಜೀವನೋಪಾಯದ ಮಾರ್ಗಗಳಲ್ಲಿ ಸಾಗುವ ತಳಮಟ್ಟದ ಜನತೆಗೆ ಜಾತಿ, ಮತ, ಧರ್ಮ, ಪಂಥ ಮತ್ತಾವುದೇ ರೀತಿಯ ಬೇಲಿಗಳು ನಿತ್ಯಾವಶ್ಯ ಪರಿಕರಗಳಾಗುವುದಿಲ್ಲ. ಬದಲಾಗಿ ಅನೇಕ ಸನ್ನಿವೇಶಗಳಲ್ಲಿ ಅಡ್ಡಗೋಡೆಗಳಾಗಿಬಿಡುತ್ತವೆ. ಹಿಪ್ಪುನೇರಳೆಯ ಬೆಳೆಯಿಂದ ಷೋರೂಮ್ನಲ್ಲಿ ಕಂಗೊಳಿಸುವ ರೇಷ್ಮೆ ವಸ್ತ್ರದವರೆಗಿನ ಶ್ರಮ ಪಯಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಸಮನ್ವಯದ ದುಡಿಮೆಯ ಸಂಸ್ಕೃತಿ ನಿಚ್ಚಳವಾಗಿ ಗೋಚರಿಸುತ್ತದೆ. ಗಣೇಶನನ್ನು ಪೂಜಿಸುವ , ದೀಪಾವಳಿ ಆಚರಿಸುವ ಮುಸಲ್ಮಾನರು, ಮೊಹರಂ ಆಚರಣೆಯನ್ನು ತಮ್ಮದೇ ಹಬ್ಬದಂತೆ ಆಚರಿಸುವ ಹಿಂದೂಗಳು ನಮ್ಮ ನಡುವೆ ಇನ್ನೂ ಇದ್ದಾರೆ ಎನ್ನುವುದು ಅಚ್ಚರಿಪಡಬೇಕಾದ ವಿಚಾರವೇನೂ ಅಲ್ಲ. ಇದು ವಾಸ್ತವ ಪರಿಸ್ಥಿತಿ. ಆದರೆ ಈ ಸುಡುವಾಸ್ತವಗಳು ಗೋಚರಿಸದಂತೆ ಕೆಲವು ಪ್ರತಿಮೆಗಳನ್ನು, ರೂಪಕಗಳನ್ನು ನಿರ್ಮಿಸುವ ಮೂಲಕ, ಈ ಮನುಜ ಸೇತುವೆಗಳನ್ನು ಭಂಜಿಸಲಾಗುತ್ತಿದೆ. ಏಕದೇವೋಪಾಸನೆ, ಬಹುದೇವತಾರಾಧನೆಯ ನಡುವಿನ ಸೂಕ್ಷ್ಮ ಸಂಬಂಧಗಳು ಧಾರ್ಮಿಕ ನೆಲೆಯಲ್ಲಿ, ಮತಾಚರಣೆಯ ನೆಲೆಯಲ್ಲಿ ತನ್ನದೇ ಆದ ಭೂಮಿಕೆಯನ್ನು ನಿರ್ಮಿಸಿದ್ದರೂ, ಇದಾವುದರ ಗೊಡವೆಯೂ ಇಲ್ಲದೆ ತಮ್ಮ ನಿತ್ಯ ಬದುಕಿನ ಒಂದು ಭಾಗವಾಗಿ ಎಲ್ಲವನ್ನೂ ತನ್ನೊಳಗೆ ಆವಾಹನೆ ಮಾಡಿಕೊಳ್ಳುವ ಒಂದು ಸಮನ್ವಯ ಸಮಾಜ ಭಾರತದಲ್ಲಿ ಇಂದಿಗೂ ಉಸಿರಾಡುತ್ತಿದೆ.
ಈ ವಾಸ್ತವವನ್ನು ಕನ್ನಡ ಜನತೆಯ ಮುಂದಿಡುವಲ್ಲಿ “ ಸೌಹಾರ್ದ ಕರ್ನಾಟಕ ”ದಲ್ಲಿನ 80ಕ್ಕೂ ಹೆಚ್ಚು ಲೇಖನಗಳು ಯಶಸ್ವಿಯಾಗಿವೆ. ಚಾರಿತ್ರಿಕ ಹೆಜ್ಜೆಗಳನ್ನು ವರ್ತಮಾನದ ನೆಲೆಯಲ್ಲಿಟ್ಟು ಅಂದಿನ ತಪ್ಪುಗಳನ್ನು ಇಂದಿನವರ ಮೇಲೆ ಹೊರಿಸುವ ಒಂದು ವಿಕೃತ ಸಾಂಸ್ಕೃತಿಕ ವಾತಾವರಣದ ನಡುವೆಯೇ ಭಾರತೀಯ ಸಮಾಜ ತನ್ನ ಬಹುಸಾಂಸ್ಕೃತಿಕ-ಜನಸಾಂಸ್ಕೃತಿಕ-ಸಮನ್ವಯದ ನೆಲೆಗಳನ್ನು ಗುರುತಿಸಿಕೊಳ್ಳಬೇಕಿದೆ. ಇತಿಹಾಸವನ್ನು ಹೆಕ್ಕಿ ತೆಗೆದು, ಚಾರಿತ್ರಿಕ ವ್ಯಕ್ತಿ/ಘಟನೆಗಳ ಮರಣೋತ್ತರ ಪರೀಕ್ಷೆ ಮಾಡುವುದಕ್ಕಿಂತಲೂ, ಚಿಕಿತ್ಸಕ ಮನೋಭಾವದಿಂದ ವರ್ತಮಾನದ ನಮ್ಮ ಸುತ್ತಲಿನ ನಿತ್ಯ ಬದುಕಿನ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತ ಒಂದು ಬಹುಸಂಸ್ಕೃತಿಯ ನಾಡು ಎನ್ನುವುದು ಸಾಬೀತಾಗುತ್ತದೆ. ಈ ಎರಡು ಸಂಪುಟಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಅಕ್ಷರ ಕೃಷಿಕರು ಈ ಹೆಜ್ಜೆಗುರುತುಗಳ ಜಾಡನ್ನು ಹಿಡಿದು ಸಮಾಜವನ್ನು ಮುನ್ನಡೆಸಲು ನೆರವಾಗಿದ್ದಾರೆ.
“ ಸೌಹಾರ್ದ ಕರ್ನಾಟಕ ” ಕನ್ನಡಿಗರ ಮನೆಮನೆಯನ್ನು ತಲುಪಬೇಕಾದ ಒಂದು ಕೃತಿ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗತಕಾಲದ ಪ್ರಮಾದಗಳನ್ನು ಕಂಡು ಹಲುಬುವವರಿಗೆ, ಈ ಪ್ರಮಾದಗಳನ್ನೇ ಬಳಸಿ ದ್ವೇಷದ ಗೋಡೆಗಳನ್ನು ಕಟ್ಟುವವರಿಗೆ, ಕಣ್ತೆರೆಸುವಂತೆ ಇಲ್ಲಿನ ಅನುಭಾವದ ನೆಲೆಗಳು ವಿಸ್ತರಿಸಿಕೊಳ್ಳುತ್ತವೆ. ವ್ಯಕ್ತಿಗತವಾಗಿಯೂ ಇಂತಹುದೇ ಅನುಭವಗಳೊಡನೆ ಬಾಲ್ಯ ಕಳೆದ ನನಗೆ ಈ ಕೃತಿಗಳಲ್ಲಿನ ನೈಜ ಕಥನಗಳು ನೆನಪಿನ ಮೆರವಣಿಗೆಯಂತೆಯೇ ಕಾಣುತ್ತವೆ. ಈ ಕೃತಿಯನ್ನು ಹೊರತಂದ ಸಂಪಾದಕ ಚಂದ್ರಕಾಂತ ವಡ್ಡು ಮತ್ತು ಅವರ ತಂಡದವರು ಅಭಿನಂದನಾರ್ಹರು. ಹಾಗೆಯೇ ತಮ್ಮ ಜೀವನಾನುಭವದ ಅಮೂಲ್ಯ ಕ್ಷಣಗಳನ್ನು ಬಿಚ್ಚಿಟ್ಟಿರುವ ಅಕ್ಷರ ಕೃಷಿಕರೂ ಸ್ತುತ್ಯಾರ್ಹರು. ಸಮಸ್ತ ಕನ್ನಡಿಗರೂ ಓದಲೇ ಬೇಕಾದ ಎರಡು ಸಂಪುಟಗಳು ಈ “ ಸೌಹಾರ್ದ ಕರ್ನಾಟಕ ”.
-೦-೦-೦-೦-