ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ 60 ಖಾಸಗಿ ಶಾಲೆಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸೂಚನೆ ನಡೆದಿದ್ದು, ಅದರಂತೆ 48 ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಎಲ್ಲಾ ಎಫ್ಐಆರ್ ಗಳನ್ನು ಕ್ರೂಢೀಕರಿಸಿ ಪೊಲೀಸರು ತನಿಖೆ ನಡೆಸಲಿದ್ದು, ಈ ಪ್ರಕರಣದ ತನಿಖೆಗೆಂದೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ನುರಿತ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು ಸೇರಿದಂತೆ ದಕ್ಷ ಅಧಿಕಾರಿಗಳನ್ನು ಈ ತನಿಖಾ ತಂಡದಲ್ಲಿ ಸೇರಿಸಲಾಗಿದೆ. ತನಿಖಾ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಬಾಂಬ್ ಬೆದರಿಕೆ ಹಾಕಲು ಆರೋಪಿಗಳು ಬಳಸಿದ ಇ–ಮೇಲ್ ಐಡಿ ನಕಲಿಯಾಗಿದ್ದು, ಈ ಕೃತ್ಯ ನಡೆಸಲೆಂದೇ ಆರೋಪಿಗಳು ನಕಲಿ ಐಡಿ ರಚಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ವರ್ಚ್ಯುಯಲ್ ಪ್ರವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಇ–ಮೇಲ್ ಸಂದೇಶಗಳ ಕಳುಹಿಸಲಾಗಿದ್ದು, ಯಾವ ಪ್ರದೇಶದಿಂದ ಹಾಗೂ ಯಾವ ಕಂಪ್ಯೂಟರ್ ಹಾಗೂ ನೆಟ್ವರ್ಕ್ಗಳಿಂದ ಇಮೇಲ್ ರವಾನಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ Cyrtus ಎಂಬ ಕಂಪನಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಡಿ.1 ರಂದು ಬರೋಬ್ಬರಿ 62 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಬಾಂಬ್ ಬೆದರಿಕೆಯ ಇಮೇಲ್ ಬಂದ ಬೆನ್ನಲ್ಲೇ ಆತಂಕಕ್ಕೊಳಗಾದ ಶಾಲಾ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಿಸಿತ್ತು.