ಬೆಂಗಳೂರು: ದೆಹಲಿಯಲ್ಲಿ ಪ್ರತಿಭಟನೆ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದಿದ್ದು, ಈ ಸಂದರ್ಭದಲ್ಲಿ ನಡೆದ ತಳ್ಳಾಟ ನೂಕಾಟದಲ್ಲಿ ರಾಹುಲ್ ಗಾಂಧಿ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಬಿಜೆಪಿಯವರು ದೆಹಲಿ ಹಾಗೂ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಕಚೇರಿ ಹಾಗೂ ಪಕ್ಷದ ನಾಯಕರ ಮೇಲೆ ಹಲ್ಲೆ ಮಾಡಲು ಯತ್ನಿಸಿರುವುದನ್ನು ಖಂಡಿಸುತ್ತೇನೆ ಎಂದು ಗುಡುಗಿದ್ದಾರೆ.

ಇಂದಿರಾ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂತರ್ ಮಂತರ್ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿ ಮಾಡಿ, ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮುಟ್ಟಿ ಅಪಮಾನ ಮಾಡಲಾಗಿದ್ದು, 60ಕ್ಕೂ ಹೆಚ್ಚು ಯುವಕರು ಗಾಯಗೊಂಡಿದ್ದಾರೆ. ನಮ್ಮ ವಿರೋಧ ಪಕ್ಷದ ನಾಯಕರು ಈ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಬಿಜೆಪಿ ಸರ್ಕಾರ ಅವಕಾಶ ನೀಡಿಲ್ಲ. ಮಂಗಳವಾರ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ, ಪ್ರಧಾನಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಮಾಡಲು ಹೋಗುವಾಗ, ಅವರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಲಾಗಿದೆ. ಅಲ್ಲಿ ಅನೇಕರು ಪೊಲೀಸರಂತೆ ಕಾಣುತ್ತಿರಲಿಲ್ಲ. ಅವರು ನಾಗ್ಪುರ ವಿವಿಯಿಂದ ಬಂದ ಪಡೆಗಳಂತೆ ಕಾಣುತ್ತಿದ್ದರು ಎಂದರು.
ಕೆಪಿಸಿಸಿ ರಾಜ್ಯ ಕಚೇರಿ ಬಳಿ ನಡೆದ ಕಾಂಗ್ರೆಸ್-ಬಿಜೆಪಿ ನಾಯಕರ ಜಟಾಪಟಿ ಬಗ್ಗೆ ಮಾತನಾಡಿದ ಅವರು, ಪೊಲೀಸರ ಹೆಸರಿನಲ್ಲಿ ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆ ಮಾಡಿ ಅವರ ಮೂಗಿನಲ್ಲಿ ರಕ್ತ ಬರುವಂತೆ ಮಾಡಲಾಗಿದೆ. ಈ ಹಲ್ಲೆ ಖಂಡಿಸಿ ನಾವು ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಇಂದು ನಾವು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಿತ್ತು. ನಮ್ಮ ಕಾರ್ಯಕರ್ತರು ಅಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವಾಗ, ಅವರು ನಮ್ಮ ಕಚೇರಿ ಮುಂದೆ ದೌರ್ಜನ್ಯ ಎಸಗಲು ಮುಂದಾಗಿದ್ದರು. ಜೊತೆಗೆ ಎಲ್ಲರೂ ಕಾಂಗ್ರೆಸ್ ಪಕ್ಷದ ಕಚೇರಿ ಮುಂದೆ ದಾಳಿ ಮಾಡಲು ಕರೆ ನೀಡಿದ್ದರು. ಪ್ರಜಾಪ್ರಭುತ್ವದಲ್ಲಿ ನಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಇವರು ಪೊಲೀಸರ ದಸ್ತಗಿರಿಯಲ್ಲಿದ್ದ ಬಿಜೆಪಿ ನಾಯಕರು ಬಸ್ ಚಾಲಕನನ್ನು ದಾರಿ ತಪ್ಪಿಸಿ ಕಾಂಗ್ರೆಸ್ ಕಚೇರಿ ಎದುರು ಬಂದರು. ಈ ಮಧ್ಯೆ ಬಿಜೆಪಿ ಶಾಸಕರು ಕೆಪಿಸಿಸಿ ಕಚೇರಿ ಹಾಗೂ ಭಾರತ ಜೋಡೋ ಭವನದ ಮಧ್ಯೆ ಬಂದು ಎಲ್ಲಿ ಏನು ಮಾಡಬೇಕು ಎಂದು ತೀವ್ರವಾಗಿ ನೋಡುತ್ತಿದ್ದರು. ಪ್ರಗ್ಯಾ ಠಾಕೂರ್, ಕರ್ನಲ್ ಪುರೋಹಿತ್ ಚೇಲಾಗಳಾದ ಇವರು ಯಾವ ಸಂದರ್ಭದಲ್ಲಿ ಏನು ಮಾಡುತ್ತಾರೆ ತಿಳಿಯುವುದಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಕಚೇರಿ ನಮ್ಮ ಪಾಲಿನ ಪವಿತ್ರವಾದ ಮಂದಿರ. ಬಿಜೆಪಿಯವರ ರೀತಿ ಗೆಸ್ಟ್ ಹೌಸ್ ಕಟ್ಟಿಕೊಂಡಿಲ್ಲ. ನಮ್ಮ ಕಚೇರಿ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪಕ್ಷದ ಕಚೇರಿ ರಕ್ಷಣೆಗೆ ನಮ್ಮ ಕಾರ್ಯಕರ್ತರು ಪ್ರಾಣತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರು, ಮೊಟ್ಟೆ, ಲಾಂಗು, ಚಾಕು, ಬಾಂಬು, ಕೊಲೆ ಸಂಚು, ಪಾಕಿಸ್ತಾನ ಏಜೆಂಟು ಎಂಬ ಹೇಳಿಕೆ ನೋಡಿದಾಗ ಅವರ ಕಲ್ಪನಾ ಶಕ್ತಿ ಹಾಗೂ ಸುಳ್ಳು ಹೇಳುವುದಕ್ಕೆ ನೋಬೆಲ್ ಪ್ರಶಸ್ತಿಯನ್ನು ಅಶೋಕ್ ಅವರಿಗೆ ನೀಡಬೇಕು. ಅಶೋಕ್ ಅವರು ಹೆಚ್ಎಂಟಿ ಕಾರ್ಖಾನೆ ಸಮಿಪ ಸಿನಿಮಾ ಮಂದಿರ ಬಳಿ ತಾವು ಏನು ಮಾಡುತ್ತಿದ್ದರು ಎಂಬುದನ್ನು ಮರೆತಿದ್ದಾರೆ. ಈಗ ಅವುಗಳನ್ನು ನೆನಪಿಸಲು ಹೋಗುವುದಿಲ್ಲ. ಅಶೋಕ್ ಅವರೇ ನಿಮ್ಮ ಬಳಿ ನೀವು ಮಾಡಿರುವ ಆರೋಪದ ಬಗ್ಗೆ ನಿಖರವಾದ ಮಾಹಿತಿ ಇದ್ದರೆ ತಕ್ಷಣವೇ ಪೊಲೀಸ್ ದೂರು ನೀಡಿ. ಕೇಂದ್ರದಲ್ಲಿ ನಿಮ್ಮದೇ ತಡಿಪಾರ್ ಗೃಹಸಚಿವರು ಇದ್ದಾರೆ. ಕೂಡಲೇ ಅವರಿಂದ ತನಿಖೆ ಮಾಡಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನನ್ನ ಮೇಲೆ ಕ್ರಮ ಕೈಗೊಳ್ಳಿ. ಸುಳ್ಳು ಆಪಾದನೆ ನೋಡಿದರೆ ಕಲ್ಪನಾ ಶಕ್ತಿಯಲ್ಲಿ ನಿಮ್ಮನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್.ಅಶೋಕ್ ವಿರುದ್ಧ ವ್ಯಂಗ್ಯವಾಡಿದರು.

ಮಾತು ಮುಂದುವರಿಸಿದ ಅವರು, ಬಾಂಗ್ಲಾದೇಶದವರು, ಪಾಕಿಸ್ತಾನ ಎಂದು ಮಾತನಾಡುವ ನೀವು ಕಾಶ್ಮೀರದ ಪುಲ್ವಾಮಕ್ಕೆ ದೇಶದ ಗಡಿ ದಾಟಿ 250 ಕೆ.ಜಿ ಆರ್ ಡಿಎಕ್ಸ್ ಹೇಗೆ ಬಂತು ಎಂದು ಈವರೆಗೂ ಹೇಳಲು ಸಾಧ್ಯವಾಗಿಲ್ಲ. ರಾಜಕೀಯ ದುರುದ್ದೇಶದಿಂದ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಷಡ್ಯಂತ್ರ ಮಾಡುತ್ತಿರುವ ಬಿಜೆಪಿಯವರು ತಮ್ಮ ಶಾಸಕರನ್ನು ಕಳಿಸಿ, ಯಾವ ಜಾಗದಲ್ಲಿ ಯಾವ ರೀತಿ ಹಲ್ಲೆ ಮಾಡಬಹುದು ಎಂದು ಸಂಚು ರೂಪಿಸಲು ಕಳುಹಿಸಿದ್ದಾರೆ. ಅವರು ನಮ್ಮ ಕಚೇರಿಯಲ್ಲಿ ಪರಿಶೀಲನೆ ಮಾಡುವಾಗ ನಮ್ಮ ಕಾರ್ಯಕರ್ತರು ಪಕ್ಷದ ಕಚೇರಿಗೆ ಯಾವುದೇ ತೊಂದರೆ ಆಗಬಾರದು ಎಂದು ಪ್ರತಿಭಟನೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಕಾರಲ್ಲಿ ಬಂದು ಕಾಂಗ್ರೆಸ್ ಕಚೇರಿ ಮುಂದೆ ನಿಂತು ಸವಾಲು ಹಾಕುತ್ತಾರೆ. ವಿರೋಧ ಪಕ್ಷದ ನಾಯಕರ ಬೇಜವಾಬ್ದಾರಿ ಹೇಳಿಕೆ ನೋಡಿದಾಗ ಕಾಂಗ್ರೆಸ್ ಪಕ್ಷದ ವಿರುದ್ಧ ಇವರ ಪಿತೂರಿ ಸಾಬೀತಾಗುತ್ತದೆ. ಇದು ಖಂಡನೀಯ. ನಿನ್ನೆ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.






