ನಿನ್ನೆಯಷ್ಟೇ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆಯೋಗ ದಿನಾಂಕವನ್ನ ಘೋಷಿಸಿತ್ತು. ಅದರಂತೆಯೇ, ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ಬಗ್ಗೆ ಮಾತನಾಡಿರುವ BSP ಮುಖ್ಯಸ್ಥೆ ಮಾಯಾವತಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರವನ್ನ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಯಾವತಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮತ್ತು ಮತಯಂತ್ರಗಳನ್ನು (EVM) ಹ್ಯಾಕ್ ಮಾಡದಿದ್ದರೆ ಬಿಜೆಪಿ ಖಂಡಿತವಾಗಿ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣಾ ಆಯೋಗವು ನ್ಯಾಯಸಮ್ಮತವಾದ ಚುನಾವಣೆಯನ್ನು ನಡೆಸಬೇಕು. ಯಾರ ಮುಲಾಜಿಲ್ಲದೆ ಮತ್ತು ಒತ್ತಡಕ್ಕೆ ಒಳಗಾಗದೆ ಚುನಾವಣೆ ನಡೆಸಿದರೆ ಬಿಜೆಪಿ ಸೋಲುತ್ತದೆ ಎಂದು ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಂಬರುವ ಉತ್ತರಪ್ರದೇಶ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಲಕ್ನೋ ನಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ಭಾನುವಾರ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಈ ವೇಳೆ ತಿಳಿಸಿದರು.
ಪಂಚರಾಜ್ಯಗಳ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಪೊಲೀಸರು ಮತ್ತು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಉತ್ತರ ಪ್ರದೇಶದ ಜನರು ಅಭಿವೃದ್ಧಿಗಾಗಿ ಮತ ಹಾಕಬೇಕು ನಮ್ಮ ಪಕ್ಷವು ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಪಾಲಿಸುತ್ತದೆ. ಲಕ್ನೋ ನಲ್ಲಿ ನಡೆಯುವ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ವಹಿಸುವುದಾಗಿ ಈ ವೇಳೆ ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿತ್ತು. ಪಂಚರಾಜ್ಯಗಳ ಚುನಾವಣಾ ಫಲಿತಾಂಶವು ಮಾರ್ಚ್ 10ರಂದು ಹೊರಬೀಳಲಿದೆ.
![](https://pratidhvani.com/wp-content/uploads/2022/01/Mayawati-PTI-1024x683.jpg)
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಒಮಿಕ್ರಾನ್ ರೂಪಾಂತರಿ ಪ್ರಕರಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಗವು ಜನವರಿ 15ರ ವರೆಗೂ ಯಾವುದೇ ರೋಡ್ ಶೋ ಮತ್ತು ಸಮಾವೇಶಗಳಿಗೆ ಅನುಮತಿಯನ್ನು ನೀಡಿಲ್ಲ. ಚುನಾವಣಾ ಸಭೆಗಳನ್ನು ಜಿಲ್ಲಾಡಳಿತ ನಿಗದಿಪಡಿಸಿದ ಜಾಗದಲ್ಲಿ ಅನುಮತಿಯೊಂದಿಗೆ ನಡೆಸಬೇಕು ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
403 ಸದಸ್ಯ ಬಲದ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 312 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸಮಾಜವಾದಿಪಕ್ಷ 47, ಬಿ ಎಸ್ ಪಿ 19 ಮತ್ತೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು