ದ್ರಾವಿಡ ನೆಲವಾದ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಬಿಜೆಪಿಗೆ ಇನ್ನೊಂದು ಮುಖಭಂಗ ಎದುರಾಗಿದೆ. ಚುನಾವಣಾ ಪ್ರಚಾರಕ್ಕೆ ತಯಾರಿಸಿರುವ ವೀಡಿಯೋ ಒಂದರಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಪತ್ನಿ ಹಾಗೂ ಭರತನಾಟ್ಯಂ ಕಲಾವಿದೆ ಶ್ರೀನಿಧಿ ಚಿದಂಬರಂ ಅವರ ಚಿತ್ರವನ್ನು ಬಿಜೆಪಿ ಬಳಸಿಕೊಂಡಿದೆ. ಇದರ ವಿರುದ್ದ ಸಾಕಷ್ಟು ಟೀಕೆಗಳು ಕೂಡಾ ಕೇಳಿ ಬರುತ್ತಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಬರೆದ ʼಸೆಮ್ಮೊಳಿʼ ಹಾಡಿಗೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡಿಗೆ ಶ್ರೀನಿಧಿ ಅವರು ಭರತನಾಟ್ಯಂ ರೂಪ ನೀಡಿದ್ದರು. ಈಗ ಇದೇ ವೀಡಿಯೋದ ತುಣುಕೊಂದನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಳಸಿ ಅಪಹಾಸ್ಯಕ್ಕೆ ಈಡಾಗಿದೆ.
ʼಕಮಲ ಅರಳುತ್ತದೆʼ ಎಂಬ ಶೀರ್ಷಿಕೆಯಡಿಯಲ್ಲಿ ಬಿಜಪಿಯು ಒಂದು ವೀಡಿಯೋ ಹಾಡನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಶ್ರೀನಿಧಿ ಅವರ ಚಿತ್ರವನ್ನು 2 ಸೆಕೆಂಡ್ಗಳ ಕಾಲ ಬಳಸಿಕೊಂಡಿತ್ತು. ಆ ಟ್ವೀಟ್ ಅನ್ನು ಈಗ ಬಿಜೆಪಿಯು ತನ್ನ ಖಾತೆಯಿಂದ ಅಳಿಸಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀನಿಧಿ ಚಿದಂಬರಂ ಅವರು, ಬಿಜೆಪಿಯು ತನ್ನ ಪ್ರೊಪಗಾಂಡವನ್ನು ಪ್ರಚಾರ ಮಾಡಲು ನನ್ನ ಚಿತ್ರ ಬಳಸಿರುವುದು ಹಾಸ್ಯಾಸ್ಪದ. ತಮಿಳುನಾಡಿನಲ್ಲಿ ಕಮಲ ಎಂದೂ ಅರಳುವುದಿಲ್ಲ, ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ವಿರುದ್ದ ಹರಿಹಾಯ್ದಿರುವ ತಮಿಳುನಾಡು ಕಾಂಗ್ರೆಸ್, ಶ್ರೀನಿಧಿ ಅವರ ಒಪ್ಪಿಗೆ ಇಲ್ಲದೇ, ಬಿಜೆಪಿ ಅವರ ಫೋಟೋ ಬಳಸುವಂತಿಲ್ಲ ಎಂದು ಟ್ವೀಟ್ ಮಾಡಿದೆ.
ಈ ಕುರಿತಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ತಮಿಳುನಾಡು ಕಾಂಗ್ರೆಸ್, “ಪ್ರೀತಿಯ ತಮಿಳುನಾಡು ಬಿಜೆಪಿ, ʼಒಪ್ಪಿಗೆʼ ಎಂಬ ವಿಚಾರವನ್ನು ಅರ್ಥಮಾಡುಕೊಳ್ಳುವುದು ನಿಮಗೆ ಕಷ್ಟ ಎಂಬುದುನಮಗೆ ಅರ್ಥವಾಗಿದೆ. ಆದರೆ, ಶ್ರೀನಿಧಿ ಕಾರ್ತಿ ಚಿದಂಬರಂ ಅವರ ಚಿತ್ರವನ್ನು ಅವರ ಒಪ್ಪಿಗೆಯಿಲ್ಲದೇ ಬಳಸುವಂತಿಲ್ಲ. ನಿಮ್ಮ ಅಭಿಯಾನ ಕೇವಲ ಸುಳ್ಳು ಮತ್ತು ಅಪಪ್ರಚಾರದ ಅಭಿಯಾನ ಎಂದು ನೀವೇ ಒಪ್ಪಿಕೊಂಡಂತಾಗಿದೆ,” ಎಂದು ಹೇಳಿದೆ.





