ಬಿಜೆಪಿ ದೇಶ ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಆಗಸ್ಟ್ 30) ನಡೆದ ಗೃಹಲಕ್ಷ್ಮಿ ಕಾರ್ಯಕ್ರಮದ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂಹತ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲರೂ ಇತ್ತ ನೋಡುತ್ತಿದ್ದಾರೆ. ಎಲ್ಲರಿಗೂ ನಮ್ಮರಾಜ್ಯ ಮಾದರಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಕಾರ್ಯಕ್ರಮಗಳನ್ನು ಯಾರೂ ಕೊಡಲಾಗುವುದಿಲ್ಲ, ದೇಶ ದಿವಾಳಿಯಾಗುತ್ತದೆ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹೇಳುತ್ತಿದ್ದರು. ಈಗ ಇಲ್ಲಿ ನಡೆದಿರುವುದನ್ನು ನೋಡಿದರೆ ಅವರೂ ಹೃದಯ ಪೂರ್ವಕವಾಗಿ ಒಪ್ಪಬೇಕು ಎನಿಸಬಹುದು. ಆದರೆ ಅವರು ಹಾಗೆ ಮಾಡುವುದಿಲ್ಲ.
ನಾವೇ ಮಾಡಿದ್ದೇ ಸರಿ ಎಂಬ ಮನೋಭಾವ ಅವರದ್ದು. ಬೇರೆಯವರು ಮಾಡಿದ್ದನ್ನು ಒಪ್ಪುವುದಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ರಸ್ತೆ, ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣಗಳನ್ನು ಮಾಡಿದವರು ನಾವು. ಇವರು ಕೇವಲ ಸುಣ್ಣ ಬಣ್ಣ ಹಚ್ಚಿ ಉದ್ಘಾಟನೆ ಮಾಡುವುದನ್ನಷ್ಟೆ ಮಾಡುತ್ತಾರೆ. ಚತ್ತೀಸಗಡದಲ್ಲಿ ಅವರು ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ನೆಹರೂ, ಪಟೇಲ್ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಾಡಿರುವ ಕಾರ್ಯಗಳ ಪಟ್ಟಿ ನಮ್ಮಬಳಿ ಇದೆ. ಅವರು ಕೇವಲ ಹೇಳುವವರಷ್ಟೆ. ನಾವು ಸಾಧಿಸಿ ತೋರುವವರು ಎಂದು ಖರ್ಗೆ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ಶೇ 18ರಷ್ಟು ಇತ್ತು. 2013-14ರಲ್ಲಿ ಶೇ 74ಕ್ಕೆ ಏರಿತು. ಇದು ಕೆಲಸವಲ್ಲವೇ? ಸರಾಸರಿ ಆಯುಷ್ಯ ಆಗ 32 ವರ್ಷ ಇತ್ತು. ಈಗ 71 ಆಗಿದೆ. ಮಹಿಳಾ ಸಾಕ್ಷರತೆ ಶೇ 7ರಿಂದ ಶೇ 65ಕ್ಕೆ ಏರಿದೆ. ಪರಿಶಿಷ್ಟ ಜಾತಿ, ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣದ ಪ್ರಮಾಣ ಹೆಚ್ಚು ಮಾಡಿದವರು ನಾವು. ನರೇಗಾ ಪ್ರಗತಿಪರ ವಿಚಾರವಲ್ಲವೇ? ಆಹಾರ ಭದ್ರತಾ ಕಾಯ್ದೆ ಮಾಡಿದವರು ನಾವು ಎಂದು ಪಟ್ಟಿ ನೀಡಿದರು.
ಬಿಜೆಪಿಯವರು ಕಾಂಗ್ರೆಸ್ಗೆ ಬೈಯುವ ಕೆಲಸವನ್ನು ಮಾತ್ರವೇ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.