ರಾಜ್ಯ ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ನಾವಿಕನಾಗಿ ಸರ್ಕಾರವನ್ನು ನಡೆಸಿದ್ರೆ, ನಳೀನ್ ಕುಮಾರ್ ಕಟೀಲ್ ಪಕ್ಷವನ್ನು ಮುನ್ನಡೆಸಲು ನಾವಿಕನಾಗಿದ್ದಾರೆ. ಆದರೆ ಇವರಿಬ್ಬರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಗೆ ಹೋದರೆ ಪಕ್ಷ ಗೆಲ್ಲುವ ಯಾವ ಲಕ್ಷ ಇಲ್ಲ ಅನ್ನೋದು ಸರ್ವೇಗಳಲ್ಲಿ ಹೊರಬಿದ್ದಿದೆ. ಈಗಾಗಲೇ ಮೂರ್ನಾಲ್ಕು ಸರ್ವೇ ಮಾಡಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಮರು ಆಯ್ಕೆ ಆಗುವ ಸಾಧ್ಯತೆಗಳು ಇಲ್ಲ ಎನ್ನುವ ಸಂದೇಶಗಳೇ ಹೈಕಮಾಂಡ್ಗೆ ತಲುಪಿವೆ. ಹೀಗಾಗಿ ದೆಹಲಿಯಲ್ಲಿ ಭಾರೀ ಚರ್ಚೆಗಳು ಶುರುವಾಗಿದ್ದು, ದೆಹಲಿಯಿಂದ ಬಂದಿರುವ ಮಾಹಿತಿಯನ್ನು ಆರ್ಎಸ್ಎಸ್ ಮುಖಂಡರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶುಕ್ರವಾರ ಮಧ್ಯರಾತ್ರಿ ತನಕ ಸಿಎಂ ಜೊತೆಗೆ ನಡೆದ ಸಭೆಯಲ್ಲಿ ಸಿಎಂ ಅದಲು ಬದಲು ಮಾಡುವ ಬಗ್ಗೆಯೂ ಮಾತುಕತೆ ಆಗಿದೆ ಎನ್ನಲಾಗಿದೆ. ಆದರೆ ಸಿಎಂ ಬದಲಾವಣೆ ಆದರೆ ಲಿಂಗಾಯತ ಸಮಯುದಾಯವನ್ನು ಎದುರು ಹಾಕಿಕೊಳ್ಳುವ ಭೀತಿಯೂ ಶುರುವಾಗಿದೆ.
ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯುತ್ತಿದೆ ಸ್ಟ್ರಾಟಜಿ..!
ಆರ್ಎಸ್ಎಸ್ ಮೂಲದಿಂದ ಬಂದಿರುವ ನಾಯಕ ಬಿ.ಎಲ್ ಸಂತೋಷ್, ದೆಹಲಿ ಮಟ್ಟದಲ್ಲಿ ಭಾರೀ ಪ್ರಭಾವಿ ಆಗಿದ್ದಾರೆ. ರಾಜ್ಯದ ಪ್ರಮುಖ ನಿರ್ಧಾರಗಳಲ್ಲಿ ಮಹತ್ವದ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡಿ ಬೇರೊಬ್ಬರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಒಂದು ವೇಳೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗಬೇಕು ಎನ್ನುವುದಾದರೆ ಸಚಿವ ಸಂಪುಟ ವಿಸ್ತರಣೆ ಮಾಡಿಕೊಂಡು ಹೊಸ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡು ಚುನಾವಣೆಗೆ ಹೋಗುವ ಬಗ್ಗೆಯೂ ಆಯ್ಕೆ ಕೊಡಲಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವರನ್ನು ಹೊರಕ್ಕೆ ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಸಮಯ ಹಾಗು ಭ್ರಷ್ಟಾಚಾರದ ವಿಚಾರದಲ್ಲಿ ಯಾರೆಲ್ಲಾ ಸರ್ಕಾರದ ಹೆಸರು ಹಾಳು ಮಾಡಿದ್ದಾರೆ. ಅಂತಹ ಸಚಿವರನ್ನು ಕೈಬಿಡುವುದಕ್ಕೆ ತಯಾರಿ ನಡೆದಿದೆ.
ದೆಹಲಿ ತಲುಪಿದ್ದಾರೆ ಚನ್ನಪಟ್ಟಣದ ನಾಯಕ ಸಿ.ಪಿ ಯೋಗೇಶ್ವರ್..!
RSS ನಾಯಕರೊಂದಿಗೆ ಸಿಎಂ ಸಾಲು ಸಾಲು ಸಭೆ ನಡೆದಿದೆ. ಡಿಸೆಂಬರ್ 7ರಂದು ದತ್ತಾತ್ರೇಯ ಹೊಸಬಾಳೆ ಹಾಗು ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರು. ಶುಕ್ರವಾರ ಒಂದೇ ದಿನ 2 ಬಾರಿ C R ಮುಕುಂದ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದಾದರೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ವಿಧಾನಸಭಾ ಸಂಪುಟದಿಂದ ಕೈಬಿಡಬೇಕು. ವಿಧಾನಸಭೆ ಟಿಕೆಟ್ ನೀಡುವಾಗ ಏನೆಲ್ಲಾ ಪರಿಗಣನೆ ಮಾಡ್ಬೇಕು ಅನ್ನೋದ್ರ ಜೊತೆಗೆ ಕೆಲವು ಶಾಸಕರು, ಸಚಿವರ ಕೆಲಸ ಹಾಗು ಸಾಧನೆಗಳ ಬಗ್ಗೆ ಪರಾಮರ್ಶೆಯ ವರದಿ ತೆಗೆದುಕೊಳ್ಳಲಾಗಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. 10 ಹೊಸ ಮುಖಗಳನ್ನು ತಂದು ಸರ್ಕಾರದ ಮೇಲೆ ಬಂದಿರುವ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪದಿಂದ ಹೊರಕ್ಕೆ ಬಂದು ಹೊಸ ಟೀಂನಿಂದ ಚುನಾವಣೆ ಎದುರಿಸಲು ಭಾರತೀಯ ಜನತಾ ಪಾರ್ಟಿ ನಾಯಕತ್ವ ನಿರ್ಧಾರ ಮಾಡಿದೆ.
ಗುಜರಾತ್ನಲ್ಲಿರುವ ಬಿ.ಎಸ್ ಯಡಿಯೂರಪ್ಪ ಜೊತೆಗೆ ಚರ್ಚೆ..!
ಗುಜರಾತ್ ಸರ್ಕಾರ ರಚನೆಯಲ್ಲಿ ವೀಕ್ಷಕರಾಗಿ ಬಿ.ಎಸ್ ಯಡಿಯೂರಪ್ಪ ತೆರಳಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆಯೂ ನಡೆಯಲಿ ಎನ್ನಲಾಗ್ತಿದೆ. ಪಕ್ಷದ ಬಲವರ್ಧನೆ, 2023 ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಬಹುದೊಡ್ಡ ಮಟ್ಟದಲ್ಲಿ ಸರ್ಜರಿ ಮಾಡುವ ಲೆಕ್ಕಾಚಾರ ನಡೆದಿದೆ. ಬಸವರಾಜ ಬೊಮ್ಮಾಯಿ ಅವರನ್ನು ಸಚಿವ ಸಂಪುಟಕ್ಕೆ ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವುದು ಅಷ್ಟೇ ಅಲ್ಲ, ಯುವ ಶಾಸಕರಿಗೆ ಸಂಪುಟದಲ್ಲಿ ಹೊಣೆಗಾರಿಕೆ ನೀಡುವುದು ಸಂಘ ಪರಿವಾರದ ನಿರ್ಧಾರ ಎನ್ನಲಾಗಿದೆ. ಈಗಾಗಲೇ ಸಿ.ಪಿ ಯೋಗೇಶ್ವರ್ ಈಗಾಗಲೇ ದೆಹಲಿಗೆ ತೆರಳಿದ್ದು, ಶೀಘ್ರದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದೆಹಲಿಗೆ ತೆರಳಲಿದ್ದು, ಬಾಂಬೆ ಟೀಂನಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ ಎನ್ನುವ ಮಾಹಿತಿ ಸಿಗ್ತಿದೆ.
ಕೃಷ್ಣಮಣಿ