![](https://pratidhvani.com/wp-content/uploads/2024/05/download-2.jpeg)
ರಾಜ್ಯದೆಲ್ಲೆಡೆ ತೀವ್ರ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣ ಮತ್ತೆ ಮುಖ್ಯಭೂಮಿಕೆಗೆ ಬಂದಿದೆ. ರಾಜ್ಯಾದ್ಯಂತ ಪೊಲೀಸ್ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ. ಹಾಲಿ ಮಾರುಕಟ್ಟೆ ದರದಲ್ಲಿ 32.48 ಕೋಟಿ ರೂಪಾಯಿ ಮೌಲ್ಯದ 60.6 ಬಿಟ್ ಕಾಯಿನ್ ಕಳವು ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ. ತುಮಕೂರು ಸೆನ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ತುಮಕೂರಿನ ಯೂನೋ ಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು 2027ರ ಮಾರ್ಚ್ 26 ರಂದು ಶ್ರೀಕಿ ವಿರುದ್ಧ ದೂರು ನೀಡಿದ್ದರು. ತಮ್ಮ ಕಂಪನಿಯ ಬಿಟ್ ಕಾಯಿನ್ ಎಕ್ಸ್ ಚೇಂಜ್ ಕಂಪನಿಯ ಸರ್ವರ್ ನ ಡಾಟಾ ಬೇಸ್ ಅನ್ನು ಹ್ಯಾಕ್ ಮಾಡಿ ಅದರಲ್ಲಿದ್ದ ವಿವಿಧ ಗ್ರಾಹಕರಿಗೆ ಸೇರಿದ 60.6 ಬಿಟ್ ಕಾಯಿನ್ ಗಳನ್ನು ಕಾನೂನು ಬಾಹಿರವಾಗಿ ಕೆಲವರು ತಮ್ಮ ವ್ಯಾಲೆಟ್ ಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ನಂತರ ಪ್ರಕರಣ ಕೋಲಾಹ ಎಬ್ಬಿಸುತ್ತಿದ್ದಂತೆ ರಾಜ್ಯ ಸರ್ಕಾರ 2023 ಜುಲೈ 18 ರಂದು ಈ ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಎಸ್ ಐ ಟಿ ಗೆ ವಹಿಸಿತ್ತು.ಎಸ್ ಐ ಟಿ ಅಧಿಕಾರಿಗಳು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಯಿಂದ ವಶಪಡಿಸಿಕೊಂಡ ಲ್ಯಾಪ್ ಟಾಪ್ ಅನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಅದರಲ್ಲಿ ರಹಸ್ಯವಾಗಿ ಅಡಗಿಸಿಟ್ಟಿದ್ದ ಕ್ರಿಪ್ಟೋ ವಿಳಾಸಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಶ್ರೀಕಿ ಎಸಗಿದ ಆರೋಪ ಈ ಮೂಲಕ ಸಾಬೀತಾಗಿತ್ತು.