ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನ (SIT) ರಚನೆ ಮಾಡಿದೆ. ಈ ತನಿಖಾ ತಂಡದ ಮುಖ್ಯಸ್ಥರನ್ನನಾಗಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇಮಕ ಮಾಡಲಾಗಿದ್ದು, ಇವರ ನೇತೃತ್ವದಲ್ಲಿ ಬಿಟ್ ಕಾಯಿನ್ ಹಗರಣದ ಕುರಿತು ಮರು ತನಿಖೆ ನಡೆಯಲಿದೆ. ಇನ್ನು ಈ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಎಸ್ಪಿ ಶರತ್ ಸಹ ಇರಲಿದ್ದು ಬಿಟ್ ಕಾಯಿನ್ ಹಗರಣದ ಮರು ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿದೆ ಅಂತ ಹೇಳಲಾಗುತ್ತಿದೆ
![](https://pratidhvani.com/wp-content/uploads/2023/07/im-789925-1024x768.jpeg)
ಇನ್ನು ಈ ತಂಡ ರಚನೆಯಾಗುತ್ತಿದ್ದಂತೆ ಸಿಐಡಿಯಲ್ಲಿ ಎಸ್ಐಟಿ ಅಧಿಕಾರಿಗಳ ಜೊತೆ ಸಿಐಡಿ ಡಿಜಿ ಎಂ. ಎ. ಸಲೀಂ ಸಭೆ ನಡೆಸಿದ್ದು, ಬಿಟ್ ಕಾಯಿನ್ ಹಗರಣದ ಮರು ತನಿಖೆಗೆ ಬೇಕಾದ ರೂಪುರೇಷಗಳ ಬಗ್ಗೆ ಚರ್ಚೆಯನ್ನ ಕೂಡ ನಡೆಸಲಾಗಿದೆಯಂತೆ, ಈ ತನಿಖೆಯ ಪ್ರತಿಯೊಂದು ಹಂತದಲ್ಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ನಿರ್ಧರಿಸಿರುವ ತಂಡ ಫೈಲ್ ವರ್ಗಾವಣೆ, ಕೆಳಹಂತದಿಂದ ಯಾವೆಲ್ಲ ಅಧಿಕಾರಿಗಳು ತಂಡದಲ್ಲಿ ಇರಬೇಕು ಎಂಬುದರ ಬಗ್ಗೆಯೂ ಗಹನವಾದ ಚರ್ಚೆ ಮಾಡಲಾಗಿದೆಯಂತೆ. ಈಗಾಗಲೇ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ನ್ಯಾಯಾಲಯದ ಅನುಮತಿ ಪಡೆದು ತನಿಖೆ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
![](https://pratidhvani.com/wp-content/uploads/2023/07/340343-1656330683.jpg)
ರಾಜ್ಯದ್ಯಂತ ಬಹುದೊಡ್ಡ ಮಟ್ಟಿಗೆ ಚರ್ಚೆಗೆ ಗ್ರಾಸವಾಗಿದ್ದ ಬಿಟ್ ಕಾಯಿನ್ ಹಗರಣದ ಕುರಿತು ಈಗ ಸರ್ಕಾರ ಮರುತನಿಖೆಗೆ ಆದೇಶವನ್ನು ಹೊರಡಿಸಿರುವುದು ಮಾತ್ರವಲ್ಲದೆ, ಎಸ್ಐಟಿ ತಂಡವನ್ನ ರಚಿಸುವ ಮುಖಾಂತರ ಈ ಹಗರಣ ನಿಷ್ಪಕ್ಷಪಾತವಾಗಿ ನಡೆಯುವುದಕ್ಕೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳನ್ನ ಸರ್ಕಾರ ಮಾಡಿಕೊಂಡಿದೆ. ಆದರೆ ಇಲ್ಲಿ ಎಸ್ಐಟಿ ತಂಡ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಗಳೆ ಹೆಚ್ಚಾಗಿದ್ದು ಈ ಹಗರಣವನ್ನ ಸಿಬಿಐಗೆ ವಹಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡಗಳು ಬರುವ ಸಾಧ್ಯತೆಗಳು ಕೂಡ ದಟ್ಟವಾಗಿದೆ ಹೀಗಾಗಿ ಈ ಒತ್ತಡವನ್ನು ಸರ್ಕಾರ ಯಾವ ರೀತಿಯಲ್ಲಿ ನಿಭಾಯಿಸಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ