ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರದ ಅವಧಿ ಮುಕ್ತಾಯವಾಗಿ 4 ವರ್ಷಗಳೇ ಕಳೆಯುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರ ಸ್ಪಷ್ಟ ಬಹಮತದೊಂದಿಗೆ ಅಧಿಕಾರದಲ್ಲಿದ್ದು, ಶೀಘ್ರವಾಗಿಯೇ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. “ಪ್ರತಿಧ್ವನಿ” ಗೆ ಸರ್ಕಾರದ ಉನ್ನತ ಮಟ್ಟದ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಈ ಬಾರಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
![](https://pratidhvani.com/wp-content/uploads/2024/05/karnataka-election-2023-bjp-congress-jds-logo-1024x768.jpg)
ಅಷ್ಟಕ್ಕೂ ಸರ್ಕಾರ ಹೀಗೆ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಸಾಲು ಸಾಲು ಕಾರಣಗಳು ಕೂಡ ಇದೆ.
- ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.
- ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಗಳು ನಡೆದ ಬಳಿಕ ಸರ್ಕಾರ ಇನ್ನಷ್ಟು ಆ್ಯಕ್ಟೀವ್ ಆಗಬೇಕಿದೆ.
- ಮುಂದಿನ 4 ವರ್ಷಗಳ ಬಳಿಕ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲೂ ಈಗಿನ ಮಾದರಿಯಲ್ಲಿಯೇ ಅಧಿಕಾರ ಹಿಡಿಯಬೇಕಿದೆ.
- ಈ ಪ್ರಕ್ರಿಯೆ ಆಗಬೇಕು ಅಂದರೆ, ರಾಜ್ಯದ ರಾಜಧಾನಿ ನಗರ ಕಾಂಗ್ರೆಸ್ ಕೈಯಲ್ಲಿರಬೇಕು.
- ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ, ಬಿಬಿಎಂಪಿ ಚುನಾವಣೆ ಮಾಡಲು ವಿಫಲವಾಗಿದೆ.
- ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಂಚ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದು, ಜನ ಅದರ ಪ್ರತಿಫಲ ಊಟ ಮಾಡುತ್ತಿದ್ದಾರೆ.
- ಈಗಷ್ಟೇ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಬೆಂಗಳೂರು ನಗರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದೆ. ಇದನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದಿಕ್ಕಬೇಕು ಅಂದರೆ ಪಾಲಿಕೆ ಚುನಾವಣೆ ಆಗಲೇಬೇಕು.
- ಪಾಲಿಕೆ ಚುನಾವಣೆ ಮಾಡಿ, ಅಲ್ಲೂ ಕೂಡ ಕಾಂಗ್ರೆಸ್ ಅಧಿಕಾರ ಹಿಡಿದಿದ್ದೇ ಆದ್ರೆ, ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟ ಹಾಗೇ ಆಗುತ್ತದೆ.
- ಜೊತೆಗೆ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ಕೊಟ್ಟಂತಾಗುತ್ತದೆ.
- ಇನ್ನು ಮುಂದೆ 5 ವರ್ಷ ಬೆಂಗಳೂರಿನಲ್ಲೂ ಅಧಿಕಾರ ಹಿಡಿದು, ಬ್ರ್ಯಾಂಡ್ ಬೆಂಗಳೂರು ಕನಸು ಸಾಕಾರಗೊಳಿಸುತ್ತಾ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಾ, ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಗಳಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎನ್ನಲಾಗುತ್ತಿದೆ.
![](https://pratidhvani.com/wp-content/uploads/2022/06/bbmp-dh-2-1121221-1656103304-1024x576.jpg)
ಹೀಗೆ ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆಯನ್ನು ದಸರಾ ಸಂದರ್ಭದಲ್ಲಿ ನಡೆಸಲು ವೇದಿಕೆಯನ್ನು ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿಕೊಳ್ಳುತ್ತಿದೆ.
![](https://pratidhvani.com/wp-content/uploads/2022/11/bng10-bbmp-msm-01-1-1074705-1643144212-1024x576.jpg)
ಇನ್ನು ಈಗಾಗಲೇ ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ ನಾಲ್ಕು ವರ್ಷ ಕಳೆದಿದ್ದು, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿಗಾವಹಿಸುವುದು ಅತ್ಯವಶ್ಯಕವಾಗಿರುವ ಕಾರಣ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಬೆಂಗಳೂರು ನಗರದ ಉಸ್ತುವಾರಿಯೂ ಆಗಿರುವ ಕಾರಣ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬರುತ್ತಿದೆ ಎನ್ನಲಾಗಿದೆ.