ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರೆ/ಸೇರುವುದಿಲ್ಲ ಎಂಬ ವಿಷಯಗಳು ಬಹಳ ದಿನಗಳಿಂದ ಚರ್ಚೆಯಾಗುತ್ತಿದ್ದವು. ಕೆಲವೊಮ್ಮೆ ಪುರಾವೆ ಸಿಕ್ಕಿ ಇಂತಹ ಸುದ್ದಿಗಳು ರಕ್ಕೆ-ಪುಕ್ಕ ಪಡೆದುಕೊಳ್ಳುತ್ತಿದ್ದರೆ, ಕೆಲವೊಮ್ಮೆ ಏನೂ ಇಲ್ಲದೆ. ಆದರೀಗ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಆಗು-ಹೋಗುಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ಅಮಿತ್ ಶಾ ಕೋಲ್ಕತ್ತಾ ಪ್ರವಾಸದ ವೇಳೆ ಸೌರವ್ ಗಂಗೂಲಿ ಮನೆಗೆ ಹೋಗಿ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ. ಇದು ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ಆಗುತ್ತಾರೆಂಬ ಸುದ್ದಿಗೆ ಇನ್ನಷ್ಟು ಪುಷ್ಟಿ ಒದಗಿಸಿದೆ.
ಅಮಿತ್ ಶಾ ಪುತ್ರ ಜಯ್ ಶಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗೌರವ ಕಾರ್ಯದರ್ಶಿಯಾಗಿರುವುದರಿಂದ ಮಂಡಳಿಯ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಆಗಾಗ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಕೂಡ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ವಿಷಯಕ್ಕೆ ಇಂಬು ನೀಡಿದೆ. ಈಗ ಅಮಿತ್ ಶಾ ಅವರೇ ಖುದ್ದಾಗಿ ಸೌರವ್ ಗಂಗೂಲಿ ಮನೆಗೆ ಊಟಕ್ಕೆ ಬಂದಿದ್ದರಿಂದ ‘ಬಿಜೆಪಿ ಸೇರ್ಪಡೆ ವಿಷಯ’ ಇನ್ನಷ್ಟು ಚರ್ಚೆ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ಔತಣಕೂಟವನ್ನು ರಾಜಕೀಯ ದೃಷ್ಠಿಕೋನದಲ್ಲಿ ನೋಡಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಸೌರವ್ ಗಂಗೂಲಿ ಅವರು ‘ನಮಗೆ ಮಾತನಾಡಲು ಬಹಳಷ್ಟು ವಿಷಯಗಳಿವೆ. 2008 ರಿಂದಲೇ ನನಗೆ ಅವರ ಬಗ್ಗೆ ಗೊತ್ತು. ನಾನು ಕ್ರಿಕೆಟ್ ಆಟವಾಡುತ್ತಿದ್ದಾಗಲೇ ಭೇಟಿ ಮಾಡುತ್ತಿದ್ದೆವು. ಆದರೆ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ಭೇಟಿ ಆಗುತ್ತಿರಲಿಲ್ಲ. ಈಗ ನಾನು ಅಮಿತ್ ಶಾ ಅವರ ಮಗ ಜಯ್ ಶಾ ಅವರೊಂದಿಗೆ ಕೂಡ ಕೆಲಸ ಮಾಡುತ್ತಿದ್ದೇನೆ. ನಮ್ಮದು ಹಳೆಯ ಸಂಬಂಧ’ ಎಂದು ನಿನ್ನೆ ರಾತ್ರಿಯ ಔತಣಕೂಟದ ಸುತ್ತಾ ಎದ್ದಿರುವ ಸುದ್ದಿಗಳಿಗೆ ಇಂದು ಬೆಳಿಗ್ಗೆ ಸೌರವ್ ಗಂಗೂಲಿ ಸಮಜಾಯಿಷಿ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಪತ್ರಕರ್ತರ ಪ್ರಶ್ನೆಗಳನ್ನು ಸರಾಗವಾಗಿ ಎದುರಿಸುತ್ತಿದ್ದರ ನಡುವೆ ‘ಮೆನುವಿನಲ್ಲಿ ಏನಿತ್ತು?’ ಎಂಬ ಸುಲಭದ ಚೆಂಡೊಂದು ತೂರಿ ಬಂತು. ಮುಗುಳ್ನಕ್ಕ ಗಂಗೂಲಿ ‘ಮನೆ ಒಳಗೆ ಹೋಗಿ ನೋಡಿ ಹೇಳುತ್ತೇನೆ’ ಎಂದರಲ್ಲದೆ ‘ಅಮಿತ್ ಶಾ ಸಸ್ಯಾಹಾರಿ’ ಎಂದು ಜಾರಿಕೊಂಡರು. ಸೌರವ್ ಗಂಗೂಲಿ ಮತ್ತು ಅಮಿತ್ ಶಾ ಭೇಟಿ ಆಗಿದ್ದು, ಆ ಭೇಟಿ ರಾಜಕೀಯವಾಗಿ ಚರ್ಚೆ ಆಗಿದ್ದು ಇದು ಮೊದಲೇನಲ್ಲ. ಕಳೆದ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಕೂಡ ಅಮಿತ್ ಶಾ ಮತ್ತು ಸೌರವ್ ಗಂಗೂಲಿ ಭೇಟಿ ಮಾಡಿದ್ದರು. ಆಗಲೂ ಸೌರವ್ ಗಂಗೂಲಿ ಬಿಜೆಪಿಗೆ ಸೇರುತ್ತಾರೆ ಎಂಬ ವಿಷಯ ದೊಡ್ಡದಾಗಿ ಚರ್ಚೆಯಾಗಿತ್ತು. ಸೌರವ್ ಗಂಗೂಲಿ ಆಗ ಸುದ್ದಿಯನ್ನು ನಿರಾಕರಿಸಿದ್ದರು.
ಸೌರವ್ ಗಂಗೂಲಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು 2015ರ ನಂತರ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿ ಪ್ರಮುಖ ಚುನಾವಣೆಯ ಸಂದರ್ಭದಲ್ಲೂ ಚರ್ಚೆಯಾಗಿದೆ. “ದೀದಿ ವರ್ಸಸ್ ದಾದಾ” (ಮಮತಾ ಬ್ಯಾನರ್ಜಿ ವರ್ಸಸ್ ಸೌರವ್ ಗಂಗೂಲಿ) ಎಂಬಂತೆ ಚರ್ಚೆಯಾಗಿದೆ. ಕಳೆದ ವರ್ಷ ಜನವರಿಯಲ್ಲೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು ಗಂಗೂಲಿ ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಬಿರುಸಾದ ಸುದ್ದಿ ಕೇಳಿಬಂದಿತ್ತು.
ಬಿಜೆಪಿ 2015ರಿಂದಲೂ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧುಸಲು ವಿಶೇಷ ಗಮನ ಹರಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಬಿಡುತ್ತೇವೆ ಎಂದುಕೊಂಡಿತ್ತು. ಆದರೆ ಭ್ರಮನಿರಸನ ಅನುಭವಿಸಿತ್ತು. ಇದೂ ಅಲ್ಲದೆ ಅಪಾರ ಆಮಿಷ ಕೊಟ್ಟು ಕರೆತಂದಿದ್ದ ಟಿಎಂಸಿ ನಾಯಕರು ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಮಾತೃಪಕ್ಷಕ್ಕೆ ಗುಳೆ ಹೊರಟುಬಿಟ್ಟರು. ಉಪ ಚುನಾವಣೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತು 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಇರುವ ಸೀಟುಗಳನ್ನು ಉಳಿಸಿಕೊಳ್ಳಲಾದರೂ ಪ್ರಮುಖ ನಾಯಕನೊಬ್ಬ ಅಗತ್ಯ ಇದೆ.
ಅದೇ ಕಾರಣಕ್ಕೆ ರಾಜಕೀಯ ಕ್ಷೇತ್ರಕ್ಕೆ ಹೊಸಬರಾಗಿರುವ, ಪಶ್ಚಿಮ ಬಂಗಾಳದ ಜನರ, ಅದರಲ್ಲೂ ಯುವಕರ ಕಣ್ಮಣಿಯಾಗಿರುವ ಸೌರವ್ ಗಂಗೂಲಿ ಅವರನ್ನು ಬಿಜೆಪಿಗೆ ಕರೆತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿ ಎದುರಾಗುವ ಸಮಸ್ಯೆಗಳಿಗೆ ಮುಖಾಮುಖಿಯಾಗಲು ಅಂಜುತ್ತಿರುವ ಸೌರವ್ ಗಂಗೂಲಿ ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯದಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ.