ಇನ್ನೇನು ಕೆಲವೇ ದಿನಗಳಲ್ಲಿ ಸಂಭ್ರಮದ ಗಣೇಶ ಚತುರ್ಥಿ ಹಬ್ಬದ ದಿನ ಬರಲಿದೆ. ಈ ಬಾರಿಯೂ ಕೊರೋನಾ ನಡುವೆ ಸರ್ಕಾರ ಗಣೇಶನ ಹಬ್ಬಕ್ಕೆ ಅನುಮತಿ ಕೊಟ್ಟಿದೆ. ಆದರೆ ಬೆಂಗಳೂರು ನಗರದಲ್ಲಿ ಚೌತಿ ಆಚರಿಸಲು ಬೃಹತ್ ಮಹಾನಗರ ಪಾಲಿಕೆ ಕೆಲವೊಂದು ಕಂಡೀಷನ್ ಹಾಕಿದೆ. ಇದನ್ನು ಪಾಲಿಸದೆ ಗಣೇಶ ಚತುರ್ಥಿ ಆಚರಿಸ ಕೂಡದು ಎಂದು ಸಾರ್ವಜನಿಕರಿಗೆ ತಾಕೀತು ಮಾಡಿದೆ.
ಕೊರೋನಾ ಮತ್ತೊಮ್ಮೆ ಜನರ ಸಂಭ್ರಮವನ್ನು ಕಸಿದುಕೊಂಡಿದೆ. ಕಳೆದರಡು ವರ್ಷಗಳಿಂದ ಕೊರೋನಾ ಕರಿನೆರಳು ಬಿದ್ದು ತಣ್ಣಗಾಗಿದ್ದ ಗಣೇಶ ಚತುರ್ಥಿ ಹಬ್ಬವನ್ನು ಈ ಬಾರಿಯಾದರೂ ಅದ್ದೂರಿಯಾಗಿ ಆಚರಿಸುವ ಲಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಬಾರಿಯ ಗಣೇಶ ಚತುರ್ಥಿಯೂ ಕೊರೋನಾ ಕಾರಣದಿಂದ ಕಳೆಗುಂದಲಿದೆ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೋನಾ ಇನ್ನೂ ತಗ್ಗಿಲ್ಲ. ಪಕ್ಕದ ಕೇರಳದಲ್ಲಿ ಮತ್ತೆ ನಿಫಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿಗೆ ಮೂರನೇ ಅಲೆಯ ಭೀತಿಯೂ ಇದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿಯ ಗಣೇಶ ಚತುರ್ಥಿಗೂ ಬಿಬಿಎಂಪಿ ಕಡಿವಾಣ ಹಾಕಿದೆ. ಮೂರು ದಿನಗಳ ಕಾಲ ಗಣೇಶ ಹಬ್ಬ ಆಚರಣೆಗೆ ಒಟ್ಟಾರೆ ಅವಕಾಶ ಕೊಟ್ಟು ಕೆಲವೊಂದು ಕಂಡೀಷನ್ಸ್ ಅನ್ನೂ ಹಾಕಿದೆ.
1. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಎತ್ತರದ ಮೂರ್ತಿಗೆ ಅವಕಾಶ
2. 198 ವಾರ್ಡ್ ಗಳಲ್ಲಿ ಒಂದು ಮೂರ್ತಿಗೆ ಅವಕಾಶ. ಆದರೆ ಸ್ಥಳ ಪಾಲಿಕೆ ನಿಗದಿ ಮಾಡುತ್ತೆ
3. 8ರ ಒಳಗಾಗಿ ಜಾಗ ನಿಗದಿ ಪಡಿಸಿ ವ್ಯವಸ್ಥೆ ಮಾಡಿಕೊಳ್ಳುವುದು
4. ಟ್ರಾಫಿಕ್ ಸಮಸ್ಯೆ ಆಗದಂತೆ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು, ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯ ಸಂಚಾರಿ ಪೊಲೀಸರ ಉಸ್ತುವಾರಿ
5. ಮೂರ್ತಿ ಪ್ರತಿಷ್ಟಾಪನೆ ಜಾಗದಲ್ಲಿ 20 ಮಂದಿಗೆ ಮಾತ್ರ ಅವಕಾಶ. ಇಲ್ಲಿ ಹೋಂ ಗಾರ್ಡ್ ಹಾಗೂ ಮಾರ್ಷಲ್ಸ್ ಉಸ್ತುವಾರಿ
6. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಯಾವುದೇ ಮನರಂಜನೆ, ಸಾಂಸ್ಕೃತಿಕ, ಡಿಜೆ, ಡ್ಯಾನ್ಸ್ ಗೆ ಅವಕಾಶ ಇಲ್ಲ
7. ಮೂರ್ತಿ ಪ್ರತಿಷ್ಟಾಪನೆ ಆಯೋಜಕರು ಕಡ್ಡಾಯವಾಗಿ ಲಸಿಕೆ ಪಡೆದಿಬೇಕು & ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು
8. ಬೆಂಗಳೂರು ನಗರದಲ್ಲಿ 3 ದಿನಗಳ ಕಾಲ ಗಣೇಶ ಹಬ್ಬ ಆಚರಿಸಲು ಅನುಮತಿ
9. POP ಇಂದ ತಯರಾದ ಮೂರ್ತಿಗಳಿಗೆ ಅವಕಾಶ ಇಲ್ಲ. POP ಇಂದ ತಯಾರದ ಮೂರ್ತಿ ಬಳಸಿದರೆ ದಂಡ ಹಾಗೂ ಕಠಿಣ ಶಿಕ್ಷೆ
10. ಮೂರ್ತಿ ವಿಸರ್ಜನೆಗೆ ಪಾಲಿಕೆಯಿಂದಲೇ ಮೊಬೈಲ್ ಟ್ಯಾಂಕರ್ ಇರಲಿದೆ. ಇದರ ಹೊರತಾಗಿ ನಗರದ ಯಾವುದೇ ಕೆರೆ ಹಳ್ಳ ಕೊಳ್ಳಿಗೆ ಮೂತ್ತಿ ವಿಸರ್ಜನೆ ಮಾಡಬಾರದು
11. ಮೂರ್ತಿ ಪ್ರತಿಷ್ಟಾಪನೆ ಮಾಡುವ ಜಾಗ ಕಡ್ಡಾಯವಾಗಿ ಆಗಾಗ್ಗೆ ಸ್ಯಾನಿಟೈಸ್ ಮಾಡುವುದು
12. ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ 6 ಅಡಿ ಅಂತರ ಪಾಲನೆ ಮಾಡುವುದು
13. ನಿಯಮ ಉಲ್ಲಂಘಿಸುವವರ ವಿರುದ್ಧ ವಿ.ನಿ ಕಾಯ್ದೆ 2005 & IPC 188 ಅಡಿಯಲ್ಲಿ ಕ್ರಮ ಜರುಗಿಸಲಾಗುವುದು
ಒಟ್ಟಾರೆ ಈ ಬಾರಿಯ ಗಣೇಶ ಚತುರ್ಥಿಗೂ ಕೊರೋನಾ ವಕ್ರ ದೃಷ್ಟಿ ತಗುಲಿದೆ. ಕಳೆದ ಬಾರಿ ಕೊರೋನಾ ಹೆಚ್ಚಿತ್ತು ಎಂಬ ಕಾರಣಕ್ಕೆ ಸಂಭ್ರಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ನಗರದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ರೂ ಮುನ್ನೆಚ್ಚರಿಕೆ ಕ್ರಮವಾಗಿ ಅದ್ದೂರಿ ಆಚರಣೆಗೆ ತಡೆ ಒಡ್ಡಲಾಗಿದೆ. ಈ ಮೊದಲು ಸಂಪೂರ್ಣ ಆಚರಣೆಗೆ ಅವಕಾಶ ಕೊಡುವಂತೆ ಬೇಡಿಕೆಗಳು ಕೇಳಿಬಂದಿದ್ದರೂ, ಪಾಲಿಕೆ ಮೂರನೇ ಅಲೆಯಿಂದ ನಗರವನ್ನು ಕಾಪಾಡುವ ನಿಟ್ಟಿನಲ್ಲಿ ಕಂಡೀಷನ್ಗಳನ್ನು ಹಾಕಿ ಚೌತಿ ಆಚರಣೆಗೆ ಅನುಮತಿ ಕೊಟ್ಟಿದೆ.