ಬೆಂಗಳೂರು: ಇಸ್ರೇಲ್ ಇರಾನ್ ಮೇಲೆ ಯುದ್ಧ ಮಾಡುತ್ತಿದ್ದು, ಇರಾನ್ ಪ್ರತ್ಯುತ್ತರ ನೀಡುತ್ತಿರುವುದು ದೊಡ್ಡ ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈಗ ನಡೆಯುತ್ತಿರುವ ಯುದ್ದದಲ್ಲಿ ಇಸ್ರೇಲ್ ಮಾತ್ರವಲ್ಲ, ಅಮೇರಿಕಾ ಕೂಡ ಅದರ ಹಿಂದಿದೆ. ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಅಲ್ಲಿ ಹಲವು ಯುದ್ಧಗಳನ್ನು ಕಂಡಿದ್ದೇವೆ. ಮೊದಲು ಜೇರುಸಲೇಮ್ನಲ್ಲಿ ಧರ್ಮಕ್ಕಾಗಿ ಯುದ್ಧ ನಡೆಯುತಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ಅಗುತ್ತಿದೆ. ಅಮೇರಿಕಾ ಆಯಿಲ್ ಮೇಲೆ ಹಿಡಿತ ಸಾಧಿಸಲು ಹೋರಾಟ ಮಾಡುತ್ತಿದೆ. ಅಮೇರಿಕಾ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೆಳಿದ್ದಾರೆ.
ಮೂರನೇ ವಿಶ್ವ ಯುದ್ಧ ಆಗುವ ಕುರಿತು ಪ್ರತಿಕ್ರಿಯಿಸಿ, ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಷ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ ತಂತ್ರ ಮಾಡುತ್ತಿವೆ. ಅವರೂ ಯುದ್ದ ರಂಗಕ್ಕೆ ಇಳಿದರೆ ರಣರಂಗ ಬಹಳ ದೊಡ್ಡ ಮಟ್ಟಕ್ಕೆ ಹೋಗಲಿದೆ. ದೊಡ್ಡ ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಲವು ಯುದ್ಧಗಳ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಶಾಂತಿ ನೆಲೆಸಿದ ಬಳಿಕ ಕರೆ ತರಬಹುದು. ದುಬೈ, ಅಬುದಾಬಿ, ಸೌಧಿ ಅರೇಬಿಯಾ ಒಂದೇ ಬಾರಿ ಯುದ್ಧ ನಡೆಯುತ್ತಿದೆ. ಹಾಗಾಗಿ ಒಟ್ಟಿಗೆ ಸಮಸ್ಯೆ ಆಗಿದೆ. ಎಲ್ಲಾ ಕಡೆ ಭಾರತೀಯರು ಇದ್ದಾರೆ. ಭಾರತ ಸರ್ಕಾರ ಮಹತ್ವದ ಪಾತ್ರವಿದೆ. ಭಾರತ ಸರ್ಕಾರ ಎಲ್ಲಾ ರಾಯಭಾರಿ ಕಚೇರಿಗೆ ಸಂಪರ್ಕ ಮಾಡಿ, ಅವರಿಗೆ ಅನ್ನ, ವಸತಿ ನೀಡುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಭಾರತ ತನ್ನ ಆಯಿಲ್ ರಿಸೋರ್ಸ್ ಮೇಲೆ ಅವಲಂಭಿತವಾಗಿತ್ತು. ಹಾಗಾಗಿ ಭಾರತದ ಮೇಲೂ ಪರಿಣಾಮ ಬೀರಲಿದೆ. ಹತ್ತು ವರ್ಷಗಳ ಹಿಂದೆ ಆಯಿಲ್ಗಾಗಿ ಕ್ಯೂ ನಿಂತಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಬರಬಹುದು. ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಆಗಿರುವ ಹಿಂಸೆ ನೋಡಿದರೆ ಭಾರತದಲ್ಲಿ ಆ ರೀತಿಯ ಹಿಂಸೆ ಆಗಿಲ್ಲ. ಪಾಕಿಸ್ತಾನದಲ್ಲಿ ಗೋಲಿಬಾರ್ ಆಗಿತ್ತು. ಭಾರತದಲ್ಲಿ ಆ ರೀತಿ ಆಗಲು ಅವಕಾಶ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.






