ವಚನಗಳ ನಾಮಾಂಕಿತ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ವಿವಾದಕ್ಕೆ ಇತಿಶ್ರೀ ಹಾಡಲು ಬಸವ ಧಮ೯ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತೀರ್ಮಾನಿಸಿದ್ದು, ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ವಚನಾಂಕಿತ ಬಳಸಲು ನಿರ್ಧರಿಸಿದ್ದೇವೆ ಎಂದು ಮಾತೆ ಗಂಗಾದೇವಿ ತಿಳಿಸಿದ್ದಾರೆ.
ಈ ಕುರಿತು ಭಾಗಲಕೋಟೆಯಲ್ಲಿ ಮಾತನಾಡಿದ ಮಾತೆ ಗಂಗಾದೇವಿ ಅವರು, ಕೋರ್ಟ್ ಆದೇಶದಂತೆ ಇನ್ಮುಂದೆ ವಚನಗಳಿಗೆ ಕೂಡಲಸಂಗಮದೇವ ಅಂಕಿತ ನಾಮ (ನಾಮಾಂಕಿತ) ಬಳಸುತ್ತೇವೆ ಎಂದಿದ್ದಾರೆ.
ಏನಿದು ನಾಮಾಂಕಿತ ವಿವಾದ?
ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಎಂದು ನಾಮಾಂಕಿತ ಇತ್ತು. ಆದರೆ 1996ರಲ್ಲಿ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಲಿಂಗೈಕ್ಯೆ ಮಾತೆ ಮಹಾದೇವಿ ಅವರು ನಾಮಾಂಕಿತ ಬದಲಾವಣೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ವಚನಗಳ ಸಂಶೋಧನೆಯಿಂದ ಮಾತೆ ಮಹಾದೇವಿ ರಚಿಸಿದ “ಬಸವ ವಚನ ದೀಪ್ತಿ” ಯಲ್ಲಿ ಕೂಡಲಸಂಗಮದೇವ ಎನ್ನುವ ಬದಲು ಲಿಂಗದೇವ ಎಂದು ಬದಲಾವಣೆ ಮಾಡಲಾಗಿತ್ತು.
ನಾಮಾಂಕಿತ ಬದಲಾವಣೆ ವಿಚಾರ ವಿವಾದಕ್ಕೆ ಕಾರಣವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಪರ ವಿರೋಧ ಚರ್ಚೆಗಳು ನಡೆದಿದ್ದವು. ಅಲ್ಲದೆ ನಾಮಾಕಿಂತ ಬದಲಾವಣೆ ವಿರುದ್ಧ ಬಸವಣ್ಣನವರ ಅನುಯಾಯಿಗಳು ಪ್ರತಿಭಟನೆ ಮಾಡಿದ್ದರು. ಮಾತೆ ಮಹಾದೇವಿಯವರು ತಮ್ಮ ಗುರುಗಳಾದ ಲಿಂಗಾನಂದ ಸ್ವಾಮೀಜಿಗಳ ಹೆಸರು ಬಳಸಲು ಬದಲಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಅಲ್ಲದೆ ಬಸವಧರ್ಮ ಪೀಠದಿಂದ ರಚಿಸುವ ಪುಸ್ತಕಗಳಲ್ಲಿ ಲಿಂಗದೇವ ಎಂದೇ ನಾಮಾಂಕಿತ ಬಳಸಲಾಗಿತ್ತು.
ನಾಮಾಂಕಿತ ಬದಲಾವಣೆ ವಿಚಾರದಲ್ಲಿ ಆಕ್ರೋಶ ಹೆಚ್ಚಾದ ಕಾರಣ, ಮಾತೆ ಮಹಾದೇವಿಯವರ ವಚನ ದೀಪ್ತಿ ಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. ಕೊನೆಗೆ ಹೈಕೋರ್ಟ್ ನಲ್ಲಿ ಕೂಡಲಸಂಗಮದೇವ ಎಂಬ ನಾಮಾಂಕಿತವನ್ನೇ ಬಳಸಬೇಕು ಎಂದು ಆದೇಶ ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಾತೆ ಮಹಾದೇವಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
2017ರಲ್ಲಿ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದಿತ್ತು. ಕೋರ್ಟ್ ಆದೇಶದ ಬಳಿಕವು ನಾಮಾಂಕಿತದ ಗೊಂದಲ ಹಾಗೆ ಉಳಿದಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಈಗಿನ ಪೀಠಾಧ್ಯಕ್ಷೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಅಲ್ಲದೆ ಮುಂದಿನ ಎಲ್ಲ ಗ್ರಂಥಗಳಲ್ಲಿ ಕೂಡಲಸಂಗಮದೇವ ಎಂಬ ನಾಮಾಂಕಿತವನ್ನೇ ಬಳಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಾಮಾಂಕಿತದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.