ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಹಾಗೂ ರಾಜ್ಯಾಡಳಿತದಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪದ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸತತವಾಗಿ ಟೀಕೆ ಮಾಡಿಕೊಂಡು ಬಂದಿದ್ದಾರೆ. ವಿಜಯೇಂದ್ರ ಅವರು ಕರ್ನಾಟಕದ ಸೂಪರ್ ಸಿಎಂ ಎಂಬ ಆರೋಪ ಕೂಡಾ ಹೊರಿಸಿದ್ದಾರೆ. ಸದ್ಯ, ಈ ಆರೋಪಕ್ಕೆ ಸಾಕ್ಷಿಯಾಗಿ ಯತ್ನಾಳ್ ಒಂದು ವಿಡಿಯೋವನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.
ʼಇಷ್ಟು ದಿನ ವಿಜಯೇಂದ್ರ ಸೂಪರ್ ಸಿ.ಎಮ್ ಎಂದು ನಾನು ಹೇಳಿದ್ದು ಇಂದು ವಿಜಯೇಂದ್ರನೆ ಒಪ್ಪಿಕೊಂಡಂತಾಗಿದೆ. ಯಡಿಯೂರಪ್ಪ ನವರ ರಕ್ತ ಸಂಬಂಧಿ, ವಿಜಯೇಂದ್ರ ಭಂಟ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಮರಿಸ್ವಾಮಿ ವಿಜಯೇಂದ್ರನ ಸಮ್ಮುಖದಲ್ಲೇ ವಿಜಯೇಂದ್ರ ಸೂಪರ್ ಸಿ.ಎಮ್ ಅಂತಾ ಹೇಳಿದ್ದು ವೇದಿಕೆಯಲ್ಲೇ ಇದ್ದ ವಿಜಯೇಂದ್ರ ಸಮ್ಮತಿ ಸೂಚಿಸಿದ್ದು, ಇಡೀ ರಾಜ್ಯದ ಜನತೆಯ ಮುಂದೆ ನನ್ನ ಹೇಳಿಕೆ ಸತ್ಯವಾಗಿ ಹೊರಹೊಮ್ಮಿದೆ.ʼ ಎಂದು ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಯತ್ನಾಳ್ ಹಂಚಿಕೊಂಡಿರುವ ವಿಡಿಯೋ ಪೀಣ್ಯ ಕೈಗಾರಿಕಾ ಸಂಘದ ಕಾರ್ಯಕ್ರಮವೊಂದಕ್ಕೆ ಸಂಬಂಧಪಟ್ಟದ್ದು, ಅದರಲ್ಲಿ ಬೆಂಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಅವರು ವಿಜಯೇಂದ್ರ ಅವರ ಸಮ್ಮುಖದಲ್ಲೇ ʼರಾಜ್ಯದ ಸೂಪರ್ ಸಿಎಂ ವಿಜಯೇಂದ್ರʼ ಅನ್ನುವುದು ಕೇಳಿಸುತ್ತದೆ.
ಸದ್ಯ ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಖಾತೆಯೂ ಹಂಚಿಕೊಂಡಿದೆ. ಟ್ವಿಟರಿನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, ವಿಜಯೇಂದ್ರ ಸೂಪರ್ ಸಿಎಂ, ಯಡಿಯೂರಪ್ಪ ಡಮ್ಮಿ ಸಿಎಂ ಎಂದು ಬರೆದುಕೊಂಡಿದೆ.
ವರ್ಗಾವಣೆ, ಗುತ್ತಿಗೆ, ಮಂತ್ರಿಗಿರಿ ಹಂಚಿಕೆ, ಖಾತೆ ಹಂಚಿಕೆ, ಅನುದಾನ ಬಿಡುಗಡೆ ಎಲ್ಲದರಲ್ಲೂ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ. ಅಭಿವೃದ್ಧಿ ಕಾರ್ಯ ಮಾಯವಾಗಿದೆ ಎಂದು ಆರೋಪಿಸಿದೆ. ಬಿಜೆಪಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ʼನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರವಲ್ಲವೇ?ʼ ಎಂದು ಪ್ರಶ್ನಿಸಿದೆ






