ಭಾರತದಾದ್ಯಂತ ಮುಸ್ಲಿಮರ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಸಂಘಟಿತ ದಾಳಿಗಳು ಏಕಾಏಕಿ ಉಲ್ಬಣಗೊಂಡಿದೆ. ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಲು ಹಾಗೂ ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಲು ಇಂತಹ ದಾಳಿಗಳು ನಡೆಸಲಾಗುತ್ತದೆ ಎಂಬುದಕ್ಕಿಂತ, ಅಲ್ಪಸಂಖ್ಯಾತರನ್ನು ವಶಪಡಿಸಿಕೊಳ್ಳುವ ಅಭಿವ್ಯಕ್ತಿ ಹಾಗೂ ಧಾರ್ಮಿಕ ಅಸಹಿಷ್ಣುತೆಯಿಂದ ಇಂತಹ ದಾಳಿಗಳು ನಡೆಯುವುದಾಗಿ ರಾಜಕೀಯಶಾಸ್ತ್ರಜ್ಞೆ ಝೋಯಾ ಹಸನ್ ಅಭಿಪ್ರಾಯ ಪಡುತ್ತಾರೆ.
2021ರ ಮಧ್ಯಂತರದಿಂದ ಹೆಚ್ಚಾದ ದಾಳಿಗಳನ್ನು ಗಮನಿಸಿದರೆ, ಅದು ಹಿಂದಿನ ದಾಳಿಗಳಿಗಿಂತ ಭಿನ್ನವಾಗಿ ಸಂಘಟಿತವಾಗಿ ಮಾಡಿದವುಗಳಾಗಿವೆ. ಸಾಮಾನ್ಯ ಮಾದರಿಯ ದಾಳಿಗೆ ಬದಲಾಗಿ ಇತ್ತೀಚಿನ ಘಟನೆಗಳು ಆಡಳಿತ ಪಕ್ಷದ ರಾಜಕೀಯ ಅವಶ್ಯಕತೆಗಳಿಗೆ ಅನುಗುಣವಾಗಿ, ಸಂಘಟಿತವಾಗಿ, ಕೇಂದ್ರೀಕೃತವಾಗಿ ಹೊಂದಿಕೊಂಡಿವೆ.
ಇಂತಹ ಸಂಘಟಿತ ದಾಳಿಯು ಸ್ಥಳೀಯ ಮಟ್ಟದಲ್ಲಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನು ಸೃಷ್ಟಿಸುವ ಸಲುವಾಗಿ ನಡೆಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂತಹ ದಾಳಿಗಳನ್ನು ಖಂಡಿಸುವವರೆಗೂ ಇದು ಮುಂದುವರೆಯುತ್ತದೆ. ಪ್ರಧಾನಿ ಕಾರ್ಯಾಲಯ ಒಂದು ಸೂಚನೆ ನೀಡಿದರೆ ಇಂತಹ ದಾಳಿಗಳು ಇಲ್ಲವಾಗಿಬಿಡುತ್ತವೆ. ಉದಾಹರಣೆಗೆ ಕುಂಭಮೇಳವನ್ನೇ ಗಮನಿಸಿ, ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿದ್ದ ನಡುವೆಯೂ ಯಾವುದೇ ಕಾರಣಕ್ಕೂ ಮೇಳದಿಂದ ಹಿಂದೆ ಸರಿಯದಿದ್ದ ಭಕ್ತಾದಿಗಳು ಕುಂಭಮೇಳ ಸ್ಥಘಿತಗೊಳಿಸುವಂತೆ ಪ್ರಧಾನಿ ಮನವಿ ಮಾಡಿದ ತಕ್ಷಣವೇ ತಮ್ಮ ಡೇರೆಗಳನ್ನು ಕಳಚಿ ಚದುರಿದ್ದು ನೆನಪಿಸಬಹುದು. ಅಂತಹದ್ದೇ ಒಂದು ಹೇಳಿಕೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ನೀಡಿದರೆ ಇದು ನಿಲ್ಲದೇ ಹೋಗುತ್ತದೆಯೇ?
ಒಟ್ಟಾರೆ,ಇಂತಹ ಪ್ರಚೋದನಕಾರಿ ಕೃತ್ಯಗಳು ಮತ್ತು ಹೇಳಿಕೆಗಳ ಹಿಂದಿನ ಉದ್ದೇಶವೆಂದರೆ ಸ್ಥಳೀಯ ಸಮುದಾಯಗಳಲ್ಲಿ ಧರ್ಮಗಳ ಬಗ್ಗೆ ತೀವ್ರ ಚರ್ಚೆಗಳನ್ನು ಹುಟ್ಟುಹಾಕುವುದು, ಅವುಗಳನ್ನು ವಿಭಜಿಸುವುದು ಕಡೆಯದಾಗಿ ಅವುಗಳನ್ನು ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ ಮತ ಬ್ಯಾಂಕ್ಗಳಾಗಿ ಪರಿವರ್ತಿಸುವುದು. ಉತ್ತರ ಪ್ರದೇಶದಲ್ಲಿ ಕೋಮು ಬೆಂಕಿಗೆ ಇಂಧನ ಸುರಿಯಲು ಯೋಗಿ ಆದಿತ್ಯನಾಥ ಈಗಾಗಲೇ ಆರಂಭಿಸಿದ್ದಾರೆ. ಮುಂಬರಲಿರುವ ಯುಪಿ ವಿಧಾನಸಭೆ ಚುನಾವಣೆಯು 80% ಮಂದಿಯ (ಹಿಂದೂಗಳ) ಹಾಗೂ 20% (ಮುಸ್ಲಿಮರ) ನಡುವಿನ ಹೋರಾಟವೆಂಬಂತೆ ಆದಿತ್ಯನಾಥ್ ಬಿಂಬಿಸಿದ್ದು ಇದಕ್ಕೆ ತಾಜಾ ಉದಾಹರಣೆ.
ದೇಶದ ಉನ್ನತ ಆಡಳಿತಗಾರರು ಈಗಾಗಲೇ ತಮ್ಮ ಪರಿವಾರವನ್ನು ತಮಗೆ ಅನುಕೂಲಕರ ವಾತಾವರಣ ನಿರ್ಮಿಸಲು, ರಾಜಕೀಯ ಲಾಭದ ಅಗತ್ಯಗಳಿಗೆ ಸಜ್ಜುಗೊಳಿಸಿಟ್ಟಿದ್ದಾರೆ. ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸಿಯಾದರೂ ಕಟ್ಟ ಕಡೆಗೆ ರಾಜಕೀಯ ಉದ್ದೇಶಗಳನ್ನು ಪೂರೈಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಹರಿದ್ವಾರ್ ಧರ್ಮ ಸಂಸದ್ನಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಬಳಿಕವೂ ಹತ್ಯಾಕಾಂಡಕ್ಕೆ, ಅಧಿಕೃತವಾಗಿ ಅನುಮತಿ ನೀಡಿದಂತೆ ಪ್ರಭುತ್ವ ಮೌನವಹಿಸಿ ಕುಳಿತಿರುವುದು, ಇತ್ತೀಚೆಗೆ ದೆಹಲಿಯಲ್ಲಿ ಯುವ ವಾಹಿನಿಯ ಕಾರ್ಯಕರ್ತರು ಸುದರ್ಶನ್ ಟಿವಿಯ ಎಡಿಟರ್ ಸಮ್ಮುಖದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಾಯಲೂ ಸಿದ್ದ, ಕೊಲ್ಲಲೂ ಸಿದ್ದ ಎಂದು ಪ್ರಮಾಣ ವಚನ ಸ್ವೀಕರಿಸಿರುವುದು, ಉತ್ತರದ ವಿವಿಧ ಅಖಾಡಾಗಳು ಮುಸ್ಲಿಮರ ವಿರುದ್ಧ ಹೋರಾಡಲು ಕೋರ್ ಕಮಿಟಿಗಳನ್ನು ರಚಿಸುವ ಮತ್ತು ಅವರ ವಿರುದ್ಧ ಸಶಸ್ತ್ರ ಹೋರಾಟಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿರುವುದು ಹಾಗೂ ಬುಲ್ಲೀ ಬಾಯ್ಯಂತಹ ಅಪ್ಲಿಕೇಶನ್ಗಳು ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡುವುದು ಮೊದಲಾದವುಗಳೆಲ್ಲಾ ಅದರ ಕಾರ್ಯತಂತ್ರದ ಭಾಗ.
ಈ ಬಹಿರಂಗ ದ್ವೇಷ ಮತ್ತು ಹಿಂಸಾಚಾರವು ಮುಸ್ಲಿಂ ವ್ಯಾಪರಿಗಳನ್ನು, ತರಕಾರಿ, ಬಿಸ್ಕತ್ತು ಮತ್ತು ಬಳೆ ಮಾರಾಟಗಾರರನ್ನು ವ್ಯಾಪಾರ ಮಾಡದಂತೆ ತಡೆಯುವ ಘಟನೆಗಳಿಗೆ ಕಾರಣವಾಗುತ್ತಿದೆ. ಮುಸ್ಲಿಂ ಅಂಗಡಿಗಳನ್ನು ಸಮುದಾಯ ಬಹಿಷ್ಕಾರಕ್ಕೆ ಒಳಪಡಿಸುವಂತೆ, ಶುಕ್ರವಾರದ ಸಾಮೂಹಿಕ ನಮಾಜ್ಗೆ ತಡೆ ನೀಡುವಂತೆ ಮಾಡಲು ಪ್ರೇರೇಪಿಸುತ್ತಿದೆ. ಕ್ರಿಶ್ಚಿಯನ್ ಹಕ್ಕುಗಳ ಸಂಸ್ಥೆ ಒದಗಿಸಿದ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ 2021 ರಲ್ಲಿ 486 ಸ್ಥಳಗಳಲ್ಲಿ ಕ್ರಿಸ್ಮಸ್ ಆಚರಣೆಗಳಿಗೆ ಅಡ್ಡಿಪಡಿಸಲಾಯಿತು, ಚರ್ಚ್ಗಳ ಮೇಲೆ ದಾಳಿ ನಡೆಸಲಾಯಿತು ಮತ್ತು ಧಾರ್ಮಿಕ ಪುಸ್ತಕಗಳನ್ನು ನಾಶಪಡಿಸಲಾಯಿತು. ಇಂತಹ ದಾಳಿಗಳು ಹಿಂದೆಂದೂ ಆಗಿರಲಿಲ್ಲ. ಅದಾಗ್ಯೂ, ಅಲ್ಪಂಖ್ಯಾತರ ಮೇಲಿನ ನಿರಂತರ ದಾಳಿಗೆ ದೇಶದ ಪ್ರಭಾವಿ ನಾಯಕರಾದ ಮೋದಿ, ಅಮಿತ್ ಷಾ ಯಾಕೆ ಮೌನವಹಿಸಿದ್ದಾರೆಂದರೆ, ಅವರಿಗೆ ದೇಶ ಕೋಮು ಧ್ರುವೀಕರಣಗೊಳ್ಳುವ ಅನಿವಾರ್ಯತೆ ಇದೆ.
ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನ, ಭಾರತದ ಆರ್ಥಿಕತೆ ಮೊದಲಾದವು ಮೋದಿ-ಷಾ ಜೋಡಿಯ ಕಂಗೆಡಿಸಿದೆ. ಕೇವಲ ಆರು ತಿಂಗಳಲ್ಲಿ ಬಿಜೆಪಿ ಆಡಳಿತ ಇರುವ 4 ರಾಜ್ಯಗಳ ಸಿಎಂ ಬದಲಾವಣೆ ಆಗಿದೆ. ಅತಿ ಹೆಚ್ಚು ವಿಧಾನಸಭೆ ಕ್ಷೇತ್ರ ಇರುವ ಉತ್ತರಪ್ರದೇಶದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಯೋಗಿ ಆದಿತ್ಯನಾಥ್ ಮಗ್ಗುಲ ಮುಳ್ಳಾಗಿದ್ದಾರೆ. ಇದರೆಲ್ಲದರ ನಡುವೆ ಮುಂಬರಲಿರುವ ಚುನಾವಣೆಯನ್ನು ಗೆಲ್ಲಲೇ ಬೇಕೆಂದರೆ ಹಿಂದೂ ಮತಗಳನ್ನು ಕ್ರೋಢೀಕರಿಸಿ, ಮತಬ್ಯಾಂಕ್ ಮಾಡಬೇಕಿದೆ.ಅದಕ್ಕಾಗಿ, ಕೋಮು ಧ್ರುವೀಕರಣವನ್ನು ವೇಗವಾಗಿ ಮಾಡಿಸುತ್ತಿದ್ದಾರೆ. ಹಾಗಾಗಿ ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಯನ್ನು ನಿಲ್ಲಿಸಲು ಸಾಧ್ಯವಿದ್ದರೂ, ಕನಿಷ್ಟ ಖಂಡನೆಯನ್ನೂ ವ್ಯಕ್ತಪಡಿಸುತ್ತಿಲ್ಲ.