ತುಮಕೂರು : ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ರನ್ನು ನೇಮಕ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡಿತಾ ಎಂಬ ಮಾತು ತುಮಕೂರು ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ.ಸೋಮಣ್ಣ ಪಕ್ಷಾಂತರ ಮಾಡ್ತಾರೆ ಎಂಬ ಚರ್ಚೆ ಕೂಡ ಜೋರಾಗಿ ಕೇಳಿ ಬಂದಿತ್ತು. ಪುತ್ರನಿಗೆ ರಾಜ್ಯ ಬಿಜೆಪಿ ಘಟಕದಲ್ಲಿ ಸೂಕ್ತ ಸ್ಥಾನ ಮಾನ ಸಿಗಬೇಕು ಹಾಗೂ ಎಂಎಲ್ಎ ಟಿಕೆಟ್ಗಾಗಿಯೂ ಪಕ್ಷದ ವರಿಷ್ಠರ ಎದುರು ವಿ.ಸೋಮಣ್ಣ ಬೇಡಿಕೆ ಇಟ್ಟಿದ್ದರು. ಇದೇ ವಿಚಾರವಾಗಿ ಪಕ್ಷದ ವರಿಷ್ಠರ ವಿರುದ್ಧ ವಿ.ಸೋಮಣ್ಣ ಅಸಮಾಧಾನಗೊಂಡಿದ್ದರು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸೋಮಣ್ಣಮ ಚಾಮರಾಜನಗರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉಪಸ್ಥಿತರಿದ್ದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಇದಾದ ಬಳಿಕ ಸಚಿವ ಸೋಮಣ್ಣರನ್ನು ದೆಹಲಿಗೆ ಕರೆಸಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ ಸೋಮಣ್ಣ ಜೊತೆಯಲ್ಲಿ ಮಾತುಕತೆ ನಡೆಸಿದ್ದರು .
ಈ ಎಲ್ಲದರ ನಡುವೆ ಇದೀಗ ಪ್ರಮುಖ ರಾಜಕೀಯ ಬೆಳವಣಿಗೆಯೊಂದು ಸಂಭವಿಸಿದ್ದು ಸೋಮಣ್ಣ ಪುತ್ರನಿಗೆ ರಾಜ್ಯ ಘಟಕದ ಬದಲು ಜಿಲ್ಲಾ ಘಟಕದಲ್ಲಿ ಸ್ಥಾನ ನೀಡುವ ಮೂಲಕ ಸೋಮಣ್ಣ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಮಾಡಿದೆ. ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ಅರುಣ್ಣ ಸೋಮಣ್ಣರನ್ನು ಆಯ್ಕೆ ಮಾಡುವ ಮೂಲಕ ವಿ. ಸೋಮಣ್ಣರ ಅಸಮಾಧಾನಕ್ಕೆ ಮುಲಾಮು ಹುಡುಕುವ ಕಾರ್ಯವನ್ನು ಬಿಜೆಪಿ ಮಾಡಿದೆ.
ಹೈಕಮಾಂಡ್ನ ಈ ನಡೆಯಿಂದ ಬಿಜೆಪಿಗೂ ಸಾಕಷ್ಟು ಲಾಭ ಸಿಗಲಿದೆ. ತುಮಕೂರು ನಗರ ಹಾಗೂ ಗುಬ್ಬಿ ಕ್ಷೇತ್ರಗಳಲ್ಲಿ ವೀರಶೈವ ಮತಗಳು ಪ್ರಮುಖ ವೋಟ್ ಬ್ಯಾಂಕ್ ಆಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಕೂಡ ಶುರುವಾಗಿತ್ತು. ತುಮಕೂರು ನಗರದ ಟಿಕೆಟ್ಗಾಗಿ ಇಬ್ಬರು ಹಾಗೂ ಗುಬ್ಬಿ ಬಿಜೆಪಿ ಟಿಕೆಟ್ಗಾಗಿ ನಾಲ್ವರ ನಡುವೆ ಪೈಪೋಟಿಯಿತ್ತು. ಇದೀಗ ಅರುಣ್ರನ್ನು ಜಿಲ್ಲಾ ಬಿಜೆಪಿ ಘಟಕಕ್ಕೆ ತಂದಿರುವ ಬಿಜೆಪಿ ಹೈಕಮಾಂಡ್ ನೀವೆಲ್ಲ ಇದೇ ರೀತಿ ಕಿತ್ತಾಡಿಕೊಳ್ಳುತ್ತಿದ್ದರೆ ಹೊಸ ಮುಖಕ್ಕೆ ಟಿಕೆಟ್ ನೀಡಬೇಕಾಗುತ್ತೆ ಅಂತಾ ಪರೋಕ್ಷ ಸಂದೇಶ ರವಾನಿಸಿದೆ ಎನ್ನಲಾಗ್ತಿದೆ.