
ವಿಜಯಪುರ: ವಕ್ಪ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಮರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ದಾರೆ. ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ಮಾಡಲಾಗಿದೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಸಮಾವೇಶ ಮಾಡಲಾಗಿದ್ದು, ಸಮಾವೇಶದಲ್ಲಿ ಜಿಲ್ಲೆಯ ಮೌಲ್ವಿಗಳು, ಮುತುವಲ್ಲಿಗಳು, ದರ್ಗಾ ಕಮಿಟಿಯವರು, ಖಬರ್ ಸ್ಥಾನ್ ಕಮಿಟಿ ಮುಖಂಡರು ಭಾಗಿಯಾಗಿದ್ದಾರೆ.
ವಿಜಯಪುರದ ಸಮಾವೇಶದಲ್ಲಿ ಮೌಲಾನಾ ಮಹಮ್ಮದ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮೋದಿ ನಿಮಗೆ ಪಾಠ ಕಲಿಸುತ್ತೇವೆ. 2014 ರಿಂದ ನಿಮ್ಮ ಎಲ್ಲ ರೆಕಾರ್ಡ್ ನಮ್ಮ ಬಳಿ ಇದೆ. ಸಿಎಎ ಕೂಡ ಪಾಸ್ ಮಾಡಲು ನಾವು ಬಿಡಲಿಲ್ಲ. ರೈತರ ಹೋರಾಟಕ್ಕೆ ಮುಸ್ಲಿಂಮರು ಬೆಂಬಲ ನೀಡಿದರು. ನೀವು ಮಾಡಿರೋ ಆ್ಯಕ್ಟ್ ವಾಪಸ್ ಪಡೆಯೋಕೆ ನಾವು ಹೋರಾಟ ಮಾಡುತ್ತೇವೆ. ವಕ್ಫ್ ಕಾಯ್ದೆ ನೀವು ವಾಪಸ್ ತಗೊಳ್ಳಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.

ಒಂದು ವೇಳೆ ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯದಿದ್ದರೆ ದೇಶದಲ್ಲಿ ಮುಸ್ಲಿಮರು ಹೋರಾಟ ಮಾಡಲಿದ್ದಾರೆ. ಧರ್ಮಕ್ಕಾಗಿ ನಾವು ಯಾವ ಹೋರಾಟಕ್ಕೂ ಸಿದ್ದವಾಗಿದ್ದೇವೆ. ದೇಶದ ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ಪಾರ್ಲಿಮೆಂಟ್ ಪಾಸ್ ಮಾಡುವ ಕಾಯ್ದೆ ಒಪ್ಪಬೇಕು ಎಂದು ಅಮಿತ್ ಶಾ ಹೇಳ್ತಾರೆ. ಆದರೆ ನಾವು ಇದನ್ನು ಒಪ್ಪಲ್ಲ. ನೀವು ಮತ್ತೆ ಇದನ್ನ ಪಾರ್ಲಿಮೆಂಟ್ನಲ್ಲಿ ತರಬೇಕು. ಮೋದಿ ಅವಧಿಯಲ್ಲಿ ಒಂದೇ ಒಂದು ಮುಸ್ಲಿಂ ಪರವಾದ ಕಾನೂನು ಮಾಡಿಲ್ಲ. ವಕ್ಫ್ ಬಿಲ್ ತರುವ ಮೊದಲು ಯಾವತ್ತಾದರೂ ಮುಸ್ಲಿಮರನ್ನ ಕೇಳಿದ್ದಿರಾ..? ಜೆಪಿಸಿ ಕಮಿಟಿ ಸದಸ್ಯರನ್ನ ಮಾತನ್ನು ಮಾತ್ರ ಕೇಳಿದ್ದೀರಿ ಎಂದು ಟೀಕಿಸಿದ್ದಾರೆ.
ಈ ಕಾಯ್ದೆ ಮಾಡಬೇಡಿ ಎಂದು ಶೇಕಡ 99 ರಷ್ಟು ಜನ ಬೇಡ ಅಂದ್ರು. ಆದರೂ ಯಾಕೆ ತಿದ್ದುಪಡಿ ಮಾಡಿದ್ದಿರಾ..? ಜೆಪಿಸಿ ಸಹ ಮುಸ್ಲಿಮರನ್ನ ಭೇಟಿ ಮಾಡದೆ ವರದಿ ನೀಡಿದೆ. ನೀವು ಈ ಕಾನೂನು ವಾಪಸ್ ಪಡೆಯಲೇಬೇಕು. ನಾವು ಯಾವುದೇ ತ್ಯಾಗಕ್ಕೂ ಸಿದ್ದವಾಗಿದ್ದೇವೆ. ಈ ಸರ್ಕಾರದಲ್ಲಿರುವರಿಗೆ ಬುದ್ದಿಮಟ್ಟ ಕಡಿಮೆ ಇದೆ. ಕರ್ನಾಟಕದಲ್ಲಿ ಮುಸ್ಲಿಂ ಅಲ್ಲದವರು ಕೂಡಾ ಈ ಕಾಯ್ದೆ ವಿರೋಧಿಸಿದ್ದಾರೆ. ದೇಶದ ಗಲ್ಲಿ ಗಲ್ಲಿಯಲ್ಲಿ ಮುಸ್ಲಿಂಮರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಮುಸ್ಲಿಮರು ಅಲ್ಲದವರನ್ನೂ ನಾವು ನಮ್ಮ ಜೊತೆಗೆ ಕರೆದುಕೊಂಡು ಹೋಗಬೇಕಿದೆ ಎಂದು ಕರೆ ನೀಡಿದ್ದಾರೆ.
ದೆಹಲಿ ಮುಸ್ಲಿಂ ಮುಖಂಡ ಮೌಲಾನಾ ಅಬು ತಾಲಿಬ್ ರೆಹಮಾನಿ ಮಾತನಾಡಿ, ದೇಶದಲ್ಲಿ ಅಲ್ಲಾನನ್ನು ನಂಬುವ ಎಲ್ಲರನ್ನೂ ನಾವು ಮುಸ್ಲಿಂ ಎನ್ನುತ್ತೇವೆ. ಅವರು ಯಾವುದೇ ಧರ್ಮದವರು ಇರಲಿ. ಅಲ್ಲಾ ನಂಬಿದರವರು ಎಲ್ಲರು ಮುಸ್ಲಿಮರು. ದೇಶದಲ್ಲಿ ಹೆಸರು ಬದಲಾವಣೆ ಜೋರಾಗಿ ನಡೆಯುತ್ತಿದೆ. ನಮಗೆ ಅದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಮುಸ್ಲಿಮರು ಈ ದೇಶವನ್ನು ಆಳಿದರು ಸಹ ಎಂದಿಗೂ ದೇಶದ ಹೆಸರು ಬದಲಾವಣೆ ಮಾಡಿಲ್ಲ. ಹಜರತ್ ನರೇಂದ್ರ ಮೋದಿ ಸಾಬ್ ಎಂದು ವ್ಯಂಗ್ಯವಾಡಿದ ತಾಲಿಬ್ ರೆಹಮಾನಿ. 2014 ರಿಂದ ದೇಶದಲ್ಲಿ ಹೃದಯಗಳನ್ನ ಒಡೆದು ಹಾಕಲಾಗುತ್ತಿದೆ ಎಂದಿದ್ದಾರೆ.

ಪಹಲ್ಗಾಮ್ ದಾಳಿಗೆ ಉತ್ತರ ನೀಡಲು ಆಗದಿದ್ದರೆ ನಮಗೆ ಹೇಳಿ, ನಾವು ಉತ್ತರ ನೀಡುತ್ತೇವೆ ಎಂದಿರುವ ತಾಲಿಬ್ ರೆಹಮಾನಿ, ಒಂದು ಸಲ ನಮಗೆ ಅವಕಾಶ ಕೊಟ್ಟು ನೋಡಿ ಪಾಕಿಸ್ತಾನಕ್ಕೆ ಪಾಠ ಕಲಿಸುತ್ತೇವೆ. ಇಸ್ಲಾಂನಲ್ಲಿ ದೇಶವನ್ನ ಪ್ರತಿನಿಧಿಸುವುದನ್ನ ಕಲಿತಿದ್ದೇವೆ. ಇಂದು ದೇಶದಲ್ಲಿ ದೇಶಭಕ್ತಿಯ ಹೆಸರಿನಲ್ಲಿ ವಸ್ತುಗಳನ್ನ ಮಾರಾಟ ಮಾಡಲಾಗ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಂ ಒಂದಾಗಿರಿ. ಹೆಂಡತಿ, ಮಕ್ಕಳಿಲ್ಲದ ಕೆಲವರಿಗೆ ಪ್ರೀತಿ ಅಂದರೇನು ಗೊತ್ತಿಲ್ಲ. ದೇಶದಲ್ಲಿ ಮೊದಲ ಮಸ್ಜಿದ್ ಕಟ್ಟಿದ್ದು ಒಬ್ಬ ಹಿಂದೂ ರಾಜ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಾರೆ ಅಖಂಡ ಭಾರತ ಕಟ್ಟೋಣ ಅಂತಾ. ಆದರೆ ಶರಬತ್ ಮಾರಾಟ ಮಾಡುವವರಿಗೆ ದೇಶದ ಅಖಂಡತೆ ಬಗ್ಗೆ ಏನು ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.