ಪ್ರಪಂಚದ ವಿವಿಧೆಡೆ ಹೊಸ ಅಲೆ ಬರಲಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆಯ ನಡುವೆಯೇ, ಭಾರತದಲ್ಲಿ ಇಂಥ ಸಾಧ್ಯತೆ ಕ್ಷೀಣವಾಗಿದೆ ಎಂದು ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ದಿಲ್ಲಿಯ ಏಮ್ಸ್ ತಜ್ಞರು ಹೇಳಿದ್ದಾರೆ.
ಹೌದು, ಯುರೋಪ್ ಹಾಗೂ ಮಧ್ಯ ಏಷ್ಯಾದಲ್ಲಿ ಕೋವಿಡ್ ಸಾಂಕ್ರಾಮಿಕದ ತೀವ್ರತೆ ಅಧಿಕವಾಗಿದೆ. ಮುಂದಿನ ಫೆಬ್ರವರಿವರೆಗೆ ಇಲ್ಲಿ 5 ಲಕ್ಷ ಜನರು ಸಾವಿಗೀಡಾಗಬಹುದು. ಹೊಸ ಅಲೆ ಜಗತ್ತನ್ನು ಬಾಧಿಸಬಹುದು’ ಎಂದು ಗುರುವಾರ WHO ಎಚ್ಚರಿಕೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಏಮ್ಸ್ನ ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಡಾ| ಸಂಜಯ್ ಕೆ. ರಾಯ್, ‘ಹೆಚ್ಚು ಜನರು ಸೋಂಕಿಗೆ ತುತ್ತಾದರೆ, ಕೋವಿಡ್ನ ಮತ್ತೊಂದು ಅಲೆಯ ಸಂಭವನೀಯತೆ ಕಡಿಮೆಯಾಗುತ್ತದೆ. ಸ್ವಾಭಾವಿಕವಾದ ಸೋಂಕಿನಿಂದಾಗಿ ಜನರಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಲಸಿಕೆಯೂ ಸಹ ಸೋಂಕಿನ ತೀವ್ರತೆ ಹಾಗೂ ಸಾವನ್ನು ಕಡಿಮೆ ಮಾಡಿದೆ. ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಸೋಂಕಿನ ತೀವ್ರತೆ ಈಗ ಹೆಚ್ಚಾಗಿರಬಹುದು. ಆದರೆ ಫೆಬ್ರವರಿ ವೇಳೆಗೆ ಅದು ಕಡಿಮೆಯಾಗಲಿದೆ. ಭಾರತವೂ ಸೇರಿದಂತೆ ಎಲ್ಲಾ ಕಡೆಯೂ ಇದೇ ರೀತಿ (2ನೇ ಅಲೆ ವೇಳೆ) ನಡೆದಿದೆ. ಹೆಚ್ಚು ಜನರು ಸೋಂಕಿಗೆ ಒಳಗಾದ ಕೂಡಲೇ, ಸೋಂಕಿನ ಪ್ರಮಾಣ ಇಳಿಮುಖವಾಗುತ್ತದೆ’ ಎಂದಿದ್ದಾರೆ.
‘ಮುಂದಿನ ಫೆಬ್ರವರಿವರೆಗೆ 5 ಲಕ್ಷ ಜನರು ಸಾವಿಗೀಡಾದರೆ, ಅವರ ಸಾವನ್ನು ತಡೆಯಲು ಕೋವಿಡ್ ಲಸಿಕೆಗೂ ಸಾಧ್ಯವಾಗದಿದ್ದರೆ ಡಬ್ಲ್ಯುಎಚ್ಒ ಜಾಗತಿಕಮಟ್ಟದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿದೆ. 1.5 ವರ್ಷವಾದರೂ ಸೋಂಕಿನ ಮೂಲವನ್ನು ಕಂಡುಹಿಡಿಯಲು ಡಬ್ಲ್ಯೂಎಚ್ಒಗೆ ಸಾಧ್ಯವಾಗಿಲ್ಲ. ಜನರಲ್ಲಿ ಸ್ವಾಭಾವಿಕ ರೋಗನಿರೋಧಕ ಶಕ್ತಿ ಮೂಡಿದ ನಂತರವೂ ವೈರಸ್ ಹಾನಿ ಮಾಡುತ್ತದೆ ಎನ್ನುವಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.