ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಆಡಳಿತದಲ್ಲಿ ಭಿನ್ನಮತ ಬಹಿರಂಗವಾಗಿದ್ದು, ಬಿಸಿಐ ಸಹ-ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮಿಶ್ರಾ ಅವರಿಗೆ ಪತ್ರ ಬರೆದಿರುವ ಸದಾಶಿವ ರೆಡ್ಡಿ, 15 ದಿನಗಳೊಳಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಸಿಐ ಅನ್ನು ವೈಯಕ್ತಿಕ ಸಂಸ್ಥೆಯಂತೆ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಸಿಐಗೆ ಸೇರಿದ ಸುಮಾರು ₹150 ಕೋಟಿ ಹಣವನ್ನು ‘BCI Trust PEARL First’ ಎಂಬ ಟ್ರಸ್ಟ್ಗೆ ವರ್ಗಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸದಾಶಿವ ರೆಡ್ಡಿ ಆರೋಪಿಸಿದ್ದಾರೆ. ಈ ಕ್ರಮಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಹಣ ವರ್ಗಾವಣೆ ಮಾಡಲಾಗಿದೆ. 2020ರಲ್ಲಿ ಮೂಲ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್’ ಅನ್ನು ನಿಷ್ಕ್ರಿಯಗೊಳಿಸಿ ಹೊಸ ಟ್ರಸ್ಟ್ ರಚಿಸಲಾಗಿದೆ ಎಂಬ ಆರೋಪವೂ ಪತ್ರದಲ್ಲಿದೆ. ಹೊಸ ಟ್ರಸ್ಟ್ಗೆ ಅಧ್ಯಕ್ಷರು ತಮಗೆ ಆಪ್ತರಾದವರನ್ನು ಟ್ರಸ್ಟಿಗಳಾಗಿ ನೇಮಿಸಿಕೊಂಡಿದ್ದಾರೆ ಎಂದು ಸದಾಶಿವ ರೆಡ್ಡಿ ಆರೋಪಿಸಿದ್ದಾರೆ.

ಕಾನೂನು ಕಾಲೇಜುಗಳಿಂದ ಹಣ ವಸೂಲಿ ಆರೋಪ
ಬಿಸಿಐ ಮಾನ್ಯತೆ ಮತ್ತು ಮಾನ್ಯತೆ ನವೀಕರಣದ ಸಂದರ್ಭದಲ್ಲಿ ದೇಶದ ಕೆಲವು ಕಾನೂನು ಕಾಲೇಜುಗಳಿಂದ ಹೆಚ್ಚಿನ ಮೊತ್ತದ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಿಯಂತ್ರಕ ಸಂಸ್ಥೆಯೇ ತನ್ನ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಂದ ಹಣ ಪಡೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಬಿಸಿಐ ಹಾಗೂ ಅದರ ಶೈಕ್ಷಣಿಕ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲೂ ನಿಯಮ ಉಲ್ಲಂಘನೆಯಾಗಿದೆ ಎಂದಿರುವ ಸದಾಶಿವ ರೆಡ್ಡಿ ಅಧಿಕೃತವಾಗಿ ಹುದ್ದೆಗಳ ಜಾಹೀರಾತು ನೀಡದೆ ಹಾಗೂ ಅರ್ಹತಾ ಪಟ್ಟಿ ಪ್ರಕಟಿಸದೆ, ಅಧ್ಯಕ್ಷರಿಗೆ ಆಪ್ತರಾದವರು ಮತ್ತು ಕುಟುಂಬದ ಸದಸ್ಯರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂದು ದೂರಿದ್ದಾರೆ.

ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಬಿಸಿಐನ ಸಂಪೂರ್ಣ ಸಭೆ ಕರೆಯಬೇಕು, ಅನುಮಾನಾಸ್ಪದ ಪಾವತಿಗಳನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸ್ವತಂತ್ರ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಸದಾಶಿವ ರೆಡ್ಡಿ ಆಗ್ರಹಿಸಿದ್ದಾರೆ.







