ದೈಹಿಕ ಅನಾರೋಗ್ಯದಂತೆಯೇ ಮನೋರೋಗವೂ ಆರೈಕೆ ಮತ್ತು ಚಿಕಿತ್ಸೆ ಬಯಸುವ ಸಾಮಾನ್ಯ ರೋಗ ಎಂಬುವುದನ್ನು ವಿಜ್ಞಾನ, ವಿಚಾರವಾದ ಇಷ್ಟು ಮುಂದುವರಿದಿರುವ 21 ನೇ ಶತಮಾನದಲ್ಲೂ ಜನ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗಿರುವಾಗ 70ರ ದಶಕದಲ್ಲಿ ತನ್ನ ಮಗನಿಗಿರುವ ಮಾನಸಿಕ ಅನಾರೋಗ್ಯ ಪತ್ತೆಯಾದಮೇಲೆ ಅಂಥವರಿಗೆ ಸಮಾಜದಲ್ಲಿ ಎಲ್ಲೂ ಸರಿಯಾದ ನೆಲೆ ಸಿಗದು ಎಂದು ಅರ್ಥ ಮಾಡಿಕೊಂಡು ಮಾನಸಿಕ ಅನಾರೋಗ್ಯ ಹೊಂದಿರುವವರಿಗೆಂದೇ ವಸತಿ ಗೃಹ ಆರಂಭಿಸಿದ ದಂಪತಿಗಳ ಅಪರೂಪದ ಕಥೆ ಇದು.
1969 ರಲ್ಲಿ ಸುಲೋಚನಾ ಮತ್ತು ನೀರಜ್ ಬೇರು ದಂಪತಿಗೆ ತಮ್ಮ ಮಗನಿಗೆ ಮಾನಸಿಕ ಅಸಾಮರ್ಥ್ಯ ಇರುವುದು ಅರಿವಿಗೆ ಬರುತ್ತದೆ. ಅದು ಮಾನಸಿಕ ಆರೋಗ್ಯದ ಬಗ್ಗೆ ವಿಪರೀತ ತಪ್ಪು ಕಲ್ಪನೆಗಳಿದ್ದ ಸಮಯ. ಮಾನಸಿಕ ಅಸ್ವಸ್ಥತೆ ಇರುವವರು ಮನೆಯಲ್ಲಿರುವುದೇ ಸಾಮಾಜಿಕ ಕಳಂಕ ಅಂತ ಅಂದುಕೊಂಡಿದ್ದ ಕಾಲ ಅದು. ಆವತ್ತು ಇಂತಹ ವ್ಯಕ್ತಿಗಳ, ರೋಗದ ವಿರುದ್ಧ ಜಾಗೃತಿಯ ಕೊರತೆ ಇತ್ತು. ಹಾಗಾಗಿ ಸುಲೋಚನ ಅವರ ಮಗನಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ.
ಇದು ಮುಂದುವರಿದು ಮಗನನ್ನು ಶಾಲೆಗೆ ಸೇರಿಸುವಲ್ಲೂ ತೊಂದರೆಯಾಯಿತು. ತನ್ನ ಮಗನನ್ನು ಅಂಗವಿಕಲ ಮಕ್ಕಳ ಶಾಲೆಗೆ ಸೇರಿಸಲು ಸುಲೋಚನ ಪ್ರಯತ್ನಿಸಿದ್ದರು. ಆದರೆ ಬಹುತೇಕ ಸಂಸ್ಥೆಗಳು ಅವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಒಪ್ಪಿದ ಸಂಸ್ಥೆಗಳು ಸಹ ಕೆಲವು ತಿಂಗಳುಗಳ ನಂತರ ಶಾಲೆ ತೊರೆಯುವಂತೆ ಕೇಳಿಕೊಳ್ಳುತ್ತಿತ್ತು. “ಅವನು ಆಗಾಗ್ಗೆ ತನ್ನ ಸಹಪಾಠಿಗಳ ಪುಸ್ತಕಗಳನ್ನು ಹರಿದು ಹಾಕುತ್ತಿದ್ದನು. ಇದರಿಂದ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು” ಎನ್ನುತ್ತಾರೆ ಸುಲೋಚನ. ಅಲ್ಲದೆ ಅದೇ ಹೊತ್ತಿಗೆ ಅವನ ನಡವಳಿಕೆಯು ಅವನ ಅಣ್ಣನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು.
ಕೊನೆಗೆ ಶಿಕ್ಷಕರು ಹಾಗೂ ಆಕೆಯ ಹತ್ತಿರದ ಇತರರು ಆಕೆಯ ಮಗನನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಲು ಸಲಹೆ ನೀಡಿದರು. ಬೇರೆ ಯಾವುದೇ ಪರ್ಯಾಯವನ್ನು ಕಾಣದ ಅವರು ಅಥವಾ ಅತ್ಯಂತ ನೋವಿನಿಂದ ಇಂಥದ್ದೊಂದು ಹೆಜ್ಜೆ ಇಡಲು ನಿರ್ಧರಿಸಿದರು.
ಆದರೆ ಮಾನಸಿಕ ಆಸ್ಪತ್ರೆಗೆ ಸೇರಿಸುವುದೇ ಒಂದು ದೀರ್ಘ ಪ್ರಕ್ರಿಯೆ ” ಮೊದಲು ಅವನ ಸ್ಥಿತಿಯ ಬಗ್ಗೆ ಆಸ್ಪತ್ರೆಗೆ ಮಾಹಿತಿ ಸಲ್ಲಿಸಬೇಕಿತ್ತು. ನಂತರ ಪೊಲೀಸರಿಗೆ ಮತ್ತು ಕೋರ್ಟಿಗೂ ತಿಳಿಸಬೇಕು. ರೋಗಿಗಳ ಮಾನಸಿಕ ಸ್ಥಿತಿಯ ಬಗ್ಗೆ ಕೋರ್ಟಿಗೆ ವಿವರಣೆಯ ಅಗತ್ಯವಿರುತ್ತದೆ. ಆನಂತರವಷ್ಟೇ ಮಾನಸಿಕ ಆಸ್ಪತ್ರೆಗೆ ದಾಖಲಿಸಲು ಅನುಮತಿ ದೊರಕಿತು. ಆದರೆ ಆಸ್ಪತ್ರೆಗಳಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇರಿಸಲಾಗುವುದಿಲ್ಲ” ಎನ್ನುತ್ತಾರೆ ಸುಲೋಚನ. ಮತನ ಮಾನಸಿಕ ಅನಾರೋಗ್ಯದಿಂದ ದಂಪತಿ ವರ್ಷಗಟ್ಟಲೆ ನರಳಿದ್ದಾರೆ ಎಂದು ನೆನಪಿಸಿಕೊಳ್ಳುವ ಸುಲೋಚನಾ “ವೈದ್ಯರು ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆಗಳನ್ನು ನೀಡುತ್ತಾರೆ ಮತ್ತು ಕಾನೂನಿನ ಪ್ರಕಾರ ಅವನನ್ನು ಬಿಡುಗಡೆ ಮಾಡುತ್ತಾರೆ. ಆದರೆ ಅವನ ಮಾನಸಿಕ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಅಂತಿಮವಾಗಿ, ನಮ್ಮ ಮಗ ಎಂದಿಗೂ ಗುಣವಾಗುವುದಿಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಂಡೆವು ”ಎಂದು ‘ದಿ ಬೆಟರ್ ಇಂಡಿಯಾ’ಗೆ ತಿಳಿಸಿದ್ದಾರೆ.
“ಮಾನಸಿಕ ವಿಕಲಾಂಗ ಮಕ್ಕಳನ್ನು ಹೊಂದಿರುವ ಪೋಷಕರೊಂದಿಗೆ ಸಂವಹನ ನಡೆಸುವಾಗ, ನಮ್ಮಂತೆಯೇ ಅನೇಕ ಕುಟುಂಬಗಳು ಅದೇ ಸಂಕಟವನ್ನು ಅನುಭವಿಸುತ್ತಿವೆ ಎಂಬುವುದು ನಮಗೆ ತಿಳಿದು ಬಂತು. ಅನೇಕರು ಔಷಧಿಗಳನ್ನು ಅಥವಾ ಮೂಲಭೂತ ಚಿಕಿತ್ಸೆಯನ್ನೂ ಪಡೆಯಲು ಸಾಧ್ಯವಾಗಿರಲಿಲ್ಲ”ಎಂದು ಅವರು ಹೇಳುತ್ತಾರೆ.
ಸುಲೋಚನಾ ಮತ್ತು ನೀರಜ್ ನಂತರ ತಮ್ಮ ಮಗ ಮತ್ತು ಇತರ ಮಕ್ಕಳಿಗಾಗಿ ಪುಣೆ ಬಳಿಯ ಅವರದೇ ಮಾಲೀಕತ್ವದ ಬಿಡಿಭಾಗಗಳ ಅಂಗಡಿಯಲ್ಲಿ ವಸತಿ ಗೃಹವನ್ನು ಪ್ರಾರಂಭಿಸಲು ನಿರ್ಧರಿಸಿದರು. ತಮ್ಮ ಮಗ ಸೇರಿದಂತೆ ಐದು ಮಕ್ಕಳೊಂದಿಗೆ ಆಳಂದಿಯಲ್ಲಿ ಸಣ್ಣ ಕೇಂದ್ರವನ್ನು ಪ್ರಾರಂಭಿಸಿದರು. “ನಾವು ನನ್ನ ಗಂಡನ ಉಳಿತಾಯವನ್ನು ಬಳಸಿಕೊಂಡು ಸಣ್ಣ ಆಸ್ತಿಯನ್ನು ಬಾಡಿಗೆಗೆ ಪಡೆದು ಪೀಠೋಪಕರಣಗಳು, ಗ್ಯಾಸ್ ಸ್ಟೌವ್ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊಂದಿರುವ ಮನೆಯನ್ನು ಸ್ಥಾಪಿಸಿದೆವು. ಆದರೆ ನೆರೆಹೊರೆಯವರು ನಮ್ಮನ್ನು ಸ್ವೀಕರಿಸಲಿಲ್ಲ ಮತ್ತು ಮಕ್ಕಳು ಹೊರಗೆ ಹೋಗಬೇಕಾಯಿತು” ಎಂದು ಅವರು ಹೇಳುತ್ತಾರೆ.
1989 ರಲ್ಲಿ, ಸುಲೋಚನಾ ಅವರು ಔಪಚಾರಿಕವಾಗಿ ‘ಬೇರು ಮತಿಮಂಡ್’ ಪ್ರತಿಷ್ಠಾನವನ್ನು ಸ್ಥಾಪಿಸಲು ಮಕ್ಕಳೊಂದಿಗೆ ಪುಣೆಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಬಂಗಲೆಯನ್ನು ಬಾಡಿಗೆಗೆ ಪಡೆದರು ಮತ್ತು ನಾಲ್ಕು ವರ್ಷಗಳ ಕಾಲ ಇದ್ದರು. ಆದರೆ ವಿದೇಶದಲ್ಲಿ ನೆಲೆಸಿರುವ ಜಮೀನಿನ ಒಡೆಯರೊಂದಿಗೆ ಅವರು ಹಿಂದಿರುಗಿದಾಗ ಆಸ್ತಿಯನ್ನು ಬಿಟ್ಟುಕೊಡುವ ಒಪ್ಪಂದ ಮಾಡಿಕೊಂಡಿದ್ದರು. ಆ ಹೊತ್ತಿಗೆ ಅವರ ಬಳಿ 25 ಮಕ್ಕಳಿದ್ದರು ಮತ್ತು ಅವರ ಹೆಚ್ಚಿನ ಪೋಷಕರು ಮುಂಬೈನಲ್ಲಿ ವಾಸಿಸುತ್ತಿದ್ದರು.
“ಪೋಷಕರಿಗೆ ತಮ್ಮ ಮಕ್ಕಳನ್ನು ಭೇಟಿಯಾಗಲು ಕಷ್ಟವಾಗುತ್ತಿತ್ತು. ಹಾಗಾಗಿ ಮುಂಬೈ ಸಮೀಪದ ಸ್ಥಳಕ್ಕೆ ತೆರಳುವಂತೆ ಸೂಚಿಸುತ್ತಿದ್ದರು. ನಮಗೆ ಅನುಕೂಲಕ್ಕಾಗಿ ಪುಣೆ ಮತ್ತು ಮುಂಬೈ ನಡುವಿನ ಭೂಮಿ ಬೇಕಿತ್ತು, ಆದರೆ ನಾವು ಅದನ್ನು ಪಡೆಯಲು ಸಾಧ್ಯವಾಗಲಿಲ್ಲ” ಎನ್ನುತ್ತಾರೆ ಸುಲೋಚನ.
1995ರಲ್ಲಿ ಸುಲೋಚನಾ ಮತ್ತು ನೀರಜ್ ಅವರು ಬದ್ಲಾಪುರದಲ್ಲಿ ಸರ್ಕಾರದಿಂದ 2.5 ಎಕರೆ ಜಮೀನನ್ನು ನವೀಕರಣದ ಆಧಾರದ ಮೇಲೆ 20 ವರ್ಷಗಳ ಕಾಲ ಗುತ್ತಿಗೆ ಪಡೆದಿದ್ದರು.”ರೋಗಿಗೆ ಚಿಕಿತ್ಸೆ ನೀಡುವ ಮತ್ತು ಪುರುಷರು ಹಾಗೂ ಮಹಿಳೆಯರಿಗೆ ಖಾಸಗಿ ಸ್ಥಳಗಳನ್ನು ರೂಪಿಸುವ ಪ್ರತಿಯೊಂದು ಅಂಶವನ್ನು ವಿನ್ಯಾಸಗೊಳಿಸಿದ ನನ್ನ ಪತಿ ಈ ಕೇಂದ್ರವನ್ನು ರೂಪಿಸಿದರು. ಪ್ರತ್ಯೇಕ ಅಡಿಗೆಮನೆಗಳು ಮತ್ತು ಆಶ್ರಯ ಮನೆಯ ಇತರ ಸೌಕರ್ಯದ ಅಂಶಗಳನ್ನು ಸಹ ನೀರಜ್ ರೂಪಿಸಿದ್ದರು ” ಎಂದು ಅವರು ಹೇಳುತ್ತಾರೆ.
ಪತಿ ನಿಧನರಾಗಿ ಹತ್ತು ವರ್ಷಗಳಾಗಿದ್ದು, ಸುಲೋಚನಾ ಏಕಾಂಗಿಯಾಗಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರ ಹಿರಿಯ ಮಗ ಪುಣೆಯ ಅಂಗಡಿಯನ್ನು ನಿರ್ವಹಿಸುತ್ತಿದ್ದರು ಮತ್ತು ಅಗತ್ಯ ಬಂದಾಗ ಆಶ್ರಯ ಮನೆಗೆ ಸುಲೋಚನಾಗೆ ಸಹಾಯ ಮಾಡುತ್ತಿದ್ದರು. “ಆದರೆ ಅವರು 2021 ರಲ್ಲಿ ನಿಧನರಾದರು, ಮತ್ತು ಈಗ ನಾನು ಮಾತ್ರ ಸಂಸ್ಥೆಯನ್ನು ನಡೆಸುತ್ತಿದ್ದೇನೆ” ಎಂದು ಸುಲೋಚನಾ ಹೇಳುತ್ತಾರೆ.
ಅದರ ಕಾರ್ಯನಿರ್ವಹಣೆಯ ಬಗ್ಗೆ ಮಾತನಾಡುತ್ತಾ, ಸುಲೋಚನಾ ಹೇಳುತ್ತಾರೆ, “ಜನ ತಮ್ಮ ಪ್ರೀತಿಪಾತ್ರರನ್ನು ಆಶ್ರಯ ಮನೆಯಲ್ಲಿ ಆರೈಕೆಗೆ ಸೇರಿಸಿಕೊಳ್ಳುವ ಬಗ್ಗೆ ವಿಚಾರಿಸುತ್ತಾರೆ. ಆಸಕ್ತರು ಸ್ಥಳಕ್ಕೆ ಭೇಟಿ ನೀಡಿ ರೋಗಿಗಳಿಗೆ ನೀಡುವ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರು ಪ್ರವೇಶದ ಸಮಯದಲ್ಲಿ ಫಾರ್ಮ್ ಅನ್ನು ಭರ್ತಿ ಮಾಡುತ್ತಾರೆ ಮತ್ತು ಒಪ್ಪಂದಕ್ಕೆ ಸಹಿ ಹಾಕುತ್ತಾರೆ. 70,000 ರೂಪಾಯಿಗಳ ಮರುಪಾವತಿಸಲಾಗದ ದೇಣಿಗೆಯನ್ನು ಪಡೆಯಲಾಗುತ್ತದೆ” ಎನ್ನುತ್ತಾರೆ.
ಇದಲ್ಲದೆ, ದೈನಂದಿನ ವೆಚ್ಚಗಳನ್ನು ಪೂರೈಸಲು ರೋಗಿಯ ಸಂಬಂಧಿಕರಿಗೆ ಮಾಸಿಕ 15,500 ರೂ ಶುಲ್ಕವನ್ನು ವಿಧಿಸಲಾಗುತ್ತದೆ. “ಔಷಧದ ವೆಚ್ಚವು ಪ್ರತಿ ರೋಗಿಗೆ ಭಿನ್ನವಾಗಿರುತ್ತದೆ ಮತ್ತು ಇದನ್ನು ಕುಟುಂಬದವರೇ ಪೂರೈಸುತ್ತಾರೆ. ಆಶ್ರಯವು ಆಹಾರ, ಜೀವನ ಮತ್ತು ಇತರ ಆರೋಗ್ಯ ವೆಚ್ಚಗಳನ್ನು ನೋಡಿಕೊಳ್ಳುತ್ತದೆ, ಇದರಲ್ಲಿ ಮಾಸಿಕ ವೈದ್ಯಕೀಯ ತಪಾಸಣೆ ಮತ್ತು ಮನೋವೈದ್ಯರಿಂದ ಸಾಪ್ತಾಹಿಕ ಸಮಾಲೋಚನೆಗಳು ಸೇರಿವೆ” ಎಂದು ಅವರು ಹೇಳುತ್ತಾರೆ.ರೋಗಿಗಳ ಫಿಸಿಯೋಥೆರಪಿ ಮತ್ತು ಇತರ ದೈನಂದಿನ ಅಗತ್ಯಗಳನ್ನು ಮನೆಯೊಳಗಿನ ನರ್ಸ್ ನೋಡಿಕೊಳ್ಳುತ್ತಾರೆ ಎಂದು ಸುಲೋಚನಾ ಹೇಳುತ್ತಾರೆ.
ಅಂಗವಿಕಲರಿಗೆ ಆತಿಥ್ಯ ನೀಡುವ ಇತರ ಆಶ್ರಯ ಮನೆಗಳು ಅಥವಾ ಎನ್ಜಿಒಗಳಂತೆ, ಮಾನಸಿಕ ಅಸ್ವಸ್ಥ ರೋಗಿಗಳಿಗೆ ಕಾರ್ಯಾಗಾರಗಳನ್ನು ಆಯೋಜಿಸಲು ಅಥವಾ ಕೌಶಲ್ಯ ಅಭಿವೃದ್ಧಿಯ ಮೂಲಕ ಅವರನ್ನು ಸಬಲೀಕರಣಗೊಳಿಸಲು ಯಾವುದೇ ಅವಕಾಶವಿಲ್ಲ. “ಮಾನಸಿಕವಾಗಿ ಅಂಗವಿಕಲ ವ್ಯಕ್ತಿಯು ನಿಜವಾಗಿಯೂ ಏನನ್ನು ಅನುಭವಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇತರರಿಗೆ ಸಾಧ್ಯವಿಲ್ಲ. ಅವರು ಪ್ರಕ್ಷುಬ್ಧರಾಗಿದಾಗ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಅಥವಾ ಮಲಗಲು ಸಹ ಕಷ್ಟಪಡುತ್ತಾರೆ. ಬೌದ್ಧಿಕ ಅಂಗವಿಕಲ ವ್ಯಕ್ತಿಗಳನ್ನು ನಿರಂತರವಾಗಿ ನೋಡಿಕೊಳ್ಳಬೇಕು ಮತ್ತು ಎಲ್ಲಾ ಸಮಯದಲ್ಲೂ ಆಹಾರವನ್ನು ನೀಡಬೇಕು. ಹೊಸದನ್ನು ಕಲಿಯುವುದನ್ನು ಬಿಡಿ ಅವರು ತಮ್ಮನ್ನು ನಿಭಾಯಿಸಲೇ ಕಷ್ಟಪಡುತ್ತಾರೆ” ಎಂದು ಸುಲೋಚನಾ ಹೇಳುತ್ತಾರೆ.
ಆಶ್ರಯ ಮನೆಯಲ್ಲಿ ದಾಖಲಾದ ಈ ರೋಗಿಗಳಲ್ಲಿ ಹೆಚ್ಚಿನವರು ಸಮಾಜದಿಂದ ನಿಂದನೆ, ಕೈಬಿಡಲ್ಪಟ್ಟ ಮತ್ತು ಕೆಟ್ಟದಾಗಿ ನಡೆಸಿಕೊಂಡ ಇತಿಹಾಸವನ್ನು ಹೊಂದಿದ್ದಾರೆ ಎಂದು ಅವರು ಹೇಳುತ್ತಾರೆ. “ಅವರಿಗೆ ವಿಶೇಷ ಕಾಳಜಿ ಮತ್ತು ಗಮನ ಬೇಕು” ಎಂದು ಅವರು ಹೇಳುತ್ತಾರೆ.
ಪ್ರಸ್ತುತ ಆಶ್ರಯ ಮನೆಯಲ್ಲಿ 100 ಕ್ಕೂ ಹೆಚ್ಚು ನಿವಾಸಿಗಳು ಇದ್ದಾರೆ, ಅವರಲ್ಲಿ 40 ಅನಾಥರನ್ನು ಸುಲೋಚನಾ ದತ್ತು ಪಡೆದಿದ್ದಾರೆ. “ಜನರು ಸಾಯುವವರೆಗೂ ಇಲ್ಲಿ ವಾಸಿಸುತ್ತಾರೆ. ಇಲ್ಲಿಯವರೆಗೆ, ನಾವು ಸಮಾಜದ ಎಲ್ಲಾ ವಯೋಮಾನದವರ, ಲಿಂಗದ ಮತ್ತು ಸಾಮಾಜಿಕ ಸ್ತರಗಳಿಂದ 500 ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದ್ದೇವೆ ”ಎಂದು ಅವರು ಹೇಳುತ್ತಾರೆ.
“ನಾವು ಸುಮಾರು 20 ಸಿಬ್ಬಂದಿಗೆ ಪಾವತಿಸಬೇಕು ಮತ್ತು ಇತರ ಆಸ್ತಿ ನಿರ್ವಹಣೆಗೆ ಹಣದ ಅಗತ್ಯವಿದೆ. ಉಲ್ಹಾಸ್ನಗರದ ಕೆಲವು ದಾನಿಗಳು ಆಗಾಗ್ಗೆ ಹಣಕಾಸಿನ ಸಹಾಯವನ್ನು ನೀಡುತ್ತಾರೆ”ಎಂದು ಅವರು ಹೇಳುತ್ತಾರೆ. ಇದಲ್ಲದೆ, ಶಾಶ್ವತ ಕುಡಿಯುವ ನೀರು ಸರಬರಾಜು ಇಲ್ಲ, ಮತ್ತು ಎನ್ಜಿಒ ದೈನಂದಿನ ನೀರಿನ ಅವಶ್ಯಕತೆಗಳನ್ನು ಪೂರೈಸಲು ಬೋರ್ವೆಲ್ಗಳನ್ನು ಅವಲಂಬಿಸಬೇಕಾಗಿದೆ. “ವಿದ್ಯುತ್ ಮತ್ತು ತ್ಯಾಜ್ಯನೀರಿನ ಸಂಸ್ಕರಣಾ ಘಟಕಕ್ಕೆ ಸೋಲಾರ್ ಪ್ಯಾನಲ್ ಅಳವಡಿಸುವುದು ಕೂಡ ಅತಂತ್ರವಾಗಿದೆ. ನಮ್ಮ ಮಾಸಿಕ ವಿದ್ಯುತ್ ವೆಚ್ಚವು 1 ಲಕ್ಷ ರೂಪಾಯಿಗಳನ್ನು ದಾಟುತ್ತದೆ ಮತ್ತು ಸೋಲಾರ್ ಬಳಕೆಯು ಅದನ್ನು ಅರ್ಧಕ್ಕೆ ಇಳಿಸಲು ಸಹಾಯ ಮಾಡುತ್ತದೆ ”ಎಂದು ಅವರು ಹೇಳುತ್ತಾರೆ.
ಆದರೆ ಸವಾಲುಗಳು ಸಾಕಷ್ಟಿದ್ದರೂ ತನ್ನ ಕೊನೆಯ ಉಸಿರು ಇರುವವರೆಗೂ ತನ್ನ ರೋಗಿಗಳಿಗೆ ಸಹಾಯ ಮಾಡುತ್ತೇನೆ ಎನ್ನುತ್ತಾರೆ 75 ವರ್ಷದ ಸುಲೋಚನ. “ನಾನು ಪ್ರತಿದಿನ ಸವಾಲುಗಳನ್ನು ಎದುರಿಸುತ್ತೇನೆ, ಆದರೆ ರೋಗಿಗಳನ್ನು ನೋಡಿಕೊಳ್ಳುವುದು ಮತ್ತು ಅವರು ಆರಾಮದಾಯಕವಾಗಿರುವಂತೆ ಮಾಡುವುದು ನನ್ನ ಗುರಿಯಾಗಿದೆ” ಎಂದು ಅವರು ಹೇಳುತ್ತಾರೆ.
Source : thebetterindia