ಪ್ರಧಾನಿ ನರೇಂದ್ರ ಮೋದಿ ಜನರ ಮುಂದೆ ತಾವೇ ಘೋಷಿಸಿದ ಅಭಿವೃದ್ಧಿ ಯೋಜನೆಗಳನ್ನು ಮರೆತು ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿರುವುದೇಕೆ? ಮೋದಿ ಅವಧಿಯಲ್ಲಿ ಅಭಿವೃದ್ಧಿ ಆಗೇ ಇಲ್ಲವೇ? ಮೋದಿ ಹೇಳಿದ ವಿಕಾಸದ ಕತೆ ನಿಜಕ್ಕೂ ಏನಾಗಿದೆ?
ವಾಸ್ತವವಾಗಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಆಗಿಲ್ಲ, ಹಿಂದಿನ ಸರ್ಕಾರದ ಅವಧಿಯಲ್ಲಾದ ಆರ್ಥಿಕ ಅಭಿವೃದ್ಧಿಗೆ ಹೋಲಿಸಿದರೆ ಮೋದಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಪ್ರಮಾಣ ತಗ್ಗಿದೆ ಎಂಬುದನ್ನು ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳಿವೆ. ಮೋದಿ ಅವಧಿಯಲ್ಲಿ ಆರ್ಥಿಕಾಭಿವೃದ್ಧಿ ಕುಸಿದಿದೆ ಎಂಬುದಕ್ಕೆ ದೇಶದೊಳಗಿನ ನಿರುದ್ಯೋಗ ಪ್ರಮಾಣ ಸರ್ವಾಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವುದೇ ಸಾಕ್ಷಿ. ಸಿಎಂಐಇ ಮತ್ತು ಎನ್ಎಸ್ಎಸ್ಒ ಅಂಕಿ ಅಂಶಗಳು ನಿರುದ್ಯೋಗದ ವಸ್ತುಸ್ಥಿತಿಯನ್ನು ಬಯಲು ಮಾಡಿವೆ. ಈ ಪೈಕಿ ಸಿಎಂಐಇ ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಕಳೆದ 45 ವರ್ಷಗಳಲ್ಲೇ ಅತಿಹೆಚ್ಚು ನಿರುದ್ಯೋಗ ಕಳೆದ ಮೂರು ವರ್ಷಗಳಲ್ಲಿ ಕಾಡುತ್ತಿದೆ. 2019 ಸಮಯದಲ್ಲಿ ಸರ್ಕಾರದ ಅಧೀನದಲ್ಲಿರುವ ಎನ್ಎಸ್ಎಸ್ಒ ಅಂಕಿಅಂಶಗಳನ್ನು ಪ್ರಕಟಿಸದೇ ಮೋದಿ ಸರ್ಕಾರವೇ ತಡೆ ಹಿಡಿದಿತ್ತು. ಆದರೆ, ಬ್ಯುಸಿನೆಸ್ ಸ್ಟ್ಯಾಂಡರ್ಡ್ ಎನ್ಎಸ್ಎಸ್ಒ ಅಂಕಿಅಂಶಗಳನ್ನು ಪ್ರಕಟಿಸಿ ನಿರುದ್ಯೋಗ ಚಿತ್ರಣವನ್ನು ದೇಶದ ಮುಂದೆ ತೆರೆದಿಟ್ಟಿತ್ತು.
ಅದೇನೆ ಇರಲಿ ಮೋದಿ ಸರ್ಕಾರಕ್ಕೆ ದೇಶಕ್ಕೆ ಬೇಕಾದ ಸ್ವಂತ ಯೋಜನೆಗಳನ್ನು ರೂಪಿಸುವ, ಆಲೋಚಿಸುವ ಶಕ್ತಿಯೂ ಇಲ್ಲ. ಅದಕ್ಕೇನಿದ್ದರೂ ಅಧಿಕಾರ ಗ್ರಹಿಸುವುದು ಮತ್ತು ಅದನ್ನು ಉಳಿಸಿಕೊಳ್ಳಲು ಜನರ ಭಾವನೆ ಕೆರಳಿಸುವುದಷ್ಟೇ ಗೊತ್ತೆಂಬುದನ್ನು 2017ರಲ್ಲಿಯೇ ಕಾಂಗ್ರೆಸ್ ಸಂಸದ ಶಶಿ ತರೂರ್ ದೇಶದ ಗಮನಕ್ಕೆ ತಂದಿದ್ದರು.
ಶಶಿ ತರೂರ್ ನೀಡಿರುವ ಮಾಹಿತಿ ಏನೆಂದರೆ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಹೊಸ 23 ಯೋಜನೆಗಳಪೈಕಿ 19 ಯೋಜನೆಗಳು ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದವುಗಳು. ಮೋದಿ ಸರ್ಕಾರ ಈ 19 ಯೋಜನೆಗಳ ಹೆಸರನ್ನು ಬದಲಿಸಿ ತನ್ನ ಯೋಜನೆಗಳೆಂದು ಘೋಷಿಸಿಕೊಂಡಿದೆ. ಶಶಿ ತರೂರ್ ಅವರು ನೀಡಿದ ಮಾಹಿತಿಯ ಸತ್ಯಾಸತ್ಯಾತೆಯನ್ನು ಸುದ್ದಿ ಜಾಲತಾಣ “ದಿ ಕ್ವಿಂಟ್” ಪರಾಮರ್ಶೆ ಮಾಡಿತ್ತು. ಶಶಿ ತರೂರ್ ಮಾಹಿತಿಯನ್ನು ಪರಾಮರ್ಶೆಗೊಳಪಡಿಸಿ ದಿ ಕ್ವಿಂಟ್ ಪ್ರಕಟಿಸಿದ್ದ ವಸ್ತು ಸ್ಥಿತಿ ವರದಿಯ ವಿವರಗಳನ್ನು ಪ್ರತಿಧ್ವನಿ ತನ್ನ ಓದುಗರಿಗೆ ನೀಡುತ್ತಿದೆ.
ಪ್ರಧಾನಮಂತ್ರಿ ಜನಧನ್ ಯೋಜನೆ: ಅತಿ ಹೆಚ್ಚು ಪ್ರಚಾರ ಪಡೆದ ಮೋದಿ ಸರ್ಕಾರದ ಯೋಜನೆ ಇದು. ಅಪನಗದೀಕರಣದ ನಂತರ ಶ್ರೀಮಂತರೆಲ್ಲರೂ ಜನಧನ್ ಖಾತೆಯಲ್ಲಿ ತಮ್ಮ ಹಣ ಠೇವಣಿ ಇಟ್ಟಿರುವ ಬಗ್ಗೆ ತನಿಖಾ ವರದಿಗಳು ಪ್ರಕಟವಾದ ನಂತರ ಮೋದಿ ಸರ್ಕಾರ ಈ ಯೋಜನೆ ಬಗ್ಗೆ ಹೆಚ್ಚಿನ ಪ್ರಸ್ತಾಪ ಮಾಡುವುದನ್ನು ನಿಲ್ಲಿಸಿತು. ಆದರೆ, ವಸ್ತುಸ್ಥಿತಿ ಏನೆಂದರೆ- ಯುಪಿಎ ಸರ್ಕಾರ ರೂಪಿಸಿದ್ದ ಬೇಸಿಕ್ ಸೇವಿಂಗ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ (ಬಿಎಸ್ಬಿಡಿಎ) ಯೋಜನೆಯನ್ನು NDA ಸರ್ಕಾರ ಹೆಸರು ಬದಲಿಸಿಕೊಂಡು ತನ್ನದೇ ಯೋಜನೆ ಎಂದು ಘೋಷಿಸಿಕೊಂಡಿತು. ಅದಕ್ಕೆ ಪ್ರಧಾನಿ ಟ್ಯಾಗ್ ಹಾಕಿತು. ಆಗಸ್ಟ್ 17, 2012ರಂದು ಆರ್ಬಿಐ ಹೊರಡಿಸಿರುವ ಸುತ್ತೋಲೆ ಪ್ರಕಾರ ಬಿಎಸ್ಪಿಡಿಎ ಖಾತೆ ಶೂನ್ಯ ಠೇವಣಿ ಖಾತೆಯಾಗಿದ್ದು, ಎಲ್ಲಾ ನಾಗರಿಕರೂ ಈ ಖಾತೆ ತೆರೆಯಬಹುದಾಗಿದೆ. ಈ ಖಾತೆದಾರರಿಗೆ ಎಟಿಎಂ ಡೆಬಿಟ್ ಕಾರ್ಡ್ ವಿತರಿಸಲು ಮತ್ತು ಮಾಸಿಕ ನಾಲ್ಕು ಬಾರಿ ಎಟಿಎಂನಿಂದ ಉಚಿತವಾಗಿ ವಿದ್ ಡ್ರಾ ಮಾಡಲು ಅವಕಾಶ ಇದೆ. ಇದೇ ಖಾತೆಗೆ ಸರ್ಕಾರದ ವಿವಿಧ ಯೋಜನೆಗಳಿಂದ ನೀಡುವ ಸಹಾಯಧನವನ್ನು ಪಾವತಿಸಬೇಕು ಎಂದು ರಾಜ್ಯಸಭೆಯಲ್ಲಿ 2012 ಡಿಸೆಂಬರ್ 13 ರಂದು ನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ. ಅಂದರೆ, ಎನ್ಡಿಎ ಪ್ರಚಾರ ಮಾಡುತ್ತಿರುವ ಜನಧನ್ ಖಾತೆ ಯೋಜನೆ ಹೊಸದಲ್ಲಾ. ಯುಪಿಎ ಸರ್ಕಾರ ರೂಪಿಸಿದ್ದು. 2014 ಆಗಸ್ಟ್ 28ರವರ ನಂತರ ತೆರೆದ ಬಿಎಸ್ಪಿಡಿಎ ಖಾತೆಗಳಿಗೆ ಪ್ರಧಾನಮಂತ್ರಿ ಜನಧನ್ ಖಾತೆ ಎಂದು ಹೆಸರಿಸಲಾಗಿದೆ.
ಬೇಟೀ ಬಚಾವೋ ಬೇಟೀ ಪಡಾವೋ ಯೋಜನೆ: ಹೆಣ್ಣು ಮಕ್ಕಳ ಸುರಕ್ಷತೆಗಾಗಿಯೇ ತಮ್ಮ ಸರ್ಕಾರ ರೂಪುಗೊಂಡಿದೆ ಎಂಬಂತೆ ಮೋದಿ ಸರ್ಕಾರವು ದೇಶವ್ಯಾಪಿ ಪ್ರಚಾರ ಮಾಡಿದ್ದ ಈ ಯೋಜನೆಯು ಯುಪಿಎ ಸರ್ಕಾರದ ‘ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಪ್ರೋಗ್ರಾಮ್’ ನ ನಕಲು. ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರವು 2008ರಲ್ಲಿ ಜನವರಿ 24ನೇ ದಿನವನ್ನು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನಾಗಿ ಘೋಷಿಸಿತ್ತು. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಹಲವು ನೀತಿ ನಿಯಮಗಳನ್ನು ರೂಪಿಸಿತು. ಇದೇ ಕಾರ್ಯಕ್ರಮವನ್ನಾಧರಿಸಿ ಮೋದಿ ಸರ್ಕಾರವು 2015ರಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಪ್ರಕಟಿಸಿತು. ಯುಪಿಎ ಸರ್ಕಾರದ ವಿವಿಧ ಸಚಿವಾಲಯಗಳ ವ್ಯಾಪ್ತಿಯಲ್ಲಿದ್ದ ಕಾರ್ಯಕ್ರಮಗಳನ್ನು ಒಗ್ಗೂಡಿಸಿ, ತಮ್ಮದೇ ಯೋಜನೆ ಎಂದು ಘೋಷಿಸಿಕೊಂಡಿತು. ಬೇಟಿ ಪಡಾವೋ ಯೋಜನೆಯು ಹಿಂದೆ ಇದ್ದ ಸರ್ವಶಿಕ್ಷಾ ಅಭಿಯಾನದ ಪರಿಷ್ಕೃತ ರೂಪ ಎಂದು 2016ರಲ್ಲಿ ದೆಹಲಿಯಲ್ಲಿರುವ ಅಭಿವೃದ್ಧಿ ಮತ್ತು ಮಾನವಹಕ್ಕುಗಳ ಕೇಂದ್ರ ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿ ಅವರು ಕಸಬರಿಕೆ ಹಿಡಿದು ಫೋಟೋ ತೆಗೆಸಿಕೊಂಡು ಅತಿ ಹೆಚ್ಚು ಪ್ರಚಾರ ಪಡೆದ ಸ್ವಚ್ಛ ಭಾರತ ಅಭಿಯಾನವು ಯುಪಿಎ ಸರ್ಕಾರದ ‘ನಿರ್ಮಲ ಭಾರತ ಅಭಿಯಾನ‘ದ ನಕಲು. ಬಯಲುಶೌಚ ಮುಕ್ತ ಭಾರತವನ್ನು ಕಟ್ಟಲು ಯುಪಿಎ ಸರ್ಕಾರ ರೂಪಿಸಿದ ಸ್ವಚ್ಛತಾಂದೋಲನವನ್ನು ಸ್ವಚ್ಛಭಾರತ ಅಭಿಯಾನ ಎಂದು ಹೆಸರಿಸಲಾಗಿತ್ತು. ಸರ್ವರಿಗೂ ನೀರು- ನೈರ್ಮಲ್ಯ ಒದಗಿಸಲು ಕಾಂಗ್ರೆಸ್ ಸರ್ಕಾರ 1986 ಮತ್ತು 1999ರಲ್ಲಿ ರೂಪಿಸಿದ ಯೋಜನೆಗಳನ್ನು ಒಳಗೊಂಡಂತೆ ನಿರ್ಮಲ ಭಾರತ ಅಭಿಯಾನವನ್ನು ಯುಪಿಎ ಸರ್ಕಾರ ರೂಪಿಸಿತ್ತು. ಅದೀಗ ಸ್ವಚ್ಛ ಭಾರತ ಅಭಿಯಾನವಾಗಿದೆ. ವ್ಯತ್ಯಾಸ ಒಂದೇ ಏನೆಂದರೆ- ಹಿಂದಿನ ಪ್ರಧಾನಿಗಳ್ಯಾರೂ ಕಸಬರಿಕೆ ಹಿಡಿದು ಫೋಟೋ ತೆಗೆಸಿಕೊಂಡು ಪ್ರಚಾರ ಪಡೆದಿರಲಿಲ್ಲ.
ಸರ್ದಾರ್ ಪಟೇಲ್ ರಾಷ್ಟ್ರೀಯ ನಗರ ವಸತಿ ಯೋಜನೆ: ಇದು ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ರಾಜೀವ್ ಆವಾಸ್ ಯೋಜನೆಯ ನಕಲು. ಬಿಜು ಜನತಾದಳದ ಸದಸ್ಯ ಪಿನಾಕಿ ಮಿಶ್ರಾ ನೇತೃತ್ವದ ಸಂಸದೀಯ ಸಮತಿಯು ‘ಕೇವಲ ಯೋಜನೆಯ ಹೆಸರು ಬದಲಾಯಿಸುವುದರಿಂದ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದನ್ನು 2014 ಡಿಸೆಂಬರ್ 30ರಂದು ಟೆಲಿಗ್ರಾಫ್ ವರದಿ ಮಾಡಿತ್ತು.
ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ: ಇದು ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಇಂದಿರಾ ಆವಾಸ್ ಯೋಜನೆಯ ನಕಲು. 2016 ಆಗಸ್ಟ್ 31 ರಂದು ಸಂಸದೀಯ ಸಮಿತಿಯೊಂದು ಸಲ್ಲಿಸಿದ್ದ ವರದಿಯಲ್ಲಿ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಇಂದಿರಾ ಆವಾಸ್ ಯೋಜನೆಯನ್ನು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿತ್ತು.
ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ: ಯುಪಿಎ ಸರ್ಕಾರ ರೂಪಿಸಿದ್ದ ರಾಜೀವ್ ಗ್ರಾಮೀಣ ವಿದ್ಯುದೀಕರಣ ಯೋಜನೆಯ ನಕಲು.
ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್ಫಾರ್ಮೆಷನ್ (ಅಮೃತ್): ಇದು ಯುಪಿಎ ಸರ್ಕಾರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನಶ್ಚೇತನ ಯೋಜನೆ (ಜೆನರ್ಮ್)ಯ ನಕಲು. ಇದರ ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ರೂಪಿಸಿ ನಕಲು ಮಾಡುವುದರಲ್ಲೂ ತಾವು ಸ್ಮಾರ್ಟ್ ಎಂಬುದನ್ನು ಮೋದಿ ಸರ್ಕಾರ ತೋರಿಸಿಕೊಟ್ಟಿದೆ. ಜಾಗತಿಕ ಸಲಹಾಸಂಸ್ಥೆಯಾಗಿರುವ ಪ್ರೈಸ್ ವಾಟರ್ ಹೌಸ್ ಕೂಪರ್ ತನ್ನ ವರದಿಯಲ್ಲಿ ಜೆನರ್ಮ್ ಮತ್ತು ಅಮೃತ್ ಯೋಜನೆಯು ಒಂದೇ ಎಂಬುದನ್ನು ಪ್ರಸ್ತಾಪಿಸಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ: ಇದು ಕಾಂಗ್ರೆಸ್ ಸರ್ಕಾರದ ಅಕ್ಸಲರೆಟೇಡ್ ಇರಿಗೇಷನ್ ಬೆನಿಫಿಟ್ ಪ್ರೋಗ್ರಾಮ್ (ಎಐಬಿಪಿ) ವಾಟರ್ಶೆಡ್ ಮ್ಯಾನೆಜ್ಮೆಂಟ್ ಪ್ರೋಗ್ರಾಮ್ ಮತ್ತು ಫಾರ್ಮ್ ವಾಟರ್ ಮ್ಯಾನೆಜ್ಮೆಂಟ್ ಪ್ರೋಗ್ರಾಮ್– ಈ ಮೂರು ಯೋಜನೆಗಳನ್ನು ಒಗ್ಗೂಡಿಸಿ ರೂಪಿಸಿದ ಯೋಜನೆ ಎಂದು ಪಿಎಂಕೆಎಸ್ವೈ ವೆಬ್ ಸೈಟ್ ನಲ್ಲೇ ತಿಳಿಸಲಾಗಿದೆ.
ಬೇವು ಲೇಪಿತ ಯೂರಿಯಾ: ಕಾಂಗ್ರೆಸ್ ಸರ್ಕಾರವೂ 1985 ಮತ್ತು 2004ರಲ್ಲಿ ಬೇವು ಲೇಪಿತ ಯೂರಿಯಾ ಒದಗಿಸುವ ಯೋಜನೆ ಜಾರಿಗೆ ತಂದಿತ್ತು. ಅದನ್ನು ಮೋದಿ ಸರ್ಕಾರ ಮುಂದುವರೆಸಿದೆ. ಆದರೂ ತನ್ನದೇ ಯೋಜನೆಯೆಂದು ಹೇಳಿಕೊಳ್ಳುತ್ತಿದೆ.
ಸಾಯ್ಲ್ ಹೆಲ್ತ್ ಕಾರ್ಡ್ ಯೋಜನೆ: ಇದು ಕಾಂಗ್ರೆಸ್ ಸರ್ಕಾರದ ನ್ಯಾಷನಲ್ ಪ್ರಾಜೆಕ್ಟ್ ಆನ್ ಮ್ಯಾನೆಜ್ಮೆಂಟ್ ಆಪ್ ಸಾಯ್ಲ್ ಹೆಲ್ತ್ ಅಂಡ್ ಫರ್ಟಿಲಿಟಿ ಯೋಜನೆಯ ಪ್ರತಿರೂಪ.
ಪರಂಪರಾಗತ್ ಕೃಷಿ ವಿಕಾಸ ಯೋಜನಾ: ಇದು ಹಿಂದಿನ ಸರ್ಕಾರಗಳು ಜಾರಿಗೆ ತಂದಿರುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಇತರ ಸಂಬಂಧಿ ಕಾರ್ಯಕ್ರಮಗಳನ್ನು ಒಳಗೊಂಡ ಯೋಜನೆ.
ಅಟಲ್ ಪಿಂಚಣಿ ಯೋಜನೆ: ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಸ್ವಾವಲಂಬನಾ ಯೋಜನೆಯ ಪ್ರತಿ ರೂಪ ಇದು. 2010 ಸೆಪ್ಟೆಂಬರ್ 29ರಂದು ಯುಪಿಎ ಸರ್ಕಾರವು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸುರಕ್ಷತೆಗಾಗಿ ರೂಪಿಸಿದ್ದ ಸ್ವಾವಲಂಬನಾ ಯೋಜನೆಯನ್ನು ಅಟಲ್ ಪಿಂಚಣಿ ಯೋಜನೆಯಾಗಿ ಪರಿವರ್ತಿಸಲಾಗಿದೆ.
ಪ್ರಧಾನ ಮಂತ್ರಿ ಜನಔಷಧಿ ಯೋಜನೆ: 2008 ಏಪ್ರಿಲ್ 23ರಂದು ಯುಪಿಎ ಸರ್ಕಾರವು ಬ್ರಾಂಡ್ ರಹಿತ ಔಷಧಗಳನ್ನು ಕಡಮೆದರದಲ್ಲಿ ಜಸಮಾನ್ಯರಿಗೆ ವಿತರಿಸುವ ಯೋಜನೆ ಜಾರಿಗೆ ತಂದಿತು. ಅದಕ್ಕೆ ಜನ ಔಷಧಿ ಯೋಜನೆ ಎಂದು ಹೆಸರಿಸಲಾಗಿತ್ತು. ಈ ಯೋಜನೆಗೆ “ಪ್ರಧಾನ ಮಂತ್ರಿ” ಸೇರಿಸಿ ಹೊಸದಾಗಿ ಘೋಷಿಸಲಾಗಿದೆ.
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ: ಇದು ಹಿಂದೆ 1985 ಮತ್ತು 1999ರಲ್ಲಿ ಜಾರಿಗೆ ತಂದ ಸಮಗ್ರ ಬೆಳೆ ವಿಮಾ ಯೋಜನೆಯ ಪ್ರತಿರೂಪ.
ಮೆಕ್ ಇನ್ ಇಂಡಿಯಾ: ಭಾರಿ ಪ್ರಚಾರ ಪಡೆದ ಮತ್ತು ಪಡೆಯುತ್ತಿರುವ ಈ ಯೋಜನೆಯು ಹಿಂದಿನ ರಾಷ್ಟ್ರೀಯ ಉತ್ಪಾದನಾ ನೀತಿಯ (ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ) ಪ್ರತಿ ರೂಪ. ಅದಕ್ಕೆ ಆಕರ್ಷಕ ಹೆಸರು ನೀಡಿ ಪ್ರಚಾರ ಮಾಡಲಾಗಿದೆ.
ಡಿಜಿಟಲ್ ಇಂಡಿಯಾ: ರಾಷ್ಟ್ರೀಯ ಇ– ಆಡಳಿತ ಯೋಜನೆ (ನ್ಯಾಷನಲ್ ಇ–ಗವರ್ನೆನ್ಸ್ ಪ್ಲಾನ್) ಯಥಾರೂಪ. ಹಿಂದಿನ ಸರ್ಕಾರದ ಯೋಜನೆಯನ್ನೇ ಯಥಾವತ್ತಾಗಿ ಜಾರಿಗೆ ತಂದು ಡಿಜಿಟಲ್ ಇಂಡಿಯಾ ಎಂದು ಹೆಸರಿಸಲಾಗಿದೆ.
ಸ್ಕಿಲ್ ಇಂಡಿಯಾ: ಯುಪಿಎ ಸರ್ಕಾರವು 2009ರಲ್ಲಿ ಜಾರಿಗೆ ತಂದಿದ್ದ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಪ್ರೋಗ್ರಾಮ್ ಯೋಜನೆಯನ್ನು ಹೆಚ್ಚು ಆಕರ್ಷಕಗೊಳಿಸಿ ಸ್ಕಿಲ್ ಇಂಡಿಯಾ ಎಂದು ಹೆಸರಿಸಲಾಗಿದೆ.
ಮಿಷನ್ ಇಂಧ್ರಧನುಷ್ : ಯೂನಿವರ್ಸಲ್ ಇಮ್ಯುನೈಸೆಷನ್ ಪ್ರೋಗ್ರಾಮ್ ಅನ್ನು ಯಥಾವತ್ತು ಮುಂದುವರೆಸಲಾಗಿದ್ದು, ಹೆಸರು ಮಾತ್ರ ಬದಲಾಗಿದೆ.
ದೀನದಾಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ : ಇದು ನ್ಯಾಷನಲ್ ರೂರಲ್ ಲೈವ್ಲಿವುಡ್ ಮಿಷನ್ ಯೋಜನೆಯ ಯಥಾರೂಪ.
ಪಹಲ್: ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗೆ ಪಾವತಿಸುವ ಯೋಜನೆಯನ್ನು 2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದು. ಮೊದಲ ಹಂತದಲ್ಲೇ 54 ಜಿಲ್ಲೆಗಳಲ್ಲಿ ಜಾರಿ ಮಾಡಿತು. ಮೋದಿ ಸರ್ಕಾರ ಅದನ್ನು ಬೇರೆ ಹೆಸರಿನಲ್ಲಿ ಮುಂದುವರೆಸಿದೆ.
ಭಾರತ್ ನೆಟ್ : ನ್ಯಾಷನಲ್ ಆಪ್ಟಿಕ್ ಫೈಬರ್ ನೆಟ್ವರ್ಕ್ ಯೋಜನೆಯನ್ನು ಯುಪಿಎ ಸರ್ಕಾರ 2011 ಅಕ್ಟೋಬರ್ 25ರಂದು ಜಾರಿಗೆ ತಂದಿತ್ತು. ದೇಶದಲ್ಲಿರುವ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸಿ ಗ್ರಾಮಮಟ್ಟದಲ್ಲಿ ಇ ಆಡಳಿತ ಜಾರಿಗೆ ತರುವ ಮಹತ್ವದ ಉದ್ದೇಶ ಯುಪಿಎ ಸರ್ಕಾರಕ್ಕೆ ಇತ್ತು. ಮೋದಿ ಸರ್ಕಾರ ಅದಕ್ಕೆ ಭಾರತ್ ನೆಟ್ ಎಂದು ಮರುನಾಮಕರಣ ಮಾಡಿದೆ