ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ ಲಸಿಕೆ ಹಾಕಲು ಹೋಗಿದ್ದ ಆರೋಗ್ಯಾಧಿಕಾರಿಗಳಿಗೆ ತನ್ನ ಮೈ ಮೇಲೆ ಕುಕ್ಕವಾಡೇಶ್ವರಿ ದೇವತೆ ಬಂದಿದ್ದಾಳೆ ಎಂದು ಹೇಳಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದ 70 ವರ್ಷದ ಮಹಿಳೆಗೆ ಲಸಿಕೆಯನ್ನು ಹಾಕುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ಲಲಿತಮ್ಮನವರಿಗೆ ಲಸಿಕೆ ಹಾಕುವಲ್ಲಿ ಯಶ್ವಸಿಯಾದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.
ತಹಶೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಲಸಿಕೆ ನೀಡಲು ಹೋದಾಗ ಮಹಿಳೆಯು ತನ್ನ ಮೈ ಮೇಲೆ ದೇವರು ಬಂದಿರುವುದಾಗಿ ಹೇಳಿದ್ದಾರೆ. ದೇವತೆ ತನ್ನ ಮೈ ಮೇಲೆ ಬಂದಿದ್ದಾಳೆ ಈ ಸಮಯದಲ್ಲಿ ನಾನು ಏನನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಆದರೆ, ತಾಳ್ಮೆ ಕಳೆದುಕೊಳ್ಳದೆ ತಹಶೀಲ್ದಾರ್ ಗಿರೀಶ್ರವರು ಮಹಿಳೆ ಬಳಿ ಹೋಗಿ ʻನಿನ್ನೆ ರಾತ್ರಿ ದೇವತೆ ತನ್ನ ಕನಸಿನಲ್ಲಿ ಬಂದು ಲಸಿಕೆ ಹಾಕುವಂತೆ ಆದೇಶಿಸಿದೆ. ಆದ್ದರಿಂದ ನಾವು ದೇವತೆಯ ಆದೇಶವನ್ನು ಅನುಸರಿಸಬೇಕುʼ ಎಂದು ಮಹಿಳೆಯ ಮನವೊಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಬ್ಬಿನ ತೋಟದಲ್ಲಿ ಅವಿತು ಕುಳಿತಿದ್ದ ಗ್ರಾಮದ ಮೂವರಿಗೆ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಯಸಸ್ವಿಯಾಗಿದ್ದಾರೆ. ಈ ವೇಳೆ ಪಿಡಿಓ ಐ.ಸಿ.ವಿದ್ಯಾವತಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಧನಂಜಯ್ ಹಾಜರಿದ್ದರು.