• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

ನಾ ದಿವಾಕರ by ನಾ ದಿವಾಕರ
June 30, 2024
in Top Story, ಅಂಕಣ, ಜೀವನದ ಶೈಲಿ, ವಿಶೇಷ, ಶೋಧ
0
ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ
Share on WhatsAppShare on FacebookShare on Telegram

——ನಾ ದಿವಾಕರ——-

ADVERTISEMENT


ಅಧಿಕಾರ ರಾಜಕಾರಣದ ಅಂಗಳದಲ್ಲಿ ಜಾತಿ ನಿರ್ದೇಶಿತ ಅಧ್ಯಾತ್ಮವೂ ನೆಲೆಗಾಣುತ್ತಿರುವುದು ದುರಂತ

ಕರ್ನಾಟಕದ ರಾಜಕೀಯ ವಲಯವು ಕ್ರಮೇಣ ತನ್ನ ಜಾತ್ಯತೀತ ಲಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದು, ಜಾತಿ ಕೇಂದ್ರಿತ ಅಧಿಕಾರ ರಾಜಕಾರಣವನ್ನು ಆಧ್ಯಾತ್ಮಿಕ-ಧಾರ್ಮಿಕ ಕೇಂದ್ರಗಳು ನಿರ್ದೇಶಿಸುವ ಹಂತಕ್ಕೆ ತಲುಪುತ್ತಿದೆ. ಜಾತ್ಯತೀತತೆ ಅಥವಾ ಸೆಕ್ಯುಲರಿಸಂ ಎಂಬ ತಾತ್ವಿಕ ಗ್ರಹಿಕೆಯನ್ನು ಮತ-ಧರ್ಮ-ಪಂಥಗಳಿಗೆ ಸೀಮಿತಗೊಳಿಸದೆ ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತಿ-ಉಪಜಾತಿಗಳಿಗೂ ವಿಸ್ತರಿಸಿದಾಗ ಭಾರತದ ರಾಜಕಾರಣವು ಜಾತ್ಯತೀತ ಮುಕ್ತವಾಗಿಯೇ ನಡೆಯುತ್ತಿರುವುದು ವೇದ್ಯವಾದೀತು. ಚೆಲುವ ಕನ್ನಡ ನಾಡು ಉದಯಿಸಿದ ದಿನದಿಂದಲೂ ರಾಜ್ಯ ಆಳ್ವಿಕೆಯ ಮೇಲೆ ಹಿಡಿತ ಸಾಧಿಸಿರುವ ಲಿಂಗಾಯತ-ಒಕ್ಕಲಿಗ ಜಾತಿ ಸಮುದಾಯಗಳೊಂದಿಗೆ ಈಗ ಕುರುಬ ಸಮುದಾಯವೂ ಸವಾಲೊಡ್ಡುತ್ತಿದ್ದು, ಅಳ್ವಿಕೆಯ ಕೇಂದ್ರಗಳಲ್ಲಿ ಅಧಿಕಾರ ಹಂಚಿಕೆಯ ಸೂತ್ರಗಳನ್ನು ಹೆಣೆಯಲಾರಂಭಿಸಿದೆ. ಟಿಕೆಟ್‌ ಹಂಚಿಕೆಯಿಂದ ಸರ್ಕಾರ ರಚನೆಯವರೆಗೂ, ಗ್ರಾಮಪಂಚಾಯತ್‌ನಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಜಾತಿ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಆಧ್ಯಾತ್ಮಿಕ ಕೇಂದ್ರಗಳು ಪ್ರಧಾನ ಪಾತ್ರ ನಿರ್ವಹಿಸುತ್ತಿವೆ.

ಕರ್ನಾಟಕದ ದುರಂತ ಎಂದರೆ ಮೇಲ್ಮನೆ ಎಂದು ಕರೆಯಲಾಗುವ ವಿಧಾನ ಪರಿಷತ್‌ ಚುನಾವಣೆಗಳಿಗೂ ಈ ಜಾತಿ ಸಮೀಕರಣಗಳು ವ್ಯಾಪಿಸಿದ್ದು ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳೂ ತಮ್ಮ ಜಾತಿ ಅಸ್ಮಿತೆಯನ್ನೇ ಅವಲಂಬಿಸಿ, ಹಣಬಲದೊಂದಿಗೆ, ಈ ಸಾಂವಿಧಾನಿಕ ಬಿಳಿಯಾನೆಯ ಮೇಲೆ ಸವಾರಿ ಮಾಡಲು ಮುಂದಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಯ್ಕೆಯಿಂದ ಸಚಿವ ಸಂಪುಟ ವಿಸ್ತರಣೆಯವರೆಗೆ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದ ಆಧ್ಯಾತ್ಮಿಕ ಮಠಕೇಂದ್ರಗಳು ಹಾಲಿ ಕಾಂಗ್ರೆಸ್‌ ಸರ್ಕಾರದಲ್ಲೂ ಅದೇ ಮಾದರಿಯನ್ನು ಅನುಸರಿಸುತ್ತಿದ್ದು ಸರ್ಕಾರಕ್ಕೆ ಆಳ್ವಿಕೆಯ ಸಲಹೆಗಿಂತಲೂ ಹೆಚ್ಚಾಗಿ ಪೀಠ ಹಂಚಿಕೆಯ ಬಗ್ಗೆ ಸೂಚನೆಗಳನ್ನು ನೀಡಲಾರಂಭಿಸಿವೆ. ಜಾತ್ಯತೀತತೆ-ಸಮಾಜವಾದಕ್ಕೆ ಬದ್ಧತೆ ತೋರುವ ಮುಖ್ಯಮಂತ್ರಿಯನ್ನು ಹೊಂದಿದ್ದರೂ ಕರ್ನಾಟಕವು ಮತ್ತೊಮ್ಮೆ ಅಧ್ಯಾತ್ಮ-ರಾಜಕಾರಣದತ್ತ ಹೊರಳುತ್ತಿರುವುದು ವರ್ತಮಾನದ ದುರಂತ ಅಲ್ಲವೇ ?

ಪ್ರಜಾಸತ್ತೆ ಮತ್ತು ಶ್ರೀಸಾಮಾನ್ಯ

ಪ್ರಜಾಪ್ರಭುತ್ವದಲ್ಲಿ ಮತದಾರರು ಮೂಲತಃ ಆಯ್ಕೆ ಮಾಡುವುದು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಸಂವಿಧಾನಬದ್ಧತೆಯಿಂದ ಪ್ರಮಾಣೀಕರಿಸುವ ʼಜನಪ್ರತಿನಿಧಿಗಳನ್ನುʼ. ಈ ಚಾರಿತ್ರಿಕ ವಾಸ್ತವವನ್ನು ಎಂದೋ ಮರೆತಿರುವ ಜನಪ್ರತಿನಿಧಿಗಳು ʼಜನಸೇವೆ ಜನಾರ್ಧನಸೇವೆʼ ಎಂಬ ಧ್ಯೇಯವಾಕ್ಯವನ್ನು ಮೂಲೆಗೆಸೆದು ಈಗ ತಮ್ಮ ಇಡೀ ಸೇವೆಯನ್ನು ಜಾತಿ ಚೌಕಟ್ಟುಗಳಿಗೆ ಸೀಮಿತಗೊಳಿಸಿಬಿಟ್ಟಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ Inclusive ರಾಜಕಾರಣದ ಬಗ್ಗೆ ಮಾತನಾಡುತ್ತಲೇ ಕೆಲವರನ್ನು ಹೊರಗಿಡುವ Exclusionary ರಾಜಕೀಯ ತಂತ್ರಗಾರಿಕೆಗಳಲ್ಲಿ ಪರಿಣತಿ ಪಡೆದಿರುವ ರಾಜಕೀಯ ನಾಯಕರು, ಸಮಸ್ತ ಜನರ ಏಳಿಗೆ-ಹಿತಾಸಕ್ತಿ ಕಾಪಾಡುವ ಕೆಲಸವನ್ನು ಆಡಳಿತ ವ್ಯವಸ್ಥೆಯ ಪಾಡಿಗೆ ಬಿಟ್ಟು, ವ್ಯಕ್ತಿಗತ ನೆಲೆಯಲ್ಲಿ ತಮ್ಮದೇ ಆದ ಜಾತಿ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುವುದರಲ್ಲಿ ತೊಡಗಿರುವುದು ಪ್ರಜಾತಂತ್ರದ ಚೋದ್ಯ ಅಲ್ಲವೇ ? ರಾಜಕೀಯ ನಾಯಕರ ಈ ದೌರ್ಬಲ್ಯವೇ ಜಾತಿ ಕೇಂದ್ರಿತ ಮಠಮಾನ್ಯಗಳಿಗೆ, ಆಧ್ಯಾತ್ಮಿಕ ಕೇಂದ್ರಗಳಿಗೆ ಹಾಗೂ ಮಠೋದ್ಯಮಿಗಳಿಗೆ ಮೂಲ ಬಂಡವಾಳವಾಗಿ ಪರಿಣಮಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಮತದಾರರು ದಯಪಾಲಿಸುವುದು ಜನಹಿತಕ್ಕಾಗಿ ಸಾಂವಿಧಾನಿಕ ನಿಯಮಗಳ ಅನುಸಾರ ಅಧಿಕಾರ ಚಲಾಯಿಸುವ ಅವಕಾಶವನ್ನೋ ಅಥವಾ ನಿಸ್ಪೃಹತೆ-ನಿಸ್ವಾರ್ಥತೆಯಿಂದ ಸಮಾಜದ ಕಟ್ಟಕಡೆಯ ಅಲಕ್ಷಿತ ವ್ಯಕ್ತಿಯನ್ನೂ ತಲುಪುವಂತೆ ʼ ಜನಸೇವೆ ʼ ಮಾಡುವ ಅವಕಾಶವನ್ನೋ ? ಬಹುಶಃ ಈ ಪ್ರಶ್ನೆ ಇಂದು ಹೆಚ್ಚು ಚರ್ಚೆಗೊಳಗಾಗಬೇಕಿದೆ. ಏಕೆಂದರೆ ಚುನಾಯಿತರಾದ ಪ್ರತಿಯೊಬ್ಬ ಶಾಸಕ/ಸಂಸದರೂ ತಮ್ಮ ಪ್ರಾತಿನಿಧಿತ್ವದ ಮೂಲ ಆಶಯಗಳನ್ನೇ ಮರೆತು, ತಾವು ತಮ್ಮ ಕುಟುಂಬ ಮತ್ತು ʼತಮ್ಮವರʼ ಹಿತಾಸಕ್ತಿಗಳ ರಕ್ಷಣೆಗಾಗಿ ಹಂಬಲಿಸುವುದು ಸಾಮಾನ್ಯ ಸಂಗತಿಯಾಗಿದೆ. ತಾತ್ವಿಕವಾಗಿ ತಾವು ʼಅನುಸರಿಸುವ-ಅನುಕರಿಸುವ-ಆರಾಧಿಸುವ ʼ ಸೈದ್ಧಾಂತಿಕ ದಾರ್ಶನಿಕರನ್ನು ಉಪ್ಪರಿಗೆಯಲ್ಲಿ ಕೂರಿಸಿ ಮೆರೆಸುತ್ತಲೇ ತಳಮಟ್ಟದಲ್ಲಿ ಈ ಮಹಾನ್‌ ವ್ಯಕ್ತಿಗಳ ಅಶಯಗಳಿಗೆ ತದ್ವಿರುದ್ಧವಾಗಿ ಸಾಂಘಿಕ ಜಾತಿ ಹಿತಾಸಕ್ತಿಗಳನ್ನು ಪೋಷಿಸುವ Hypocracy ಗೆ ನಮ್ಮ ರಾಜಕಾರಣಿಗಳು ಒಗ್ಗಿಹೋಗಿದ್ದಾರೆ.
ಅಧಿಕಾರ ಕೇಂದ್ರಗಳಲ್ಲಿ ಯಾವುದೋ ಒಂದು ಉನ್ನತ ಅಧಿಕಾರಯುತ ಸ್ಥಾನಕ್ಕಾಗಿ ಹಂಬಲಿಸುವುದು ಸಹಜವಾದ ಲಕ್ಷಣ. ಇದು ತಳಮಟ್ಟದ ನೌಕರನಿಂದ ಪ್ರಧಾನಿಯವರೆಗೂ ವಿಸ್ತರಿಸಬಹುದಾದ ಮಾನವ ಗುಣ. ಈ ಹಂಬಲ ಇರುವುದು ತಪ್ಪೇನಲ್ಲ ಆದರೆ ಆ ಗುರಿಯನ್ನು ಸಾಧಿಸಲು ಅನುಸರಿಸುವ ಮಾರ್ಗಗಳು ರಾಜಕೀಯ ವಲಯದಲ್ಲಿ ಬಹಳ ಮುಖ್ಯವಾಗುತ್ತದೆ. ವರ್ತಮಾನದ ರಾಜಕೀಯ ವ್ಯವಸ್ಥೆಯಲ್ಲಿ ಪೂರ್ಣ ಬಹುಮತ ಪಡೆದ ಪಕ್ಷಗಳೂ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದು ಖಚಿತವಾಗಿರುವುದಿಲ್ಲ. ಹಾಗಾಗಿ ಸಚಿವ ಸಂಪುಟದಿಂದ ಹಿಡಿದು, ಜಿಲ್ಲಾ ಉಸ್ತುವಾರಿ ಹುದ್ದೆಗಳವರೆಗೆ ಹರಡುವ ಅಧಿಕಾರ ಕೇಂದ್ರಗಳು ಜನಪ್ರತಿನಿಧಿಗಳ ಪಾಲಿಗೆ ಸುಭದ್ರ ಭವಿಷ್ಯನಿಧಿಯಂತೆ ಕಾಣುತ್ತದೆ. ತಮ್ಮ ಪಕ್ಷ ಅಧಿಕಾರ ಕಳೆದುಕೊಳ್ಳುವುದರೊಳಗಾಗಿ ವ್ಯಕ್ತಿಗತ ಬದುಕಿನ-ಸಾಮುದಾಯಿಕ ಅಸ್ತಿತ್ವದ ಅಡಿಪಾಯವನ್ನು ಗಟ್ಟಿಗೊಳಿಸಿಕೊಳ್ಳುವ ಹಪಹಪಿ ರಾಜಕಾರಣಿಗಳಲ್ಲಿ ಕಾಣುತ್ತದೆ. ಈ ರಕ್ಷಾ ಕವಚಗಳನ್ನು ಒದಗಿಸುವ ಆಧ್ಯಾತ್ಮಿಕ ಕಾರ್ಖಾನೆಗಳಾಗಿ ಮಠಮಾನ್ಯಗಳು ಮುನ್ನೆಲೆಗೆ ಬಂದಿವೆ.

ಅಧಿಕಾರ-ಹುದ್ದೆಯ ಮಹತ್ವಾಕಾಂಕ್ಷೆ

ಈ ಸನ್ನಿವೇಶದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಎದ್ದಿರುವ ʼ ಉಪಮುಖ್ಯಮಂತ್ರಿʼ ಹಾವಳಿ ರಾಜ್ಯದ ಜನತೆಯಲ್ಲಿ ನಿರಾಶಾಭಾವ ಮೂಡಿಸಿದರೆ ಅಚ್ಚರಿಯೇನಿಲ್ಲ. 2023ರ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕದ ಸಾಮಾನ್ಯ ಮತದಾರರು, ಶೋಷಿತ ಬಡಜನತೆ ಕಾಂಗ್ರೆಸ್‌ ಪಕ್ಷವನ್ನು ಏಕೆ ಚುನಾಯಿಸಿದರು ಎಂಬ ಪರಿವೆಯೇ ಇಲ್ಲದಂತೆ ವರ್ತಿಸುತ್ತಿರುವ ಆಡಳಿತಾರೂಢ ಪಕ್ಷದ ಶಾಸಕರು ಒಂದು ವರ್ಷ ಕಳೆಯುವಷ್ಟರೊಳಗೇ ತಮ್ಮ ಪೀಠದಾಹದ ಪರಾಕಾಷ್ಠೆ ತಲುಪಿರುವುದು ಜನತಾ ಜನಾರ್ಧನರ ದುರ್ದೈವ ಅಲ್ಲವೇ ? ಯಾವುದೇ ರಾಜಕಾರಣಿಗಾದರೂ ಜೀವನದಲ್ಲಿ ಒಮ್ಮೆ ಮುಖ್ಯಮಂತ್ರಿ ಅಥವಾ ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗುವ ಮಹತ್ವಾಕಾಂಕ್ಷೆ ಸಹಜವಾಗಿಯೇ ಇರುತ್ತದೆ. ಇದು ತಪ್ಪೇನಲ್ಲ. ನೌಕರಿಯಲ್ಲಿರುವ ಪ್ರತಿ ವ್ಯಕ್ತಿಯೂ ಬಡ್ತಿಯ ಹಂಬಲದೊಂದಿಗೇ ದುಡಿಯುವುದು ಸ್ವಾಭಾವಿಕ. ಆದರೆ ಈ ಮಹತ್ವಾಕಾಂಕ್ಷೆಗಳು ಸಾರ್ವಜನಿಕ ಮನರಂಜನೆಯ ವಸ್ತುಗಳಾಗಿ ಅಥವಾ ವಿರೋಧ ಪಕ್ಷಗಳ ಟೀಕಾಸ್ತ್ರಗಳಿಗೆ ತುತ್ತಾಗಿ ಪರಿಣಮಿಸಿದಾಗ, ಆಡಳಿತ ಪಕ್ಷದ ವಿಶ್ವಾಸಾರ್ಹತೆ ಸಹಜವಾಗಿಯೇ ಕುಸಿಯುತ್ತದೆ.

ಚುನಾಯಿತ ಸಂಸದರು ಔಪಚಾರಿಕವಾಗಿ ಸಂಸದೀಯ ಸಭೆಯನ್ನು ನಡೆಸಿ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ರಾಷ್ಟ್ರಪತಿಗೆ ಸಲ್ಲಿಸುವ ಒಂದು ಉದಾತ್ತ ಪರಂಪರೆಗೆ ಈ ಬಾರಿ ಮೋದಿ 3.0 ಸರ್ಕಾರವು ತಿಲಾಂಜಲಿ ನೀಡಿರುವ ಹಿನ್ನೆಲೆಯಲ್ಲಿ, ಬಹುಶಃ ಮುಂದಿನ ದಿನಗಳಲ್ಲಿ ಈ ಮಾದರಿಯೇ ಎಲ್ಲೆಡೆ ಜಾರಿಯಾಗುವ ಸಾಧ್ಯತೆಗಳಿವೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ, ಎಲ್ಲ ಪಕ್ಷಗಳಲ್ಲೂ ಅಧಿಕಾರಕ್ಕೆ ಬಂದ ಕೂಡಲೇ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚಿತವಾಗಿಯೇ ನಿರ್ಧರಿಸಿರುವುದರಿಂದ, ಉಪಮುಖ್ಯಮಂತ್ರಿ (ಡಿಸಿಎಂ) ಯಾರು ಮತ್ತು ಎಷ್ಟು ಜನ ಎಂಬ ಪ್ರಶ್ನೆ ಪ್ರಧಾನವಾಗಿ ಏಳುತ್ತದೆ. ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಕ್ಷಮತೆ-ದಕ್ಷತೆ-ಅರ್ಹತೆಗಿಂತಲೂ ಹೆಚ್ಚಾಗಿ ಅವರ ಜಾತಿ ಮೂಲವೇ ಪ್ರಧಾನವಾಗುವುದರಿಂದ ʼಅವಕಾಶವಂಚಿತʼ ಜಾತಿ ಪ್ರತಿನಿಧಿಗಳು ತಮ್ಮ ʼಜನಪ್ರಾತಿನಿಧ್ಯವನ್ನೂʼ ಮರೆತು, ಉಪಮುಖ್ಯಮಂತ್ರಿ ಹುದ್ದೆಗಾಗಿ ಲಾಬಿ ಆರಂಭಿಸುತ್ತಾರೆ. .21ನೆ ಶತಮಾನದ ಅಧಿಕಾರ ರಾಜಕಾರಣದ ಹೊಸ ಅವಿಷ್ಕಾರ ಇದೇ ಎನ್ನಬಹುದು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೂ ಸೀಎಂ-ಡಿಸಿಎಂ ಪಟ್ಟದ ಬಗ್ಗೆ ಊಹೆ, ಅಂದಾಜು, ವ್ಯಾಖ್ಯಾನ, ಪೈಪೋಟಿ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮ್ಮದೇ ಆದ ರಾಜಕೀಯ ಪ್ರಭಾವದ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದು ವಾಸ್ತವವೇ ಆದರೂ, ಇಬ್ಬರಲ್ಲೂ ಇರುವ ಪೀಠಾಕಾಂಕ್ಷೆ ಪಕ್ಷದ ಮುನ್ನಡೆಗೆ, ಸರ್ಕಾರದ ಉಳಿವಿಗೆ ಮಾರಕವಾಗಬಾರದು ಎಂಬ ವಿವೇಚನೆ ಪಕ್ಷದ ನಾಯಕರಲ್ಲಿ ಇರಬೇಕು. ಕರ್ನಾಟಕದಲ್ಲಿ ಜಾತಿ ಬಲವಿಲ್ಲದೆ ಅಧಿಕಾರ ಕೇಂದ್ರಗಳನ್ನು ಆಕ್ರಮಿಸಲಾಗುವುದಿಲ್ಲ ಎಂಬ ಸತ್ಯವನ್ನು ರಾಜ್ಯದ ಜನತೆ ಈಗಾಗಲೇ ಅರಿತಿದ್ದಾರೆ. ಪ್ರಬಲ ಜಾತಿಗಳಾದ ಒಕ್ಕಲಿಗ, ಲಿಂಗಾಯತ, ಕುರುಬ ಸಮುದಾಯಗಳು ತಮ್ಮ ಮತಸಂಖ್ಯೆಯ ಬಲದಿಂದಲೇ ಸರ್ಕಾರದ ಮೇಲೆ ಪ್ರಭಾವವನ್ನು ಉಳಿಸಿಕೊಂಡಿರುತ್ತವೆ.

ಮಠ-ಅಧ್ಯಾತ್ಮ- ಬಂಡವಾಳ

ಕಾರ್ಪೋರೇಟ್‌ ಔದ್ಯಮಿಕ ಬಂಡವಾಳಕ್ಕಿಂತಲೂ ಬಲಾಢ್ಯವಾಗಿರುವ ಈ ಜಾತಿ ಸಮೀಕರಣವು ರಾಜ್ಯದ ಸಂದರ್ಭದಲ್ಲಿ ರಾಜಕೀಯ ಅಂಗಳವನ್ನು ದಾಟಿ ಆಯಾ ಜಾತಿಗಳ ಮಠಮಾನ್ಯಗಳ ಅಂಗಳವನ್ನು ತಲುಪಿರುವುದು ವರ್ತಮಾನದ ದುರಂತವಾದರೂ, ರಾಜಕೀಯವಾಗಿ ಅನಿವಾರ್ಯವೇ ಆಗಿದೆ. ಏಕೆಂದರೆ ಈ ಜಾತಿ ನಿರ್ದೇಶಿತ ಮಠಗಳ ಕೃಪಾಶೀರ್ವಾದ ಇಲ್ಲದೆ ಅಧಿಕಾರ ಕೇಂದ್ರಗಳ ಮೆಟ್ಟಿಲೇರುವುದೂ ಅಸಾಧ್ಯವಾದ ಪರಿಸ್ಥಿತಿಯನ್ನು ರಾಜ್ಯ ರಾಜಕಾರಣ ಎದುರಿಸುತ್ತಿದೆ. ಈ ಜಾತಿಪ್ರೇಮದ ಛಾಯೆ ಸಾಂಸ್ಕೃತಿಕ-ಶೈಕ್ಷಣಿಕ ಕ್ಷೇತ್ರವನ್ನೂ ಆವರಿಸಿದ್ದು, ಅಲ್ಲಿಯೂ ಸಹ “ನಮ್ಮವರನ್ನು” ಕೂರಿಸುವ ಒಂದು ವಿಕೃತ ಪರಂಪರೆಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಮುಖ್ಯಮಂತ್ರಿಯ ಆಯ್ಕೆಯಿಂದ ಹಿಡಿದು, ಸಚಿವ ಸಂಪುಟ ರಚನೆ, ನಿಗಮ-ಮಂಡಳಿಗಳ ಹುದ್ದೆಗಳು ಇನ್ನಿತರ ಆಯಕಟ್ಟಿನ ಜಾಗಗಳಿಗೆ ವ್ಯಕ್ತಿಗಳನ್ನು ತಂದು ಕೂರಿಸುವವರೆಗೂ ಪ್ರಬಲ ಜಾತಿಗಳು ತಮ್ಮ ಮಠಾಧಿಪತಿಗಳ ಮೂಲಕ ಒತ್ತಡ ಹೇರುವುದು ಪ್ರಜಾಸತ್ತೆಯ ಚೋದ್ಯವಾದರೂ, ಸುಡು ವಾಸ್ತವ.

ಈಗ ಖಾವಿಧಾರಿ ಮಠಾಧೀಶರು ನೇರವಾಗಿಯೇ ಮುಖ್ಯಮಂತ್ರಿ ಹುದ್ದೆಗೆ ತಮ್ಮ ಆಯ್ಕೆಯನ್ನು ಸ್ವಷ್ಟಪಡಿಸುತ್ತಿರುವುದು ಈ ವಿಶಿಷ್ಟ ಪರಂಪರೆಯ ಮುಂದುವರಿಕೆಯಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮುಖ್ಯಮಂತ್ರಿ ಸ್ಥಾನವನ್ನು ಡಿ. ಕೆ. ಶಿವಕುಮಾರ್‌ ಅವರಿಗೆ ಬಿಟ್ಟುಕೊಡಿ ಎಂದು ಸಾರ್ವಜನಿಕವಾಗಿಯೇ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಸಿದ್ಧರಾಮಯ್ಯನವರ ನಂತರ ಮುಖ್ಯಮಂತ್ರಿಯಾಗುವುದು ಡಿ.ಕೆ. ಶಿವಕುಮಾರ್‌ ಸರದಿಯೇ ಹೊರತು ಬೇರೆಯವರಲ್ಲ ಎಂದೂ ಹೇಳಿರುವುದು ವರದಿಯಾಗಿದೆ. ಮತ್ತೊಂದೆಡೆ ವೀರಶೈವ ಸಮುದಾಯದ ಬಾಳೇಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು “ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಾದ ಪ್ರಸಂಗ ಬಂದರೆ ಆ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನೇ ಪರಿಗಣಿಸಬೇಕು ” ಎಂದು ಫರ್ಮಾನು ಹೊರಡಿಸಿದ್ದಾರೆ. ಈ ಮಠಾಧೀಶರುಗಳ ಆಗ್ರಹ ಪಟ್ಟಿಯ ಸಂಭಾವ್ಯ ಫಲಾನುಭವಿಗಳಾಗಿ ಸತೀಶ್‌ ಜಾರಕಿಹೊಳಿ, ಶ್ಯಾಮನೂರು ಶಿವಶಂಕರಪ್ಪ ಅವರೂ ಇದ್ದಾರೆ.

ಈ ಮಠಾಗ್ರಹಗಳ ಹಿಂದಿರುವ ಕಾರಣವನ್ನೂ ಗ್ರಹಿಸಬೇಕಿದೆ. ಕರ್ನಾಟಕದ ಜಾತಿ ಕೇಂದ್ರಿತ ಮಠಗಳ ಹೊರನೋಟಕ್ಕೆ ಅಧ್ಯಾತ್ಮ ಮತ್ತು ಧಾರ್ಮಿಕತೆಯ ಆಗರಗಳಾಗಿ ಕಾಣುವುದಾದರೂ, ಆಂತರಿಕವಾಗಿ ಬಹುಪಾಲು ಎಲ್ಲ ಮಠಗಳೂ ವಾಣಿಜ್ಯಾಸಕ್ತಿಗಳನ್ನು ಪ್ರತಿನಿಧಿಸುತ್ತವೆ. ಕಾರ್ಪೋರೇಟಿಕರಣಕ್ಕೊಳಗಾದ ವೈದ್ಯಕೀಯ-ಇಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕಾಲೇಜುಗಳೇ ಅಲ್ಲದೆ, ಎಲ್‌ಕೆಜಿ ಹಂತದಿಂದ ಸ್ನಾತಕೋತ್ತರದವರೆಗೂ ಶಾಲಾ ಕಾಲೇಜುಗಳು ಮಠೋದ್ಯಮದ ಭಾಗವಾಗಿದೆ. ಹಾಗೆಯೇ ಆರೋಗ್ಯ ಕ್ಷೇತ್ರವನ್ನೂ ಆಕ್ರಮಿಸಿರುವ ಅಧ್ಯಾತ್ಮ ಮಠಗಳು ಕಾರ್ಪೋರೇಟ್‌ ಆಸ್ಪತ್ರೆಗಳನ್ನೂ ನಿರ್ವಹಿಸುತ್ತಿದ್ದು , ಈ ಸಾಮ್ರಾಜ್ಯದ ವಿಸ್ತರಣೆಯ ಭಾಗವಾಗಿ ವಸತಿ ಸಮುಚ್ಚಯ, ಬಡಾವಣೆಗಳನ್ನೂ ನಿರ್ಮಿಸುತ್ತಿವೆ. ಅಧಿಕಾರ ರಾಜಕಾರಣದ ಮೇಲೆ ಪ್ರಭಾವ ಬೀರದೆ ಹೋದರೆ ಈ ವಾಣಿಜ್ಯೋದ್ಯಮಗಳು ಊರ್ಜಿತವಾಗುವುದಿಲ್ಲ ಎನ್ನುವುದು ವಾಸ್ತವ. ಹಾಗಾಗಿ ಚುನಾವಣೆಗಳಲ್ಲಿ ಬಂಡವಾಳವನ್ನು ಪೂರೈಸುವುರಿಂದ ಹಿಡಿದು ಮಂತ್ರಿಮಂಡಲ ರಚನೆಯವರೆಗೆ ಅಧ್ಯಾತ್ಮ ಕೇಂದ್ರಗಳು ಚುನಾಯಿತ ಸರ್ಕಾರಗಳನ್ನು ಪ್ರಭಾವಿಸುತ್ತವೆ.

ಒಂದು ರೀತಿಯಲ್ಲಿ ಮಠಗಳಿಗೆ ಋಣಿಯಾಗಿರಬೇಕಾದ ರಾಜಕೀಯ ಪಕ್ಷಗಳು ಸ್ವಾಮೀಜಿಗಳಿಗೆ ರಾಜಕಾರಣದ ಸುದ್ದಿಗೆ ಬರಬೇಡಿ ಎಂದು ಕೈಮುಗಿದು ಬೇಡಿಕೊಂಡರೂ ಅದು ಫಲಪ್ರದವಾಗುವುದಿಲ್ಲ. ಏಕೆಂದರೆ ಜಾತಿಗೊಂದು ಮಠ ಸ್ಥಾಪನೆಗೆ ಅವಕಾಶ ಕಲ್ಪಿಸಿ, ಅವುಗಳನ್ನು ಸರ್ಕಾರದ ಹಣದಿಂದಲೇ ಪೋಷಿಸುವುದೇ ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಶಿಕ್ಷಣ-ಆರೋಗ್ಯ-ಯೋಗಕ್ಷೇಮ ವಲಯದಲ್ಲಿ ಇವುಗಳಿಗೆ ಸುಲಭ ದರದಲ್ಲಿ ಭೂಮಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಕರ್ನಾಟಕದ ರಾಜಕಾರಣವು ಮಠಮಾನ್ಯಗಳನ್ನು ಅಧ್ಯಾತ್ಮದಿಂದ ವಿಮುಖಗೊಳಿಸಿ ಮಾರುಕಟ್ಟೆಯತ್ತ ಸಾಗಲು ಪ್ರಚೋದಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ ನಡುವೆ ವ್ಯತ್ಯಾಸವೇನೂ ಕಾಣುವುದಿಲ್ಲ. ಆರ್ಥಿಕತೆಯ ಕಾರ್ಪೊರೇಟಿಕರಣ ಪ್ರಕ್ರಿಯೆಯಲ್ಲಿ ಕರ್ನಾಟಕದ ಅಧ್ಯಾತ್ಮ ಕೇಂದ್ರಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲದ ಹಾಗೆ ಸರ್ಕಾರಗಳು ಮಠಾಧೀಶರಿಗೆ ಋಣಿಯಾಗಿರುತ್ತವೆ. ಹಾಗಾಗಿಯೇ ವಿಚಾರವಾದಿ ಮುಖ್ಯಮಂತ್ರಿಯೂ ಧರ್ಮಸ್ಥಳದಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಳ್ಳುತ್ತಾರೆ.

ಅಧ್ಯಾತ್ಮ ಮತ್ತು ರಾಜಕಾರಣದ ನಡುವಿನ ಈ ಅವಿನಾಭಾವ ಸಂಬಂಧಗಳ ಹೊರತಾಗಿಯೂ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಗಮನಿಸಬೇಕಿರುವುದು ಈ ಪೀಠದಾಹದ ಅತಿರೇಕಗಳನ್ನು. 2024ರ ಲೋಕಸಭಾ ಚುನಾವಣೆಗಳಲ್ಲಿ 87 ವಿಧಾನಸಭಾ ಕ್ಷೇತ್ರಗಳ ಹಿನ್ನಡೆಯನ್ನು ಎದುರಿಸಿಯೂ ಸಹ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಈ ಪೀಠದಾಹದ ಕೂಗು ತಗ್ಗದೆ ಇರುವುದು ಅಧಿಕಾರ ರಾಜಕಾರಣದ ಮತ್ತೊಂದು ಮುಖವಾಡವನ್ನು ಕಳಚಿಹಾಕುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ-ಸಾಮಾನ್ಯರ-ಶೋಷಿತರ ಮನೆಯ ಹೊಸ್ತಿಲ ಬಳಿ ನಿಲ್ಲಬೇಕೇ ಹೊರತು, ತಮ್ಮ ಸ್ವಾರ್ಥರಾಜಕಾರಣಕ್ಕಾಗಿ ಅಧಿಕಾರ ಕೇಂದ್ರಗಳ ಬಾಗಿಲಲ್ಲಿ ನಿಲ್ಲಬಾರದು. ದುರದೃಷ್ಟವಶಾತ್‌ ಅಧಿಕಾರ ಪೀಠವನ್ನು ಅಲಂಕರಿಸಲು ಅಪೇಕ್ಷಿಸುವವರ ಗಮನ ಜನರಿಗಿಂತಲೂ ಹೆಚ್ಚಾಗಿ ಆ ಪೀಠದ ಹಿಂದಿನ ಪ್ರತಿಫಲಗಳ ಮೇಲಿದೆ. ಪ್ರಬಲ ಜಾತಿ ಸಮುದಾಯಗಳ ಈ ಪರಸ್ಪರ ಪೈಪೋಟಿಯಲ್ಲಿ ದುರ್ಬಲವಾಗುತ್ತಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳು, ಜನತೆಗೆ ದುರ್ಲಭವಾಗುತ್ತಿರುವುದು ಉತ್ತಮ ಆಳ್ವಿಕೆ.

ಈ ಪುರುಷಾರ್ಥಕ್ಕಾಗಿ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷಕ್ಕೆ 135 ಸ್ಥಾನಗಳನ್ನು ನೀಡಿದರೇ ?

ಕೊನೆಯ ಹನಿ :

ಇಷ್ಟರ ನಡುವೆ ದಲಿತ ಮುಖ್ಯಮಂತ್ರಿಯ ಕೂಗು ಅಥವಾ ಮಹಿಳಾ ಮುಖ್ಯಮಂತ್ರಿಯ ಆಗ್ರಹ ಸೊರಗಿಹೋಗುತ್ತಿದೆ. ಏಕೆಂದರೆ ಮೊದಲನೆಯದಕ್ಕೆ ಪೂರಕವಾದ ಸಮರ್ಥ ಮಠಗಳಿಲ್ಲ, ಎರಡನೆಯದಕ್ಕೆ ಜಾತಿ-ಅಸ್ಮಿತೆಗಳು ಗಣನೆಗೆ ಬರುವುದಿಲ್ಲ.

Tags: Adhyaatma-concern also-Peethadaha3BJPCongress Partyಪೀಠಬಿಜೆಪಿ
Previous Post

ಟೀಂ ಇಂಡಿಯಾ ಟಿ-20 ವಿಶ್ವಕಪ್‌ ಕಿರೀಟಕ್ಕೂ ನಟ ದರ್ಶನ್ ಜೈಲುವಾಸಕ್ಕೂ ಲಿಂಕ್ ಇದ್ಯಾ..?

Next Post

ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada