ಭೀಮಾ ಕೋರೇಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಯು ಎ ಪಿ ಎ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟಿದ್ದ ಹಿರಿಯ ಮಾನವ ಹಕ್ಕು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಕೊನೆಗೂ ಬಂಧನದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಅವರ ಆರೋಗ್ಯದಲ್ಲಿ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಕಳೆದ ಎಂಟು ತಿಂಗಳುಗಳಿಂದ ಸ್ಟಾನ್ ಸ್ವಾಮಿ ತಲೋಜ ಕೇಂದ್ರೀಯ ಕಾರಾಗ್ರಹದಲ್ಲಿದ್ದರು.
ಅವರು ವೈದ್ಯಕೀಯ ಕಾರಣಗಳಡಿ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂಬಯಿ ಹೈಕೋರ್ಟಿನೆದುರು ಇವತ್ತು ಮಧ್ಯಾಹ್ನ ಎರಡೂವರೆ ಗಂಟೆಗೆ ನಿಗದಿಪಡಿಸಲಾಗಿತ್ತು.
ಸ್ಟಾನ್ ಸ್ವಾಮಿಯವರ ವಕೀಲರಾದ ಮಿಹಿರ್ ದೇಸಾಯಿಯವರು ಈ ವಿಷಯವನ್ನು ನ್ಯಾಯಪೀಠಕ್ಕೆ ತಿಳಿಸಿದರು. ಸಾವಿನ ವಿಷಯ ತಿಳಿದ ತಕ್ಷಣ ನ್ಯಾಯಪೀಠವು ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ವಿಷಯ ನ್ಯಾಯಪೀಠದ ಗಮನಕ್ಕೆ ತಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಲಾಗಿತ್ತು ಎಂದೂ ತಿಳಿಸಿದೆ.
ಸುಮಾರು 84 ವರ್ಷದವರಾಗಿದ್ದ ಸ್ಟಾನ್ ಸ್ವಾಮಿ ಪಾರ್ಕಿನ್ಸನ್ ಕಾಯಿಲೆ ಮತ್ತು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿರುವುದು ಕೂಡಾ ಆಸ್ಪತ್ರೆಯ ಚಿಕಿತ್ಸೆಯ ಸಮಯದಲ್ಲಿ ದೃಢ ಪಟ್ಟಿತ್ತು.
ತನಗೆ ನೀಡಲಾಗುವ ಈ ಚಿಕಿತ್ಸೆಗೆ ತನ್ನ ದೇಹ ಸ್ಪಂದಿಸುತ್ತಿಲ್ಲ, ಬಹುಷಃ ಜಾಮೀನು ಸಿಗುವುದಕ್ಕಿಂತ ಮೊದಲೇ ತಾನು ಬಂಧನದಲ್ಲಿಯೇ ಮರಣ ಹೊಂದಬಹುದು ಎಂದು ಸ್ಟಾನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದಿವಾಸಿಗಳ ಬದುಕುವ ಹಕ್ಕಿಗೆ ಹೋರಾಡುತ್ತಿದ್ದ ಫಾದರ್ ಸ್ಟಾನ್ ಸ್ವಾಮಿ ಇದೀಗ ಜಾಮೀನು ಅರ್ಜಿಯ ವಿಚಾರಣೆಯ ಮೊದಲೇ ತನ್ನ ಬದುಕುವ ಹಕ್ಕಿಗಾಗಿ ಹೋರಾಡುತ್ತಾ ಕೊನೆಯುಸಿರೆಳೆದಿದ್ದಾರೆ.