ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದರ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿಯನ್ನು ಖಂಡಿಸಿರುವ ಎಎಪಿ ಇದು ದ್ವೇಷ ರಾಜಕಾರಣ ಎಂದು ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಯೋಜನಾ ಆಯೋಗದ ಮುಖ್ಯಸ್ಥ, ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಅವರ ಮನೆಯಲ್ಲಿ ಪೆನ್ಸಿಲ್ ಬಾಕ್ಸ್ ಹಾಗೂ ನೋಟ್ ಬುಕ್ಗಳು ಬಿಟ್ಟರೆ ಬೇರೆ ಏನು ಸಿಕ್ಕಿರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ದಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದಂತಹ ಸಂದರ್ಭದಲ್ಲಿ ನಾಲ್ಕು ಮಫ್ಲರ್ಗಳು ದೊರೆತ್ತಿದ್ದವು. ಈಗ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ದಾಳಿ ನಡೆಸಿರುವ ಸಿಬಿಐಗೆ ನಾಲ್ಕು ಪೆನ್ಸಿಲ್ ಬಾಕ್ಸ್ ಹಾಗೂ ಒಂದು ನೋಟ್ ಬುಕ್ ಸಿಗಲಿವೆ ಎಂದು ಟೀಕಿಸಿದ್ದಾರೆ.
ಪಂಜಾಬ್ನಲ್ಲಿ ಎಎಪಿ ಬಹುಮತದ ಸರ್ಕಾರ ರಚಿಸಿದೆ ಇದಾದ ನಂತರ ದೇಶಕ್ಕೆ ಮೋದಿ ನಂತರ ಕೇಜ್ರಿವಾಲ್ರನ್ನು ಪರ್ಯಾಯವಾಗಿ ಪರಿಗಣಿಸಲು ಶುರು ಮಾಡಿದ್ದಾರೆ. ಎಎಪಿ ಹಾಗೂ ಕೇಜ್ರಿವಾಲ್ರ ಬೆಳವಣಿಗೆ ನೋಡಿ ಬಿಜೆಪಿಗೆ ಭಯಗೊಂಡಿದೆ ಎಂದಿದ್ದಾರೆ.
ಕೇಜ್ರಿವಾಲ್ರ ಜನಪ್ರಿಯತೆ ಹಾಗೂ ಸರ್ಕಾರದ ಯೋಜನೆಗಳು ದೇಶದ ಪ್ರತಿಯೊಬ್ಬ ನಾಗರೀಕನ ಬಳಿ ಖ್ಯಾತಿ ಪಡೆದಿದೆ. ಜನರು ಕೇಜ್ರಿವಾಲ್ ಆಡಳಿತ ವಯಖರಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ.