ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ರಾಷ್ಟ್ರೀಯ ಲಾಂಛನ ಎಂದರೆ ಮಕ್ಕಳಿಗೆ ಕೊಡುವ ಆಟದ ಸಾಮಾನಲ್ಲ. ಇದು ಭಾರತದ ಅರ್ಥ ಮತ್ತು ಭಾರತೀಯ ರಾಜ್ಯದ ಸಂದೇಶಕ್ಕಾಗಿ ರೂಪಿಸಿರುವುದು. ಇದೇ ಕಾರಣಕ್ಕೆ ನ್ಯಾಯಾಲಯಗಳು ಕೂಡ ರಾಷ್ಟ್ರ ಲಾಂಛನವನ್ನು ಪ್ರದರ್ಶಿಸುತ್ತವೆ. ರಾಷ್ಟ್ರ ಲಾಂಛನದ ಮೂಲಕ ನ್ಯಾಯಾಂಗ ಸಮಗ್ರತೆ ಮತ್ತು ನಿಷ್ಪಕ್ಷಪಾತದ ಭರವಸೆಯನ್ನು ನೀಡುತ್ತದೆ. ಹಾಗೆಯೇ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳಲ್ಲೂ ರಾಷ್ಟ್ರ ಲಾಂಛನ ಎದ್ದು ಕಾಣುತ್ತದೆ ಏಕೆಂದರೆ ಅದು ನ್ಯಾಯಸಮ್ಮತತೆಯನ್ನು ಖಚಿತಪಡಿಸುತ್ತದೆ.
ಆದರೆ, ಇದ್ದಕ್ಕಿದ್ದಂತೆ, ಯಾರಿಗೂ ಸುಳಿವು ನೀಡದೆ, ಸಂಸತ್ತು ಅಥವಾ ರಾಜ್ಯಗಳೊಂದಿಗೆ ಸಮಾಲೋಚನೆ ಮಾಡದೆ ಅಥವಾ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೆ ರಾಷ್ಟ್ರ ಲಾಂಛನವನ್ನು ಮಾರ್ಪಡಿಸಲಾಗಿದೆ. ಅಷ್ಟೇಯಲ್ಲ, ಅದನ್ನು ಹೊಸ ಸಂಸತ್ತಿನ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ. ರಾಷ್ಟ್ರ ಲಾಂಛನದಲ್ಲಿ ಶಾಂತ, ಆತ್ಮವಿಶ್ವಾಸ, ಧೈರ್ಯ ತುಂಬುವ, ರಕ್ಷಿಸುವ ಸಿಂಹಗಳ ಸ್ಥಾನಗಳ ಬದಲಿಗೆ ಭಯಂಕರ ಸಿಂಹಗಳನ್ನು ಚಿತ್ರಿಸಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಿಸಬೇಕೆಂದು ಅಮೆರಿಕದಲ್ಲಿ ಲಿಬರ್ಟಿ ಪ್ರತಿಮೆಯ ಎತ್ತಿದ ಕೈಯಲ್ಲಿ ಸ್ವಾತಂತ್ರ್ಯದ ಜ್ವಾಲೆಯ ಬದಲಿಗೆ ಆಕ್ರಮಣಕಾರಿ ರೈಫಲ್ ನೀಡಿದಂತೆ.
ಹಾಗೆ ನೋಡಿದರೆ ಹೊಸ ಸಂಸತ್ ಭವನದಲ್ಲಿ ರಾಷ್ಟ್ರ ಲಾಂಛನ ಸ್ಥಾಪನೆ ಮಾಡುವ ಇಡೀ ಕಾರ್ಯಕ್ರಮವೇ ದೋಷಪೂರಿತವಾಗಿದೆ. ಲಾಂಛನವನ್ನು ಏಕಪಕ್ಷೀಯ ಬದಲಾವಣೆ ಮಾಡಲಾಗಿದೆ. ಧಾರ್ಮಿಕವಾಗಿ ನಿಷ್ಪಕ್ಷಪಾತವಾದದಿಂದ ನಡೆಯಬೇಕಾದ ಸಮಾರಂಭವನ್ನು ಒಂದೇ ಧರ್ಮದ ಪ್ರಾರ್ಥನೆ, ಪೂಜೆ ಮತ್ತಿತರರ ಸಂಪ್ರದಾಯಗಳ ಮೂಲಕ ಮಾಡಲಾಗಿದೆ. ದೇಶದ ಮೊದಲ ಪ್ರಜೆ, ರಾಷ್ಟ್ರಪತಿಗಳು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಅಥವಾ ಅವರನ್ನು ಆಹ್ವಾನಿಸಿರಲಿಲ್ಲ. ಸಂಸತ್ತಿನ ಅವಿಭಾಜ್ಯ ಅಂಗವಾಗಿರುವ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಕೂಡ ಇರಲಿಲ್ಲ. ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿರುವ ವಿರೋಧ ಪಕ್ಷದ ನಾಯಕರನ್ನೂ ಆಹ್ವಾನಿಸಿರಲಿಲ್ಲ.
ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಅವರು ನಮ್ಮ ರಾಷ್ಟ್ರೀಯ ಚಿಹ್ನೆಯಲ್ಲಿ ಅಶೋಕನ ಸಿಂಹಗಳು ಸುಂದರವಾಗಿವೆ ಮತ್ತು ‘ರಾಜಕೀಯವಾಗಿ ಆತ್ಮವಿಶ್ವಾಸ’ ಹೊಂದಿವೆ. ಆದರೆ ಈಗ ಅವುಗಳನ್ನು ‘ಅನಾವಶ್ಯಕವಾಗಿ ಆಕ್ರಮಣಕಾರಿ'” ಸಿಂಹಗಳನ್ನಾಗಿ ಬದಲಿಸಲಾಗಿದೆ. ಇದು ಆಘಾತಕಾರಿ ಮತ್ತು ಅನುಮಾನಗಳಿಗೆ ಆಸ್ಪದ ನೀಡುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕರು ಸಹ ಸರಳ ಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಎಡಪಕ್ಷಗಳು ಎಂದಿನಂತೆ ರಾಷ್ಟ್ರೀಯ ಲಾಂಛನದ ಧಾರ್ಮಿಕ ಸಮಾರಂಭವನ್ನು ಉಲ್ಲೇಖಿಸಿ, ಭಾರತವು ವಿವಿಧ ಧರ್ಮಗಳ ಜನರಿಗೆ ಸೇರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ.
ಆದರೆ ವಿಷಯ ರಾಜಕೀಯಕ್ಕೆ ಮೀರಿದ್ದು. ಭಾರತ ಮತ್ತು ಭಾರತೀಯ ಜನರನ್ನು ಒಗ್ಗೂಡಿಸುವ ತಂತು ಈಗ ಅಪಾಯದಲ್ಲಿದೆ. ಯಾವುದೇ ರಾಷ್ಟ್ರೀಯ ಲಾಂಛನ ಆ ರಾಷ್ಟ್ರದ ನೈತಿಕ ಮತ್ತು ಶೈಕ್ಷಣಿಕ ಧ್ವನಿ ಒಳಗೊಂಡಿರುತ್ತದೆ. ನಾವು ವಿಶ್ವಾಸ ಮತ್ತು ಸ್ನೇಹದಲ್ಲಿ ಮುಂದುವರಿಯಬೇಕೇ ಅಥವಾ ನಾವು ಪರಸ್ಪರ ಸಹಕಾರಕ್ಕೆ ಹೆದರುತ್ತೇವೆಯೇ? ಪಾಲಕರು ಮಕ್ಕಳನ್ನು ಭಯಂಕರ ಸಿಂಹಗಳ ಚಿತ್ರಣದೊಂದಿಗೆ ಬೆಳೆಸುತ್ತಾರೆಯೇ ಮತ್ತು ಬೆದರಿಕೆಯು ಈಗ ಭಾರತದ ಶಾಲೆಗಳಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ತುಂಬಲು ಪ್ರಯತ್ನಿಸುವ ಪ್ರಾಥಮಿಕ ಗುಣವಾಗಿದೆಯೇ? ಎಂಬ ಪ್ರಶ್ನೆಗಳು ಮೂಡಿವೆ.
ನಮ್ಮ ರಾಷ್ಟ್ರೀಯ ಲಾಂಛನ ಈಗ ಕೇವಲ ಕಲಾತ್ಮಕವಾಗಿ ಮಾತ್ರ ಬದಲಾವಣೆ ಆಗಿಲ್ಲ. ಉದ್ದೇಶಪೂರ್ವಕವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಎನನ್ನಾದರೂ ಸಮರ್ಥಿಸಿಕೊಳ್ಳಬಹುದು. ಆದರೆ ರಾಷ್ಟ್ರೀಯ ಲಾಂಛನದ ವಿರೂಪವನ್ನಲ್ಲ.
ರಾಷ್ಟ್ರೀಯ ಲಾಂಛನದಲ್ಲಿ ಈಗ ಕಾಣುವ ಉಗ್ರವಾದ ಸಿಂಹಗಳ ಬಗ್ಗೆ ಇಂದಲ್ಲ, ಮುಂದೊಂದು ದಿನ ಹೇಳಲೇಬೇಕಾಗುತ್ತದೆ. ಆದರೆ ಇನ್ನೊಂದು ಪ್ರಶ್ನೆ ಪ್ರಾಯಶಃ ಹೆಚ್ಚು ಮುಖ್ಯವಾದುದು: ಭಾರತದ ಲಕ್ಷಾಂತರ ದುರ್ಬಲ ಜನ ಮತ್ತು ಭಾರತದ ನೆರೆಹೊರೆಯವರು ಬದಲಾದ ಲಾಂಛನವನ್ನು ಹೇಗೆ ಅರ್ಥೈಸುತ್ತಾರೆ? ಭಾರತದ ರಾಜ್ಯವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸೈನ್ಯಗಳಲ್ಲಿ ಒಂದಾಗಿದೆ. ಇದು ಕೃತಕ ಬುದ್ಧಿಮತ್ತೆಯಿಂದ ವರ್ಧಿಸಲ್ಪಟ್ಟವುಗಳನ್ನು ಒಳಗೊಂಡಂತೆ ನಮ್ಮ ಪ್ರಪಂಚದ ಅತ್ಯಂತ ಅತ್ಯಾಧುನಿಕ ಭದ್ರತೆ ಮತ್ತು ರಕ್ಷಣಾ ತಂತ್ರಜ್ಞಾನಗಳಿಗೆ ಪ್ರವೇಶವನ್ನು ಹೊಂದಿದೆ. ಭಾರತೀಯ ರಾಜ್ಯವು ಆಂತರಿಕ ಪೋಲೀಸಿಂಗ್ಗಾಗಿ ಅಸಾಧಾರಣವಾದ ಪಡೆಗಳನ್ನು ಹೊಂದಿದೆ. ಅಂತಹ ರಾಜ್ಯವು ತನ್ನ ಲಾಂಛನವನ್ನು ಮಾರ್ಪಡಿಸಿದಾಗ ಮತ್ತು ಹೊಸ ಮತ್ತು ಸ್ನೇಹಿಯಲ್ಲದ ಲಾಂಛನವನ್ನು ಪ್ರತಿಷ್ಠಿತ ಹೊಸ ಎತ್ತರದಲ್ಲಿ ಇರಿಸಿದಾಗ, ಜನರು ಯಾವ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ?
ಇದಲ್ಲದೆ, ನಮ್ಮ ನಡುವೆ ಲಕ್ಷಾಂತರ ಜನ ಉತ್ತರ, ಈಶಾನ್ಯ, ಪೂರ್ವ, ದಕ್ಷಿಣ ಸೇರಿದಂತೆ ಮುಖ್ಯವಾಹಿನಿಯಿಂದ ಹೊರಗಿದ್ದಾರೆ. ಅವರನ್ನು ನಿರ್ಲಕ್ಷಿಸಲಾಗಿದೆ. ಅವರು ಹಿಂಸೆಗೆ ಒಳಗಾಗಿದ್ದಾರೆ. ದಮನಕ್ಕೊಳಗಾಗಿದ್ದಾರೆ. ಅವರಿಗೆ ಈ ಕೋಪಗೊಂಡ ಸಿಂಹಗಳು ಯಾವ ರೀತಿಯ ಭರವಸೆ ನೀಡುತ್ತವೆ? ಇದು ಕೇವಲ ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ವಿಷಯವಲ್ಲ. ಸಮಾಜದ ಅಂಚಿನಲ್ಲಿ ವಾಸಿಸುವವರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಘನತೆ ಮತ್ತು ಭ್ರಾತೃತ್ವದ ಬಗ್ಗೆ ಭರವಸೆ ನೀಡುವ ವಿಚಾರ.
ನೀವು ಸಹಕಾರ ಅಥವಾ ಭಾಗವಹಿಸುವಿಕೆಗೆ ಜನರನ್ನು ಹೆದರಿಸಲು ಸಾಧ್ಯವಿಲ್ಲ. ಅವರನ್ನು ಅಭಿಮಾನ ಮತ್ತು ಗೌರವದಿಂದ ಗೆಲ್ಲಬೇಕು. ಸೌಹಾರ್ದತೆಯು ಭಾರತದ ಸಂದೇಶದ ತಿರುಳಿನಲ್ಲಿ ಉಳಿದಿದೆ. ಭಾರತದ ಶಕ್ತಿಯು ತನ್ನನ್ನು ತಾನು ರಕ್ಷಿಸಿಕೊಳ್ಳುವುದಾಗಿದೆ. ಭಾರತ ಯಾರನ್ನೂ ಬೆದರಿಸಲು ಇಲ್ಲ ಎಂದು ಜಗತ್ತಿಗೆ ತಿಳಿಸಬೇಕಾಗಿದೆ. ಪ್ರಧಾನಿ ಮೋದಿಯವರು ತಮ್ಮ ಸರ್ಕಾರದ ಲೋಪವನ್ನು ತಿದ್ದುಪಡಿ ಮಾಡಿದರೆ, ಭಾರತವನ್ನು ಪ್ರತಿನಿಧಿಸಲು ಭವ್ಯ, ಜಾಗರೂಕ ಮತ್ತು ಶಾಂತ ಸಿಂಹಗಳು ಮರಳಿದರೆ ಕಳೆದುಕೊಳ್ಳುವುದು ಏನೂ ಇಲ್ಲ.