
ಧಾರವಾಡ, ಏ.14: ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಲೋಕಾರ್ಪಣೆ ಮಾಡಿದರು.

ನಗರದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಸಂವಿಧಾನ ಪುಸ್ತಕ ರೀತಿಯಲ್ಲಿ ಇದನ್ನು ಸಿದ್ಧಗೊಳಿಸಲಾಗಿದೆ. ಸಚಿವ ಲಾಡ್ ಅವರು ಲೋಕಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರಾದ ದುರ್ಗಮ್ಮ ಬಿಜವಾಡ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಧಾರವಾಡ ತಹಶೀಲ್ದಾರ್ ಡಿ.ಎಚ್.ಹೂಗಾರ, ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ ಇತರರು ಇದ್ದರು.

ಸಂವಿಧಾನ ಪೀಠಿಕೆಯ ವಿಶೇಷತೆ
ಈ ಪೀಠಿಕೆ ರಚನೆಯು ವಿಶೇಷವಾದ ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸುತ್ತದೆ. ಉನ್ನತ ದರ್ಜೆಯ ವಸ್ತುಗಳನ್ನು ಬಳಸಿ ಸೂಕ್ಷ್ಮವಾಗಿ ತಯಾರಿಸಲಾಗಿದ್ದು, ಇದು ತನ್ನ ಸೌಂದರ್ಯದ ಕಲಾತ್ಮಕ ಆಕರ್ಷಣೆ ಮತ್ತು ರಚನಾತ್ಮಕ ಸಮಗ್ರತೆಯನ್ನು ಪ್ರದರ್ಶಿಸುತ್ತಿದೆ. ತೆರೆದ ಪುಸ್ತಕದ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಅಸಾಧಾರಣ ಸ್ಪಷ್ಟತೆ ಮತ್ತು ದೀರ್ಘಕಾಲೀನ ಬಾಳಿಕೆಯನ್ನು ಖಚಿತಪಡಿಸುತ್ತದೆ.

ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಮಹತ್ವ, ಸಾರ ಮತ್ತು ಜ್ಞಾನವನ್ನು ಇದು, ನಿತ್ಯ ದಾಸೋಹ ಮಾಡುತ್ತದೆ.