ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಹನಿ ಟ್ರ್ಯಾಪ್ ಕೇಸ್ (Honey trap case) ಗೆ ಸಂಬಂಧಪಟ್ಟಂತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಎಲ್ಲಾ ಬುದ್ದಿ ಜೀವಿಗಳಿಗೂ ಗೊತ್ತಿದೆ. ಇದೆಲ್ಲ ನಡೆಯುತ್ತಿರೋದು ಅದೊಂದು ಖುರ್ಚಿಗಾಗಿ ಎಂದು ಪರೋಕ್ಷವಾಗಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.

ರಾಜಕಾರಣದಲ್ಲಿ ಅಧಿಕಾರದ ಕುರ್ಚಿಗಾಗಿ ಈ ಮಟ್ಟದ ರಾಜಕಾರಣ ಮಾಡೋದು ಸರಿಯಲ್ಲ. ಆ ಸಿಡಿ ಫ್ಯಾಕ್ಟರಿ (CD factory) ಓನರ್ ಯಾರು ? ಆ ಮಾಲೀಕ ಯಾರು ಎಂದು ಗೊತ್ತಾಗಬೇಕಿದೆ. ಈ ವಿಚಾರ ತನಿಖೆಯಾಗಿ ರಾಜ್ಯದ ಜನರ ಮುಂದೆ ಸತ್ಯ ಹೇಳಬೇಕಿದೆ ಎಂದಿದ್ದಾರೆ.
ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಏಳುವರೆ ಕೋಟಿ ಜನ ಕಾಯ್ತಿದ್ದಾರೆ. ಹಾಗಿದ್ರೆ ಆ ಮಹನೀಯ..ಆ ಪುಣ್ಯಾತ್ಮ ಯಾರು ಎಂದು ಗೊತ್ತಾಗಬೇಕು. ಇಷ್ಟು ಸಿಡಿಗಳಿಗೆ ಕೊಟ್ಟು ಬಂಡವಾಳ ಹಾಕಿ, ಟೀಮ್ ಮಾಡಿ ಇಷ್ಟೆಲ್ಲಾ ಸಿಡಿಗಳನ್ನ ಮಾಡಿಸಿರೋರು ಯಾರು ಅಂತ ತಿಳಿಯಲು ನಾವೆಲ್ಲಾ ಕಾಯ್ತಿದ್ದೇವೆ ಎಂದಿದ್ದಾರೆ.

ಹೀಗಾಗಿ ಕೂಡಲೇ ಸಚಿವ ರಾಜಣ್ಣನವರು (KN Rajanna) ದಯಮಾಡಿ ದೂರು ಕೊಡಬೇಕು. ಆದ್ರೆ ಯಾಕೆ ಈ ರೀತಿ ತಡ ಮಾಡಿ ಸತಾಯಿಸ್ತಿದ್ದಿರಾ ಎಂದು ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.