ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ 2022-23 ಸಾಲಿನ ಆಯವ್ಯಯದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ದೇಶದಲ್ಲಿ ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನೆರೆ, ಬರ ಮತ್ತು ಪ್ರಕೃತಿ ವಿಕೋಪಗಳಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರಿಗೆ ಧೈರ್ಯ ಹಾಗೂ ಆತ್ಮ ಸ್ಥೈರ್ಯ ತುಂಬುವಂತಹ ಯಾವುದೇ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಿಲ್ಲ ಎಂದು ಟೀಕಿಸಿ ಟ್ವೀಟ್ ಮಾಡಿದೆ.
UnionBudget2022ರ ಅಡಿಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಬಜೆಟ್ನಲ್ಲಿ ರೈತರನ್ನು ನಿರ್ಲಕ್ಷಿಸುವ ಮೂಲಕ ರೈತರ ಪ್ರತಿಭಟನೆಗೆ ಮೋದಿ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದೆಯೇ ಎಂದು ಪ್ರಶ್ನಿಸಿದೆ.
ಕೋವಿಡ್ ಲಾಕ್ಡೌನ್ಗಳಿಂದ ಉಂಟಾಗಿರುವ ಆರ್ಥಿಕ ಹಿನ್ನಡೆಯನ್ನು ಸರಿದೂಗಿಸಲು ಯಾವುದೇ ಯೋಜನೆಗಳನ್ನು ಈ ಬಜೆಟ್ನಲ್ಲಿ ಘೋಷಿಸಿಲ್ಲ. ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಮತ್ತು ಮಧ್ಯಮ ವರ್ಗದ ಜನರ ಮೇಲಿನ ತೆರಿಗೆಯ ಹೊರೆಯನ್ನು ಸರ್ಕಾರ ಇಳಿಸುವ ನಿರೀಕ್ಷೆಯನ್ನು ಸರ್ಕಾರ ಹುಸಿ ಮಾಡಿದೆ.
ಮುಂದುವರೆದು, ‘ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ! ಕೇವಲ ಒಂದೂವರೆ ಗಂಟೆಯಲ್ಲೇ ಮುಗಿದುಹೋದ ಬಜೆಟ್ ಭಾಷಣವೇ ಇದಕ್ಕೆ ಸಾಕ್ಷಿ. ಜನರ ಸುಲಿಗೆ ಮಾಡಿ ಜಿಎಸ್ಟಿ ತೆರಿಗೆ ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತವಾಗಿದೆ’ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.