ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಕಳೆದ ಆರು ತಿಂಗಳಿಂದ ಸಾಕಷ್ಟು ವಿದ್ಯಮಾನಗಳಾಗಿವೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಕಾಂಗ್ರೆಸ್ ತ್ಯಜಿಸಿ ಹೊಸ ಪಕ್ಷ ಕಟ್ಟಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಕೂಡ ಮಾಡಿಕೊಂಡಿದ್ದಾರೆ. ಇದಲ್ಲದೆ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ಶೀತಲ ಸಮರವೇ ನಡೆದುಹೋಗಿದೆ. ಇಷ್ಟೆಲ್ಲಾ ಆದರೂ ಪಂಜಾಬಿನಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಕಾಂಗ್ರೆಸ್ ಭಾರೀ ವಿಶ್ವಾಸ ಹೊಂದಿದೆ.
ಕಾಂಗ್ರೆಸ್ ಅಷ್ಟು ವಿಶ್ವಾಸದಲ್ಲಿರಲು ಕಾರಣಗಳು ಬಹಳಷ್ಟಿವೆ. ಹಿಂದೆ ಪಂಜಾಬ್ ಅನ್ನು ದಶಕಗಳ ಕಾಲ ಆಳಿದ ಶಿರೋಮಣಿ ಅಖಾಲಿದಳ ಈಗ ವರ್ಚಸ್ಸು ಕಳೆದುಕೊಂಡಿದೆ. 2014 ಮತ್ತು 2019ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಇಡೀ ಉತ್ತರ ಭಾರತದಾದ್ಯಂತ ಜಯಭೇರಿ ಭಾರಿಸಿದ್ದಾಗಲೂ ಪಂಜಾಬಿನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ರೈತರಿಗೆ ಮಾರಕವಾಗುವ 3 ಕೃಷಿ ಕಾನೂನುಗಳನ್ನು ತಂದ ಬಳಿಕವಂತೂ (ಈಗ ವಾಪಸ್ ಪಡೆಯಲಾಗಿದೆ) ಪಂಜಾಬಿನಲ್ಲಿ ಬಿಜೆಪಿ ವಿರುದ್ಧ ಇನ್ನಷ್ಟು ಆಕ್ರೋಶ ಮನೆಮಾಡಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷ ಟೇಕ್ ಆಫ್ ಆಗುವುದು ಅನುಮಾನಸ್ಪದವಾಗಿದೆ. ಇನ್ನು ಆಮ್ ಆದ್ಮಿ ಪಕ್ಷದ ಅಲೆ 2017ರಲ್ಲಿ ಇದ್ದಂತೆ ಕಾಣುತ್ತಿಲ್ಲ.
ಆದರೆ ಇಷ್ಟರ ನಡುವೆ ಕಾಂಗ್ರೆಸಿಗೆ ದೊಡ್ಡ ಸಮಸ್ಯೆ ಅಂತಾ ಕಾಡುತ್ತಿರುವುದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವ ವಿಚಾರದಲ್ಲಿ ಮಾತ್ರ. ಸಾಮಾನ್ಯವಾಗಿ ಬಹುತೇಕ ಸಂದರ್ಭಗಳಲ್ಲಿ ಎಲ್ಲ ಪಕ್ಷಗಳೂ ಹಾಲಿ ಮುಖ್ಯಮಂತ್ರಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತವೆ. ಒಂದೊಮ್ಮೆ ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ಗೊಂದಲ ಸೃಷ್ಟಿಯಾದರೆ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಅದನ್ನು ಹೋಗಲಾಡಿಸಲಾಗುತ್ತದೆ. ಪಂಜಾಬ್ ಕಾಂಗ್ರೆಸ್ ವಿಷಯದಲ್ಲೂ ಹಾಗೆ ಆಗಿದೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕೆಳಗಿಳಿಸುವ ಸಂದರ್ಭದಲ್ಲಿ ಅನೇಕ ಹಿರಿಯರಿದ್ದರೂ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ರಾಹುಲ್ ಗಾಂಧಿ ಅವರ ಈ ‘ಮಾಸ್ಟರ್ ಸ್ಟ್ರೋಕ್’ಗೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ‘ಚುನಾವಣೆ ನಂತರವೂ ಚನ್ನಿ ಅವರೇ ಮುಖ್ಯಮಂತ್ರಿ ಆಗಿರುತ್ತಾರಾ?’ ಎಂಬ ಸಣ್ಣ ಅನುಮಾನವೊಂದು ಬಗೆಹರಿದಿರಲಿಲ್ಲ. ಈಗ ಅದು ಬೃಹದಾಕಾರವಾಗಿ ಬೆಳೆದಿದೆ. ‘ಪಂಜಾಬಿನಲ್ಲಿ ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಅಭ್ಯರ್ಥಿ ಬಿಂಬಿಸುವ ವಿಚಾರದಲ್ಲಿ ಎಡವಟ್ಟಾದರೆ ಮಾತ್ರ’ ಎಂಬಂತಾಗಿದೆ.
ವಾಸ್ತವವಾಗಿ ಎರಡು ಸಮಸ್ಯೆಗಳಿವೆ. ಒಂದು ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪೈಪೋಟಿ ಇದೆ. ಇನ್ನೊಂದು ಆಮ್ ಆದ್ಮಿ ಪಕ್ಷ ಸಂಸದ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬಿಟ್ಟಿದೆ. ಒಂದೊಮ್ಮೆ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಇದ್ದರೂ ಕಾಂಗ್ರೆಸ್ ಹೇಗೋ ಚುನಾವಣೆವರೆಗೂ ಕಾಲ ದೂಡುತ್ತಿತ್ತು. ಆದರೀಗ ಆಮ್ ಆದ್ಮಿ ಪಕ್ಷ ತಾನು ಸಿಎಂ ಅಭ್ಯರ್ಥಿಯನ್ನು ಘೋಷಿಸಿ ಪ್ರತಿದಿನವೂ ಕಾಂಗ್ರೆಸ್ ಸಿಎಂ ಅಭ್ಯರ್ಥಿ ವಿಷಯವನ್ನು ಚರ್ಚೆಯ ಮುನ್ನಲೆಗೆ ತರುತ್ತಿದೆ. ಪರಿಸ್ಥಿತಿ ಗೊಂದಲಮಯವಾಗಿರುವುದರಿಂದ ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಬಣಗಳು ಕೂಡ ‘ಘೋಷಣೆ ಆಗೇ ಬಿಡಲಿ, ಸ್ಪಷ್ಟತೆ ಸಿಗಲಿ’ ಎನ್ನುತ್ತಿವೆ.
ಚುನಾವಣೆ ಹೊಸ್ತಿಲಲ್ಲಿ, ಎಲ್ಲವೂ ಸರಿ ಇದ್ದ ಸಂದರ್ಭದಲ್ಲಿ ಇಂಥ ಸಮಸ್ಯೆ ಉಂಟಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡಿಗೆ, ವಿಶೇಷವಾಗಿ ರಾಹುಲ್ ಗಾಂಧಿ ಅವರಿಗೆ ತಲೆಬಿಸಿಯಾಗಿದೆ. ಇದೇ ಹಿನ್ನಲೆಯಲ್ಲಿ ಗುರುವಾರ (ಜನವರಿ 27) ರಾಹುಲ್ ಗಾಂಧಿ ‘ಪಂಜಾಬ್ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾರ್ಯಕರ್ತರು ಶೀಘ್ರವೇ ನಿರ್ಧರಿಸಲಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ ‘ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲು ಸಾಧ್ಯವಿಲ್ಲ. ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರಲ್ಲಿ ಯಾರದೇ ಹೆಸರನ್ನು ಪ್ರಕಟಿಸಿದರೂ ಇನ್ನೊಬ್ಬರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಕೂಡ ತಿಳಿಸಿದ್ದಾರೆ. ಇದರಿಂದ ಒಂದು ಅಂಶ ಗೊತ್ತಾಗುತ್ತದೆ. ರಾಹುಲ್ ಗಾಂಧಿ ಈಗಾಗಲೇ ಇಬ್ಬರ ಜೊತೆಯಲ್ಲೂ ಮಾತನಾಡಿದ್ದಾರೆ ಎಂದು.
ಕಾಂಗ್ರೆಸ್ ಮೂಲಗಳ ಪ್ರಕಾರ ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗುತ್ತದೆ. ಏಕೆಂದರೆ ಚರಣಜಿತ್ ಸಿಂಗ್ ಚನ್ನಿ ಅಧಿಕಾರ ವಹಿಸಿಕೊಂಡ ಬಳಿಕ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಬಹುತೇಕರಲ್ಲಿ ಅವರಿಗೆ ಇನ್ನೊಂದು ಅವಕಾಶ ಕೊಡಬೇಕು ಎಂಬ ಅಭಿಪ್ರಾಯ ಇದೆ. ಚರಣಜಿತ್ ಸಿಂಗ್ ಚನ್ನಿ ಮೂಲ ಕಾಂಗ್ರೆಸಿಗರು. ನವಜೋತ್ ಸಿಂಗ್ ಸಿಧು ಬಿಜೆಪಿಯಿಂದ ಬಂದವರು. ಈ ಹಿನ್ನೆಲೆಯಲ್ಲಿ ಸಿಧು ಇನ್ನು ಸ್ವಲ್ಪ ಕಾಯಲಿ ಎಂಬ ಅಭಿಪ್ರಾಯವಿದೆ. ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಬದಲಿಸಿದರೆ ಟೀಕೆಗಳು ಎದುರಾಗುತ್ತವೆ. ನೇರವಾಗಿ ಉತ್ತರ ಪ್ರದೇಶ ಹಾಗೂ ಉತ್ತರಖಂಡಾ ಚುನಾವಣೆ ಮೇಲೂ ಪರಿಣಾಮ ಬೀರಬಹುದು.
ಜಾತಿ ಲೆಕ್ಕಾಚಾರ ನೋಡುವುದಾದರೆ ಪಂಜಾಬಿನಲ್ಲಿ ಶೇಕಡಾ 23ರಷ್ಟು ಜಾಟ್ ಸಿಖ್ ಮತದಾರರಿದ್ದಾರೆ. ಶೇಕಡಾ 36ರಷ್ಟು ದಲಿತ್ ಸಿಖ್ ಮತದಾರರಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಜಾಟ್ ಸಿಖ್ ಸಮುದಾಯದವರು. ಹಾಗಾಗಿಯೇ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದೆ ಜಾಟ್ ಸಿಖ್ ಸಮುದಾಯ ಬೆಂಬಲಿಸಿದ ಕಾರಣಕ್ಕಾಗಿಯೇ ಅಖಾಲಿದಳ- ಬಿಜೆಪಿ ಸರ್ಕಾರ ಬರಲು ಸಾಧ್ಯವಾಗಿತ್ತು. ಜಾಟ್ ಸಿಖ್ ಪ್ರಾಬಲ್ಯದ ಕಾರಣಕ್ಕಾಗಿಯೇ ಆಮ್ ಆದ್ಮಿ ಪಕ್ಷ ಕೂಡ ಅದೇ ಸಮುದಾಯದ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವುದು. ದಲಿತ್ ಸಿಖ್ ಮತದಾರರ ಸಂಖ್ಯೆ ಶೇಕಡಾ 36ರಷ್ಟಿದ್ದರೂ ಅವರು ಬಿಜೆಪಿ, ಅಖಾಲಿದಳದ ಜೊತೆಗೆ ಹೋಗಲಾರರು. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಬೇಕಾಗಿದೆ.
ಜಾಟ್ ಸಿಖ್ ಸಮುದಾಯ ಇಷ್ಟೆಲ್ಲಾ ಪ್ರಭಾವ ಹೊಂದಿದ್ದರೂ ಈ ಬಾರಿ ಕಾಂಗ್ರೆಸ್ ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಇಷ್ಟು ದಿನ ದಲಿತ್ ಸಿಖ್ ಎದುರಿಸುತ್ತಿದ್ದ ಸಮಸ್ಯೆಯನ್ನು ಈಗ ಜಾಟ್ ಸಿಖ್ ಸಮುದಾಯ ಎದುರಿಸುತ್ತಿದೆ. ಕಾಂಗ್ರೆಸ್ ದಲಿತ್ ಸಿಖ್ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ತಕ್ಷಣ ಜಾಟ್ ಸಿಖ್ ಸಮುದಾಯ ಸಿಡಿದೆದ್ದು ಬಿಜೆಪಿ ಅಥವಾ ಅದರ ಮೈತ್ರಿಪಕ್ಷಗಳನ್ನು ಬೆಂಬಲಿಸಲು ಸಾಧ್ಯವಿಲ್ಲ. ಕೃಷಿ ಕಾನೂನುಗಳ ವಿಷಯದಲ್ಲಿ ದೊಡ್ಡ ಮಟ್ಟದ ಪೆಟ್ಟು ತಿಂದಿರುವವರು ಇದೇ ಜಾಟ್ ಸಿಖ್ ಮತದಾರರು. ಈ ಎಲ್ಲಾ ಹಿನ್ನಲೆಯಲ್ಲಿ ಚನ್ನಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಚೆನ್ನ ಎಂದು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.