ಪ್ರಾಚೀನ ಇಂಡೋ ಆರ್ಯನ್ ಭಾಷೆಯಲ್ಲಿ ರಚಿತವಾಗಿದೆ ಎಂದು ಹೇಳಲಾಗುವ ವೇದಗಳು ಭಾರತೀಯ ಪ್ರಾಚೀನ ಸಾಹಿತ್ಯದ ಅಪ್ರತಿಮ ದಾರ್ಶನಿಕ ಕೃತಿಗಳು. ಕೆಲವು ಮೂಲಗಳ ಪ್ರಕಾರ ವೇದಗಳಲ್ಲಿ ಬಳಸಲಾಗಿರುವ ಭಾಷೆ ಪರ್ಷಿಯಾ ದೇಶದ ಅವೆಸ್ತಾ ಗ್ರಂಥದ ಭಾಷೆಯನ್ನು ಹೋಲುತ್ತದೆ. ಆದರೂ ಸಾಮಾನ್ಯವಾಗಿ ವೇದಗಳನ್ನು ಸಂಸ್ಕೃತ ಭಾಷೆಯಲ್ಲಿದೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಸಂಸ್ಕೃತ ಭಾಷೆಯ ಅಳಿವು-ಉಳಿವಿಗೆ ವೇದಗಳ ಅಸ್ಮಿತೆಯನ್ನು ತಳುಕುಹಾಕುವುದು ಸಮಂಜಸವಲ್ಲ. ಭಾರತದ ಮಹಾನ್ ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕಾಳಿದಾಸನ ಕೃತಿಗಳು ಸಂಸ್ಕೃತದಲ್ಲೇ ರಚಿತವಾಗಿದ್ದು ಜ್ಞಾನದ ಎಲ್ಲ ಶಿಸ್ತುಗಳಲ್ಲೂ ಸಂಸ್ಕೃತದ ಪ್ರಭಾವವನ್ನು ಕಾಣಬಹುದಾಗಿದೆ. ಆದರೆ ಹಿಂದುತ್ವವಾದಿಗಳಿಗೆ ಇವೆರಡನ್ನೂ ಭಿನ್ನವಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸಂಸ್ಕೃತಿಗೆ ಸಂಸ್ಕೃತ ಭಾಷಿಕ ಅಡಿಪಾಯವಾದರೆ, ವೇದಗಳು ಮೌಲಿಕ ಅಡಿಪಾಯವೆಂದು ಪ್ರತಿಪಾದಿಸುವ ಸಂಪ್ರದಾಯವಾದಿಗಳು ವೇದಗಳಲ್ಲಿ ಜಗತ್ತಿನ ಸರ್ವಸ್ವವನ್ನೂ ಕಾಣುವುದೂ ಒಂದು ಪರಂಪರೆಯಾಗಿ ಬೆಳೆದುಬಂದಿದೆ. ಆಧುನಿಕ ಪ್ರಪಂಚದ ವೈಜ್ಞಾನಿಕ ಅನ್ವೇಷಣೆಗಳನ್ನೂ ವೇದಗಳಲ್ಲಿ ಹೆಕ್ಕಿ ತೆಗೆಯಲು ಯತ್ನಿಸುವ ವೇದಾಂತಿಗಳು ಸಂಸ್ಕೃತ ಭಾಷೆಯ ಐತಿಹ್ಯವನ್ನೂ ವೇದಗಳಲ್ಲೇ ಹುಡುಕುತ್ತಾರೆ. ಪ್ರಾಚೀನ ಭಾರತದ ಬುಡಕಟ್ಟು ಸಮಾಜದ ಸಾಮಾನ್ಯ ಜನಜೀವನದ ಅನುಭವದ ಹಿನ್ನೆಲೆಯಲ್ಲಿ ರಚಿತವಾಗಿರುವ ವೇದಗಳು ಮೌಖಿಕ ಪರಂಪರೆಯಲ್ಲೇ ಹೆಚ್ಚು ಪ್ರಚಲಿತವಾಗಿದ್ದುದನ್ನೂ ವಿದ್ವಾಂಸರು ಗುರುತಿಸುತ್ತಾರೆ. ಆದರೆ ಸಂಸ್ಕೃತಿಯನ್ನು ಸಂಸ್ಕೃತದ ಅನ್ಯಲಿಂಗ ರೂಪವೆಂದು ಪರಿಗಣಿಸುವ ವೇದಾಂತಿಗಳು ಭಾರತೀಯ ಸಂಸ್ಕೃತಿಗೆ ಸಂಸ್ಕೃತವೇ ತಳಹದಿ ಎಂದು ವಾದಿಸುತ್ತಾರೆ. ಈ ಹಿನ್ನೆಲೆಯಲ್ಲೇ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತಿವೆ.
ಭಾಷೆಗೊಂದು ವಿಶ್ವವಿದ್ಯಾಲಯ?
ಒಂದು ಪ್ರಾಚೀನ ಭಾಷೆಯಾಗಿ, ಒಂದು ನಿರ್ದಿಷ್ಟ ಜನಸಮುದಾಯದ ಪಾರಂಪರಿಕ ಸಂವಹನ ಮಾಧ್ಯಮವಾಗಿ ಸಂಸ್ಕೃತವು ತನ್ನದೇ ಆದ ಮಹತ್ವ ಪಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಇಂದು ಇದು ಮೃತಭಾಷೆ ಎಂದೇ ಪರಿಗಣಿಸಲ್ಪಟ್ಟಿದ್ದು ಯಾವುದೇ ಸಮುದಾಯದ ನಿತ್ಯಭಾಷೆಯಾಗಿ, ಆಡುಭಾಷೆಯಾಗಿ ಉಳಿದಿಲ್ಲ ಎನ್ನುವುದೂ ಸತ್ಯ. ಈ ಭಾಷೆಯಲ್ಲಿ ರಚಿತವಾಗಿರುವ ಗ್ರಂಥಗಳನ್ನು ಅಧ್ಯಯನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ತರವೇ ? ಸಂಸ್ಕøತ ವೇದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಮೊದಲು ಸಂಸ್ಕøತ ವಿವಿಯನ್ನು ಮಾತ್ರ ಸ್ಥಾಪಿಸುವುದಾಗಿ ಘೋಷಿಸಿ ನಂತರ ವೇದವನ್ನೂ ಸೇರಿಸಿದ ರಾಜ್ಯ ಸರ್ಕಾರ ಈ ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನೂ ಕಡ್ಡಾಯವಾಗಿ ಬೋಧಿಸುವ ಮೂಲಕ ಜ್ಯೋತಿಷ್ಯ ಶಾಸ್ತ್ರಕ್ಕೆ ವೈಜ್ಞಾನಿಕ ಮೆರುಗು ನೀಡಲು ಪ್ರಯತ್ನಿಸಲಾಗುತ್ತದೆ.
ಭಾರತೀಯ ಪುರಾಣ ಗ್ರಂಥಗಳಲ್ಲಿ ಇರುವುದೆಲ್ಲವೂ ಶ್ರೇಷ್ಠ ಮತ್ತು ಶ್ರೇಷ್ಠವಾದುದನ್ನು ಯಾವುದೇ ರೀತಿಯಲ್ಲೂ ಪ್ರಶ್ನಿಸುವ, ಪರಾಮರ್ಶಿಸುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯವನ್ನು ತಳೆದ ಸಾಂಪ್ರದಾಯಿಕ ವ್ಯಕ್ತಿಗಳು, ಧಾರ್ಮಿಕ ಮತೀಯವಾದಿಗಳು ಸಂಸ್ಕೃತ ವಿಶ್ವವಿದ್ಯಾಲಯದ ರೂಪುರೇಷೆಗಳನ್ನು ನಿರ್ಧರಿಸುವುದಾದರೆ ಅದು ಸಂಸ್ಕೃತ ಭಾಷೆಗೆ ಅಪಚಾರವೆಸಗಿದಂತಾಗುತ್ತದೆ. ಯಾವುದೇ ಒಂದು ನಿರ್ದಿಷ್ಟ ಭಾಷೆಯಾಗಲೀ, ಅನ್ಯ ಶಿಸ್ತಿನ ವಿಷಯವಾಗಲೀ ಪ್ರತ್ಯೇಕ ಅಧ್ಯಯನ-ಸಂಶೋಧನೆಗೆ ಒಳಪಡಬೇಕಾದಲ್ಲಿ ವೈಜ್ಞಾನಿಕ ಪರಿಕಲ್ಪನೆ ಇರುವುದು ಅತ್ಯವಶ್ಯವಾಗುತ್ತದೆ. ಅದರಲ್ಲೂ ಒಂದು ನಿರ್ದಿಷ್ಟ ಭಾಷೆಗಾಗಿಯೇ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕಾದಲ್ಲಿ, ಆ ಭಾಷೆಯ ಚಾರಿತ್ರಿಕ, ಪಾರಂಪರಿಕ, ವೈಚಾರಿಕ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೇ ಪರಾಮರ್ಶಿಸಬೇಕಾಗುತ್ತದೆ.
ಸಂಸ್ಕೃತ ಭಾಷೆಗಾಗಿ ಒಂದು ವಿಶ್ವವಿದ್ಯಾಲಯದ ಅಗತ್ಯ ಕಂಡುಬರುವುದಿಲ್ಲವಾದರೂ, ಒಂದು ಪ್ರಾಚೀನ ಭಾಷೆಯಾಗಿ ಸಂಸ್ಕೃತದ ಆಳವನ್ನು ಶೋಧಿಸುವ ಮೂಲಕ, ಪ್ರಾಚೀನ ಭಾರತದ ಸಾಹಿತ್ಯವನ್ನು ಆಧ್ಯಯನ ಮಾಡುವ ಅವಶ್ಯಕತೆಯಂತೂ ಇದ್ದೇ ಇದೆ. ಆದರೆ ಇದೇ ಅಗತ್ಯತೆ ಅನ್ಯ ಭಾಷೆಗಳಿಗೂ ಅನ್ವಯಿಸುತ್ತದೆ. ಭಾಷಾ ಅಧ್ಯಯನದಲ್ಲಿ ಬಹುಭಾಷಿಕ ಆಯಾಮಗಳಿಲ್ಲದೆ ಹೋದಲ್ಲಿ ಏಕಮುಖೀ ಸಂಶೋಧನೆಯಲ್ಲಿ ಪರ್ಯವಸಾನಗೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಈಗಾಗಲೇ ಸಂಸ್ಕೃತ ಅಧ್ಯಯನ ಪೀಠಗಳಲ್ಲಿ ಈ ನ್ಯೂನತೆಯನ್ನು ಗುರುತಿಸಬಹುದಾಗಿದೆ. ಎಲ್ಲ ಭಾಷೆಗಳಿಗೂ ಸಂಸ್ಕೃತವೇ ಮೂಲ ಎಂಬ ಅಭಿಪ್ರಾಯ, ಆ ಮೂಲವನ್ನು ಶೋಧಿಸುವುದರಲ್ಲಿ ಕೊನೆಗೊಳ್ಳದೆ, ವೈಭವೀಕರಿಸುವುದರಲ್ಲಿ ಕೊನೆಗಾಣುವುದು ಭಾಷಾ ಸಂಶೋಧನೆಯ ಪ್ರಥಮ ನ್ಯೂನತೆಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಕೃತದಷ್ಟೇ ಪ್ರಾಚೀನ ಭಾಷೆಗಳಾದ ಪ್ರಾಕೃತ, ಫಾರ್ಸಿ, ಪಾಲಿ ಮುಂತಾದ ಭಾಷೆಗಳನ್ನು ಸಮಕಾಲೀನ ಭಾಷೆಗಳಿಗೆ ಮುಖಾ ಮುಖಿಯಾಗಿಸಿ ಅಧ್ಯಯನ ಮಾಡುವುದು ಇಂದಿನ ತುರ್ತು ಅಗತ್ಯತೆಯಾಗಿದೆ.

ಮತ್ತೊಂದೆಡೆ ಯಾವುದೇ ಒಂದು ಭಾಷೆಯ ಅಧ್ಯಯನ ಮಾಡುವಾಗ ಆ ಭಾಷೆಯ ಆಂತರ್ಯದಲ್ಲಿ ಅಡಗಿರಬಹುದಾದ ಜನಪರ ಕಾಳಜಿ ಮತ್ತು ಜನದನಿಯನ್ನು ಗುರುತಿಸದೆ ಹೋದಲ್ಲಿ ಗತಕಾಲದ ಸಾಮಾಜಿಕ ಚಿತ್ರಣವನ್ನು ವೈಜ್ಞಾನಿಕ-ವೈಚಾರಿಕ ನೆಲೆಗಟ್ಟಿನಲ್ಲಿ ಗ್ರಹಿಸುವುದು ಅಸಾಧ್ಯವಾಗುತ್ತದೆ. ಸಂಸ್ಕೃತ ವಿಚಾರದಲ್ಲಿ ಈ ಸಂಭವವನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ನಿಲುವುಗಳನ್ನು ವಿರೋಧಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬಿಂಬಿಸುವ ಸಂಸ್ಕೃತ ವಿದ್ವಾಂಸರನ್ನು ವಿದ್ವತ್ ಜಗತ್ತು ನಿರ್ಲಕ್ಷಿಸುವುದನ್ನೂ ಕಾಣಬಹುದಾಗಿದೆ. ಒಂದು ಸ್ಥಾಪಿತ ಪರಂಪರೆ ಮತ್ತು ಒಪ್ಪಿತ ತತ್ವಗಳಿಗೆ ಬದ್ಧರಾದವರನ್ನು ಮಾತ್ರ ಭಾಷಾ ಸಂಶೋಧನೆಯ-ಅಧ್ಯಯನದ ವಾರಸುದಾರರೆಂದು ಪರಿಗಣಿಸುವುದು, ಶ್ರೇಣೀಕೃತ ಜಾತಿವ್ಯವಸ್ಥೆಯ ವಿಸ್ತೃತ ಭಾಗವಾಗಿಯೇ ತೋರುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತ ಭಾಷಾ ಅಧ್ಯಯನಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯದ ಅವಶ್ಯಕತೆ ಕಂಡುಬರುವುದಿಲ್ಲ. ಬದಲಾಗಿ ಕರ್ನಾಟಕದ ಜನಸಮುದಾಯದ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತದಲ್ಲಿರುವುದರಿಂದ ಕನ್ನಡದ ಜೊತೆಗೇ ಈ ಭಾಷೆಗಳನ್ನೂ ಅಧ್ಯಯನ ಮಾಡಿ ಉಳಿಸುವ ಗುರುತರ ಜವಾಬ್ದಾರಿ ಹೆಚ್ಚಾಗಿದೆ. ವಿಶ್ವದಲ್ಲಿ ಪ್ರಾಚೀನ ಭಾಷೆಗಳೆಂದೇ ಗುರುತಿಸಲ್ಪಟ್ಟಿರುವ ಲ್ಯಾಟಿನ್, ಗ್ರೀಕ್, ಹಿಬ್ರೂಗಳಿಗೆ ಯಾವುದೇ ದೇಶದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿಲ್ಲ. ಜನಸಮುದಾಯಗಳ ದೃಷ್ಟಿಯಲ್ಲಿ ಈ ಭಾಷೆಗಳಿಗೂ ಸಂಸ್ಕøತಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲದಿರುವುದನ್ನೂ ಪರಿಗಣಿಸಬೇಕಾಗಿದೆ. ಆದರೆ ಭಾರತದಲ್ಲಿನ ದುರಂತವೆಂದರೆ ಸಂಸ್ಕøತ ಭಾಷೆ ಒಂದು ನಿರ್ದಿಷ್ಟ ಜಾತಿ ಸಮುದಾಯದ ಭಾವನಾತ್ಮಕ ಸಂಗತಿಯಾಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಸಂಸ್ಕೃತವನ್ನು ಒಂದು ಅಸ್ತ್ರವಾಗಿ ಪ್ರಯೋಗಿಸಲಾಗುತ್ತಿದೆ.
ಈಗ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯ ಮಾಗಡಿ ಸಮೀಪ 100 ಎಕರೆ ಭೂಮಿಯನ್ನು ಸಂಸ್ಕೃತ ವಿಶ್ವವಿದ್ಯಾಲಯಕ್ಕಾಗಿ ಬಳಸಿಕೊಳ್ಳುತ್ತಿದ್ದು 359 ಕೋಟಿ ರೂ ಅನುದಾನ ಬಿಡುಗಡೆ ಮಾಡಿರುವುದು ಸಹಜವಾಗಿಯೇ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಪರಿಹರಿಸಿ, ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕಾದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಎರಡು ಕೋಟಿ ರೂ ಅನುದಾನ ನೀಡಲು ಕರ್ನಾಟಕ ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ಕನ್ನಡ ಬೋಧಕರ ಕೊರತೆ ಇದ್ದು, ಭಾಷಾ ಕಲಿಕೆಗಾಗಿ ಸರ್ಕಾರ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ವಾಸ್ತವ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಕಡಿಮೆ ಮಾಡಲಾಗಿದ್ದು, ಭಾಷೆಯ ಬೆಳವಣಿಗೆಗಾಗಿ ಶ್ರಮಿಸಬೇಕಾದ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳನ್ನು ರಾಜಕೀಕರಣಗೊಳಿಸಿ ಸಾಂಸ್ಕೃತಿಕವಾಗಿ ಕಲುಷಿತಗೊಳಿಸಲಾಗುತ್ತಿದೆ.
ಸಂಸ್ಕೃತ ವಿಶ್ವವಿದ್ಯಾಲಯದ ವಿರುದ್ಧ ಕೇಳಿಬರುತ್ತಿರುವ ಗಟ್ಟಿ ಧ್ವನಿಗೆ ಕನ್ನಡದ ಸಾಹಿತ್ಯ ವಲಯವೂ ಸಕಾರಾತ್ಮಕವಾಗಿ ಇನ್ನೂ ಹೆಚ್ಚಿನ ಉತ್ಸುಕತೆಯಿಂದ ಸ್ಪಂದಿಸಬೇಕಿದೆ. ಮೈಸೂರಿನ ಶಾಸ್ತ್ರೀಯ ಅಧ್ಯಯನ ಕೇಂದ್ರ ಅಪಾಯದಲ್ಲಿದ್ದಾಗಲೂ ದಿವ್ಯಮೌನ ವಹಿಸಿದ್ದ ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಇಂದೂ ಇದೇ ಮೌನವ್ರತವನ್ನು ಮುಂದುವರೆಸಿರುವುದು ದುರಂತ. ಇದು ಸಂಸ್ಕೃತ ಅಥವಾ ಮತ್ತಾವುದೇ ಭಾಷೆಯನ್ನು ವಿರೋಧಿಸುವ ಪ್ರಶ್ನೆಯಲ್ಲ, ಜನಜೀವನದ ಒಂದು ಭಾಗವಾಗಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳದ ಪ್ರಾಚೀನ ಭಾಷೆಯೊಂದನ್ನು ಮೆರೆಸುವ ಭರದಲ್ಲಿ, ರಾಜ್ಯದ ಏಳು ಕೋಟಿ ಜನರ ಮಾತೃಭಾಷೆ, ಆಡುಭಾಷೆಯನ್ನು ಕಡೆಗಣಿಸುವ ಸರ್ಕಾರದ ಧೋರಣೆಯ ಪ್ರಶ್ನೆ. ಸಾಹಿತಿಗಳು, ಕಲಾವಿದರು ಮತ್ತು ಸಾಂಸ್ಕೃತಿಕ ಲೋಕದ ವಕ್ತಾರರು ಈ ಭಾಷಾ ಪ್ರಜ್ಞೆಯನ್ನು ಮನಗಂಡು ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ದನಿಎತ್ತಬೇಕಿದೆ.