ಪಾಕಿಸ್ತಾನ ರಾಷ್ಟ್ರಪಿತ ಮಹಮ್ಮದ್ ಅಲಿ ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರ ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ತರಾಟೆಗೆ ಎಳೆದಿದ್ದಾರೆ.
ಅಖಿಲೇಶ್ ಹೇಳಿಕೆಯನ್ನು ಬೇಜವಾಬ್ದಾರಿ ಹೇಳಿಕೆ ಎಂದು ಕರೆದಿರುವ ಓವೈಸಿ, ಇಂತಹ ಹೇಳಿಕೆಗಳ ಮೂಲಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದು ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಭಾರತೀಯ ಮುಸ್ಲಿಮರಿಗೂ ಮೊಹಮ್ಮದ್ ಅಲಿ ಜಿನ್ನಾಗೂ ಏನೂ ಸಂಬಂಧವಿಲ್ಲ, ಹಾಗಾಗಿ ಜಿನ್ನಾನ ಹೆಸರು ಉಲ್ಲೇಖಿಸುತ್ತಾ ಮುಸ್ಲಿಮರನ್ನು ಓಲೈಸಲು ಬರಬೇಡಿ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಮುಸ್ಲಿಮರು ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ತಿರಸ್ಕರಿಸಿದವರು. ಪಾಕಿಸ್ತಾನಕ್ಕೆ ಹೋಗುವ ಆಯ್ಕೆಯನ್ನು ತಿರಸ್ಕರಿಸಿ ಭಾರತದಲ್ಲೇ ನೆಲೆಸಿದವರು. ಹೀಗಾಗಿ ಭಾರತೀಯ ಮುಸ್ಲಿಮರಿಗೂ ಜಿನ್ನಾ ಅವರಿಗೂ ಸಂಬಂಧ ಕಲ್ಪಿಸುವುದು ಅಸಂಬದ್ಧವೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥನ ವಿರುದ್ಧ ಓವೈಸಿ ಹರಿಹಾಯ್ದಿದ್ದಾರೆ.
ಅಖಿಲೇಶ್ ಯಾದವ್ ಇತಿಹಾಸವನ್ನು ಸರಿಯಾಗಿ ಅರಿತಿಲ್ಲ ಎಂಬುದು ಈ ಸಂಗತಿಯಿಂದ ಗೊತ್ತಾಗುತ್ತದೆ. ಜಿನ್ನಾ ಅವರನ್ನು ಹೊಗಳಿ ಭಾರತೀಯ ಮುಸ್ಲಿಮರನ್ನು ಓಲೈಸಬಹುದು ಎಂದು ಭಾವಿಸಿದ್ದರೆ ಅದು ಅವರ ಮೂರ್ಖತನವಷ್ಟೇ. ಭಾರತದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಜಿನ್ನಾರನ್ನು ಸೇರಿಸುವುದು, ಅವರನ್ನು ಜಿನ್ನಾ ಅವರನ್ನು ಹೋಲಿಕೆ ಮಾಡುವುದು ಹಾಸ್ಯಾಸ್ಪದ ಎಂದು ಓವೈಸಿ ಹೇಳಿದ್ದಾರೆ.

ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಸಿ ಉತ್ತರ ಪ್ರದೇಶದ ಜನರ ನೈಜ ಸಮಸ್ಯೆಗಳ ಬಗ್ಗೆ ಅಖಿಲೇಶ್ ಚರ್ಚೆ ಮಾಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಯಾವ ಕಾರಣಕ್ಕಾಗಿ ಮತದಾರರು ತಿರಸ್ಕರಿಸಿದ್ದಾರೆ ಎಂಬುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು ಎಂದು ಒವೈಸಿ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶದ ಹರ್ದೋಹಿಯಲ್ಲಿ ಮಾತನಾಡುತ್ತಾ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಒಂದೇ ಸಂಸ್ಥೆಯಿಂದ ಬ್ಯಾರಿಸ್ಟರ್ ಪದವಿ ಪಡೆದವರು. ಈ ಎಲ್ಲರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿಸಿರುವ ಅಖಿಲೇಶ್ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಖಿಲೇಶ್ ವಿರುದ್ಧ ಬಿಜೆಪಿ ತೀವ್ರ ಹರಿಹಾಯ್ದಿದ್ದು, ಭಾರತವನ್ನು ಮತ್ತೊಮ್ಮೆ ಒಡೆಯುವವರೊಂದಿಗೆ ಅಖಿಲೇಶ್ ಕೈಜೋಡಿಸಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.
