ಟಿ-20 ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ಪಾಕಿಸ್ತಾನದೆದುರು ಭಾರತ ಸೋತ ಬಳಿಕ ತಂಡದ ಆಟಗಾರ ಶಮಿ ವಿರುದ್ಧ ನಿಂದನಾತ್ಮಕ ಟೀಕೆಗಳ ಕುರಿತಂತೆ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, “ಒಬ್ಬರ ಧರ್ಮದ ಆಧಾರದ ಮೇಲೆ ಅವರ ವಿರುದ್ಧ ದಾಳಿ ನಡೆಸುವುದು ಅತ್ಯಂತ ಕಳವಳಕಾರಿ ಸಂಗತಿ” ಎಂದು ಹೇಳಿದ್ದಾರೆ.
ಪಾಕ್ ವಿರುದ್ಧ ಸೋಲು : ಶಮಿ ವಿರುದ್ಧ ದ್ವೇಷ – ಬೆನ್ನಿಗೆ ನಿಂತ ಸೆಹ್ವಾಗ್, ಪಠಾಣ್, ಹರ್ಭಜನ್

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರು ಬೆನ್ನುಮೂಳೆ ಇಲ್ಲದ ಜನರು ಎಂದಿರುವ ಕೊಹ್ಲಿ, ಅವರಿಗೆ (ಟ್ರೋಲ್ ಮಾಡುವವರಿಗೆ) ನಿಜ ಬದುಕಿನಲ್ಲಿ ಯಾರನ್ನೂ ವೈಯಕ್ತಿಕವಾಗಿ ಎದುರಿಸುವ ಹಾಗೂ ಮಾತನಾಡುವ ಧೈರ್ಯ ಇರುವುದಿಲ್ಲ, ಅವರು ಬೆನ್ನು ಮೂಳೆ ಇಲ್ಲದ ಜನರ ಗುಂಪು ಎಂದು ಕೊಹ್ಲಿ ಹೇಳಿದ್ದಾರೆ.
ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ
ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಧರ್ಮದ ಆಧಾರದಲ್ಲಿ ಆಟಗಾರರನ್ನು ನೋಡುವುದು ಸಂಪೂರ್ಣ ತಪ್ಪು. ನಾನು ಯಾರೊಂದಿಗೂ ಈ ರೀತಿ ವರ್ತಿಸಿಲ್ಲ. ಆದರೆ ಇದು ಕೆಲವರ ಕೆಲಸ. ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.
ಕೊಹ್ಲಿಗೂ ಮೊದಲು, ಶಮಿ ವಿರುದ್ಧ ಟ್ರೋಲ್ಗಳ ವಿರುದ್ಧ ಸಚಿನ್, ಗಂಭೀರ್, ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ದನಿಯೆತ್ತಿದ್ದರು.
