ಗದಗ್ ನಿಂದ 18 ಕಿಮಿ ದೂರವಿರುವ ಈ ಚಿಕ್ಕಪಟ್ಟಣ ಸದ್ದು ಗದ್ದಲವಿಲ್ಲದೆ ಜನರ ಜೊತೆಗೂಡಿ ಕೆರೆಗಳನ್ನು ಸ್ವಚ್ಛ ಮಾಡಿದೆ. ಜನರು ಸ್ಥಳೀಯ ಸರ್ಕಾರದ ಜೊತೆ ಕೈಗೂಡಿಸಿದರೆ ಏನೇನು ಮಾಡಬಹುದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.
ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಮುಳಗುಂದ ಪಟ್ಟಣ ಪಂಚಾಯತಿಗೆ ಪ್ರಥಮ ಸ್ಥಾನ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ಪರಿಸರ ಸ್ನೇಹಿ ಉದ್ಯಾನವನ ನಿರ್ಮಿಸಿದಕ್ಕೆ ಉತ್ತಮ ಪದ್ಧತಿ ನಿರ್ವಹಣೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.
ಅಕ್ಟೋಬರ 11 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಸಿಮ್ಯಾಕ್ಸ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ(ಭೈರತಿ), ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜ (ಎಂ.ಟಿ.ಬಿ) ಪ್ರಶಸ್ತಿ ಪತ್ರ ಹಾಗೂ ಒಂದು ಲಕ್ಷ ನಗದು ಪುರಸ್ಕಾರ ಪ್ರಧಾನ ಮಾಡಿದರು.
ಕೆರೆಯ ಪುನ್ಸಶ್ಚೇತನ ಕಾರ್ಯದಿಂದ ಕೆರೆಗಳಿಗೆ ಶೇ.60% ರಿಂದ 80% ಪ್ರತಿಶತದವರೆಗೆ ನೀರು ಸಂಗ್ರಹವಾಗಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ಮೂಲವಾಗಿದ್ದು ರೈತರ ಹಾಗೂ ಪಟ್ಟಣ ಪಂಚಾಯತಿ ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನ ಮಟ್ಟ ಹೆಚ್ಚಾಗಿ ಅಂತರ್ಜಲ ವೃದ್ಧಿಯಾಗಿದ್ದು ಇದರಿಂದ ಪಟ್ಟಣ ಪಂಚಾಯತಿಗೆ ಮೀನು ಸಾಕಾಣಿಕೆಗೆ ಆದಾಯದ ಒಂದು ಭಾಗವಾಗಿದೆ. ಕೆರೆಗಳ ಸುತ್ತ ಈಗಾಗಲೇ ವಿವಿಧ ಬಗೆಯ ಗಿಡಗಳನ್ನು ನೆಡಲಾಗಿ ಇವುಗಳನ್ನು ಪೋಷಿಸಲಾಗುತ್ತಿದ್ದು ಈ ಪಟ್ಟಣ ಪಂಚಾಯತಿ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಾಯ ಸಹಕಾರದಿಂದ ಕಾರ್ಯ ಕೆರೆಗಳ ಪುನ್ಸಶ್ಚೇತನ ಕಾರ್ಯವಾಗಿದೆ.
ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ 59 ಎಕರೆ ವಿಸ್ತೀರ್ಣದ ಒಟ್ಟು 07 ಕೆರೆಗಳನ್ನು ಹೊಂದಿದ್ದು ಕೆರೆಗಳ ಸ್ವರೂಪ ಕಳೆದುಕೊಂಡು ಒತ್ತುವರಿಯಾಗಿದ್ದ ಕೆರೆಗಳ ಸಂರಕ್ಷಣೆ ಹಾಗೂ ಪುನ್ಸಶ್ಚೇತನ ಕಾರ್ಯಕ್ಕೆ ಪಟ್ಟಣ ಪಂಚಾಯತಿ ಕಾರ್ಯಪ್ರವೃತ್ತವಾಗಿ ಕೆರೆಗಳ ದಾಖಲಾತಿಗಳನ್ನು ಸಂಗ್ರಹಿಸಿ ಒತ್ತುವರಿಯಾದ ಅಂದಾಜು 18 ಎಕರೆ ಕೆರೆ ಪ್ರದೇಶ ತೆರವುಗೊಳಿಸಿ ಕೆರೆಗಳಿಗೆ ನೀರು ಸಂಗ್ರಹವಾಗುವ ರೀತಿಯಲ್ಲಿ ನಾಲಾಗಳನ್ನು ಸ್ವಚ್ಚಗೊಳಿಸಲಾಗಿದೆ. ಈಗಾಗಲೇ ಪಟ್ಟಣ ಪಂಚಾಯತಿಯಿಂದ ಸರ್ಕಾರದ ಯಾವುದೇ ಅನುದಾನದ ಸಹಾಯವಿಲ್ಲದೆ 03 ಕೆರೆಗಳನ್ನು ಪುನ್ಸಶ್ಚೇತನಗೊಳಿಸಲಾಗಿದ್ದು ಇನ್ನೂಳಿದ ಕೆರೆಗಳು ಭಾಗಶ: ಅಭಿವೃದ್ಧಿಪಡಿಸಲಾಗಿದೆ. ಪುನ್ಸಶ್ಚೇತನಗೊಳಿಸಲಾದ 01 ಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಸ್ಥೆ ಇವರಿಂದ ಆರ್ಥಿಕ ಸಹಾಯಧನ ರೂ.4.10 ಲಕ್ಷ ಅನುದಾನ ಮಂಜೂರು ಮಾಡಿದ್ದು ಇದರಲ್ಲಿ ಸುಮಾರು ರೂ.24.00 ಲಕ್ಷ ಅನುದಾನದಷ್ಟು ಕೆಲಸವನ್ನು ಮಾಡಲಾಗಿದ್ದು ಇದರಲ್ಲಿ ರೈತರಿಗೆ ಫಲವತ್ತಾದ ಮಣ್ಣನ್ನು ನೀಡಿ ರೈತರಿಗೆ ಕೃಷಿಗೆ ಪೂರಕವಾಗುವಂತೆ ಅನಕೂಲ ಕಲ್ಪಿಸಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯ ಸರ್ಕಾರ ಪ್ರಶಸ್ತಿಗೆ ಮುಳಗುಂದ ಪಟ್ಟಣ ಪಂಚಾಯತಿಯನ್ನು ಆಯ್ಕೆ ಮಾಡಿದೆ.
ಮುಳಗುಂದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾ ಎಂ.ಎಸ್. ಬೆಂತೂರು ಅವರು, “ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನ ಕಾರ್ಯಕ್ಕೆ ಗದಗ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ್ ಬಾಬು ಅವರು ನೀಡಿದ ಪ್ರೋತ್ಸಾಹಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರ ಸಹಕಾರದಿಂದ ಈ ಕಾರ್ಯ ಮಾಡಲು ಸಾಧ್ಯವಾಗಿದ್ದು ಇದನ್ನು ಗುರುತಿಸಿ ಮುಳಗುಂದ ಪಟ್ಟಣಕ್ಕೆ ರಾಜ್ಯ ಸರ್ಕಾರದಿಂದ ಪ್ರಥಮ ಸ್ಥಾನದ ಪ್ರಶಸ್ತಿ ಲಭಿಸಿದೆ” ಎಂದರು.