ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಿಸಿದೆ. ಅಕ್ಟೋಬರ್ 30ರಂದು 2 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆಯಾಗಲಿದೆ. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರವು ಸಿ.ಎಂ ಉದಾಸಿ ಅವರ ನಿಧನದಿಂದ ತೆರವಾಗಿತ್ತು. ಎಂ.ಸಿ.ಮನಗೂಳಿ ಅವರ ನಿಧನದಿಂದ ಸಿಂದಗಿ ಕ್ಷೇತ್ರ ತೆರವಾಗಿತ್ತು. ಈಗ ರಾಜ್ಯದ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ಹೀಗಿರುವಾಗಲೇ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ.
ಹೌದು, ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಆಯ್ಕೆಗೆ ಕಮಲ ಪಡೆ ಕಸರತ್ತು ನಡೆಸುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಭಾನುವಾರ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಈ ಉಪಕದನದ ಅಖಾಡಕ್ಕೆ ಯಾರನ್ನ ಇಳಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಚುನಾವಣೆ ಗೆಲ್ಲಲು ಬಿ.ಎಸ್ ಯಡಿಯೂರಪ್ಪ ಬಲ ಬೇಕು ಎಂಬ ಆಗ್ರಹವೂ ಸಭೆಯಲ್ಲಿ ಕೇಳಿಬಂದಿದೆ.
ಈಗಾಗಲೇ ಜೆಡಿಎಸ್ ಎರಡೂ ಕ್ಷೇತ್ರಗಳಲು ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಸಹ ಸಿಂಧಗಿ ಸಮರಕ್ಕೆ ತನ್ನ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಅಭ್ಯರ್ಥಿಗಳ ಹೆಸರು ಘೋಷಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಉಪಸಮರದ ಅಖಾಡಕ್ಕೆ ಧುಮುಕುತ್ತಿದ್ದಂತೆ ಬಿಜೆಪಿಯಲ್ಲೂ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕೇಸರಿ ನಾಯಕರು ಕೋರ್ ಕಮಿಟಿ ಸಭೆ ನಡೆಸಿದ್ದು, ಉಪಕದನಕ್ಕೆ ಕಮಲದ ಕಲಿಗಳ ಆಯ್ಕೆ ಕುರಿತು ಬಿರುಸಿನ ಚರ್ಚೆ ನಡೆಸಿದ್ದಾರೆ.

ಇನ್ನು, ಕೋರ್ ಕಮಿಟಿ ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರೊಂದಿಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ಯಾರ ಹೆಗಲಿಗೆ ಹೊರಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಇನ್ನು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮೊದಲ ಚುನಾವಣೆಯನ್ನು ಕಮಲ ಪಡೆ ಎದುರಿಸುತ್ತಿದ್ದು, ಬೈ ಎಲೆಕ್ಷನ್ ಕಾಳಗದಲ್ಲಿ ಗೆದ್ದು ಬೀಗಲು ಬಿಎಸ್ವೈ ಬಲ ಬೇಕು ಎನ್ನಲಾಗುತ್ತಿದೆ.
ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಹಾಗೆ ಉಪ ಚುನಾವಣೆಗೆ ಯಡಿಯೂರಪ್ಪ ಮಾರ್ಗದರ್ಶನ ಅಗತ್ಯ ಅಂತಾ ನಾಯಕರು ಪ್ರತಿಪಾದಿಸಿದ್ದಾರೆ. ಇನ್ನು ಎರಡೂ ಕ್ಷೇತ್ರಗಳಿಗೆ ಯಾರನ್ನು ಉಸ್ತುವಾರಿ ಮಾಡಬೇಕು? ಕುಟುಂಬ ರಾಜಕಾರಣಕ್ಕೆ ಮಣೆ ಹಾಕ್ಬೇಕಾ ಅಥವಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆ ಎಂದು ಚರ್ಚಿಸಲಾಗಿದೆ.
ಯಾರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ನಾಯಕರಿಗೆ ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ಇತ್ತ ಹಾನಗಲ್ ಟಿಕೆಟ್ಗೆ ಹಣಾಹಣಿ ಜೋರಾಗಿದ್ದರೆ, ಅತ್ತ ಸಿಂಧಗಿ ಸಮರದಲ್ಲಿ ಸರ್ಧೆಗೂ ರೇಸ್ ಹೆಚ್ಚಿದೆ. ಎರಡೂ ಕ್ಷೆತ್ರಗಳಲ್ಲಿ ಪ್ರಬಲ ಆಕಾಂಕ್ಷಿಗಳು ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಇನ್ನು ಕೋರ್ ಕಮಿಟಿ ಸಭೆಯಲ್ಲಿ ಹಾನಗಲ್ ಹಣಾಹಣಿಗೆ ನಾಲ್ಕು ಜನರ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಹಾನಗಲ್ ಹಣಾಹಣಿಗೆ ರೇವತಿ ಶಿವಕುಮಾರ್ ಹೆಸರು ಶಿಫಾರಸ್ಸು ಮಾಡಲಾಗಿದೆ. ಹಾಗೆ ಕಲ್ಯಾಣ ಕುಮಾರ ಶೆಟ್ಟರ್ ಹಾಗೂ ಸಿದ್ದರಾಜು ಕಲ್ಲಕೋಟೆ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಜೊತೆಗೆ ಶಿವರಾಜ್ ಸಜ್ಜನ್ ಅವರ ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ.
ಇನ್ನು ಉಪಚುನಾವಣೆ ನಡೆಯಲಿರೋ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲುವಿನ ನಗೆ ಬೀರಲಿದೆ ಅಂತಾ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲ್ಲಿದ್ದೇವೆ. ಕೆಲ ತಿಂಗಳಿನಿಂದ ಉಪಚುನಾವಣೆಗೆ ತಯಾರಿ ನಡೆಸಲಾಗಿದೆ. ಇದೇ 30ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ ಎಂದಿದ್ದಾರೆ ಅರುಣ್ ಸಿಂಗ್.

ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಉಪದಕನದ ಕಾವು ಹೆಚ್ಚಾಗತೊಡಗಿದೆ. ಈ ಬಾರಿಯ ಉಪಚುನಾವಣೆ ಮುಂಬರೋ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗುತ್ತಿದೆ. ಮೂರು ಪಕ್ಷಗಳಿಗೆ ಚುನಾವಣೆ ಪ್ರತಿಷ್ಠೆಯಾಗಿದೆ. ಉಪಕದನ ಗೆಲ್ಲೋ ಮೂಲಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಕೈ, ಕಮಲ ಹಾಗೂ ದಳದ ನಾಯಕರು ಸಿದ್ಧತೆ ನಡೆಸುತ್ತಿದ್ದು, ಮಿನಿ ಸಮರವನ್ನು ಮತ್ತಷ್ಟು ರೋಚಕವನ್ನಾಗಿಸಿದೆ.
ಈ ಹಿಂದೆ ಎರಡು ಬಾರಿ ಸಿಂದಗಿ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್ನ ಎಂ.ಸಿ.ಮನಗೂಳಿ 2021 ರ ಜನವರಿ 28 ರಂದು ಮೃತಪಟ್ಟಿದ್ದರು. ಇದೀಗ ಅವರ ನಿಧನದ ಕಾರಣದಿಂದ ತೆರವಾದ ಸಿಂದಗಿ ಕ್ಷೇತ್ರಕ್ಕೆ ಉಪ ಚುನಾವಣೆಯನ್ನು ಘೋಷಿಸಿ ಕೇಂದ್ರ ಚುನಾವಣಾ ಆಯೋಗವು ದಿನಾಂಕ ನಿಗದಿ ಮಾಡಿದೆ. ಮನಗೂಳಿ ಈ ಹಿಂದೆ ಸಚಿವರೂ ಆಗಿದ್ದರು.

ಮನಗೂಳಿಯವರ ನಿಧನದ ನಂತರ ಅವರ ಕುಟುಂಬ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ಗಾಗಿ ಲಾಬಿ ನಡೆಯುತ್ತಿದ್ದು, ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಮಾಜಿ ಶಾಸಕ ರಮೇಶ ಭೂಸನೂರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಜೆಡಿಎಸ್ ಪಕ್ಷವು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಅಕ್ಟೋಬರ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ.ಉದಾಸಿ, ಜೂನ್ 8,2021ರಂದು ನಿಧನರಾಗಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 30,2021ರಂದು ಉಪಚುನಾವಣೆ ನಡೆಯಲಿದೆ.