ಇತಿಹಾಸಕಾರರೊಬ್ಬರು ಗಾಂಧಿ ಹಾಗೂ ನೆಹರು ಅವರ ತೀವ್ರ ಸೈದ್ಧಾಂತಿಕ ವಿರೋಧಿಯಾಗಿದ್ದ ಸಾವರ್ಕರ್ ಅವರ ವಿವರಗಳನ್ನು ಮರುಮಾಪನ ಮಾಡುತ್ತಾ ಅವರ ಜೀವನವನ್ನು ಸಂದರ್ಭೀಕರಿಸುತ್ತಾರೆ.
ವಿನಾಯಕ್ ದಾಮೋದರ್ ಸಾವರ್ಕರ್ ಅವರ ನೆನಪು ಸಾರ್ವಜನಿಕ ಜೀವನದಿಂದ ಅಳಿಸಿಹೋಗಿರುವುದು ದಿಗ್ಭ್ರಮೆಗೊಳಿಸುವಂತದ್ದು. ಹಿಂದೂಗಳನ್ನು ಹಾಗೂ ಮುಸಲ್ಮಾನರನ್ನು ಬ್ರಿಟೀಷರ ವಿರುದ್ಧ ಸಾಮುದಾಯಿಕವಾಗಿ ಒಗ್ಗೂಡಿಸಿದ ಪಂಡಿತ್ ಮದನ್ ಮೊಹನ್ ಮಾಲ್ವಿಯಾ, ಸರ್ ಸೈಯೆದ ಅಹ್ಮದ್ ಖಾನ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ಇತರರ ಕುರಿತು ವಹಿಸಿರುವ ಆಸಕ್ತಿ ಸಾವರ್ಕರ್ ಅವರ ಕುರಿತು ವಹಿಸಿಲ್ಲ. ಸಾವರ್ಕರ್ ಅವರ ಹಿಂದು ರಾಷ್ಟ್ರದ ಪರಿಕಲ್ಪನೆ, ಅಂಡಮಾನ್ ಸೆರೆವಾಸದಲ್ಲಿದ್ದಾಗ ಬ್ರಿಟೀಷರಿಗೆ ಬರೆದಂತಹ ಕ್ಷಮಾಪತ್ರಗಳು, ಗಾಂಧಿ ಅವರ ಹತ್ಯೆಯಲ್ಲಿ ಸಾವರ್ಕರ್ ಅವರ ಪಾತ್ರ – ಹೀಗೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಸಾವರ್ಕರ್ ಅವರನ್ನು ಬೇಜವಾಬ್ದಾರಿಯುತವಾಗಿ ಹಾಗು ತಿಳುವಳಿಕೆರಹಿತರಾಗಿ ಉಲ್ಲೇಖಿಸುತ್ತೇವೆ. ಇತಿಹಾಸಕಾರರಿಗೆ, ವಿದ್ವಾಂಸರಿಗೆ ಹಾಗು ಸರ್ಕಾರಗಳಿಗೆ ಸಾವರ್ಕರ್ ಅವರನ್ನು ನಿರ್ಲ್ಯಕ್ಷಿಸಲು ಇದಿಷ್ಟೇ ಕಾರಣಗಳು ಸಾಕಾಗಿವೆ. ಆದರೆ ಸಾವರ್ಕರ್ ಅವರ ವಿಚಾರಗಳು ಪ್ರಸ್ತುತ ಸಮಾಜ ಮತ್ತು ರಾಜಕಾರಣವನ್ನು ತೀವ್ರವಾಗಿ ಪ್ರಭಾವಿಸುತ್ತಿವೆ.
ವ್ಯಾಪಕ ಪ್ರಯತ್ನ
ಒಂದೊಡೆ ಹೊಗಳಿಕೆಗಳನ್ನು ಹಾಗು ಮತ್ತೊಂಡೆದೆ ತೆಗಳಿಕೆಗಳನ್ನು ಆಹ್ವಾನಿಸಿರುವ ಇತಿಹಾಸದ ಅತೀ ಪ್ರಮಖ ಹಿಂದುತ್ವವಾದಿಯ ಜೀವನವನ್ನು ವ್ಯಾಪಕವಾಗಿ ದಾಖಲಿಸಲು ಮತ್ತು ಸಂದರ್ಭೀಕರಿಸಲು ವಿಕ್ರಮ್ ಸಂಪತ್ ಅವರು ಬರೆದಿರುವ ಸಾವರ್ಕರರ ಎರಡು ಭಾಗಗಳ ಜೀವನ ಚರಿತ್ರೆ ಪ್ರಯತ್ನಿಸುತ್ತದೆ.
‘ಸಾವರ್ಕರ್:ಎಕೋಸ್ ಫ್ರಂ ಅ ಫರ್ಗಾಟನ್ ಪಾಸ್ಟ್, 1883-1924’ ಎಂಬ ಶೀರ್ಷಿಕೆ ಅಡಿಯಲ್ಲಿ ಮೊದಲ ಭಾಗ 2019ರಲ್ಲಿ ಬಿಡುಗಡೆಯಾಗಿದ್ದು, ಸಾವರ್ಕರ್ ಅವರ ಬಾಲ್ಯದ ಪ್ರಭಾವಗಳನ್ನು, ರಾಜಕೀಯ ಹೋರಾಟಗಳನ್ನು, ಕಾಲಾಪಾನಿ ಬಂಧನವನ್ನು ಮತ್ತು 1924ರಲ್ಲಿ ಅವರ ಬಿಡುಗಡೆಯನ್ನು ದಾಖಲಿಸುತ್ತದೆ.
ಹೊಸದಾಗಿ ಬಿಡುಗಡೆಗೊಂಡ ಎರಡನೇ ಭಾಗ ರತ್ನಗಿರಿಯಲ್ಲಿ ಅವರ ಸುಧಾರಣಾ ಕಾರ್ಯಗಳನ್ನು, ಹಿಂದು ಸಂಘಟನೆಗಳಾದ ಹಿಂದೂ ಮಹಾಸಭಾ ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಡುವಿನ ಒಡನಾಟ, ಮಹಾಸಭಾದ ಯುವಕಾರ್ಯಕರ್ತರಾದ ನಾರಯಣ್ ಆಪ್ಟೆ ಮತ್ತು ನಾಥೂರಾಮ್ ಗೋಡ್ಸೆ (ನಂತರ ಗಾಂಧಿಯನ್ನು ಕೊಂದವರು) ಅಂತಹವರಿಗೆ ಮಾರ್ಗದರ್ಶನ, ಹಿಂದೂ ಸಮಾಜ ಮತ್ತು ಜಾತಿ ರಾಜಕಾರಣದ ಕುರಿತಾದ ಪರಿಕಲ್ಪನೆಗಳು, ಗಾಂಧೀ ಅವರ ಅಹಿಂಸಾತ್ಮಕ ಮಾರ್ಗಗಳಿಗೆ ವಿರೋಧ (ಮುಸಲ್ಮಾನರ ಬೇಡಿಕೆಗಳಿಗೆ ತುಷ್ಟೀಕರಣವೆಂದು ಕಂಡದ್ದು), ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದದ್ದು ಮತ್ತು ಸಾವರ್ಕರರ ಒಟ್ಟಾರೆ ಪ್ರಭಾವವನ್ನು ತೆರೆದಿಡುತ್ತದೆ.
ಕೋಮುಗಲಭೆಗಳ ಸಂದರ್ಭದಲ್ಲಿ ಮುಸಲ್ಮಾನ ರಾಜಕಾರಣ ಮತ್ತು ಪ್ರತ್ಯೇಕವಾದ ಬೆಳೆಯುತ್ತಿದ್ದಂತೆ ಸಾವರ್ಕರ್ ಅವರ ಹಿಂದು ಒಗ್ಗೂಡುವಿಕೆಯ ಕನಸು ಹೇಗೆ ಬಲಿಷ್ಠವಾಗುತ್ತಾ ಹೋಯಿತು ಎಂಬುದನ್ನು ಸಂಪತ್ ಅವರು ನಿರೂಪಿಸುತ್ತಾರೆ. ಖಿಲಾಫತ್ ಚಳುವಳಿಯ ನೇತಾರರಾದ ಮೌಲಾನಾ ಶೌಕತ್ ಅಲಿ ಅವರೊಂದಿಗಿನ ಸಂವಾದ ಸಾವರ್ಕರ್ ಅವರು ಹಿಂದು ಒಗ್ಗೂಡುವಿಕೆ ಮತ್ತು ಶುದ್ಧಿಯ (ಮರು-ಮತಾಂತರ) ಪರಿಕಲ್ಪನೆಗಳನ್ನು ಮುಸಲ್ಮಾನ ಅಸ್ಮಿತೆ, ಮತಾಂತರ ಮತ್ತು ಖಿಲಾಫತ್ ಚಳುವಳಿಗೆ ಮುಖಾಮುಖಿಯಾಗಿ ಹೇಗೆ ಕಾಣುತ್ತಿದ್ದರು ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಹಿಂದೂಗಳನ್ನು ಪರಿಗಣಿಸುತ್ತಿರಲಿಲ್ಲ ಮತ್ತು ಮುಸಲ್ಮಾನ ಮೂಲಭೂತವಾದಿಗಳನ್ನು ವಿರೋಧಿಸುತ್ತಿರಲಿಲ್ಲ ಎಂಬುದು ಸಾವರ್ಕರ್ ಅವರ ನಂಬಿಕೆಯಾಗಿತ್ತು. ಗಾಂಧಿ ಮತ್ತು ನೆಹರು ಅವರನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಸಾವರ್ಕರ್ ಭಾರತದ ಮಧ್ಯ ಪಂಥೀಯ ರಾಜಕಾರಣಕ್ಕೆ ಎಂದಿಗೂ ಬೇಡದ ವ್ಯಕ್ತಿತ್ವವಾಗಿಯೇ ಉಳಿದು ಹೋದರು.
ಹಿಂದೂ ಒಗ್ಗೂಡುವಿಕೆಯ ಕಟ್ಟುಕತೆ
ಸಾವರ್ಕರ್ ಅವರ ಹಿಂದುತ್ವವು ರಾಷ್ಟ್ರ, ರಾಷ್ಟ್ರ ಪ್ರಭುತ್ವ, ರಾಷ್ಟ್ರೀಯತೆ ಮತ್ತು ಪೌರತ್ವದ ಮೇಲೆ ನಿಂತಿದ್ದ ನವ್ಯಪಂಥದ ತತ್ವ. ಜನರು ತಮಗೆ ಇಷ್ಟ ಬಂದದ್ದನ್ನು ತಿನ್ನಬಹುದಿತ್ತು (ಮೀನು ಮತ್ತು ಮಾಂಸವನ್ನು ಕೂಡ). ಸಾವರ್ಕರ್ ಗೋಪೂಜೆಯ ಪ್ರತಿಪಾದಕರಾಗಿರಲಿಲ್ಲ.
ಎರಡನೆ ಭಾಗದ ಮುಖ್ಯಂಶಗಳೇನೆಂದರೆ ಸಾವರ್ಕರ್ ಅವರ ಜಾತಿವಿರೋಧಿ ನಂಬಿಕೆಗಳು ಮತ್ತು ಆಸ್ಪೃಷ್ಯತೆಯ ನಿಷೇಧದ ಬಗೆಗಿನ ಆಸಕ್ತಿ. ಈ ವಿಷಯದಲ್ಲಿ ಸಾವರ್ಕರ್ ಅವರು ಅಂಬೇಡ್ಕರ್ ಅವರಿಗೆ ಒಪ್ಪಿತರಾಗಿದ್ದರು. ಸಾವರ್ಕರ್ ಅವರಿಗೆ ಜಾತಿ ವ್ಯವಸ್ಥೆಯ ಸೂಕ್ಷ್ಮತೆಗಳು ತಿಳಿದಿದ್ದು, ಕೆಳಜಾತಿಗಳ ನಡುವೆಯೂ ಜಾತಿ ಆಚರಣೆಗಳಿದ್ದವು ಎಂಬುದನ್ನು ತೋರಿಸಿದ್ದರು. ಇವುಗಳು ಬದಲಾಗದೇ ಇದ್ದಲ್ಲಿ ಹಿಂದೂ ಒಗ್ಗೂಡುವಿಕೆ ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಸಾವರ್ಕರ್ ಮತ್ತು ಆರ್.ಎಸ್.ಎಸ್. ಹಿಂದೂ ರಾಜಕಾರಣಕ್ಕಾಗಿ ಒಂದೇ ಹಾದಿಯಲ್ಲಿ ನಡೆಯುತ್ತಿದರು ಎಂಬ ನಂಬಿಕೆಯನ್ನು ಸಂಪತ್ ಅಲ್ಲಗಳೆಯುತ್ತಾರೆ. ಹಿಂದೂ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಗಳು ಗಟ್ಟಿಯಾಗಿಯೇ ಇದ್ದವು ಮತ್ತು ಸಾವರ್ಕರ್ ಅವರು ಆರ್.ಎಸ್.ಎಸ್. ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರೊಡನೆಯಾಗಲಿ ಅಥವಾ ಅವರ ಉತ್ತರಾಧಿಕಾರಿಯಾದ ಗೋಳ್ವಾಳ್ಕರ್ ಅವರೊಡನೆಯಾಗಲಿ ನಿಕಟ ಸಂಬಂಧವನ್ನು ಹೊಂದಿರಲಿಲ್ಲ ಎಂದು ಸಂಪತ್ ಹೇಳುತ್ತಾರೆ. ಜೊತೆಗೆ, ಡಾ. ಶ್ಯಾಮ್ ಪ್ರಸಾದ್ ಮುಖರ್ಜೀ ಅವರು ಹಿಂದೂ ಮಹಾಸಭಾದಲ್ಲಿ ಸಾವರ್ಕರ್ ಅವರಿಗೆ ಪರ್ಯಾಯವಾಗಿ ಬೆಳೆದಾಗ ಅವರಲ್ಲಿನ ಮತ್ಸರ ಕೊಂಚ ಸ್ಪಷ್ಟವಾಗಿಯೇ ಕಂಡಿತ್ತು.
ಸಾವರ್ಕರ್ ಅವರ ಯೂರೋಪಿನ ದೇಶಗಳ ರಾಷ್ಟ್ರ ಪ್ರಭುತ್ವ ಕಲ್ಪನೆ ಮತ್ತು ಸುಧಾರಣಾವಾದಿ ಧರ್ಮದ ಬಗೆಗಿನ ನಿಲುವು ನೆಹರು ಅವರ ಆದರ್ಶಗಳಿಗೆ ಹತ್ತಿರವಾಗಿದ್ದರೆ ಅವರ ತೀವ್ರವಾದಿ ರಾಷ್ಟ್ರೀಯತೆ ಗಾಂಧಿಯ ಗೋರಕ್ಷಣೆ, ವರ್ಣ ವ್ಯವಸ್ಥೆಯ ಪ್ರಾಮುಖ್ಯತೆ, ಅಹಿಂಸೆ ಮತ್ತು ಸತ್ಯಾಗ್ರಹದಂತಹ ನಂಬಿಕೆಗಳಿಗೆ ಪ್ರತಿರೋಧಾತ್ಮಕವಾಗಿತ್ತು. ಸಾವರ್ಕರ್ ಈ ಇಬ್ಬರೂ ನೇತಾರರೊಂದಿಗೆ ಒಳ್ಳೆಯ ಸಂಬಂಧದಲ್ಲಿರಲಿಲ್ಲ. ವಿರೋಧಾಭಾಸವೆಂಬಂತೆ, ನೆಹರು ಭಾರತದ ಪ್ರಧಾನ ಮಂತ್ರಿಯಾದರು ಹಾಗು ಜನಪ್ರಿಯತೆ ಹೊಂದಿದ್ದ ಗಾಂಧಿ ರಾಷ್ಟ್ರದ ಪಿತಾಮಹ ಎಂಬ ಪಟ್ಟಕ್ಕೇರಿದರು.
ಕಟುವಾದ ವಿದೇಶಾಂಗ ನೀತಿ
ಸಾವರ್ಕರರ ಭೌಗೋಳಿಕ ರಾಜಕೀಯ ನಿಲುವುಗಳು ಹಾಗು ವಿದೇಶಾಂಗ ನೀತಿ ಪುಸ್ತಕದಲ್ಲಿ ಎದ್ದು ನಿಲ್ಲುತ್ತದೆ. ರಾಷ್ಟ್ರೀಯ ಹಿತಾಸಕ್ತಿಗಳು ಸೈದ್ಧಾಂತಿಕ ಸಂಬಂಧಗಳನ್ನು ಮೀರಬೇಕು ಎಂಬುದು ಅವರ ನಿಲುವಾಗಿತ್ತು.
ಸಾವರ್ಕರ್ ಅವರ ಭೌಗೋಳಿಕ ರಾಜಕೀಯ ನೀತಿ ರಾಶ್ ಬೆಹಾರಿ ಬೋಸ್ ಅವರ ಮೆಚ್ಚುಗೆಗೆ ಒಳಪಟ್ಟಿತ್ತು. ಮತ್ತೋರ್ವ ಬೋಸ್, ಸುಭಾಷ್ ಚಂದ್ರ ಬೋಸ್ ಅವರ ವಿದೇಶಾಂಗ ನೀತಿಗಳೂ ಸಹ ಇದೇ ರೀತಿಯಲ್ಲಿತ್ತು ಎಂಬುದು ಗಮನಾರ್ಹ. ರಾಜಕೀಯ ಪಕ್ಷ ಕಟ್ಟುವುದರಲ್ಲಿ ಮತ್ತು ಜನರನ್ನು ಸೇರಿಸುವುದರಲ್ಲಿ ಸಾವರ್ಕರ್ ಅವರ ನಿರಾಸಕ್ತಿ ಅವರನ್ನು ಕೇವಲ ತರಬೇತಿ ಶಿಬಿರಗಳಿಗೆ ಸೀಮಿತಗೊಳಿಸಿತು. ಇವರ ನಿರಾಸಕ್ತಿಯಿಂದಲೇ ಹಿಂದು ಮಹಾಸಭಾ ಜನಬೆಂಬಲವನ್ನು ಪಡೆಯಲಾಗಲಿಲ್ಲ ಎಂಬುದು ಸಂಪತ್ ಅವರ ಅಭಿಪ್ರಾಯ. ಆಶಿಶ್ ನಂದಿಯವರ ಪ್ರಕಾರ ಸಾವರ್ಕರ್ ಭಾರತದ ನಿರಾಕೃತ ಪಿತಾಮಹರಾಗಿ ಉಳಿದುಹೋದರು.
ಈ ಪುಸ್ತಕ ಕೇವಲ ಸಾವರ್ಕರ್ ಮತ್ತವರ ಕೊಡುಗೆಯ ಕುರಿತು ಮಾತನಾಡುವುದಿಲ್ಲ. ಬೌದ್ಧಿಕ ಅಸಹಿಷ್ಣುತೆ ಮತ್ತು ನಿರಾಕರಣಾ ಸಂಸ್ಕೃತಿಗಳು ರಾರಾಜಿಸುತ್ತಿರುವ ಈ ಕಾಲಘಟ್ಟದಲ್ಲಿ ಭಿನ್ನಾಭಿಪ್ರಾಯಗಳನ್ನು ಹೇಗೆ ಸಂಭಾಳಿಸಬೇಕು ಮತ್ತು ಸಾವರ್ಕರ್ ಅಂತಹ ವಿವಾದಾತ್ಮಕ ವ್ವಕ್ತಿತ್ವಗಳ ಸೂಕ್ಷ್ಮತೆಗಳನ್ನು ಹೇಗೆ ಆರ್ಥೈಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ.
ಸಾವರ್ಕರ್ ಅವರ ಬಗೆಗಿನ ಎಲ್ಲಾ ಅಭಿಪ್ರಾಯಗಳನ್ನು ಪುನರ್ವಿಮರ್ಷಿಸಲು ಓದುಗರಿಗೆ ಅವಶ್ಯವಿರುವಂತಹ ಎಲ್ಲಾ ವಿವರಗಳನ್ನು ಸಂಪತ್ ನೀಡುತ್ತಾರೆ – ನಾಸ್ತಿಕರೋ/ ಹಿಂದುತ್ವಾ ಸಿದ್ಧಾಂತಪುರುಷರೋ, ಸ್ವಾತಂತ್ರ ಸೇನಾನಿಯೋ/ ಕ್ರಾಂತಿಕಾರಿಯೋ, ಸೆರೆವಾಸಿಯೋ/ ಬದುಕಿ ಉಳಿದವರೋ, ಅಪ್ರೌಢ ಇತಿಹಾಸಕಾರರೋ/ ಕವಿಯೋ, ಆಧುನಿಕವಾದಿಯೋ/ ರಾಷ್ಟ್ರವಾದಿ ಸುಧಾರಣಾವಾದಿಯೋ, ಕಟು ರಾಜಕೀಯ ಹೋರಾಟಗಾರರೋ/ ಸಿದ್ಧಾಂತಿಯೋ. ಅವರು ತಮ್ಮ ಜೀವಮಾನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು ಮತ್ತು ಬಹಳಷ್ಟು ವ್ಯಕ್ತಿಗಳನ್ನು ಹಾಗು ಘಟನೆಗಳನ್ನು ಪ್ರಭಾವಿಸಿದರು. ಸಂಪತ್ ಅವರು ಸಾವರ್ಕರರ ವಿರೋಧಾಭಾಸಗಳನ್ನು, ಸಂಕೀರ್ಣತೆಗಳನ್ನು, ಸಹಭಾಗಿತ್ವವನ್ನು ತೆರೆದಿಡುತ್ತಾರೆ. ಸಂಪತ್ ಅವರ ಈ ಬೌದ್ಧಿಕ ಬದ್ಧತೆ ಶ್ಲಾಘನೀಯವಾದದ್ದು.
ಸಂಪತ್ ಅವರು ಯಾವುದೇ ಸಾಧಾರಣಾ ಇತಿಹಾಸಕಾರರಲ್ಲ. ಅವರ ಬರವಣಿಗೆ ಯಾವುದೇ ಸೈದ್ಧಾಂತಿಕ ಬಂಧನಗಳಿಗಾಗಲೀ ಯಾವುದೇ ಬೌದ್ಧಿಕ ಪರಂಪರೆಗೆ ಸೀಮಿತವಾಗಿಲ್ಲ. ಈ ಪ್ರಮಾಣದ ಪುಸ್ತಕಕ್ಕೆ ಸಾಧ್ಯವಾಗದಿದ್ದರು, ಸಂಶೋಧನೆಯ ಶೈಲಿಯನ್ನು ವಿವರಿಸಿದ್ದರೆ ಓದುಗರಿಗೆ, ಅದರಲ್ಲೂ ಇತಿಹಾಸದ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿತ್ತು. ಅದನ್ನು ಸಂಕ್ಷಿಪ್ತವಾಗಿ ಕೃತಜ್ಞತೆಗಳ ಭಾಗದಲ್ಲಿ ವಿವರಿಸಿದ್ದಾರೆ, ಆದರೆ ಅದಕ್ಕೆ ಅದರದ್ದೇ ಆದ ಒಂದು ಅಧ್ಯಾಯ ಅವಶ್ಯಕವಾಗಿತ್ತು. ಮೂಲಗಳ ಮೌಲ್ಯಮಾಪನ, ಮಾಡಿರುವ ಅನುವಾದಗಳು ಮತ್ತು ದಾಖಲೆಗಳನ್ನು ಹುಡುಕುವಾಗ ಅನುಭವಿಸಿದ ಸಂಕಷ್ಟಗಳು, ಇವೆಲ್ಲವನ್ನೂ ಪುಸ್ತಕದಲ್ಲಿ ವಿವರಣಾತ್ಮಕವಾಗಿ ಸೇರಿಸಬಹುದಿತ್ತು.
ಈ ಪುಸ್ತಕ ರಾಜಕೀಯ ಮತ್ತು ಇತಿಹಾಸದ ಎಲ್ಲಾ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ. ಅಲ್ಲದೇ ಪ್ರಸ್ತುತ ಸಮಯದ ಗೊಂದಲಗಳನ್ನು, ಅಸ್ಮಿತಾ ರಾಜಕಾರಣವನ್ನು ಮತ್ತು ವಸಾಹಾತು ನಂತರದ ಭಾರತದ ಸಂಕಷ್ಟಗಳನ್ನು ಸಾವರ್ಕರ್ ಅಂತಹವರ ಜೀವನಕತೆಗಳ ಮೂಲಕ ಅರ್ಥೈಸಿಕೊಳ್ಳಲು ಆಸಕ್ತಿ ಇರುವ ಎಲ್ಲರಿಗೂ ಇದು ಓದಲೇಬೇಕಾದ ಪುಸ್ತಕ. ಭಿನ್ನಾಭಿಪ್ರಾಯಗಳು ಮತ್ತು ತಿಳುವಳಿಕೆಯುಳ್ಳ ವಾದಗಳು ಸಹನೀಯ; ಅಳಿಸುವಿಕೆ ಮತ್ತು ವರ್ಗೀಕರಣ ಅಲ್ಲ.
ಪುಸ್ತಕ: “ಸಾವರ್ಕರ್: ಅ ಕಂಟೆಸ್ಟೆಡ್ ಲೆಗಸಿ, 1924-66”; ವಿಕ್ರಮ್ ಸಂಪತ್, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ರೂ.999.
ವಿಮರ್ಷಕರು: ಸ್ವಾತಿ ಪರಾಷರ್, ಸ್ವೀಡನ್ನಿನ ಗೋತೆನ್ಬರ್ಗ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಗ್ಲೋಬಲ್ ಸ್ಟಡೀಸ್ ನ ಪ್ರಾಧ್ಯಾಪಕರು. ಅವರ ಟ್ವಿಟರ್ ಖಾತೆ : @swatipash