ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಸಿಎಂ ಗದ್ದುಗೆ ಏರಿರುವ ಮಮತಾ ಬ್ಯಾನರ್ಜಿ. ಟಿಎಂಸಿ ಬಾವುಟವನ್ನು ದೇಶದೆಲ್ಲೆಡೆ ಹಾರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ, ಪಶ್ಚಿಮ ಬಂಗಾಳದ ಆಸುಪಾಸಿನ ರಾಜ್ಯಗಳಲ್ಲಿ ಮೊದಲು ಟಿಎಂಸಿಯ ನೆಲೆಯನ್ನು ಭದ್ರವಾಗಿಸಿ, ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾಲು ಬಾಚಿಕೊಳ್ಳಲು ದೀದಿ ಮುಂದಾಗಿದ್ದಾರೆ.
ಇತ್ತೀಚಿಗೆ ತ್ರಿಪುರಾ ಹಾಗೂ ಅಸ್ಸಾಂನ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರನ್ನು ಟಿಎಂಸಿಗೆ ಬರಮಾಡಿಕೊಳ್ಳಲಾಗಿದೆ. ಅಸ್ಸಾಂ ಕಾಂಗ್ರೆಸ್’ನಲ್ಲಿ ಮೂವತ್ತು ವರ್ಷವಿದ್ದ ಸುಶ್ಮಿತಾ ದೇವ್ ಆಗಸ್ಟ್ 16ರಂದು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚಿಗೆ ಈಶಾನ್ಯ ರಾಜ್ಯಗಳ ಪ್ರಮುಖ ರಾಜಕೀಯ ನಾಯಕರಾದ ಮಾಜಿ ಸಚಿವ ಪ್ರಕಾಶ್ ದಾಸ್, ಮಾಜಿ ಶಾಸಕ ಸುಬಲ್ ಭೌಮಿಕ್, ತ್ರಿಪುರಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಾಂತನು ಸಾಹಾ ಸೇರಿದಂತೆ ಹಲವು ನಾಯಕರು ಟಿಎಂಸಿಯ ಕದ ತಟ್ಟಿದ್ದಾರೆ.
ತ್ರಿಪುರಾದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವೇಳೆಗೆ ಪಕ್ಷವನ್ನು ಆಳವಾಗಿ ಬೇರೂರುವಂತೆ ಮಾಡಿ ಅಧಿಕಾರದಲ್ಲಿರುವ ಬಿಜೆಪಿಯ ಲೆಕ್ಕಾಚಾರವನ್ನು ಬುಡಮೇಲು ಮಾಡಲು ಟಿಎಂಸಿ ಯತ್ನಿಸುತ್ತಿದೆ.
ಅಸ್ಸಾಂನ ಬರಾಕ್ ಕಣಿವೆಯ ವ್ಯಾಪ್ತಿಯಲ್ಲಿ ಬರುವಂತಹ ಮೂರು ಜಿಲ್ಲೆಗಳಲ್ಲಿ ಟಿಎಂಸಿ ಪರ ಗಾಳಿ ಬೀಸುತ್ತಿದೆ. ಕಚಾರ್, ಕರೀಂಗಂಜ್ ಹಾಗೂ ಹೈಲಾಕಂಡಿಯಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಂತಹ ಕಾಂಗ್ರೆಸ್ ನಾಯಕಿ ಸುಶ್ಮಿತಾ ಅವರನ್ನು ಟಿಎಂಸಿಗೆ ಸ್ವಾಗತಿಸಿ ದೊಡ್ಡ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಚಿಂತನೆ ನಡೆಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ನಾಯಕರು ಪಕ್ಷಾಂತರ ಮಾಡುವ ಸಾಧ್ಯತೆಯನ್ನೂ ಈಗ ಅಲ್ಲಗೆಳೆಯಲಾಗುವುದಿಲ್ಲ.
“ಈಶಾನ್ಯ ರಾಜ್ಯಗಳಲ್ಲಿ ಟಿಎಂಸಿಯು ತನ್ನ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಆಯಾ ಪ್ರದೇಶದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸುವ ಚಿಂತನೆ ನಡೆಯುತ್ತಿದೆ. ಇದರಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಟಿಎಂಸಿಯ ನೆಲೆ ವಿಸ್ತರಿಸುವುದಲ್ಲದೇ, ಅದನ್ನು ಗಟ್ಟಿಗೊಳಿಸಿ ಮುಂಬರುವ ಚುನಾವಣೆಗಳಲ್ಲಿ ಸಶಕ್ತವಾಗಿ ಸ್ಪರ್ಧಿಸಲು ಅನುಕೂಲವಾಗುತ್ತದೆ,” ಟಿಎಂಸಿಯ ಮೂಲಗಳು ತಿಳಿಸಿವೆ.
ತ್ರಿಪುರಾದಲ್ಲಿ ಮೊದಲು ಚುನಾವಣೆ ಬರುವುದರಿಂದ ಅತ್ತ ಕಡೆಗೆ ಟಿಎಂಸಿ ಹೆಚ್ಚಿನ ಗಮನ ಹರಿಸಲಿದೆ. ಇಲ್ಲಿಯವರೆಗೆ ನಡೆದಿರುವ ಅವ್ಯವಹಾರ ಹಾಗೂ ಹಗರಣಗಳ ಕುರಿತು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಜನರ ಗಮನ ಸೆಳೆಯುವ ಯೋಜನೆಯಿದೆ. ಮುಖ್ಯವಾಗಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣವು ಬಿಜೆಪಿ ಪಾಲಿಗೆ ಮುಳುವಾಗಲಿದೆ.
ತ್ರಿಪುರಾದಲ್ಲಿ ಇಂಡಿಯನ್ ಪಾಲಿಟಿಕಲ್ ಆ್ಯಕ್ಷನ್ ಕಮಿಟಿ (I-PAC) ತಂಡವೊಂದು ಈಗಾಗಲೇ ಬಿಡು ಬಿಟ್ಟಿದ್ದು, ರಾಜಕೀಯವಾಗಿ ಟಿಎಂಸಿ ಬೆಳೆಯುವಲ್ಲಿ ಅದು ಸಹಕರಿಸಲಿದೆ. ರಾಜ್ಯದ ರಾಜಕೀಯ ಸ್ಥಿತಿಗತಿ, ಕೊರತೆ, ಸರ್ಕಾರದ ವೈಫಲ್ಯ, ಜನರ ಆಕಾಂಕ್ಷೆ, ಭಿನ್ನಮತೀಯ ನಾಯಕರ ವಿವರ ಸೇರಿದಂತೆ ಹಲವು ರೀತಿಯ ಮಾಹಿತಿಯನ್ನು ಒಳಗೊಂಡ ವಾಸ್ತವ ವರದಿಯನ್ನು ಈ ತಂಡ ಟಿಎಂಸಿ ನಾಯಕರಿಗೆ ನೀಡಲಿದೆ.
ತ್ರಿಪುರ ಬಿಜೆಪಿ ನಾಯಕರಾದ ಬಿಪ್ಲಬ್ ಕುಮಾರ್ ದೇಬ್ ಹಾಗೂ ಸುದೀಪ್ ರಾಯ್ ಬರ್ಮನ್ ಅವರ ನಡುವೆ ಉಂಟಾಗಿರುವ ಭಿನ್ನಮತವನ್ನು ಟಿಎಂಸಿಯು ಬಳಸಿಕೊಳ್ಳಲು ಯತ್ನಿಸುತ್ತಿದೆ. ಪಕ್ಷದಿಂದ ಹೊರಬರಲು ಯಾರಾದರು ಇಚ್ಚಿಸಿದರೆ ಕೂಡಲೇ ಅವರನ್ನು ಟಿಎಂಸಿ ಕಡೆಗೆ ಸೆಳೆಯಲು ತೀವ್ರವಾದ ಪ್ರಯತ್ನ ನಡೆಸಲಾಗುತ್ತಿದೆ.
ಇನ್ನು ತನ್ನದೇ ಪಕ್ಷದ ಮುಖಂಡರ ಸತ್ಯ ಶೋಧನಾ ತಂಡವನ್ನು ಈಶಾನ್ಯ ರಾಜ್ಯಗಳಿಗೆ ಟಿಎಂಸಿ ಕಳುಹಿಸಿಕೊಟ್ಟಿದೆ. ಈ ತಂಡವು ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ಇರುವ ಅವಕಾಶ ಹಾಗೂ ಅಲ್ಲಿ ಮೈತ್ರಿಯ ಸಾಧ್ಯತೆಯನ್ನು ಅಧ್ಯಯನ ಮಾಡಲಿದೆ.
ರಾಷ್ಟ್ರೀಯವಾಗಿ ಟಿಎಂಸಿಯನ್ನು ಬಲಪಡಿಸುವ ಇರಾದೆಯನ್ನು ಪಶ್ಚಿಮ ಬಂಗಾಳ ಚುನಾವಣೆಯ ನಂತರವೇ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವ್ಯಕ್ತಪಡಿಸಿದ್ದರು. “ನೀವು ಯಾವುದೇ ತಪ್ಪು ಮಾಡಬೇಡಿ. ನಾವು ಇತರ ರಾಜ್ಯಗಳಿಗೂ ಹೋಗುತ್ತೇವೆ. ಅಲ್ಲಿ ಕೇವಲ ಪಕ್ಷವನ್ನು ಅಸ್ಥಿತ್ವಕ್ಕೆ ತರುವುದಷ್ಟೇ ಅಲ್ಲದೇ, ಅಧಿಕಾರವನ್ನೂ ಹಿಡಿಯುತ್ತೇವೆ,” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ರಾಜಕೀಯ ವಿಶ್ಲೇಷಕ ಬಿಸ್ವಂತ್ ಚಕ್ರವರ್ತಿ ಹೇಳುವ ಪ್ರಕಾರ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಪದೇ ಪದೇ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟವನ್ನು ರಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೇ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಬಲ ಕಡಿಮೆ ಇರುವುದನ್ನು ಬಳಸಿಕೊಂಡು ತಮ್ಮ ಪಕ್ಷದ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದಾರೆ, ಎಂದು ಹೇಳಿದ್ದಾರೆ.
ಈ ಎರಡೂ ವಿಚಾರಗಳು ಟಿಎಂಸಿಗೆ ಹೊಸತಲ್ಲ. ಈ ಹಿಂದೆ ಎರಡು ಬಾರಿ ಲೋಕಸಭಾ ಚುನಾವಣೆ ನಡೆದಾಗಲೂ ದೀದಿ ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ವಿಪಕ್ಷಗಳ ನಡುವೆ ಮತಗಳು ವಿಭಜನೆಯಾಗುವುದನ್ನು ತಪ್ಪಿಸುವ ಯೋಚನೆ ದೀದಿಯದ್ದಾಗಿತ್ತು. ಆದರೆ, ಪ್ರತೀ ಬಾರಿಯೂ ಈ ಯೋಜನೆಯಲ್ಲಿ ದೀದಿ ವಿಫಲರಾಗಿದ್ದರು.
ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಈ ಹಿಂದೆಯೂ ಟಿಎಂಸಿ ಭಾಗವಹಿಸಿತ್ತು. ದೆಹಲಿಯಲ್ಲಿಯೂ ಕೆಲವು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಟಿಎಂಸಿ ಸಫಲವಾಗಿತ್ತು. ಆದರೆ, ಟಿಎಂಸಿ ಬೆಂಬಲದಿಂದ ಗೆದ್ದು ಬಂದ ಶಾಸಕರು ನಂತರ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದರು. ಇದರಿಂದಾಗಿ ದೀದಿ ಯೋಜನೆ ಬುಡಮೇಲಾಗಿತ್ತು.
ಆದರೆ, ಈ ಬಾರಿ ಅಂತಹ ಯಾವುದೇ ಪ್ರಮಾದಗಳಿಗೆ ಆಸ್ಪದ ನೀಡದಂತೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಅಸ್ಸಾಂನ ಬರಾಕ್ ಕಣಿವೆ ಪ್ರದೇಶದಲ್ಲಿ ಟಿಎಂಸಿಯ ಪ್ರಭಾವ ಈಗಾಗಲೇ ಇದ್ದು, ಅದನ್ನು ಮತ್ತಷ್ಟು ವೃದ್ಧಿಸುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನಗಳ ಫಲವೇನು ಎಂಬುದನ್ನು ತಿಳಿಯಲು ಚುನಾವಣೆಗೆ ಕಾಯಬೇಕಷ್ಟೇ.